(www.vknews.in) : ಪತ್ನಿ ಮಕ್ಕಳು ಸುಖವಾಗಿರಲೆಂದು ಸುಡು ಬಿಸಿಲು ಹಾಗೂ ಮೈಕೊರೆವ ಚಳಿಗೆ ಐದು ವರ್ಷ ಕಷ್ಟಪಟ್ಟು ದುಡಿದು ಊರಿಗೆ ಮರಳಲಾರದ ಕೊರಗಿನಲ್ಲೇ ಮೃತಪಟ್ಟ ಅನಿವಾಸಿಯ ಮೃತದೇಹ ಅಲ್ಲೇ ದಫನ ಮಾಡಿ ಎಂದ ಪತ್ನಿ ಮಕ್ಕಳು..!
ಈ ಮೇಲಿನ ಶೀರ್ಷಿಕೆ ಓದುವಾಗ ಇದು ಉತ್ತರ ಭಾರತದಲ್ಲಿ ಘಟನೆಯಾಗಿರಬಹುದೆಂದು ನೀವು ಊಹಿಸಿದರೆ ನಿಮ್ಮ ಊಹೆ ತಪ್ಪು. ಇದು ನಡೆದದ್ದು ‘ದೈವತ್ತಿಂಡೆ ಸ್ವಂದಂ ನಾಡ್’ ಎಂದೇ ಕರೆಯಲ್ಪಡುವ ನಮ್ಮ ಸಮೀಪದ ಕೇರಳದಲ್ಲಿ. ಹೌದು ತನ್ನ ಕುಟುಂಬದ ಕಷ್ಟವನ್ನು ದೂರೀಕರಿಸಲಿಕ್ಕಾಗಿ ತನ್ನ ಪತ್ನಿ ಮಕ್ಕಳು ಶ್ರೀಮಂತಿಕೆಯಿಂದ ಜೀವಿಸಲೋಸ್ಕರ 57 ವರ್ಷ ಪ್ರಾಯವುಳ್ಳ ಈ ವ್ಕಕ್ತಿ 2017ರಲ್ಲಿ ದುಬೈ ದಾರಿ ಹಿಡಿಯುತ್ತಾರೆ. ರಾತ್ರಿ ಹಗಲು ಕಷ್ಟಪಟ್ಟು ದುಡಿದು ಪತ್ನಿ ಮಕ್ಕಳಿಗಾಗಿ ಒಂದು ಸುಂದರ ಮನೆಯನ್ನು ನಿರ್ಮಿಸುತ್ತಾರೆ. ಇದರಿಂದಾಗಿ ಮತ್ತಷ್ಟು ಸಾಲಗಾರನಾಗುತ್ತಾನೆ. ಸಾಲದಲ್ಲಿ ಮುಳುಗಿದ ಈ ಬಡಪಾಯಿಗೆ ಐದು ವರ್ಷ ಕಷ್ಟಪಟ್ಟು ದುಡಿದರೂ ಊರಿಗೆ ಮರಳಾಗಲಿಲ್ಲ. ಊರಿಗೆ ಹೋಗಿ ಮಡದಿ ಮಕ್ಕಳೊಂದಿಗೆ ಸಂತೋಷದಿಂದ ಜೀವಿಸಬೇಕೆಂಬ ಆಸೆ ಕೊನೆಗೂ ಈಡೇರದೆ ಹೋಯಿತು.
