(www.vknews.in) ; ಕರಾವಳಿ ಪ್ರದೇಶದಲ್ಲಿ ಹಲವಾರು ಮಂದಿ ಸಾಮಾಜಿಕ, ಧಾರ್ಮಿಕ ಮುಖಂಡರು ತಮ್ಮ ಸರಳತೆ,ಧರ್ಮನಿಷ್ಠೆ,ಸಾಮಾಜಿಕ ಕಳಕಳಿಗಳ ಮೂಲಕ ಜನಮನ ಗೆದ್ದಿದ್ದಾರೆ. ಈ ಪೈಕಿ ಮರ್ಹೂಂ ನೌಶಾದ್ ಹಾಜಿ ಸೂರಲ್ಪಾಡಿ ವಿಶೇಷವಾಗಿ ಕಾಣುತ್ತಾರೆ. ಜೀವಿಸಿರುವಷ್ಟು ಕಾಲ ಸಮಾಜದ ಹಿತಕ್ಕಾಗಿ ಮಾತ್ರ ಕಾರ್ಯಾಚರಣೆ ಮಾಡಿದ್ದ ಈ ಮಹಾನ್ ಸಾಧಕ, ಉಲಮಾ ಸಾದಾತ್ ಗಳನ್ನು ಅತ್ಯಂತ ಹೆಚ್ಚು ಪ್ರೀತಿಸಿ,ಅನುಸರಿಸಿದ ಒಬ್ಬ ಧೀಮಂತ ಸುನ್ನೀ ನಾಯಕ!
ಸ್ಥಾನಮಾನ,ಗೆಳೆತನಕ್ಕಾಗಿ ಸಮಾಜದಲ್ಲಿ ವಿವಿಧ ವೇಷ ತೊಡುವವರ ಮಧ್ಯೆ ನೌಶಾದ್ ಹಾಜಿ ಸೂರಲ್ಪಾಡಿ ಅವರನ್ನು ವಿಭಿನ್ನವಾಗಿಸುವುದು ಅವರ ಧಾರ್ಮಿಕತೆ ಮತ್ತು ಬಡ ಜನರ ಕಣ್ಣೀರೊರೆಸುವ ಮಹತ್ಕಾರ್ಯ. ಉದ್ಯಮಿ ಅಬ್ದುರ್ರವೂಫ್ ಪುತ್ತಿಗೆ ಅವರ ನಾಯಕತ್ವದಲ್ಲಿ ಮಂಗಳೂರು ಕೇಂದ್ರವಾಗಿಸಿ ಕಾರ್ಯಾಚರಿಸುತ್ತಿರುವ “ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್” ನ ಅಧೀನದ “ನಂಡೆ ಪೆಂಙಳ್ ” ಅಭಿಯಾನದ ಅಧ್ಯಕ್ಷರಾಗಿ ಮದುವೆ ಪ್ರಾಯ ಮೀರಿದ ನೂರಾರು ಯುವತಿಯರಿಗೆ ಮದುವೆ ಭಾಗ್ಯ ಕರುಣಿಸಿದ ಸೌಭಾಗ್ಯವಂತರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪ್ರತೀಕವಾಗಿದ್ದ ನೌಶಾದ್ ಹಾಜಿ ಸೂರಲ್ಪಾಡಿ!
ಸಮಸ್ತ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ತಾನು ಸಕಲಕಲಾವಲ್ಲಭ ಎಂಬುದನ್ನು ತನ್ನ ನಿಷ್ಕಳಂಕ ಮತ್ತು ನಿಷ್ಕಪಟ ಕಾರ್ಯಾಚರಣೆ ಮೂಲಕ ತೋರಿಸಿ ಕೊಟ್ಟ ಮಹಾನ್ ಉಮರಾ ನಾಯಕರಾದ ನೌಶಾದ್ ಹಾಜಿ ಸೂರಲ್ಪಾಡಿ ಮಾತಿಗೆ ಮಾತ್ರ ಸೀಮಿತವಾಗದೆ ಎಲ್ಲವನ್ನು ಕೃತಿಗಳ ಮೂಲಕ ಜನರ ಮುಂದಿಟ್ಟವರು!!!
“ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್” ಕಾರ್ಯಕ್ರಮದಲ್ಲಿ ನನಗೆ ಪರಿಚಿತರಾದ ನೌಶಾದ್ ಹಾಜಿ ಸೂರಲ್ಪಾಡಿ ನಂತರ ಹಲವಾರು ಸಂದರ್ಭಗಳಲ್ಲಿ ವಿವಿಧ ಕಾರ್ಯಕ್ರಮ ಗಳಲ್ಲಿ ಕಾಣುವಾಗ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರನ್ನು ಕಂಡರೂ ಕಾಣದಿದ್ದರೂ ಅವರ ದಣಿವರಿಯದ ಸೇವೆಗಳ ಬಗ್ಗೆ ತುಂಬಾ ಅಭಿಮಾನವುಕ್ಕುತ್ತಿತ್ತು.
ಬೆಳ್ತಂಗಡಿಗೆ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತಕ್ಕೀಡಾಗಿ ಈ ಯುವ ಪ್ರತಿಭೆ ಇಹಲೋಕ ತ್ಯಜಿಸಿದಾಗ ಸಾವಿರಾರು ಮಂದಿ ಕಣ್ಣೀರಾದರು. ಒಬ್ಬ ಪ್ರಭಾವೀ ಹಾಗೂ ಸಕ್ರಿಯ ನಾಯಕನನ್ನು ಕಳೆದುಕೊಂಡ ಬಗ್ಗೆ ಸರ್ವ ಜನ ಬಾಂಧವರು ದುಃಖಿತರಾದರು. ಪತ್ರಿಕೆಯಲ್ಲಿ ನೌಶಾದ್ ಹಾಜಿ ಸೂರಲ್ಪಾಡಿ ಅವರಿಗೆ ಸಂತಾಪ ಸೂಚಿಸಿದವರ ಪಟ್ಟಿ ನೋಡಿದರೆ ಅವರ ಮಹತ್ವ ಎಷ್ಟಿತ್ತೆಂದು ಮನದಟ್ಟಾಗಬಹುದು.
ಸೇವೆಯನ್ನೇ ಕಾಯಕವಾಗಿಸಿ ನಮ್ಮನ್ನಗಲಿದ ನಮ್ಮೆಲ್ಲರ ಪ್ರೀತಿಯ ನೌಶಾದ್ ಹಾಜಿ ಸೂರಲ್ಪಾಡಿ ಯವರ ಕಬ್ರ್ ಜೀವನ ಅಲ್ಲಾಹು ಸ್ವರ್ಗ ಸುಖದ ತಾಣವಾಗಿಸಲಿ. ಅವರೊಂದಿಗೆ ನಮ್ಮನ್ನಗಲಿದ ಕ್ರಿಯಾಶೀಲ ಯುವಕ ಮುಹಮ್ಮದ್ ಮುಷರ್ರಫ್ ನ ಕಬ್ರನ್ನೂ ಅಲ್ಲಾಹು ಸ್ವರ್ಗಾನುಭೂತಿಯ ಕೇಂದ್ರವಾಗಿಸಲಿ. ಅವರನ್ನೂ ನಮ್ಮೆಲ್ಲರನ್ನೂ ಅಲ್ಲಾಹು ಸ್ವರ್ಗೋದ್ಯಾನದಲ್ಲಿ ಒಂದುಗೂಡಿಸಲಿ.
✍️ ಕೆ.ಎ.ಅಬ್ದುಲ್ ಅಝೀಝ್ ಝುಹ್ರಿ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.