ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ರಾಮ ನವಮಿ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಉಂಟಾಗಿದ್ದ ಉದ್ವಿಗ್ನತೆ ಇನ್ನೂ ಶಮನವಾಗಿಲ್ಲ. ವಿವಿಧೆಡೆ ಘರ್ಷಣೆ, ಬಂಧನಗಳು ಮುಂದುವರಿದಿವೆ. ಸಂಘರ್ಷ ನಿಯಂತ್ರಿಸಲು ಕೆಲವೆಡೆ ನಿಷೇಧಾಜ್ಞೆಯನ್ನೂ ಘೋಷಿಸಲಾಗಿದೆ.
ಪಶ್ಚಿಮ ಬಂಗಾಳದ ಹೌರಾದಲ್ಲಿ ಶುಕ್ರವಾರ ರಾತ್ರಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟದ ತಾಜಾ ಘಟನೆ ವರದಿಯಾಗಿದೆ. ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಹಾರದ ಸಸಾರಾಮ್ ಮತ್ತು ನಳಂದಾದಲ್ಲಿ ಎರಡು ಸಮುದಾಯಗಳ ನಡುವಿನ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದ್ದಂತೆ ಸೆಕ್ಷನ್ 144 ಘೋಷಿಸಲಾಯಿತು.
ಗುಜರಾತ್ನ ವಡೋದರಾದಲ್ಲಿ ರಾಮನವಮಿ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ 24 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮಾಲ್ವಾನಿಯಲ್ಲಿ ಎರಡು ಸಮುದಾಯಗಳ ನಡುವಿನ ಘರ್ಷಣೆಯಲ್ಲಿ 21 ಜನರನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಹೌರಾದ ಶಿಬ್ಪುರದಲ್ಲಿ ಗುರುವಾರ ನಡೆದ ರಾಮ ನವಮಿ ಆಚರಣೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಹಲವಾರು ವಾಹನಗಳು ಮತ್ತು ಅಂಗಡಿಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಧಾಲ್ಕೋಲಾ ನಗರದಲ್ಲಿಯೂ ದಾಳಿಗಳು ನಡೆದಿವೆ.
ಶುಕ್ರವಾರ ಮತ್ತೆ ದಾಳಿ ತೀವ್ರಗೊಂಡಿದೆ. ಹೌರಾದ ಶಿಬ್ಪುರದಲ್ಲಿ ಅಪರಿಚಿತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ನಂತರ ಶಿಬ್ಪುರದಲ್ಲಿ 144 ಘೋಷಿಸಲಾಯಿತು.
ಬಿಹಾರದ ಸಸಾರಾಮ್ನಲ್ಲಿ ಶುಕ್ರವಾರ ರಾಮನವಮಿ ಆಚರಣೆಯ ನಂತರ ಘರ್ಷಣೆ ಸಂಭವಿಸಿದೆ. ಕಲ್ಲು ತೂರಾಟ, ಗುಂಡಿನ ದಾಳಿ ನಡೆದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಪ್ರದೇಶದಲ್ಲಿ ಕರ್ಫ್ಯೂ ಕೂಡ ಘೋಷಿಸಲಾಗಿದೆ. ನಳಂದಾ ಜಿಲ್ಲೆಯಲ್ಲೂ ಉದ್ವಿಗ್ನತೆ ತೀವ್ರವಾಗಿತ್ತು. ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವ ಘಟನೆ ನಡೆದಿದೆ.
ರಾಮನವಮಿ ಆಚರಣೆ ವೇಳೆ ಮಹಾರಾಷ್ಟ್ರದ ಛತ್ರಪತಿ ಸಂಪಾಜಿ ನಗರದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಔರಂಗಾಬಾದ್ನಲ್ಲಿ ಗಲಭೆ ನಿಯಂತ್ರಿಸಲು ಯತ್ನಿಸಿದ ಪೊಲೀಸರ ಮೇಲೆ ಜನರು ಕಲ್ಲು ತೂರಾಟ ನಡೆಸಿ ಪೆಟ್ರೋಲ್ ಬಾಟಲಿಗಳನ್ನು ಎಸೆದಿದ್ದಾರೆ. ಘರ್ಷಣೆಯಲ್ಲಿ 10 ಪೊಲೀಸರು ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ. ಗುಂಪೊಂದು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮ ನವಮಿ ಆಚರಣೆ ವೇಳೆ ಜೋರಾಗಿ ಹಾಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಮುಂಬೈನ ಮಾಲ್ವಾನಿಯಲ್ಲಿ ಘರ್ಷಣೆಗೆ ಕಾರಣವಾಯಿತು. ಮಹಾರಾಷ್ಟ್ರದಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 21 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನು ಏಪ್ರಿಲ್ 6ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಗುಜರಾತ್ ನಲ್ಲಿ ರಾಮ ನವಮಿ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ವಡೋದರಾದಲ್ಲಿ 24 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.