ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳ ಮಾರಣಾಂತಿಕ ಹಲ್ಲೆಯಲ್ಲಿ ಕೊನೆಗೊಂಡಿದೆ. ಸುಳ್ಯದ ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಮಸೂದ್ (19)ನನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮೆದುಳಿಗೆ ತೀವ್ರ ಹಾನಿಯಾಗಿರುವುದರಿಂದ ಮೆದುಳು ನಿಷ್ಕ್ರಿಯಗೊಂಡಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿರುವುದಾಗಿ ತಿಳಿದು ಬಂದಿದೆ.
ಸ್ಥಳೀಯ ನಿವಾಸಿಗಳಾದ ಮಸೂದ್ ಮತ್ತು ಸುಧೀರ್ ನಡುವೆ ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಅಂಗಡಿಯ ಬಳಿ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದ್ದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುದೀರ್ ನ ಹಣೆಯಲ್ಲಿ ಸ್ವಲ್ಪ ರಕ್ತ ಬಂದಿದೆ ಎನ್ನಲಾಗುತ್ತಿದೆ. ತಕ್ಷಣ ಅಲ್ಲಿದ್ದವರು ಇಬ್ಬರನ್ನು ಸಮಾಧಾನಪಡಿಸಿ ಮನೆಗೆ ಕಳಿಸಿದ್ದಾರೆ.
ಬಳಿಕ ಸುಧೀರ್ ಮತ್ತು ಆತನ ಸ್ನೇಹಿತರು ಮಸೂದ್ ಗೆ ಕರೆಮಾಡಿ ಪ್ರಕರಣವನ್ನು ರಾಜಿಯಲ್ಲಿ ಬಗೆಹರಿಸೋಣ ಎಂದು ಕರೆಸಿಕೊಂಡು ಸುಧೀರ್ ಮತ್ತು ಆತನ ಸ್ನೇಹಿತರು ಏಕಾಏಕಿ ಮಸೂದ್ ಮೇಲೆ ದೊಣ್ಣೆ, ರಾಡ್ ,ಸೋಡಾ ಬಾಟಲಿಯಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ಗಾಯಗೊಂಡ ಮಸೂದ್ ಅಲ್ಲಿಂದ ಓಡಿಹೋಗಿದ್ದು, ವಿಷಯ ತಿಳಿದ ಬೀಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲು ಹೇಳಿ ಅಲ್ಲಿಂದ ತೆರಳಿದ್ದಾರೆ.
ಆದರೆ ತಲೆಗೆ ತೀವ್ರ ಹಲ್ಲೆಗೊಳಗಾಗಿ ಅಲ್ಲಿಂದ ತಪ್ಪಿಸಿಕೊಂಡ ಮಸೂದ್ ಸ್ವಲ್ಪ ದೂರ ಹೋಗಿ ಬಿದ್ದಿದ್ದಾರೆ. ಅವರನ್ನು ಎಲ್ಲಾ ಕಡೆ ಹುಡುಕಾಡಿದಾಗ ರಾತ್ರಿ 2.30 ರ ಸುಮಾರಿಗೆ ಮನೆಯೊಂದರ ಬಾವಿಯ ಬಳಿ ಪ್ರಜ್ಞಾಹೀನನಾಗಿ ಬಿದ್ದಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಕೂಡ ಆಗಿದೆ. ತಕ್ಷಣ ಆತನನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಆತನನ್ನು ರಾತ್ರಿಯೇ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಸೂದ್ ಮೇಲೆ ಹಲ್ಲೆ ನಡೆಸಿದ ತಂಡದಲ್ಲಿ ಸುಧೀರ್, ರಂಜಿತ್, ಅಭಿ ಮತ್ತಿತರರು ಇದ್ದರು ಎಂದು ಮಸೂದ್ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.