ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):ಜಿಲ್ಲೆಯಲ್ಲಿ ಕಾಂಗ್ರೆಸ್ನಲ್ಲಿನ ಘಟಬಂಧನ್ ನಾಯಕರು ಸೇರಿದಂತೆ ಎಲ್ಲರ ಸಭೆ ಕರೆದು ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ ಕೋಲಾರಕ್ಕೆ ಬನ್ನಿ ಇಲ್ಲವಾದರೆ ನಿಮ್ಮನ್ನು ಹರಕೆಯ ಕುರಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆನ್ನಲಾಗಿದೆ.
ಕೋಲಾರಕ್ಕೆ ಜ .9 ರಂದು ಆಗಮಿಸುತ್ತಿರುವ ಸಿದ್ದರಾಮಯ್ಯ ಅವರ ಕೋರಿಕೆಯ ಮೇರೆಗೆ ಕೆ.ಎಚ್.ಮುನಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಭೇಟಿಯಾಗಿದ್ದು , ಕೋಲಾರ ಕ್ಷೇತ್ರದ ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
ನೀವು ಕೋಲಾರದಲ್ಲಿ ಸ್ಪರ್ಧಿಸುವುದಾದರೆ ನಮ್ಮ ವಿರೋಧವಿಲ್ಲ ಆದರೆ ಇಲ್ಲಿ ಅನೇಕ ಸಮಸ್ಯೆಗಳಿವೆ,ಆ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಬಂದರೆ ಮಾತ್ರ ಪಕ್ಷಕ್ಕೆ ಹಾಗೂ ನಿಮಗೆ ಒಳ್ಳೆಯದಾಗುತ್ತೆ ಇಲ್ಲದಿದ್ದಲ್ಲಿ ಕಷ್ಟ ಅನು ಭವಿಸುತ್ತೀರಿ ಎಂದು ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಭಿನ್ನಮತ ಪರಿಹರಿಸದಿದ್ದಲ್ಲಿ ಕೋಲಾರಕ್ಕೆ ಬಂದಾಗ ನಾವು ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳಲಿಕ್ಕೆ ಸಾಧ್ಯ ಆಗುವುದಿಲ್ಲ. ಕಾರಣ ನನಗೆ ಕಳೆದ ಚುನಾವಣೆಯಲ್ಲಿ 5 ಲಕ್ಷ ಮತ ಕೊಡಿಸಿದ ಪಕ್ಷದ ನಾಯಕರುಗಳ ಸ್ವಾಭಿಮಾನವನ್ನು ಬೀದಿಯಲ್ಲಿ ಹರಾಜು ಮಾಡಿ ಬಿಜೆಪಿಗೆ ಮತ ಹಾಕಿಸಿದವರು ಜೊತೆ ವೇದಿಕೆ ಹಂಚಿಕೊಳ್ಳುವಷ್ಟು ಆತ್ಮವಂಚಕ ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರು ಘಟಬಂಧನ್ ನಾಯಕರಗಳು ಎಂದು ಹೇಳಿಕೊಳ್ಳುವ ಕೆಲವೊಬ್ಬರು ಕೋಲಾರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳನ್ನು ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಲೆಕ್ಕಿಸದೆ ಅವರ ಪಾಡಿಗೆ ಅವರು ಸಿದ್ದರಾಮಯ್ಯನವರ ಭೇಟಿ ಹಾಗೂ ಚುನಾವಣಾ ಸ್ಪರ್ಧೆಯ ಪ್ರಚಾರವನ್ನು ಒಂದು ಬಣದ ಪರವಾಗಿ ಮಾಡುತ್ತಾ ಹೊರಟಿರುವುದು ಎಷ್ಟು ಸರಿ ಎಂಬುದನ್ನು ಪ್ರಶ್ನಿಸಿದಾಗ ಸಿದ್ದರಾಮಯ್ಯನವರು ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ನಾನು ಯಾರಿಗೂ ಇದನ್ನ ಮಾಡಿ ಅಂತ ಹೇಳಿಯೂ ಇಲ್ಲ ಎಂದು ಪಕ್ಷದ ರಾಷ್ಟ್ರೀಯ ಸಂಚಾಲನ ಸಮಿತಿ ಸದಸ್ಯರಾದ ಕೆ.