(www.vknews.in) : ಇಂದು ಕಾಸರಗೋಡಿಗೆ ಹೋಗುವವನಿದ್ದೆ. ಬೆಳಗ್ಗೆ ಅರು ಘಂಟೆಗೆ ಮನೆಯಿಂದ ಹೊರಡುವಾಗ ಅಪರಿಚಿತರ ಗಾಡಿಯಲ್ಲಿ ಹೋಗ ಬೇಡಿ ಅಂತ ಮನೆಯವಳು ಎಚ್ಚರಿಸಿದ್ದಳು. ಹಾಗೆ ನಾನು ರಸ್ತೆ ಬದಿ ಬಂದು ನಿಂತ ಕೂಡಲೇ ನನ್ನನ್ನ ಕಂಡ ಒಬ್ಬ ಹುಡುಗ ಸ್ಕೂಟಿ ನಿಲ್ಲಿಸಿದ.
ಸ್ಕೂಟಿಯಲ್ಲಿ ಹತ್ತಿ ಕುಳಿತು ಇದು ಯಾರೋ ಬ್ಯಾರಿ ಹುಡುಗ ಇರಬೇಕೆಂದು ಗ್ರಹಿಸಿ ಬ್ಯಾರಿಯಲ್ಲೇ ಕೇಳಿದೆ, ಎಲ್ಲಿ ಮಗಾ ಮನೆ? ಅಂತ. ಆತ ಹೇಳಿದ “ನಿನ್ನಿಕ್ಕಲ್”. ಹೌದಾ? ಯಾರ ಮಗ?ಎಂದು ಕೇಳಿದಾಗ ರಿಕ್ಷಾ ಗಣೇಶನ ಮಗ ಎಂದ. ಮತ್ತೆ ಭಾಷೆ ಬದಲಿಸಿ ತುಳುವಿನಲ್ಲಿ ಮಾತಾಡಿ, ಕಲಿಯುವ ವೇಳೆ ಒಳ್ಳೆಯ ರೀತಿ ಕಲಿತು ಮುಂದೆ ಬರಬೇಕೆಂದು ಹಾರೈಸಿದೆ. ಆತನಿಗೆ ಖುಷಿಯಾಯಿತು. ಆತ ರಾಮನಗರದ ತನಕ ಹೋಗುವವನಿದ್ದರೂ ಉಪ್ಪಿನಂಗಡಿ ತನಕ ಬಿಟ್ಟು ಹೋದ.
ಅಂತೂ ಉಪ್ಪಿನಂಗಡಿಯಲ್ಲಿ ರಸ್ತೆ ಬದಿಯಲ್ಲಿ ಪುತ್ತೂರಿಗೆ ಏನಾದರೂ ಸಿಗುತ್ತಾ ಎಂದು ಕಾಯುತ್ತಿರುವಾಗ ನನ್ನ ಬಳಿ ಅಲ್ಲಿಯೇ ಇದ್ದ ಒಬ್ಬರು ಬಹಳ ವಿನಯದಿಂದ ಮಾತಾಡಿ ಪರಿಚಯ ಮಾಡಿ ಕೊಂಡರು. ಹತ್ತು ನಿಮಿಷ ಹಲವು ವಿಚಾರಗಳ ಬಗ್ಗೆ ಮಾತಾಡಿದೆವು. ಅವರು ಅಲ್ಲಿಯೇ ನಟ್ಟಿಬೈಲಿನಲ್ಲಿ ವಾಸವಿರುವ ಒಬ್ಬ ಭಟ್ರು. ಅವರು ಪುಣಚ ದೇವಸ್ಥಾನಕ್ಕೆ ವಾರಕ್ಕೊಮ್ಮೆ ಅಡಿಗೆ ಮಾಡಲು ಹೋಗುವುದಂತೆ. ಪುಣಚದ ಮಸೀದಿಯ ಕಾರಣಿಕದ ಬಗ್ಗೆ ಅವರು ಮಾತಾಡಿದರು. ಅಂದ ಹಾಗೆ ಈ ಭಟ್ರು ಅಡಿಗೆ ಇಲ್ಲದ ಟೈಮಲ್ಲಿ ಕೂಲಿ ಕೆಲಸಕ್ಕೂ ಹೋಗುತ್ತಾರಂತೆ.
