(ವಿಶ್ವ ಕನ್ನಡಿಗ ನ್ಯೂಸ್) : ಬುಧವಾರ 29/3/2023 ರಂದು ಜುಬೈಲ್ಗೆ ಬಂದಿದ್ದೆ. ಮಸೀದಿಯಲ್ಲಿ ಇಫ್ತಾರ್ ಮುಗಿಸಿ ಮಗ್ರಿಬ್ ನಮಾಝ್ನ ಬಳಿಕ ಭಾರಿ ಜನ ಸೇರಿದ್ದ ಮಯ್ಯಿತ್ ನಮಾಝ್ ನಿರ್ವಹಿಸಿ, ಅಂತ್ಯಕ್ರಿಯೆಯಲ್ಲೂ ಭಾಗವಹಿಸಿ ಹೊರಬಂದೆ. ಆ ಮುಖ ಮಾತ್ರ ಮನದಿಂದ ಬೇಗ ಮರೆಯಾಗದು. ಎಂ ಎಚ್ ಸುಲೈಮಾನ್ ಮಲ್ಲೂರು. ಮೂವತ್ತೈದು ವರ್ಷ ವಯಸ್ಸಿನ ಯುವಕ. ನಾಲ್ಕು ಮತ್ತು ಆರು ವಯಸ್ಸಿನ ಇಬ್ಬರು ಮಕ್ಕಳ ತಂದೆ. ತಂದೆಯ ಏಕೈಕ ಮಗ.
ವಾರದ ಹಿಂದೆ, ಪವಿತ್ರ ರಮಳಾನ್ ಮಾಸದ ಮೊದಲ ರಾತ್ರಿಯ ತರಾವೀಹ್ ನಮಾಝ್ ಮುಗಿಸಿ ಮರಳುವ ದಾರಿಯಲ್ಲಿ ನಡೆದಾಡುತ್ತಿದ್ದ ತನ್ನ ಮೇಲೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಸುಲೈಮಾನ್ ಕೊನೆಯುಸಿರೆಳೆದಿದ್ದರು. ಬದುಕಿನ ಬಡತನದ ಜಂಜಾಟಗಳಿಗೊಂದು ಪರಿಹಾರವಾದೀತು ಎಂದುಕೊಂಡು ದಶಕದ ಹಿಂದೆ ಸೌದಿ ಸೇರಿದ್ದ ಸುಲೈಮಾನ್, ದುಡಿಮೆಯ ನಡುವೆಯೂ ದೀನೀ ಖಿದ್ಮತ್ ಕೈಬಿಟ್ಟವರಲ್ಲ. ಊರಿನಲ್ಲಿದ್ದಾಗ ಎಸ್ ಎಸ್ ಎಫ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಗಲ್ಫ್ಗೆ ಬಂದಾಗ ಕೆಸಿಎಫ್ನಲ್ಲಿ ಕ್ರಿಯಾಶೀಲರಾದರು. ಮಲ್ಲೂರು ಅಲ್ ಅಸಾಸ್ನಲ್ಲಿ ನಡೆಯುತ್ತಿದ್ದ ಸ್ಕೂಲ್ ಆಫ್ ಖುರ್ಆನ್ ಕ್ಲಾಸುಗಳಲ್ಲಿ ಆ ಮುಖವನ್ನು ನೋಡಿದ ನೆನಪು. ಇನ್ನು ಸುಲೈಮಾನ್ ನೆನಪು ಮಾತ್ರ.
ಅಲ್ಲಾಹನ ಅನುಲ್ಲಂಘನೀಯ ವಿಧಿ. ಅಪ್ಪನನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ, ಮಗನನ್ನು ಕಳೆದುಕೊಂಡು ನಿರಾಶ್ರಿತರಾದ ತಂದೆಗೆ, ಬದುಕು ಕಟ್ಟಿಕೊಡುತ್ತಾ ಬಂದ ಜೀವನ ಸಂಗಾತಿಯನ್ನು ಕಳಕೊಂಡ ಪತ್ನಿಗೆ ಅಲ್ಲಾಹನು ಅಪಾರವಾದ ಸಹನೆಯನ್ನು ಮತ್ತು ಅದರ ಸತ್ಫಲವನ್ನು ಅನುಗ್ರಹಿಸಲಿ, ಆಮೀನ್. ಪ್ರಾರ್ಥನೆಯಲ್ಲದೆ ಇನ್ನೇನು ಮಾಡಲು ಸಾಧ್ಯ?
– ಸಿದ್ದೀಕ್ ಕೆಎಂ ಮೊಂಟುಗೊಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.