ಎಚ್. ಮುನಿಯಪ್ಪ ಅವರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ನಾವು ಭೇಟಿ ಆಗುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು , ರಾಜ್ಯದ ಕಾಂಗ್ರೆಸ್ ಎಎಸಿಸಿ ಉಸ್ತುವಾರಿ ಸುರ್ಜೇವಾಲ , 2019 ರ ಸಂಸತ್ ಚುನಾವಣಾ ಸಮಯದಲ್ಲಿ ರಾಜ್ಯದ ಉಸ್ತುವಾರಿಯಾಗಿದ್ದ ವೇಣುಗೋಪಾಲ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಹ ಇರಲೇಬೇಕು ಎಂಬುದನ್ನ ಖಡಕ್ಕಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಸಿದ್ದರಾಮಯ್ಯನವರು ರಮೇಶ್ ಕುಮಾರ್ರೊಂದಿಗೆ ಮಾತನಾಡಿ ,ನೀವುಗಳು ಕೆ ಎಚ್ ಮುನಿಯಪ್ಪನವರೊಂದಿಗೆ ಮುಖಾಮುಖಿ ಕೂತು ಮಾತಾಡದ ಹೊರೆತು ಇದಕ್ಕೆ ಬೇರೆ ದಾರಿ ಇಲ್ಲ ಎಂದು ಸ್ಪಷ್ಟಪಡಿಸಿ ಶನಿವಾರ ಸಾಯಂಕಾಲ ಭೇಟಿ ಆಗಲೇಬೇಕು ಎಂಬ ಕಟ್ಟಪಣೆ ಹೊರಡಿಸಿದ್ದಾರೆ.
ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷರು , ರಾಜ್ಯ ಉಸ್ತುವಾರಿ , ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರು ಸದ್ಯ ಬೆಂಗಳೂರಲ್ಲಿ ಲಭ್ಯ ಇಲ್ಲದಿರುವುದರಿಂದ ಮತ್ತು ಕೆ.ಎಚ್. ಮುನಿಯಪ್ಪ ಅವರು ಭಾನುವಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮಾವೇಶ ತಯಾರಿಗಳಿಗಾಗಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಬೇಕಾಗಿದ್ದರಿಂದ ಶನಿವಾರದ ಈ ಸಭೆ ಮುಂದೂಡಲಾಗಿದೆ.
ಸಿದ್ದರಾಮಯ್ಯ ಅವರಿಗೆ ಇವತ್ತಿನ ಸಭೆ ಮುಂದೂಡಿ ಸಾಧ್ಯ ಆದರೆ ಭಾನುವಾರ ಸಮಾವೇಶದ ನಂತರ ಭೇಟಿ ಮಾಡಬಹುದು ಇಲ್ಲದಿದ್ದರೆ ಒಂಬತ್ತನೇ ತಾರೀಖಿನ ಸಿದ್ದರಾಮಯ್ಯ ಅವರ ಕೋಲಾರ ಭೇಟಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ ಎಂದು ಈ ದಿನ ಮಧ್ಯಾಹ್ನ ಸಿದ್ದರಾಮಯ್ಯ ಅವರು ಕೆ.ಎಚ್. ಮುನಿಯಪ್ಪ ಅವರನ್ನು ದೂರವಾಣಿ ಸ೦ಪರ್ಕಿಸಿದಾಗ ಮುಖಾ೦ತರ ಸಷ್ಟಪಡಿಸಿದರು.
ಮುಂದಿನ ತೀರ್ಮಾನ ಪಕ್ಷದ ಐಕ್ಯತೆ ಹಾಗೂ ಶಿಷ್ಟಾಚಾರವನ್ನು ಗಮನದಲ್ಲಿಟ್ಟು ಕೊಂಡು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ತೀರ್ಮಾನ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಕೆ.ಎಚ್.ಮುನಿಯಪ್ಪ ಬೆಂಬಲಿಗರು ಸ್ಪಷ್ಟಪಡಿಸಿದ್ದಾರೆ.
ಈ ಭೇಟಿ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಎಲ್.ಎ. ಮಂಜುನಾಥ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು , ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ , ಎಸ್ಪಿ ಘಟಕದ ಅಧ್ಯಕ್ಷ ನಾಗರಾಜ್ , ಮುಖಂಡರಾದ ಊರುಬಾಗಿಲು ಶ್ರೀನಿವಾಸ್ , ಉದಯಶಂಕರ್ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.