ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಮೀಟರ್ ಬಡ್ಡಿ ದಂಧೆ ಜಿಲ್ಲೆಯಲ್ಲಿ ಜಮೀನುಗಳನ್ನು ನೋಂದಣಿ ಮಾಡಿಸಿಕೊಂಡು ಸಾಲ ನೀಡುವವರ ಪಟ್ಟಿಯನ್ನು ತಯಾರಿಸಲಾಗಿದ್ದು , ಪೊಲೀಸ್ ಇಲಾಖೆಯ ಬಳಿ 150 ಕ್ಕೂ ಹೆಚ್ಚು ಎಕರೆ ಬರೆಸಿಕೊಂಡಿರುವ ಮಾಹಿತಿ ಇದ್ದು , ಅರ್ಜಿದಾರರು ಧೈರ್ಯವಾಗಿ ದೂರು ನೀಡಲು ಮುಂದೆ ಬಂದರೆ ಜಮೀನುಗಳನ್ನು ನ್ಯಾಯಯುತವಾಗಿ ಬಿಡಿಸಿಕೊಡಲು ಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ದೂರು ಬಂದ ಪ್ರಕರಣಗಳಲ್ಲಿ ಈಗಾಗಲೇ ಕಾನೂನು ಕ್ರಮವಹಿಸಿ ತನಿಖೆ ನಡೆಸಲಾಗುತ್ತಿದೆ. ಇಂತ ಅನೇಕ ಪ್ರಕರಣಗಳು ಕೋಲಾರ ಜಿಲ್ಲೆಯಲ್ಲಿ ನಡೆದಿದ್ದು , ಜನತೆ ದೂರು ನೀಡಿದರೆ ಎಟಿಎಂ ಕಾರ್ಡ್ಗಳನ್ನು ಪಡೆದು , ಜಮೀನು ಬರೆಸಿಕೊಂಡು ಜನರ ರಕ್ತ ಹೀರುತ್ತಿರುವ ಮೀಟರ್ ಬಡ್ಡಿ ದಂಧೆಯನ್ನು ಕೊನೆಗಾಣಿಸುವುದಾಗಿ ಪ್ರಕಟಿಸಿದರು. ಆಕಸ್ಮಿಕವಾಗಿ ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ತಮಗೆ ದೊರೆತಿದ್ದು , ಸಮಸ್ಯೆ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದು , ಪೊಲೀಸ್ ಇಲಾಖೆಗೆ ಬೇಕು ಬೇಡಗಳ ಪಟ್ಟಿ ಸಿದ್ಧಪಡಿಸಿ ಕಾರ್ಯೋನ್ಮುಖವಾಗಿರುವುದಗಿ ವಿವರಿಸಿದರು.
ಕೋಲಾರ ಜಿಲ್ಲೆಯಲ್ಲಿ ಹೆಚ್ಚಳವಾಗಿದ್ದ ಜೂಜು ಅಡ್ಡೆ . ಮಟ್ಕಾ , ಮರಳು ದಂಧೆ , ಕೆಂಪು ಚಂದನ ಸಾಗಾಣಿಕೆ , ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಿದ್ದು , ಅಪರಾಧಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ.
ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಯಾರದೇ ಪ್ರಭಾವ ಬೀರದೆ ನೇರವಾಗಿ ತಮ್ಮೊಂದಿಗೆ ತಮ್ಮ ಕಷ್ಟ ಸುಖ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆಯೆಂದು ಹೇಳಿದರು.
ಕೋಲಾರ ಜಿಲ್ಲೆಯ ಕೆಲವು ಠಾಣೆಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಣೆ ಮಾಡುತ್ತಿದ್ದು , ಇಂತ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಲಾಯಿತು.
ಠಾಣೆಗಳಲ್ಲಿ 5 ರಿಂದ 17 ವರ್ಷದವರೆವಿಗೂ ಸುದೀರ್ಘ ಅವಧಿಗೆ ಠಿಕಾಣಿ ಹೂಡಿದ್ದ 250 ಮಂದಿ ಸಿಬ್ಬಂದಿಯನ್ನು ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಯಿತು.
ರೌಡಿ ಶೀಟರ್ಗಳ ಪೆರೇಡ್ ನಡೆಸಿ ಸನ್ನಡತೆಯ ಆಧಾರದ ಮೇಲೆ 40 ಮಂದಿಯನ್ನು ರೌಡಿ ಪಟ್ಟಿಯಿಂದ ವಿಮುಕ್ತಿಕೊಡಿಸಲಾಯಿತು. ಹಾಗೆಯೇ ವಿವಿಧ ಕೊಲೆ ಪ್ರಕರಣಗಳಲ್ಲಿದ್ದ 65 ಮಂದಿಯನ್ನು ರೌಟಿ ಪಟ್ಟಿಗೆ ಸೇರಿಸಲಾಯಿತು. 8 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಶಿವಾರಸ್ಸು ಮಾಡಲಾಗಿದೆ ಎಂದು ವಿವರಿಸಿದರು.
