ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಟೆಕ್ ಕಂಪನಿಯೊಂದರ ಸಿಇಒ ಆಗಿರುವ ಮಹಿಳೆಯೊಬ್ಬರು ಜಾಗಿಂಗ್ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ದಾರುಣ ಅಂತ್ಯ ಕಂಡಿದ್ದಾರೆ. ಭಾನುವಾರ ಬೆಳಗ್ಗೆ ಮುಂಬೈನಲ್ಲಿ ಈ ಘಟನೆ ನಡೆದಿದೆ. ವ್ಯಾಯಾಮದ ಭಾಗವಾಗಿ ಬೆಳಗ್ಗೆ ಜಾಗಿಂಗ್ ಗೆ ತೆರಳಿದ್ದ ಟೆಕ್ ಕಂಪನಿಯೊಂದರ ಸಿಇಒ ರಾಜಲಕ್ಷ್ಮಿ ವಿಜಯ್ ಎಂಬ 42 ವರ್ಷದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ರಾಜಲಕ್ಷ್ಮಿ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 6.30ಕ್ಕೆ ವರ್ಲಿ ಮಿಲ್ಕ್ ಡೈರಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಮ್ಯಾರಥಾನ್ ಸ್ಥಳಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದ ರಾಜಲಕ್ಷ್ಮಿ ಇತ್ತೀಚೆಗೆ ನಡೆದ ಟಾಟಾ ಮುಂಬೈ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.
ಪಕ್ಕದಲ್ಲೇ ಜಾಗಿಂಗ್ ಮಾಡುತ್ತಿದ್ದ ಪೊಲೀಸರೊಬ್ಬರು ರಾಜಲಕ್ಷ್ಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಈ ವೇಳೆ ಶಿವಾಜಿ ಪಾರ್ಕ್ ಬಳಿ ಜಾಗಿಂಗ್ ಮಾಡುತ್ತಿದ್ದ ರಾಜಲಕ್ಷ್ಮಿ ಅವರ ಪತಿ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದಾರೆ.
ಅಪಘಾತದ ನಂತರ ಸ್ಥಳೀಯ ನಿವಾಸಿಗಳು ಕಾರು ಚಾಲಕ ಸುಮೇರ್ ಮರ್ಚೆಂಟ್ (23) ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುಮೇರ್ ಮತ್ತು ಆತನ ಸ್ನೇಹಿತ ತಮ್ಮ ಮಹಿಳಾ ಸ್ನೇಹಿತೆಯನ್ನು ಶಿವಾಜಿ ಪಾರ್ಕ್ಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸುಮೇರ್ ಮರ್ಚಂಟ್ ಮದ್ಯದ ಅಮಲಿನಲ್ಲಿದ್ದ ಶಂಕೆ ವ್ಯಕ್ತಪಡಿಸಿದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.