(www.vknews.in) : ಧರ್ಮವನ್ನು ಅಸ್ತ್ರವಾಗಿಸಿಕೊಂಡು ದ್ವೇಷಿಸುವುದನ್ನೇ ಕಾಯಕ ಮಾಡಿಕೊಂಡಿರುವ ನಾಡಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಜೊತೆ ಸೇರಿ ಹರೀಶ್ ಕುಟುಂಬಕ್ಕೆ ಮನೆ ಕಟ್ಟಿಕೊಟ್ಟ ಅಪೂರ್ವ ಕಾರ್ಯಕ್ರಮದಲ್ಲಿ ಇಂದು ಭಾಗಿಯಾದೆ.
ಈ ಸಂದರ್ಭದಲ್ಲಿ, ಮೂವರು ಪುಟ್ಟ ಮಕ್ಕಳೊಂದಿಗೆ ಹರೀಶ್ ಮತ್ತು ವಸಂತಿ ಕುಟುಂಬ ಕಳೆದ ಎರಡು ವರ್ಷಗಳಿಂದ ವಾಸವಾಗಿರುವ ಹಳೆ ಮನೆಯ ಚಿತ್ರವನ್ನು ಸಮಾಜಸೇವಕ ಗೆಳೆಯ Hasainar Hasai ಹಸೈನಾರ್ ತೋರಿಸಿದರು. ಅತ್ತ ಮಳೆಯ ನೀರನ್ನೂ ತಡೆಯಲಾಗದ ಮತ್ತು ಇತ್ತ ಬಿಸಿಲನ್ನೂ ಎದುರಿಸಲಾಗದ ಸೋಗೆಯ ಅತಿ ದುರ್ಬಲ ಮನೆ. ತನ್ನಿಂದ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ನೋವಿನಿಂದ ಹರೀಶ್ ಮಾನಸಿಕ ಆಘಾತಕ್ಕೂ ಒಳಗಾಗಿದ್ದಾರೆ. ಇದನ್ನು ಕಂಡ ಪಂಚಾಯತ್ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ರು, ಏನಾದರೂ ಮಾಡಬೇಕು ಎಂದು ಹಸೈನಾರ್ ರಲ್ಲಿ ಹೇಳಿಕೊಂಡರು. ಇವರಿಗೆ ಇಂಜಿನಿಯರ್ Yasir Kukkila ಮತ್ತು ಅನಿವಾಸಿ ಕನ್ನಡಿಗ Abdul Khader Veera’Kambha ಜೊತೆಯಾದರು. ಹಾಗೆ ತಾರಸಿ ಮನೆಯ ಗೋಡೆ ಎದ್ದಾಗ ಇವರ ನೆರವಿಗೆ ಬಂದದ್ದು ರೋಷನ್ ಬೆಲ್ಮಣ್. ಹೀಗೆ ಹಿಂದೂ-ಮುಸ್ಲಿಂ-ಕ್ರೈಸ್ತ ಜೊತೆ ಸೇರಿಕೊಂಡು 4 ಲಕ್ಷ ರೂಪಾಯಿಗಿಂತಲೂ ಅಧಿಕ ಮೊತ್ತದ ಪುಟ್ಟ ತಾರಸಿಯ ಮನೆಯನ್ನು ನಿರ್ಮಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮ ಕುಲಾಲು ಸಮೀಪದಲ್ಲಿ ಕುಂಟ್ರಕಳ ಎಂಬ ಊರಿದೆ. ಸಾಲೆತ್ತೂರಿನಿಂದ ನಾಲ್ಕು ಕಿಲೋಮೀಟರ್ ಕಾಡ ದಾರಿಯಲ್ಲಿ ಸಾಗಿದರೆ ಈ ಊರು ಸಿಗುತ್ತದೆ. ಇಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲ. ನಾನು ಮತ್ತು Salam Sammi ಈ ಕಾರ್ಯಕ್ರಮದಲ್ಲಿ ಭಾಗಿಯಾದೆವು. ತಿಮ್ಮಪ್ಪ ರೈಯವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದಲ್ಲಿಂದ ಹಿಡಿದು ದೀಪ ಹೊತ್ತಿಸುವ ಶಾಸ್ತ್ರೋಕ್ತ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದ ವರೆಗೆ ಸುಮಾರು ಒಂದು ಗಂಟೆಯ ಅವಧಿಯುದ್ದಕ್ಕೂ ವಸಂತಿ ಮತ್ತು ಹರೀಶರು ನಿಂತೇ ಇದ್ದರು. ಬಹುಶಃ ಕನಸಲ್ಲೂ ಕಂಡಿರದ ಮನೆಯೊಂದನ್ನು ಸಾಧ್ಯವಾಗಿಸಿದವರಿಗೆ ಹೇಗೆ ಧನ್ಯತೆಯನ್ನು ವ್ಯಕ್ತಪಡಿಸುವುದು ಎಂಬ ಗೊಂದಲ ಅವರಲ್ಲಿ ಇದ್ದಂತಿತ್ತು. ಹಸ್ತಾಂತರ ಕಾರ್ಯಕ್ರಮದ ಉದ್ದಕ್ಕೂ ತನ್ನ ಮೂವರು ಮಕ್ಕಳನ್ನು ಜೊತೆ ನಿಲ್ಲಿಸಿಕೊಂಡು ವಸಂತಿ ಎಂಬ ಆ ತಾಯಿ ನಡಕೊಂಡ ರೀತಿ ಮತ್ತು ಅವರ ಮುಖದಲ್ಲಿನ ಸಂತಸ ನನ್ನ ನೆನಪಲ್ಲಿ ಬಹುಕಾಲ ಉಳಿಯಲಿದೆ.
– ಏ ಕೆ ಕುಕ್ಕಿಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.