ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಅಂಗಡಿ, ಸೂಪರ್ ಮಾರ್ಕೆಟ್ ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಮೊಬೈಲ್ ನಂಬರ್ ನೀಡಬಾರದು. ನಿಮ್ಮ ಸಂಖ್ಯೆಗಳನ್ನು ಎಲ್ಲಿಯೂ ನಮೂದಿಸುವ ಅಗತ್ಯವಿಲ್ಲ. ಸಮಂಜಸವಾದ ಕಾರಣವನ್ನು ನೀಡದ ಹೊರತು ಅಂಗಡಿಗಳಿಂದ ಸರಕುಗಳನ್ನು ಖರೀದಿಸುವಾಗ ಮೊಬೈಲ್ ಸಂಖ್ಯೆಯನ್ನು ಎಂದಿಗೂ ನೀಡಬಾರದು ಎಂದು ಅವರು ಸ್ಪಷ್ಟಪಡಿಸಿದರು.
ದೆಹಲಿ ವಿಮಾನ ನಿಲ್ದಾಣದೊಳಗಿನ ಅಂಗಡಿಯಿಂದ ಚ್ಯೂಯಿಂಗ್ ಗಮ್ ಖರೀದಿಸಿದಾಗ ಅಂಗಡಿಯವನು ತನ್ನ ಮೊಬೈಲ್ ಸಂಖ್ಯೆಯನ್ನು ಕೇಳಿದ ಕುರಿತು ದಿನೇಶ್ ಎಸ್ ಠಾಕೂರ್ ಎಂಬವರು ಮಾಡಿದ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ರಾಜೀವ್ ಚಂದ್ರಶೇಖರ್ ಈ ಹೇಳಿಕೆ ನೀಡಿದ್ದಾರೆ.
ಚ್ಯೂಯಿಂಗ್ ಗಮ್ ಕೊಳ್ಳಲು ಮೊಬೈಲ್ ನಂಬರ್ ಏಕೆ ಬೇಕು ಎಂದು ಕೇಳಿದಾಗ ಭದ್ರತಾ ದೃಷ್ಟಿಯಿಂದ ಮೊಬೈಲ್ ನಂಬರ್ ಬೇಕು ಎಂದು ಅಂಗಡಿಯ ಮ್ಯಾನೇಜರ್ ಹೇಳಿದ್ದಾರೆ ಎಂದು ದಿನೇಶ್ ಟ್ವೀಟ್ ಮಾಡಿದ್ದಾರೆ. ಆಗ ಚ್ಯೂಯಿಂಗ್ ಗಮ್ ಖರೀದಿಸದೆ ಅಂಗಡಿಯಿಂದ ಹೊರಬಂದೆ ಎಂದು ಟ್ವೀಟ್ ಮಾಡಿದ್ದಾರೆ. ಬಿಲ್ಲಿಂಗ್ ಸಮಯದಲ್ಲಿ ಅನಗತ್ಯವಾಗಿ ಮೊಬೈಲ್ ಸಂಖ್ಯೆಗಳನ್ನು ಪಡೆಯುವ ವ್ಯವಹಾರಗಳ ಬಗ್ಗೆ ದೂರುಗಳು ಕೇಳಿಬರುತ್ತಿರುವಾಗ ಸಚಿವರು ಇದನ್ನು ಸ್ಪಷ್ಟಪಡಿಸಿದರು.
ಡಿಜಿಟಲ್ ವೈಯಕ್ತಿಕ ಮಾಹಿತಿ ಭದ್ರತಾ ಮಸೂದೆ ಅಂಗೀಕಾರದೊಂದಿಗೆ ವೈಯಕ್ತಿಕ ಮಾಹಿತಿಯ ದುರ್ಬಳಕೆ ಕೊನೆಗೊಳ್ಳುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಸೂಪರ್ಮಾರ್ಕೆಟ್ಗಳು ಮತ್ತು ಮಾಲ್ಗಳು ನೀಡುವ ಫೋನ್ ನಂಬರ್ಗಳ ದುರ್ಬಳಕೆಯ ಬಗ್ಗೆ ಸಾಕಷ್ಟು ಸುದ್ದಿಗಳು ಬಂದಿದ್ದವು. ಎಲ್ಲೆಂದರಲ್ಲಿ ಮೊಬೈಲ್ ಸಂಖ್ಯೆ ನೀಡಬೇಕೆ ಎಂಬ ಹಲವು ಪ್ರಶ್ನೆಗಳು ಎದ್ದಿರುವಾಗಲೇ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.