ಬೆಂಗಳೂರು (www.vknews.in) : ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಮುಂದೂಡಿದೆ. ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕೋಟ್ಯಾಂತರ ಸಂಖ್ಯೆಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸುವ ಹಿನ್ನೆಲೆ ಬಹಳ ಒತ್ತಡ ಬೀಳಬಹುದು ಎಂದು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಹೀಗಾಗಿ, ಗೃಹಲಕ್ಷ್ಮೀ ಅರ್ಜಿ ಬಿಡುಗಡೆ ಕಾರ್ಯಕ್ರಮ ನಾಲ್ಕೈದು ದಿನ ಮುಂದಕ್ಕೆ ಹಾಕಲಾಗಿದೆ ಎಂದರು.
ಜೂ.16ರಿಂದ ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮತ್ತು ಭೌತಿಕವಾಗಿ ಅರ್ಜಿ ಸ್ವೀಕರಿಸಲು ತೀರ್ಮಾನಿಸಲಾಗಿತ್ತು. ಆದರೆ, 1.28 ಕೋಟಿ ಫಲಾನುಭವಿಗಳು ಏಕಕಾಲಕ್ಕೆ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಅರ್ಜಿ ಸ್ವೀಕಾರ ಮುಂದೂಡಿದ್ದೇವೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ಕೂಡಲೇ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರತಿ ಗ್ರಾಮಕ್ಕೂ ಈ ಯೋಜನೆ ತಲುಪಬೇಕು. ಯಾರೂ ಸಹ ಯೋಜನೆಯಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಬಾಪೂಜಿ ಕೇಂದ್ರ, ನಾಡ ಕಚೇರಿಯಲ್ಲಿ ಕೂಡ ಅರ್ಜಿ ಸ್ವೀಕಾರಕ್ಕೆ ಅವಕಾಶವಿದೆ. ಒಂದು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. ಒಂದು ಅರ್ಜಿ ತುಂಬಲು 4ರಿಂದ ಆರು ನಿಮಿಷ ಆಗಲಿದೆ. ಹೀಗಾಗಿ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಯಾರಿಗಾಗಿ ಮುಂದಕ್ಕೆ ಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇ-ಆಡಳಿತದವರು ಮೊಬೈಲ್ ಅಪ್ಲಿಕೇಶನ್ಗೆ ಎರಡು ದಿನ ಕೇಳಿದ್ದರು, ಬಳಿಕ, ನಾಲ್ಕು ದಿನ ಕಾಲಾವಕಾಶ ಕೇಳಿದ್ದಾರೆ. ಈ ಕುರಿತಂತೆ, ಬಾಪೂಜಿ ಕೇಂದ್ರ, ನಾಡ ಕಚೇರಿ ಸಿಬ್ಬಂದಿಗೆ ತರಬೇತಿ ಕೊಡಬೇಕಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.