ಸತತ ಐದು ವರ್ಷ ಮರುಭೂಮಿಯ ಸುಡುಬಿಸಿಲು ಹಾಗೂ ಮೈಕೊರೆವ ಚಳಿಗೆ ದುಡಿದು ದಣಿದ ಈ ಬಡಪಾಯಿ ತಂದೆ ತನ್ನ 62ನೇ ವಯಸ್ಸಿನಲ್ಲಿ ದುಬೈಯ ಮಣ್ಣಿನಲ್ಲೇ ಮೃತಪಡುತ್ತಾರೆ. ಹೀಗೆ ವಾರೀಸುದಾರರಿಲ್ಲದೇ ಮೃತಪಟ್ಟ ವ್ಯಕ್ತಿಗಳ ಮೃತದೇಹಗಳನ್ನು ಊರಿಗೆ ಕಳುಹಿಸಲು ಸಿದ್ಧತೆ ಮಾಡಲಾಗುತ್ತದೆ. ಸಾಮಾಜಿಕ ಕಾರ್ಯಕರ್ತರಾದ ಅಶ್ರಫ್ ತಾಮರಶ್ಶೇರಿ ಮೃತಪಟ್ಟ ವ್ಯಕ್ತಿಯ ಪತ್ನಿಯ ಮೊಬೈಲ್ ಗೆ ಕರೆ ಮಾಡುತ್ತಾರೆ. ತಮ್ಮ ಪತಿ ದುಬೈಯಲ್ಲಿ ಮೃತಪಟ್ಟಿದ್ದಾರೆಂದೂ ಮೃತದೇಹವನ್ನು ಊರಿಗೆ ಕಳುಹಿಸಲು ನಾವು ತಯಾರಿ ಮಾಡುತ್ತಿದ್ದೇವೆಂದೂ ಅದಕ್ಕಾಗಿ ತಮ್ಮ ಅನುಮತಿಯ ಅಗತ್ಯವಿದೆಯೆಂದೂ ಹೇಳುತ್ತಾರೆ.
ಈ ವಿಷಯವನ್ನು ಕೇಳಿದ ಪತ್ನಿ ಮಕ್ಕಳು ದುಃಖಿಸಬಹುದೆಂದು ಊಹಿಸಿದ ಅಶ್ರಪ್ ರವರ ಊಹೆಯು ಸಂಪೂರ್ಣ ಸುಳ್ಳಾಯಿತು. ಪತ್ನಿಯ ಹೇಳಿದ ಮಾತು ಕೇಳಿ ಅಶ್ರಪ್ ಮೂರ್ಚೆ ಹೋಗುವುದೊಂದೇ ಬಾಕಿಯಿತ್ತು. ‘ಮರಣ ಹೊಂದಿದ ತನ್ನ ಪತಿಯ ಮೃತದೇಹವನ್ನು ಊರಿಗೆ ಕಳುಹಿಸಬೇಡಿ, ಅದನ್ನು ಅಲ್ಲಿಯೇ ದಫನ ಮಾಡಿ’ ಎಂದಾಗಿತ್ತು ಪತ್ನಿಯ ಉತ್ತರ. ಈ ಮಾತನ್ನು ಕೇಳಿ ದಿಗ್ಭ್ರಾಂತನಾದ ಅಶ್ರಪ್ ಹೇಳುತ್ತಾರೆ ‘ತನ್ನ 25 ವರ್ಷಗಳ ಸುದೀರ್ಘ ಸೇವೆಯಲ್ಲಿ ನಾನು ಕಣ್ಣೀರು ಹಾಕಿದ ಪ್ರಪ್ರಥಮ ಘಟನೆಯಿದು’.
ಮೃತ ವ್ಯಕ್ತಿಯ ಪತ್ನಿಯ ಮಾತು ಕೇಳಿ ಒಂದೆಡೆ ಕೋಪ ತಡೆಯಲಾರದೆ ಹಾಗೂ ಇನ್ನೊಂದೆಡೆ ವಿಪರೀತ ದುಃಖಿತನಾದ ಅಶ್ರಫ್ ತನ್ನ ಪ್ರಯತ್ನವನ್ನು ಕೈಬಿಡಲಿಲ್ಲ. ಸಮೀಪದ ಪೊಲೀಸ್ ಸ್ಟೇಷನ್ ನಲ್ಲಿ ಈ ಕುರಿತು ದೂರು ದಾಖಲಿಸಲಾಯಿತು. ಪೊಲೀಸರು ಪತ್ನಿಯನ್ನು ಠಾಣೆಗೆ ಕರೆಯಿಸಿ ಮನವೊಲಿಸಲು ಪ್ರಯತ್ನಿಸಿದರು. ಅಲ್ಲಿಯೂ ಕರಗದ ಆ ಪತ್ನಿಯ ಕಲ್ಲು ಹೃದಯ ಹೇಳಿದ್ದು ಅದೇ ಮಾತು. ಪೊಲೀಸ್ ಠಾಣೆಯಲ್ಲೂ ಕೂಡ ‘ನನಗೆ ಪತಿಯ ಮೃತದೇಹ ಕಳುಹಿಸಿ ಕೊಡಬೇಡಿ’ ಎಂದು ಬರೆದುಕೊಟ್ಟಳು ಆ ಮಹಾತಾಯಿ.
