ಬಕ್ರೀದ್ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ತಥಾಕತಿಕ ಪ್ರಾಣಿ ಸಂರಕ್ಷಣೆಯ ಹೆಸರಲ್ಲಿ ಒಂದು ಸಮುದಾಯದ ಹಬ್ಬವನ್ನು ಭಯದ ವಾತಾವರಣ ನಿರ್ಮಿಸಿ ಕಲಂಕ ಪಡಿಸಲು ಹೊರಟವರು ಪಾಶ್ಚಾತಾಪ ಪಡುವ ಕಾಲ ದೂರವಿಲ್ಲ. ಜಗತ್ತಿನ99%ಜನರು ಮಾಂಸಾಹಾರಿಗಳಾಗಿದ್ದಾರೆ. ಅದು ಆದಿ ಕಾಲದಿಂದ ಬಂದ ಪದ್ದತಿಯೂ ಹೌದು.ಜಗತ್ತಲ್ಲಿ ಮಾಂಸಹಾರ ಇಲ್ಲದಿದ್ದರೆ ಜಗತ್ತು ಮುಂದುವರಿಯಲು ಸಾಧ್ಯವೇ ಇಲ್ಲ.
ಈ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದು ಹೋಗಿದೆ. ಹಾಗೆ ನೋಡಿದರೆ ದೈನಂದಿನ ಕೋಟ್ಯಾಂತರ ಪ್ರಾಣಿಗಳು ಮನುಷ್ಯರ ಆಹಾರದ ಅಗತ್ಯಕ್ಕಾಗಿ ವಧಿಸಲ್ಪಡುತ್ತದೆ. ಈಗ ಸರಕಾರದ ಮತ್ತು ಪೋಲೀಸ್ ಇಲಾಖೆಯ ಸಿದ್ದತೆ ನೋಡಿದರೆ ಪ್ರಾಣಿ ವಧೆ ಕೇವಲ ಬಕ್ರೀದ್ ಹಬ್ಬಕ್ಕೆ ಮಾತ್ರ ನಡೆಯುತ್ತಿದೆ ಎಂದು ಗ್ರಹಿಸಿದಂತಿದೆ. ಒಂದೂರಿನ ಬೆರಳೆಣಿಕೆಯ ಸ್ಥಿತಿವಂತರು ಬಕ್ರೀದ್ ನಂದು ಮೇಕೆಯೊಂದನ್ನು ಕೊಯ್ದು ಬಡಬಗ್ಗರಿಗೆ ಮಾಂಸ ದಾನ ಮಾಡುವ ಪರಿಪಾಠ ನೂರಾರು ವರ್ಷಗಳಿಂದ ನಡೆದು ಬಂದಿದೆ. ಇದು ಮುಸ್ಲಿಮರ ಧಾರ್ಮಿಕ ಆಚರಣೆಯ ಭಾಗವೂ ಹೌದು.
ಆದರೆ ಈಗ ಪ್ರಾಣಿ ಹಿಂಸೆ ಎಂಬ ನೆಪದಲ್ಲಿ ಇದರ ವಿರುದ್ದ ದೊಡ್ಡ ಮಟ್ಟದ ಕಾರ್ಯಚರಣೆಗೆ ಇಳಿದಿದೆ ಸರಕಾರ. ನಿಜವಾಗಿಯೂ ಈ ಅಹಿಂಸೆ ಎಂಬ ಸುಂದರ ತತ್ವವನ್ನು ಮುಂದಿಟ್ಟು ಇಲ್ಲಿ ಪ್ರಾಣಿಗಳನ್ನು ರಕ್ಷಿಸುವ ಸೋಗಿನಲ್ಲಿ ಮಾನವನನ್ನೇ ಕೊಲ್ಲುವ ಸಂಸ್ಕೃತಿ ಬಹುಶಃ ಭಾರತದಲ್ಲಿ ಮಾತ್ರ ಬೆಳೆದು ಬಂದಿರ ಬೇಕು. ಮೊದಲು ಗೋವುಗಳನ್ನು ಪೂಜಿಸುವ ನೆಪದಲ್ಲಿ ಗೋಹತ್ಯೆಯ ವಿರುದ್ದ ದೊಡ್ಡ ಮಟ್ಟದ ಆಂದೋಲನವನ್ನು ಮಾಡಿ ಆ ಮೂಲಕ ಅಧಿಕಾರ ಪಡೆಯಲಾಯಿತು. ಈಗ ಈ ಗೋವುಗಳ ಸಾಲಿನಲ್ಲಿ ಎತ್ತು ,ಕೋಣ, ಹೋರಿ ,ಮೇಕೆ ,ಕುರಿ ಗಳನ್ನು ತರಲಾಗಿದೆ.ಇನ್ನು ಮುಂದೆ ಕೋಳಿ,ಮೀನುಗಳನ್ನೂ ಇದೇ ಸಾಲಿಗೆ ತಂದರೂ ಅಚ್ಚರಿ ಇಲ್ಲ.
