ಮಂಜೇಶ್ವರ (ವಿಶ್ವ ಕನ್ನಡಿಗ ನ್ಯೂಸ್) : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಉದ್ಯಾವರ ಕುಂಜತ್ತೂರು ನಿವಾಸಿ ಸೈಯದ್ ಕೆ.ಅಬ್ದುಲ್ಲಾ ಅವರ ಪುತ್ರ ಅಬ್ದುಲ್ ರಿಫಾಯಿ (24) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಉಪ್ಪಳದ ಹಿದಾಯತ್ ನಗರ ನಿವಾಸಿ ಬಷರ್ ಅಹ್ಮದ್ (22) ಎಂದು ಗುರುತಿಸಲಾಗಿದೆ. ಕಣ್ಣೂರು ನಿವಾಸಿಗಳಾದ ಫಾತಿಮಾ ಮತ್ತು ರೇವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಾಲ್ವರೂ ಸ್ನೇಹಿತರು.
ತಲಪಾಡಿ ಸಮೀಪದ ಕೊಲ್ಯದ ಅಡ್ಕ ಎಂಬಲ್ಲಿ ಭಾನುವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕದ ಮೇಲೆ ಹತ್ತಿ ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಥಳೀಯರು ದೀರ್ಘ ಪ್ರಯತ್ನದ ನಂತರ ಕಾರಿನಲ್ಲಿ ಸಿಕ್ಕಿಬಿದ್ದವರನ್ನು ಹೊರತೆಗೆದರು.
ಗಂಭೀರ ಗಾಯಗೊಂಡಿರುವ ಬಷರ್ ಅಹ್ಮದ್ ಅವರನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ. ಗಾಯಗೊಂಡ ಇತರ ಇಬ್ಬರು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಫಾತಿಮಾ ವೈದ್ಯಕೀಯ ವಿದ್ಯಾರ್ಥಿನಿ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಮತ್ತು ಉಳ್ಳಾಲ ಪೊಲೀಸರು ತಡವಾಗಿ ತಲುಪಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.