ಮುಳಬಾಗಿಲು ಜಗನ್ನೋಹನ ರೆಡ್ಡಿ , ಪೈಂಟರ್ ರಮೇಶ್ ಕೊಲೆ ಪ್ರಕರಣದಲ್ಲಿ 15 ಮಂದಿಯ ಮೇಲೆ ಮೊಟ್ಟ ಮೊದಲ ಬಾರಿಗೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು , ತನಿಖೆ ನಡೆಯುತ್ತಿದೆ. ಜೂಜು ನಡೆಸುತ್ತಿದ್ದ ನಂಗಲಿ ರೆಸಾರ್ಟ್ ಮೇಲೆ ದಾಳಿ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ.
ಕೋಲಾರ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತ್ ಮಾಡಲಾಗಿದೆ ಎಂದು ತಿಳಿಸಿದರು. ಕಾನೂನು ಸುವ್ಯವಸ್ಥೆ ಪಾಲಿಸುವ ವಿಚಾರದಲ್ಲಿ ಗಡಿಯಾರ ಗೋಪುರ ಪ್ರಕರಣವನ್ನು ಸುಖಾಂತ್ಯಗೊಳಿಸಿ ತ್ರಿವರ್ಣ ಧ್ವಜ ಹಾರಿಸಲಾಯಿತು.
ಮಾಲೂರಿನಲ್ಲಿ ಗಣೇಶ ವಿಗ್ರಹಗಳ ಭಗ್ನಗೊಳಿಸಿ ಶಾಂತಿ ಕದಡುವ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿ ಜೈಲಿಗಟ್ಟಲಾಯಿತು. ಚೈಲ್ಲಿಂಕ್ ಮೂಲಕ ನಿರುದ್ಯೋಗಿಗಳಿಂದ ಹಣ ಕಸಿಯುತ್ತಿದ್ದ ಜಾಲವನ್ನು ಬೇಧಿಸಲಾಯಿತು. ಗಾಂಜಾ ಸೇವನೆ ಪ್ರಕರಣಗಳನ್ನು ಶೂನ್ಯಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆಯೆಂದರು.
ಇದೇ ಮೊದಲ ಬಾರಿಗೆ ಕೋಲಾರ ನಗರದಲ್ಲಿ ಸಾರಿಗೆ ದಟ್ಟಣೆಯನ್ನು ಸುಧಾರಿಸಿದ್ದು , ಏಕ ಮುಖ ಸಂಚಾರ , ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಆದರೂ , ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿರುವ ದೂರುಗಳಿದ್ದು , ತೆರವುಗೊಳಿಸಲಾಗುತ್ತದೆ. ಮನೆಗಳ್ಳತನ , ಸರಗಳ್ಳತನ ನಿಯಂತ್ರಿಸಲು ಪೊಲೀಸರ ಮಪ್ತಿಗಸ್ತನ್ನು ತೀವ್ರಗೊಳಿಸಲಾಗಿದೆ ಎಂದರು.
ಕೋಲಾರ ನಗರವನ್ನು ಸಿಸಿ ಕ್ಯಾಮೆರಾ ವ್ಯಾಪ್ತಿಗೆ ತರುವ ಯೋಜನೆಯನ್ನು ಕಂಪನಿಗಳ ಸಿಎಸ್ಆರ್ ನಿಯಡಿ ಒಂದೆರಡು ತಿಂಗಳುಗಳಲ್ಲಿ ಜಾರಿಗೆ ತರಲಾಗುವುದು. ಇದಕ್ಕಾಗಿ ವಿಸ್ಟಾನ್ ಮತ್ತು ಕಿಯೋನಿಕ್ಸ್ ಕಂಪನಿಗಳು ಮುಂದೆ ಬಂದಿವೆ. ಸುಮಾರು 1 ಕೋಟಿ ವೆಚ್ಚದಲ್ಲಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ಕಾನೂನ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡಲಾಗುವುದು ಎಂದು ಪ್ರಕಟಿಸಿದರು.
ಇಲಾಖೆಯ ಯಾವುದೇ ದೂರುಗಳ ಬಗ್ಗೆ ಸಾರ್ವಜನಿಕರು ತಮಗೆ ನೇರವಾಗಿ ದೂರು ನೀಡಬಹುದು ಎಂದು ಘೋಷಿಸಿದ ಅವರು , ಪೊಲೀಸ್ ಇಲಾಖೆಯಲ್ಲಿ ತಪ್ಪು ಮಾಡಿದವರಿಗೆ ತಕ್ಷಣವೇ ಶಿಕ್ಷೆ ಮತ್ತು ಉತ್ತಮ ಸೇವೆ ಸಲ್ಲಿಸಿದವರನ್ನು ಶ್ಲಾ ಸಿ ಹುರಿದುಂಬಿಸಲಾಗುತ್ತಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ , ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ , ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ , ಜಿಲ್ಲಾ ಸಂಘದ ಖಜಾಂಚಿ ಎ.ಜಿ. ಸುರೇಶ್ಕುಮಾರ್ , ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಕೋಲಾರ ಕುಸುಮಾ ಕನ್ನಡ ದಿನಪತ್ರಿಕೆಯ ಸಂಪಾದಕ ಬಾಬಾ ಇತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.