ಕಾರ್ಕಳ (ವಿಶ್ವ ಕನ್ನಡಿಗ ನ್ಯೂಸ್) : ಕಾರ್ಕಳದಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಲಾಗುವುದು ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೊಟ್ಟುಕೆರೆ ಅಭಿವೃದ್ಧಿಗೆ ಕಣಂಜಾರು ಸಮೀಪದ ಕೊಡಿಲುಕಟ್ಟೆ ಎಂಬಲ್ಲಿ ಹತ್ತು ಸಾವಿರ ರೂಪಾಯಿಯ ಕೆಲಸ ಮಾಡಿ ಸರಕಾರದಿಂದ ಹತ್ತು ಲಕ್ಷ ರೂಪಾಯಿ ಬಿಲ್ ಮಾಡಲಾಗಿದ್ದು ಮತ್ತೆ ಹದಿನೈದು ಲಕ್ಷ ರೂಪಾಯಿಗೆ ಬೇಡಿಕೆ ಸಲ್ಲಿಸಲಾಗಿದೆ. ಬೋಗಸ್ ಕೆಲಸದಲ್ಲಿ ಲಕ್ಷ ಲಕ್ಷ ಲೂಟಿ ಮಾಡಲಾಗಿದೆ. ಈ ಮೂಲಕ ಸುನೀಲ್ ಅವರ ಭ್ರಷ್ಟಾಚಾರ ಮೇಲುನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದರು.
ಎರಡನೇ ದಾಖಲೆ ಬಿಡುಗಡೆಗೊಳಿಸಿದ ಮುತಾಲಿಕ್ ಪುರಾತನ ಊರಿಗೆ ನೀರುಣಿಸುತಿದ್ದ ಜಡ್ಡಿನಕಟ್ಟೆ ಕೆರೆಯನ್ನು ಮುಚ್ಚಿ ತೀರ್ಥಹಳ್ಳಿಯ ಷರೀಫ್ ಅಕ್ರಮ ಕ್ರಷರ್ ಮಾಡುತಿದ್ದರು. ಅದನ್ನು ಮನಗಂಡು ಸಂಘಟನೆ ಪ್ರಮುಖರಾದ ದಿವ್ಯ ಹಾಗು ಇತರರ ಹೋರಾಟದ ಫಲವಾಗಿ ಗಣಿಗಾರಿಕೆ ನಿಲುಗಡೆಯಾಗಿದೆ. ಈಗ ಸ್ಥಾಪಿತ ಬಹಿತಾಸಕ್ತರ ಕುಮ್ಮಕ್ಕಿನಿಂದ ಆ ಗಣಿಗಾರಿಕೆ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಇದಕ್ಕೆ ಸಚಿವರ ಒತ್ತಡವೇ ಕಾರಣವಾಗಿದೆ ಎಂದರು.
ನೀರೆ ಬೈಲೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಅಂದಿನ ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆಯು ದಾಳಿ ನಡೆಸಿ ಕಲ್ಲು ತುಂಬಿದ ಎರಡು ಲಾರಿಗಳನ್ನು ವಶಪಡಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದಾದ ಕೆಲ ಹೊತ್ತಿನಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಆ ಎರಡು ಲಾರಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಜಿಲ್ಲಾಡಳಿತವು ಆ ಉಪತಹಶೀಲ್ದಾರ್ ಅವರನ್ನು ಕಾಪುವಿಗೆ ವರ್ಗಾಹಿಸಿದ್ದರು. ಇದು ಕಾನೂನು ಸಮ್ಮತವಲ್ಲ. ಅದೇ ಉಪತಹಶೀಲ್ದಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದರು.
ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಜಲಜೀವನ್ ಯೋಜನೆ ದುರುಪಯೋಗವಾಗಿದೆ. ರೂ. 35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಟ್ಯಾಂಕಿನ ಕಳಪೆ ಕಾಮಗಾರಿಯಿಂದಾಗಿ ಒಂದು ಹನಿ ನೀರು ನಿಲ್ಲದೇ ಇದೀಗ ಟ್ಯಾಂಕ್ ದುರಸ್ಥಿ ನೆಪದಲ್ಲಿ ನೆಲಸಮಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿ ನಡೆದಿರುವ ಕಳಪೆ ಕಾಮಗಾರಿಯ ರೂವಾರಿಯಾಗಿರುವ ಗುತ್ತಿಗೆದಾರನೇ ಆ ಹಣವನ್ನು ಭರಿಸಿಸಬೇಕೆಂದು ಒತ್ತಾಯಿಸಿದರು. ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯ ವ್ಯಾಪ್ತಿಯೊಳಪಟ್ಟ ಧಾರ್ಮಿಕ ಕ್ಷೇತ್ರ 150 ಮೀಟರ್ ಪರಿಧಿಯೊಳಗೆ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಾರ್ಕಳ ಪುರಸಭೆಯಿಂದ ನಾಲ್ಕು ಬಾರಿ ನೋಟೀಸ್ ಜಾರಿಗೊಂಡರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿ ಇದೇ ಸಂದರ್ಭದಲ್ಲಿ ಹೇಳಿದರು. ಭ್ರಷ್ಟಾಚಾರ ಹಾಗೂ ಡೋಂಗಿ ಹಿಂದುತ್ವದ ವಿರುದ್ಧ ಸ್ವರ್ಧೆಗೆ ಇಳಿದಿದ್ದೇನೆ. ಮೋದಿ, ಯೋಗಿ ಮಾದರಿಯಲ್ಲಿ ಅಭಿವೃದ್ಧಿ ಹಾಗೂ ಆಡಳಿತ ನಡೆಸುವುದೇ ನನ್ನ ಗುರಿ. ಸಂಘಟನೆಯ ಮೂಲಕ ಎಲ್ಲಾ ಜಿಲ್ಲೆಯ ಮೂಲೆಮೂಲೆಗಳಲ್ಲಿ ಹೋರಾಟ ನಡೆಸಿ ಭಾಷಣ ಬಿಗಿಯುತ್ತಿದ್ದಾಗ ಮುತಾಲಿಕ್ ಎಲ್ಲರಿಗೂ ಬೇಕಾಗಿದ್ದರು. ಲಾಭ ಪಡೆದರು. ಇಲ್ಲಿಗೆ ಯಾಕೆ ಬಂದರೆಂಬ ಪ್ರಶ್ನೆ ಕೇಳಲಿಲ್ಲ. ಈಗ ನನ್ನ ಸ್ವರ್ಧೆಯ ಕುರಿತು ಪ್ರಶ್ನಿಸುತ್ತಿದ್ದಾರೆ. 25 ಮಂದಿ ಹಿಂದುತ್ವವಾದಿಗಳಿಗೆ ಬಿಜೆಪಿಯಲ್ಲಿ ಸ್ವರ್ಧಿಸಲು ಅವಕಾಶ ಕೇಳಿದರೂ, ಕಡೆಗಣಿಸಿದ ಬಿಜೆಪಿ ನಾಯಕರಿಗೆ ಈಗ ನನ್ನ ಸ್ವರ್ಧೆಯಿಂದ ಕಾಲಬುಡಕ್ಕೆ ಬಿಸಿನೀರು ಬಂದಂತಾಗಿದೆ ಎಂದು ಲೇವಡಿ ಮಾಡಿದರು.
ಬೇನಾಮಿ ಹೆಸರಿನಲ್ಲಿ ಆಸ್ತಿ ಬಗ್ಗೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ಕೊಟ್ಟಿಲ್ಲ. ತಾಕತ್ ಇದ್ದರೆ ದಾಖಲೆಗಳಿಗೆ ಸಚಿವ ಸುನೀಲ್ ಕುಮಾರ್ ಉತ್ತರಿಸಲಿ ಎಂದು ಮುತಾಲಿಕ್ ಗುಡುಗಿದರು. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಶುದ್ಧ ಹಸ್ತದಲ್ಲಿರುವ ವ್ಯಕ್ತಿ. ಆದರೆ ಅವರ ಹೆಸರಿನಲ್ಲಿ ಸುನೀಲ್ ಕುಮಾರ್ ಭ್ರಷ್ಟಾಚಾರ ಮಾಡುತಿದ್ದಾರೆ. ಇಂಧನ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಬ್ರಹ್ಮಾಂಡವಿದೆ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.