(www.vknews.in) ; ನಮ್ಮ ಹಿರಿಯರು ಅಂದು ಕಂಡ ಕನಸಿನ ಭಾರತ ಇಂದು ನಮ್ಮ ಕಾಲದಲ್ಲಿ ಹೇಗಿದೆ..??ಚಿಂತಿಸಬೇಕಾದ ವಿಷಯ..ಕಾಡುವ ಉತ್ತರ ಸಿಗದ ಪ್ರಶ್ನೆಗಳೋ ಅಗಣಿತ. ಇರಲಿ..ನಮ್ಮ ಅಂದಿನ ಹಿರಿಯರು ಅನುಭವಿಸಿದ ನೋವು-ಸವಾಲುಗಳು ಇಂದು ನಮಗಿಲ್ಲವಾದರೂ ಎಲ್ಲೋ ನಮಗೆ ಸಿಕ್ಕಿದ ‘ಸ್ವಾತಂತ್ರ್ಯ’ದ ಪರಿಕಲ್ಪನೆಯನ್ನು ಸರಿಯಾಗಿ ನಾವು ಅರ್ಥ ಮಾಡಿಲ್ಲವೋ…ಅಲ್ಲ ಸಿಕ್ಕಿದ ಸ್ವಾತಂತ್ರ್ಯದ ಅಮಲೇರಿರುವುದೋ ಎನ್ನುವ ಗುಮಾನಿ.ಹೌದು..ಸಾಗಬೇಕಾದ ಸ್ವಾತಂತ್ರ್ಯದ ಬಂಡಿ ಎಲ್ಲೋ ಹಳಿ ತಪ್ಪಿದೆ.ಸರಿ ಮಾಡುವವರು ಯಾರು ??..ಮತ್ತದೇ ಪ್ರಶ್ನೆಗಳ ಸರಮಾಲೆ.ಅವರು-ಇವರನ್ನು ಬೊಟ್ಟು ಮಾಡಿ ತೋರಿಸುವುದರಲ್ಲೇ ಎಲ್ಲರೂ ಬ್ಯುಸೀ…
2022 ಆಗಸ್ಟ್ 15ರಂದು “ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ”ಕಂಡ ನಾವು ನಮ್ಮ ವಿದ್ಯಾರ್ಥಿ-ಯುವ ಸಮುದಾಯಕ್ಕೆ ಬರಿಯ ಅಂತೆ-ಕಂತೆ ಉಪದೇಶಗಳ ಬಿಟ್ಟರೆ ಮತ್ತೇನನ್ನೂ ಸಾಧಿಸಲಾಗಿಲ್ಲ ಎಂಬ ನೋವಿದೆ.ಇಂದು ಎಪ್ಪತ್ತಾರರ ಪಥದಲ್ಲಿ ಹೆಜ್ಜೆಯಿಟ್ಟು ಶತಮಾನದ ಕಡೆಗೆ ಸಾಗುವ ಅದೇ ಕನಸು…ಗುರಿ ಎಲ್ಲೋ..ಮತ್ತೆಮತ್ತೆ ಪ್ರಶ್ನೆ ಗೋಜಲು ಗೋಜಲು. ಕಾಲನ ಓಟ ತಡೆಯಲು ನಾವು ಯಾರೂ ಶಕ್ತರಲ್ಲ..ಅಂದು ಬ್ರಿಟಿಷರ ಆಳ್ವಿಕೆ ಕೊನೆಗೊಳಿಸಲು ನಾಡಿನ ಮೂಲೆ-ಮೂಲೆಗಳಿಂದ ಜನರು ಸ್ವಯಂಪ್ರೇರಿತರಾಗಿ ಅಸಹಕಾರ ಆಂದೋಲನ,ಶಾಂತಿ ಚಳುವಳಿಗಳಲ್ಲಿ ಭಾಗವಹಿಸಿದರು…ಅದೆಷ್ಟೋ ಹಿರಿಯ,ವಿದ್ಯಾರ್ಥಿ,ಯುವ ನಾಯಕರು,ಹೋರಾಟಗಾರರು ಪ್ರಾಣಾರ್ಪಣೆಯನ್ನೂ ಮಾಡಿದರು.
