ಸುಳ್ಯ (www.vknews.in) : ಬಹಳಷ್ಟು ಅಂದವಾಗಿ, ಆಕರ್ಷಕ ಮತ್ತು ವೈಶಿಷ್ಟ್ಯಪೂರ್ಣವಾಗಿ ಜರ್ಮನ್ ಶೈಲಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಿರ್ಮಿಸಲಾದ ಮಸ್ಜಿದ್ ಹಾಜಿರಾ ಹಸನ್ ಹಾಗೂ ಸುಳ್ಯ ಕಮ್ಯುನಿಟಿ ಸೆಂಟರ್ ಅನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.
ಅಲ್ ಖೋಬರ್ನ ವಾಣಿಜ್ಯೋದ್ಯಮಿ ಮತ್ತು ಟೀಮ್ ಬಿ- ಹ್ಯೂಮನ್ ಟ್ರಸ್ಟಿ ಮುಹಮ್ಮದ್ ಯೂನುಸ್ ಹಸನ್ ಅವರು ಮಸ್ಜಿದ್ ಹಾಜಿರಾ ಹಸನ್ ಉದ್ಘಾಟಿಸಿದರೆ, ಸುಳ್ಯ ಕಮ್ಯುನಿಟಿ ಸೆಂಟರ್ ಅನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ ಉದ್ಘಾಟಿಸಿದರು. ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿ ಮಸೀದಿಯನ್ನು ವಕ್ಫ್ ಮಾಡಿದರು.
ಮಂಗಳೂರಿನ ಕಚ್ಚಿ ಮೆಮನ್ ಮಸೀದಿ ಖತೀಬ್ ಮೌಲಾನಾ ಶುಐಬ್ ಹುಸೈನಿ ನದ್ವಿ , ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ, ಮುಹಮ್ಮದ್ ಕುಂಞಿ, ವೇಳಂ ಶಾಂತಿ ನಗರ ಜುಮಾ ಮಸೀದಿಯ ಖತೀಬರಾದ ಹುಸೈನ್ ಕಾಮಿಲ್ ಸಖಾಫಿ, ಮಸೀದಿಯ ವಿನ್ಯಾಸ ಹಾಗೂ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹೊತ್ತ ಆಸಿಫ್ ಡೀಲ್ಸ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ದ್ವೇಷದ ಮಧ್ಯೆ ಆರಾಧನಾಲಯಗಳ ಮೂಲಕ ಧರ್ಮದ ನೈಜ ಸಂದೇಶವನ್ನು ತಿಳಿಸುವ ಅಗತ್ಯವಿದೆ : ಮುಹಮ್ಮದ್ ಕುಂಞಿ
ಸಮಾರಂಭದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ, ಮುಹಮ್ಮದ್ ಕುಂಞಿ, ಎಲ್ಲ ಧರ್ಮದವರಿಗೂ ಬದುಕಿನ ಜಂಜಾಟಗಳ ಮಧ್ಯೆ ಅವರವರ ಆರಾಧನಾಲಯಗಳಿಂದ ನೆಮ್ಮದಿ, ಸಾಂತ್ವನ, ಭರವಸೆ ಸಿಗುತ್ತದೆ. ಮುಸ್ಲಿಮರ ಬದುಕು ಮಸೀದಿಯೊಂದಿಗೆ ಜೋಡಿಸಲ್ಪಟ್ಟ ಬದುಕು. ಮಸೀದಿಯ ಸುತ್ತಲೂ ಸುತ್ತುತ್ತಿರುತ್ತದೆ. ಅದರೊಂದಿಗೆ ಇರುವ ಸಂಬಂಧ ದುರ್ಬಲವಾದರೆ ಬದುಕಿನ ಬ್ಯಾಲೆನ್ಸ್ ಹಾಳಾಗುತ್ತದೆ. ಮಸೀದಿಗಳು ಪ್ರವಾದಿಯವರ ಕಾಲದಲ್ಲಿ ಕೇವಲ ಆರಾಧನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅದು ತರಬೇತಿ, ಮಾರ್ಗದರ್ಶನದ ಜೊತೆಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ಕೇಂದ್ರವಾಗಿರುವುದರ ಜೊತೆಗೆ ಬೇರೆ ಬೇರೆ ಧರ್ಮದ ಪ್ರತಿನಿಧಿಗಳನ್ನು ಸ್ವಾಗತಿಸಿದ್ದ ಸ್ಥಳವಾಗಿತ್ತು. ಧರ್ಮದ ಹೆಸರಿನಲ್ಲಿ ಇಂದು ವಿಷಬೀಜ ಬಿತ್ತುವ ಕಾಲದ ನಡುವೆ ಮಸೀದಿ, ದೇವಸ್ಥಾನ, ಚರ್ಚುಗಳು ಧರ್ಮದ ನಿಜವಾದ ಸಂದೇಶಗಳನ್ನು ತಿಳಿಸುವ ಕೇಂದ್ರಗಳಾಗಿ ಮಾರ್ಪಡಿಸಬೇಕಾದ ಅಗತ್ಯ ಇಂದು ಇದೆ ಎಂದು ಹೇಳಿದರು.
ಮಸೀದಿಯ ವಿಶೇಷತೆ ; ಹಾಜಿರಾ ಹಸನ್ ಮಸೀದಿಯ ಜೊತೆಗೆ ಇಲ್ಲಿ ಕಮ್ಯೂನಿಟಿ ಸೆಂಟರ್ ಮತ್ತು ನಾಗರಿಕ ಸೇವಾ ಕೇಂದ್ರ, ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್, ಅರೇಬಿಕ್ ಸ್ಕೂಲ್ ಕಾರ್ಯಾಚರಿಸಲಿದೆ. ವಿವಿಧ ಸಮಾಜ ಸೇವಾ ಚಟುವಟಿಕೆಗಳ ಮೂಲಕ ಕಮ್ಯೂನಿಟಿ ಸೆಂಟರ್ ಕಾರ್ಯಾಚರಿಸಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.