ಇದರಿಂದಾಗಿ ಪುನಃ ಜರ್ಜರಿತರಾದ ಸಾಮಾಜಿಕ ಸಂಘಟನೆಯ ಕಾರ್ಯಕರ್ತರು ಹಠಕ್ಕೆ ಬಿದ್ದರು. ಹೇಗಾದರೂ ಮಾಡಿ ಮೃತಪಟ್ಚ ಈ ಬಡಪಾಯಿಯ ಮೃತದೇಹ ತವರಿಗೆ ಕಳುಹಿಸಿಯೇ ಸಿದ್ಧ ಎಂದು ಶಪಥ ಮಾಡಿದ ಅಶ್ರಫ್ ತನ್ನ ಪ್ರಯತ್ನ ಕೈಬಿಡದೆ ಮೃತ ವ್ಯಕ್ತಿಯ ಸಹೋದರಿಯ ಮೊಬೈಲ್ ಸಂಖ್ಯೆಯನ್ನು ಪಡೆದು ಆಕೆಗೆ ಮಾಹಿತಿ ನೀಡುತ್ತಾರೆ. ಮೃತ ವ್ಯಕ್ತಿಯ ಸಹೋದರಿಯ ಮಕ್ಕಳು ಮೃತದೇಹವನ್ನು ತಮ್ಮ ಮನೆಗೆ ಕಳುಹಿಸಿ ಕೊಡುವಂತೆಯೂ ಆ ಮೃತದೇಹವನ್ನು ತಾವು ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸುವುದಾಗಿ ಹೇಳಿದಾಗ ಅಶ್ರಫ್ ರವರಿಗೆ ಅದೇನೋ ಕೊಂಚ ಸಮಾಧಾನ ತಂದಿತು. ಪತ್ನಿ ಮಕ್ಕಳು ದೂರ ಮಾಡಿದರೂ ಸ್ವಂತ ಒಡ ಹುಟ್ಟಿದವರಾದರೂ ಧನಾತ್ಮಕವಾಗಿ ಸ್ಪಂದಿಸಿದರಲ್ಲ ಎಂಬ ಸಮಾಧಾನ. ಕೊನೆಗೆ ಸಹೋದರಿಯ ಮಕ್ಕಳ ಬಯಕೆಯಂತೆ ಮೃತದೇಹವನ್ನು ಊರಿಗೆ ಕಳುಹಿಸಿ ಅವರ ಮುಂದಾಳತ್ವದಲ್ಲೇ ಗೌರವಯುತವಾಗಿ ಅಂತಿಮ ಸಂಸ್ಕಾರ ಮಾಡಲಾಯಿತು.
ಇದಾಗಿದೆ ಮೇಣದ ಬತ್ತಿಯಂತೆ ಸ್ವತಃ ಕರಗಿ ತನ್ನ ಸುತ್ತಲಿರುವವರಿಗೆ ಬೆಳಕು ನೀಡುವ ಅನಿವಾಸಿಗೆ ಸಿಕ್ಕ ಅಂತಿಮ ಗೌರವ. ಮೃತ ದೇಹಕ್ಕೆ ಯಾರೂ ಅಗೌರವ ತೋರಬಾರದು. ಅದು ಯಾವುದೇ ಜೀವಿಯಾಗಿರಬಹುದು. ಆಗ ಮಾತ್ರ ನಾವು ಮನುಷ್ಯರು ಎಂದು ಹೆಮ್ಮೆ ಪಡಬಹುದು. ನಮಗೂ ದೇಹವಿದೆ. ನಾಳೆ ಏನಾಗುತ್ತದೆ ಎಂದು ಯಾರೂ ಹೇಳಲಾರರು. ಮತ್ತೆ ಯಾರಿಗೂ ಈ ಭಾಗ್ಯ ಬರದಿರಲಿ. ಸರ್ವಶಕ್ತನು ಇಂತಹ ಮಹಾ ದುರಂತದಿಂದ ಎಲ್ಲರನ್ನೂ ಕಾಪಾಡಲಿ.. ಪ್ರಾರ್ಥಿಸೋಣ…
✍️ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.