ಫಲಪ್ರದ 1947ಆಗಸ್ಟ್ 15ರಂದು ಭಾರತಮಾತೆ ಬಂಧಮುಕ್ತ ಮಾತೆಯಾದಳು.ನಾವು ಸ್ವತಂತ್ರರಾದೆವು.ಅಂದಿನ ಹಿರಿಯ ರಾಜಕೀಯ ಮುತ್ಸದ್ದಿಗಳು ದೇಶದ ಚುಕ್ಕಾಣಿ ಹಿಡಿದರು.ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.ವಿಶ್ವದಲ್ಲೇ ಶ್ರೇಷ್ಠವಾದ ಪವಿತ್ರ ಸಂವಿಧಾನ ರಚನೆಗೊಂಡು ನಮಗೆ ಹಕ್ಕು-ಕರ್ತವ್ಯಗಳೂ ದೊರೆತವು.ಹಕ್ಕಿಗಾಗಿ ಮತ್ತೆ ನಮ್ಮೊಳಗೇ ಹೋರಾಟದ ಭರಾಟೆಯಲ್ಲಿ ಮತ್ತೆ ಕರ್ತವ್ಯಗಳ ಮರೆತೆವು.ಜನಸಂಖ್ಯಾಸ್ಫೋಟ,ಪರಿಸರ ಅಸಮತೋಲನ,ಜಾಗತಿಕ ತಾಪಮಾನ ಏರಿಕೆ,ಅಕಾಲಿಕ ಮಳೆ,ಪ್ರವಾಹ,ಭೂಕುಸಿತ,ಮಾರಕ ರೋಗರುಜಿನಗಳು..ಹಣಕಾಸಿನ ಕೊರತೆ,ನಿರುದ್ಯೋಗ….ಹೀಗೇ ಅನೇಕ ಸಮಸ್ಯೆಗಳು ಎದುರಾದವು.ಹೊಸಹೊಸ ಯೋಚನೆ-ಯೋಜನೆಗಳು ಕಾರ್ಯರೂಪಕ್ಕೆ ಬಂದರೂ, ಸ್ವಜನ ಪಕ್ಷಪಾತ,ಅಧಿಕಾರಮೋಹ..ಗುಂಪುಗಾರಿಕೆ,ಜಾತಿ-ಮತ ಭೇದ.., ಭ್ರಷ್ಟಾಚಾರ, ಅನಕ್ಷರತೆ.. ಸಮಯಸಾಧಕತನ, ಕುರುಡು ಕಾಂಚಾಣ, ಹಿಂಸೆ, ಅನಾಚರ.. ಇನ್ನೇನೋ ತಾಂಡವವಾಡತೊಡಗಿದವು. ಶಾಂತಿ-ಸೌಹಾರ್ದತೆಗಳು ಬರಿಯ ಮರೀಚಿಕೆಯಾಗಿಯೇ ಉಳಿದವು…. ಸ್ವಾತಂತ್ರ್ಯವನ್ನೇ ಸ್ವೇಚ್ಛಾಚಾರವೆಂದು ತಿಳಿದು ಕೇವಲ ಸ್ವಾರ್ಥ ಅಧಿಕಾರ ಲಾಲಸೆಯ ಕೆಲವೊಂದು ಮನಸ್ಸುಗಳಿಂದ ಸಾಮಾಜಿಕ ವ್ಯವಸ್ಥೆಗಳ ಕೊಂಡಿಯೇ ಕಳಚುವಂತಾಯಿತು.