ಅಧಿಕಾರ ಪಡೆಯಲು ಯಾವ ಮಟ್ಟಕ್ಕೂ ಹೋಗಲು ತೀರ್ಮಾನಿಸಿದವರಿಂದ ಇದೆಲ್ಲವೂ ನಿರೀಕ್ಷಿತ. ಆದರೆ ಪ್ರಾಯೋಗಿಕವಲ್ಲದ ಇಂತಹ ಕಟ್ಟುಪಾಡುಗಳು ಶಾಸ್ವತವಾಗಿ ಮುಂದುವರಿಸಿ ಕೊಂಡು ಹೋಗುವುದು ಕಷ್ಟದ ಮಾತು. ನಮ್ಮಂತೆ ನೀವೂ ಕೇವಲ ಗೆಡ್ಡೆ ಗೆಣಸು ತಿಂದು ಬದುಕಬೇಕೆಂದು ಕೆಲವರು ಹಠ ಹಿಡಿದು ಕುಳಿತರೆ ಅದು ನಡೆಯುವಂತದ್ದೇನೂ ಅಲ್ಲ. ಈಗಾಗಲೇ ಹೈಣುಗಾರ ರೈತ ರೊಚ್ಚಿಗೆದ್ದ ವರದಿಗಳು ಬರುತ್ತಾ ಇದೆ.
ಇಲ್ಲಿನ ಗೋವುಗಳನ್ನ ವಧಿಸಿ ಸರಕಾರವೇ ಮುಂದೆ ನಿಂತು ವಿದೇಶಗಳಿಗೆ ರಪ್ತು ಮಾಡುತ್ತಿರುವುದು ಜನಜನಿತ. ಈ ಸಂಧರ್ಭದಲ್ಲಿ ಮುಸ್ಲಿಮರು ಯಾವುದೇ ಕಾರಣಕ್ಕೂ ಕಾನೂನು ಮೀರಿ ವರ್ತಿಸದೇ ಪ್ರಬುದ್ದತೆ ಮೆರೆಯ ಬೇಕಾಗಿದೆ. ಪ್ರಾಣಿ ಬಲಿ ನೀಡಲು ತಾಂತ್ರಿಕ ತೊಂದರೆ ಆದರೆ ಅದಕ್ಕೆ ಅದರದ್ದೇ ಆದ ನಿಯಮಗಳು ಇಸ್ಲಾಂ ಶರೀಹ ಕಲ್ಪಿಸಿದೆ. ಕೇಸು ಮೈಮೇಲೆ ಎಳೆದು ಕೊಳ್ಳುವ ಸಾಹಸಕ್ಕೆ ಇಳಿಯದೇ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ. ಶಾಂತಿ ವಿರೋಧಿಗಳಿಗೆ ,ಅಕ್ರಮ ಅನ್ಯಾಯದ ವಾಹಕರಿಗೆ ಸದ್ಬುದ್ದಿ ಕರುಣಿಸಲು ದೇವನಲ್ಲಿ ಪ್ರಾರ್ಥಿಸಿ.
✍️ಎಸ್ ಬಿ ದಾರಿಮಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.