ಬರೇಲಿ (www.vknews.in) : ಅನ್ಯ ಧರ್ಮದ 28 ವರ್ಷದ ಯುವತಿಯನ್ನು ಅಪಹರಿಸಿದ್ದಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಸಹೋದರರು ಮತ್ತು ಅವರ ತಾಯಿಯ ವಿರುದ್ಧ ಯುಪಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ನಾಲ್ಕು ದಿನಗಳ ನಂತರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆ ತನ್ನ 21 ವರ್ಷದ ಗೆಳತಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ತನ್ನ 21 ವರ್ಷದ ಗೆಳತಿಯನ್ನು ಮದುವೆಯಾಗಲು ಬಯಸಿರುವುದಾಗಿ ಮಹಿಳೆ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾಳೆ.
ಮೇ 26ರಂದು ಮಹಿಳೆ ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮನೆಯವರು ದೂರು ದಾಖಲಿಸಿದ್ದರು. ತನಿಖೆಯ ನಂತರ, ಮೇ 30 ರಂದು ಇಬ್ಬರು ಸಹೋದರರು ಮತ್ತು ಅವರ ತಾಯಿಯ ವಿರುದ್ಧ ಐಪಿಸಿಯ ಸೆಕ್ಷನ್ 366 (ಮಹಿಳೆಯನ್ನು ಅಪಹರಿಸಿ ಮದುವೆಗೆ ಪ್ರೇರೇಪಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಯನ್ನು ಲವ್ ಜಿಹಾದ್ ಎಂದು ಆರೋಪಿಸಿ ಹಿಂದುತ್ವ ಕಾರ್ಯಕರ್ತರು ಬರೇಲಿ ಜಿಲ್ಲೆಯ ಅನ್ಲಾ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.
ಗುರುವಾರ ಮಹಿಳೆ ಮತ್ತು ಆಕೆಯ ಗೆಳತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನಾವು ಮೂರು ವರ್ಷಗಳಿಂದ ಪರಸ್ಪರ ಪರಿಚಿತರು, ಪ್ರೀತಿಸುತ್ತಿದ್ದೇವೆ ಮತ್ತು ಮದುವೆಯಾಗಲು ಬಯಸಿದ್ದೇವೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ ಮತ್ತು ಬೇರೆಯವರೊಂದಿಗೆ ಮದುವೆಯಾಗುವಂತೆ ತನ್ನ ಮನೆಯವರು ಒತ್ತಾಯಿಸಿದಾಗ ಓಡಿಹೋಗಿದ್ದೇವೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಈ ವಿಚಾರ ನ್ಯಾಯಾಲಯದ ಮುಂದಿದೆ. ಪ್ರಾಥಮಿಕ ತನಿಖೆಯ ನಂತರ ಅದು ಲವ್ ಜಿಹಾದ್ ಅಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡಿದ್ದ ಸಹೋದರರು ಹಾಗೂ ತಾಯಿಯನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.