ನಮ್ಮ ನಾಡು-ನುಡಿ,ಸಂಸ್ಕೃತಿ-ಸಂಸ್ಕಾರಗಳಿಗೂ ಅಪಾಯ ಬರತೊಡಗಿತು.ನಮ್ಮ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ-ಮಾರ್ಗದರ್ಶನಗಳು ದೊರೆಯದಾಯಿತು.ದೇಶದ ಶೇ65 -75ರಷ್ಟಿರುವ ಯುವಜನತೆಗೆ ಸರಿಯಾದ ಉದ್ಯೋಗವಿಲ್ಲ,ಅವರ ಭಾವನೆ-ಕನಸುಗಳಿಗೆ,ಪ್ರತಿಭೆ-ಸಾಧನೆಗಳಿಗೆ, ರೆಕ್ಕೆ ಕಟ್ಟುವ,ಬಣ್ಣ ಹಚ್ಚುವ ಹಿರಿಯರ ಕೊರತೆ ಹೆಚ್ಚಾಯಿತು.ಯುವಜನತೆಯೂ ವಿದೇಶೀ ಸಂಸ್ಕೃತಿಯನ್ನು ಮೈಗೂಡಿಸಿ ಈ ಮಣ್ಣಿನ ಮೌಲ್ಯಗಳನ್ನು ಮರೆಯುವಂತಾಯಿತು.ಒಟ್ಟಿನಲ್ಲಿ ಕನಸ ಹಕ್ಕಿ ರೆಕ್ಕೆ ಮುರಿದಂತಾಗಿ ನೆಲೆಯಿಲ್ಲದೆ ಹಾರುವಂತಾಯಿತು.ದಿಕ್ಕೇ ತೋಚದಂತಾಗಿದೆ.
ನಾವಿಂದು ಜನಸಂಖ್ಯೆಯಲ್ಲಿ 140+ಕೋಟಿ ಸಂಖ್ಯೆಯೊಂದಿಗೆ ವಿಶ್ವಶ್ರೇಷ್ಠ ಸ್ಥಾನ ಪಡೆದಿರುವುದು ಹೆಮ್ಮೆಯವಿಷಯವಲ್ಲ.ಮಾನವ ಸಂಪನ್ಮೂಲವನ್ನೇ ಬಂಡವಾಳವಾಗಿಸಿ ರಾಷ್ಟ್ರಾಭಿವೃದ್ಧಿ,ಪರಿಸರ ರಕ್ಷಣೆ,ಸೌಹಾರ್ದತೆ,ಮಾನವೀಯ ಮೌಲ್ಯಗಳನ್ನು ಉಳಿಸಿ-ಬೆಳೆಸಿಕೊಂಡು ರಾಷ್ಟ್ರಸೇವೆ,ಶಿಕ್ಷಣ,ಆರೋಗ್ಯ,ಕೃಷಿ,ಕೌಶಲ್ಯಾಭಿವೃದ್ಧಿ,ಕ್ರೀಡೆ,ಸಮಾಜ ಸೇವೆ,ಸೃಜನಶೀಲತೆಯೊಂದಿಗೆ ಭಾರತ ಮಾತೆಯ ಕೀರ್ತಿಪತಾಕೆಯನ್ನು ಬಾನೆತ್ತರ ಹಾರಿಸುವ,ವಿಶ್ವಗುರುವಾಗಿಸುವ ಹೊಸ ಕನಸುಗಳ ಬೀಜಬಿತ್ತೋಣ.ವೈಷಮ್ಯ,ದ್ವೇಷಾಸೂಯೆಗಳನ್ನು,ಭ್ರಷ್ಟಾಚಾರವನ್ನು ಬೇರು ಸಹಿತ ಕೀಳುವ ಸಂಕಲ್ಪವನ್ನು ಇಂದೇ ಮಾಡೋಣ..ಎಲ್ಲರೊಂದಾಗಿ ಬಾಳಿ ಬೆಳಗೋಣ..ಜೈ ಹಿಂದ್,ಜೈ ಜವಾನ್,ಜೈ ಕಿಸಾನ್,ಜೈ ವಿಜ್ಞಾನ್.ಸರ್ವೇ ಜನಾ: ಸುಖಿನೋ ಭವಂತು.ಭಾರತ ಮಾತೆಗೆ ಜಯವಾಗಲಿ,ಕನ್ನಡ ತಾಯಿಗೆ
— ನಾರಾಯಣ ರೈ ಕುಕ್ಕುವಳ್ಳಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.