(ವಿಶ್ವ ಕನ್ನಡಿಗ ನ್ಯೂಸ್) : ಕಾರ್ಕಳ ಪುರಸಭೆಯ ಜಿದ್ದಾಜಿದ್ದಿನ ಚುನಾವಣೆಲ್ಲಿ ಗಿರಿಧರ ನಾಯಕ್ ಅವರ ನೆರಳಿಗೆ ಜೀವಕೊಟ್ಟು ಲಕ್ಷ್ಮೀನಾರಾಯಣ ಮಲ್ಯರಿಗೆ ಪೇಟೆಯ ಜನರ ಅಂಡರ್ ಕರಂಟ್ ನಲ್ಲಿ ವಿಜಯಲಕ್ಷ್ಮಿ ಒಲಿದಳು. ಫಲಿತಾಂಶ ಬಿಜೆಪಿ- ಕಾಂಗ್ರೆಸ್ ಸಮಾನವಾಗಿತ್ತು ಬಳಿಕ ಏನೆಲ್ಲ ರಾಜಕೀಯ ಸ್ವಾರಸ್ಯ ನಡೆಯಿತು…
ಕಾರ್ಕಳ ಪೇಟೆ ಎಂದರೆ ಬಿಜೆಪಿ ಕೋಟೆ. ಪ್ರಚಂಡ ಜಯಭೇರಿ ಭಾರಿಸಬೇಕಿದ್ದ ಬಿಜೆಪಿ ಬಹುಮತ ಪಡೆಯಲೂ ಅಶಕ್ತವಾಯಿತು. ಪುರಸಭೆ ಯಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಪಕ್ಷೇತರ (ಮಲ್ಯ) 1 ಸ್ಥಾನ ಬಂದಿತ್ತು. ಮಲ್ಯರು ನಿರ್ಣಾಯಕ ಸ್ಥಾನದಲ್ಲಿದ್ದರು !
ಮಲ್ಯ ಅವರು ಪಕ್ಷೇತರರಾಗಿ ಜಿಎಸ್ಬಿ ಸಮುದಾಯದವರ ಪ್ರಚಂಡ ಬೆಂಬಲದಿಂದ ಗೆದ್ದು ಇತಿಹಾಸ ನಿರ್ಮಿಸಿದರು. ಗೆದ್ದ ತಕ್ಷಣ ಶಾಸಕರಾದ ವಿ.ಸುನೀಲ್ ಕುಮಾರ್ ಕಚೇರಿಗೆ ಭೇಟಿ ಕೊಡುವ ನಿರ್ಧಾರ ಆಗಿತ್ತು. ಆಗ ಅಲ್ಲಿ ಅವರು ಇರಲಿಲ್ಲ. ಅಲ್ಲಿಂದ ಮಾಜಿ ಶಾಸಕ ಗೋಪಾಲ ಭಂಡಾರಿ ಕಚೇರಿಗೆ ತೆರಳಿದರು. ಅಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಇದೆಲ್ಲ ಆದ ಬಳಿಕ ಶಾಸಕ ಸುನಿಲ್ ಕುಮಾರ್ ಕಚೇರಿಗೆ ಕರೆಸಿಕೊಂಡರು. “ಆದದ್ದು ಆಯಿತು, ಇನ್ನು ನೀವು ಬಿಜೆಪಿಯಲ್ಲಿಯೇ ಇರಿ” ಎಂದು ಉಸುರಿದರು.
ಅದಕ್ಕೆ ಮಲ್ಯರು ಆಯಿತು “ನಾನು ಪುರಸಭೆ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ, ಆದರೆ ಗಿರಿ ಅವರಿಗೆ ಟಿಕೆಟ್ ಕೊಡಬೇಕು ಅವರು ಅಲ್ಲಿ ಸ್ಪರ್ಧಿಸಬೇಕು ಜನ ಗೆಲ್ಲಿಸುತ್ತಾರೆ”* ಎಂದರು. ಅದೊಂದು ಬಿಟ್ಟು ಬೇರೆ ಕೇಳಿ ಎಂಬ ಉತ್ತರ ಬಂದಾಗ ಅಲ್ಲಿಗೆ ಮಾತುಕತೆ ಮುಗಿದಿತ್ತು ಮನಸ್ಸು ಮುರಿದಿತ್ತು!.
ಬಳಿಕ ಕಾರ್ಕಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭವೂ ಎರಡು ಮೂರು ಬಾರಿ ಮಾತುಕತೆ ನಡೆಯಿತು. ಒಂದೇ ಬೇಡಿಕೆ, ಗಿರಿಯಣ್ಣನಿಗೆ ಟಿಕೆಟ್ ಕೋಡಿ. ಆದರೆ ಗಿರಿಧರಗೆ #ನಾಮ ನಿರ್ದೇಶನ ಮಾಡಿಸುವ ಭರವಸೆ ಮಾತ್ರ ಬಂತು ! ಪುರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭ ಕೇವಲ 2 ನಿಮಿಷ ವಿಳಂಬ ಕಾರಣಕ್ಕೆ ಪುರಸಭೆ ಒಳಗೆ ಹೋಗಲು ಮಲ್ಯರಿಗೆ ಬಿಡಲೇ ಇಲ್ಲ. ಬಹುಮತದ ಸದಸ್ಯರ ಕೊರತೆ ಇದ್ದರೂ ಬಿಜೆಪಿ ಶಾಸಕರು, ಸಂಸದರು ಮತಗಳು ಸೇರಿ ಒಂದು ಮತದಿಂದ ಬಿಜೆಪಿಯ ಸುಮಾ ಕೇಶವ್ ಅಧ್ಯಕ್ಷರಾದರೆ ಪಲ್ಲವಿ ಪ್ರವೀಣ್ ಉಪಾಧ್ಯಕ್ಷರಾದರು.