ಈ ಮೊದಲು ನಾನು ಕೆಲವು ಕಡೆ ಭಾಷಣ ಬಿಗಿದಿದ್ದೆ. ನೋಡಿ ಬ್ರಾಹ್ಮಣರು ಮತ್ತು ಕ್ರೈಸ್ತರು ಕೂಲಿ ಕೆಲಸಕ್ಕೆ ಹೋಗುವುದು ನೋಡಿದ್ದೀರಾ?ಎಂದು. ಆದ್ರೆ ಬ್ರಾಹ್ಮಣರಲ್ಲೂ ಕಡು ಬಡವರಿದ್ದಾರೆ ಎಂದು ತಿಳಿಯಿತು. ಇವರ ಎರಡು ಹೆಣ್ಣು ಮಕ್ಕಳನ್ನು ಕಲಿಸಲು ಬಹಳ ಕಷ್ಟ ಪಡುತ್ತಿದ್ದಾರಂತೆ.
ಹಾಗೆ ಕಾಯುತ್ತಿರುವಾಗ ಕನ್ಯಾರ ಕೋಡಿಯ ಒಬ್ಬ ವ್ಯಕ್ಯಿ ಪುತ್ತೂರಿಗೆ ಕಿಡ್ನಿ ಚಕಪ್ ಮಾಡಲು ಬೆಳಂಬೆಳಗ್ಗೆ ಕಾರಲ್ಲಿ ಹೋಗುವವರಿದ್ದರು. ನನ್ನ ಗುರುತು ಸಿಕ್ಕಿ ಕಾರು ನಿಲ್ಲಿಸಿ ನನ್ನನ್ನು ಹತ್ತಿಸಿ ಕೊಂಡರು. ನಾನು ಹೇಳಿದೆ, ನಮ್ಮ ಒಬ್ಬ ಪರಿಚಯದ ಭಟ್ರು ಇದ್ದಾರೆ ಹತ್ತಿಸಿ ಕೊಳ್ಳಬಹುದಾ ಅಂತ. ಅದಕ್ಕೇನಂತೆ ಸೀಟು ಇದೆ ಉಸ್ತಾದ್ ಹತ್ತಿಸಿ ಕೊಳ್ಳಿ ಎಂದು ಹೇಳಿದಾಗ ಆರಾಮವಾಗಿ ಒಟ್ಟಿಗೆ ಕುಳಿತು ನಾವು ಪುತ್ತೂರು ತಲುಪಿದೆವು.
ಒಂದು ಕಡೆಯಲ್ಲಿ ಬಾಸೆ ದೆಸೆ ನಲೆ ಇಲ್ಲದ ಸ್ವಾರ್ಥ ರಾಜಕಾರಣಿಗಳು ಮತ್ತು ಧರ್ಮದ ನಶೆ ತಲೆಗೆ ಹತ್ತಿದ ಬಿಕನಾಸಿಗಳು ಅಧಿಕಾರಕ್ಕೋಸ್ಕರ ಮತ್ತು ಧರ್ಮ ರಕ್ಷಣೆಗೋಸ್ಕರ ನೆತ್ತರು ಹರಿಸುತ್ತಿರುವಾಗ ನಾಡಿನ ಕೋಟ್ಯಾಂತರ ಜನ ಸಾಮಾನ್ಯರು ಇದೆಲ್ಲವನ್ನೂ ದೂರದಿಂದಲೇ ನೋಡಿ ಭಯದಿಂದ ಬದುಕಬೇಕಾದ ದುಸ್ಥಿತಿ ನಿರ್ಮಾಣ ಮಾಡಿದ ನರರಾಕ್ಷಸರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಅಲ್ಲವೇ?
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.