ಸ್ಥಾಯಿ ಸಮಿತಿ ವಶಕ್ಕೆ.. ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಶಾಸಕ, ಸಂಸದರ ಮತಗಳಿಲ್ಲ. ಹೀಗಾಗಿ ಮಲ್ಯ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಯಾದರು. ಬಿಜೆಪಿ ಹೈಕಮಾಂಡಿಗೆ ಇದು ನುಂಗಲಾರದ ತುತ್ತು. ಆದರೆ ಬೇಡ ಎಂದರೆ ಸ್ಥಾಯಿ ಸಮಿತಿ ಕಾಂಗ್ರೆಸ್ ಪಾಲಾಗುತ್ತದೆ ಎಂಬ ಕಾರಣಕ್ಕೆ ಒಕೆ ಎಂದರು.
ಕಾಮತರು ಬಂದಿದ್ರು! ಮಂಗಳೂರಿನ ಶಾಸಕ ಕಾಮತರನ್ನು ಕರೆ ತಂದಿದ್ದರು. ಪುರಸಭೆ ಚುನಾವಣೆಗೋಸ್ಕರ ಕರೆ ತಂದಿದ್ದರು. ಅವರು ಎರಡು ದಿನ ಬಂದು ಕ್ಯಾಂಪೇನ್ ಮಾಡಿದ್ದರು. ಆದರೆ ಅವರಿಗೂ ಪೇಟೆಯ ಜನರಲ್ಲಿ ಒಳಗಿಂದೊಳಗೆ ಅಸಮಾಧಾನ ಸ್ತುಪ್ತವಾಗಿ ಹರಿಯುತ್ತಿರುವುದು ಗಮನಕ್ಕೆ ಬಂದಿತ್ತು. ನಮ್ಮಿಂದಲೇ ಏನೋ ಸಮಸ್ಯೆ ಆಗಿದೆ ಎಂದು ಆಪ್ತರಲ್ಲಿ ಹೇಳಿಯೂ ಇದ್ದರು.
ಕಾರ್ಕಳ ಭಾಗದ ಸಂಘಟನೆಯ ಪ್ರಭಾವಿ ವಿವೇಕಾನಂದ ಶೆಣೈ ಮನೆಗೂ ಪುರಸಭೆ ಚುನಾವಣೆಗೆ ಮುನ್ನ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿದ್ದರು. ಬಳಿಕ ಭೇಟಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದರು. ಶೆಣೈಯವರೂ ಶಾಸಕರ ಮುಗುಳುನಗೆಯ ಮಾತುಗಳಿಗೆ ಅರಳಿದರು, ತಮ್ಮ ರಾಜಕೀಯ ಜೀವನ ಕೊನೆಗೊಂಡ, ಸಂಘಟನೆಯ ನಂಟು ಕಳಚುವಂತಾದ ಎಲ್ಲ ಹಳೆಯ ಮುನಿಸು ಮರೆತು 6ನೇ ವಾರ್ಡಿನತ್ತ ಮುಖ ಮಾಡಿದ್ದರು. ಚಾಲಾಕಿ ಶೆಣೈ ಅವರಿಗೆ ಒಂದೆರಡು ದಿನಗಳಲ್ಲಿಯೇ ಅದು ಬಿಡಿಸಲಾಗದ ಕಗ್ಗಂಟು ಎಂದು ಅರಿವಾಗುತ್ತಿದ್ದಂತೆಯೇ ಕಾದು ನೋಡುವ ಮೌನ ತಂತ್ರಕ್ಕೆ ಶರಣಾಗಿದ್ದರು.
ಚರಂಡಿ ತ್ಯಾಜ್ಯ ಬಾವಿಯಲ್ಲಿ… ಬಿಜೆಪಿಯ ಕೋಟೆಯಲ್ಲಿ ಬಿರುಕು ಬಿತ್ತು. ವಿಷಾದ ಎಂದರೆ ಕಾರ್ಕಳ ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಹೋಗಿರುವ ಒಳಚರಂಡಿಯಿಂದ ಮಾನವ ತ್ಯಾಜ್ಯಗಳು ಬಾವಿ ಸೇರುತ್ತಿದೆ. 13 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಯೋಜನೆಯಿಂದ ಪೇಟೆಯ ಜನರು ಖುಷಿ ಪಡಬೇಕಿತ್ತು. ವಿಷಾದ ಎಂದರೆ ಕಾಮಗಾರಿ ಬಳಿಕ ದೇವಸ್ಥಾನ ಪರಿಸರದ 9ಕ್ಕೂ ಹೆಚ್ಚು ಬಾವಿಗಳ ನೀರು ಕಲುಷಿತವಾಗಿದೆ. ಇದರಿಂದ ರೋಸಿ ಹೋಗಿರುವ ಜನರ ಮನಸ್ಸು ಆಕ್ರೋಶದಿಂದ ಕಲುಷಿತವಾಗಿದೆ. ಈ ಕುರಿತ ಲೇಖನ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ..
ಲೇಖನ: ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.