(www.vknews.in) ; ಮೊದಲ* ಅಧ್ಯಾಯದಲ್ಲಿ ತಿಳಿಸಿದಂತೆ ಅಲ್ಲಾಹನು ಮಣ್ಣಿನಲ್ಲಿ ಮಾಡಲ್ಪಟ್ಟ ಆದಮರಿಗೆ ರೂಹ್ ಹಾಕಿ ಅವರಿಗೆ ಎಲ್ಲಾ ಜ್ಞಾನ ವಿಜ್ಞಾನಗಳನ್ನು ಕಲಿಸಿಕೊಟ್ಟು ಒಬ್ಬ ಮಹಾ ವಿದ್ವಾಂಸರನ್ನಾಗಿ ಮಾಡಿ ಮಲಕುಗಳಲ್ಲಿ ಅವರಿಗೆ ಸಾಷ್ಟಾಂಗ ಮಾಡಲು ಹೇಳಿದಾಗ ಮಲಕುಗಳು ಯಾವುದೇ ಪ್ರಶ್ನೆ ಅಥವಾ ಸವಾಲು ಹಾಕದೆ ಅವನ ಆಜ್ಞೆಯನ್ನು ಪಾಲಿಸಿದರು. ಆದರೆ ಮಲಕುಗಳ ನೇತಾರನಾಗಿದ್ದ ಇಬ್ಲೀಸನು ಮಾತ್ರ ಅಲ್ಲಾಹನನ್ನು ಪ್ರಶ್ನಿಸಿ ಸುಜೂದು ಮಾಡದೆ ಅವನ ಶಾಶ್ವತ ಶಾಪಕ್ಕೆ ಬಲಿಯಾದನು. ಒಂದು ದಿನ ಶುಕ್ರವಾರ ಮಧ್ಯಾಹ್ನದ ವೇಳೆ ಸುಜೂದು ಮಾಡಿದ ಮಲಕುಗಳು ಆ ದಿನ ಅಸರಿನ ತನಕ ಸುಜೂದಿನಲ್ಲಿದ್ದರೂ ಈತನಿಗೆ ಮಾತ್ರ ಯಾವುದೇ ಬದಲಾವಣೆ ಆಗಲಿಲ್ಲ. ಸುಜೂದಿನಿಂದ ತಲೆ ಎತ್ತಲು ಅಲ್ಲಾಹನ ಅನುಮತಿ ದೊರೆತಾಗ ಮಲಕುಗಳು ತಲೆ ಎತ್ತಿದಾಗ ಇಬ್ಲೀಸನು ಮಾತ್ರ ನೆಟ್ಟಗೆ ಕಲ್ಲಿನಂತೆ ನಿಂತಿದ್ದನು. ಇದನ್ನು ನೋಡಿದ ಮಲಕುಗಳು *”ಈತನು ಏನೋ ಅಲ್ಲಾಹನ ಗೂಢ ತಂತ್ರದಲ್ಲಿ ಸಿಲುಕಿದ್ದಾನೆ”* ಎಂದು ಭಾವಿಸಿ ಎರಡನೆಯದಾಗಿ ಶುಖ್ರ್ (ಧನ್ಯವಾದ) ಎಂಬಂತೆ ಅಲ್ಲಾಹನಿಗೆ ಸುಜೂದು ಮಾಡಿದರು. (ಇಂದು ನಾವು ನಮಾಝಿನಲ್ಲಿ ಎರಡು ಸುಜೂದು ಮಾಡುವುದರ ಹಿನ್ನೆಲೆ ಇದಾಗಿದೆ)
*ಇತ್ತ ಪುಟ್ಟ ನಿದ್ರೆಗೆ* ಜಾರಿದ ಹಝ್ರತ್ ಆದಮ್ (ಅ) ರವರ ಎಡ ಭಾಗದ ಪಕ್ಕೆಲುಬಿನಿಂದ ಅಲ್ಲಾಹನು ಅವರ ಸಂಗಾತಿಯಾದ ಬೀವಿ ಹವ್ವಾರನ್ನು ಸೃಷ್ಟಿಸಿದನು. ಬೀವಿಯವರು ಹಝ್ರತ್ ಆದಮ್ (ಅ) ರಂತೆಯೇ 60 ಫೀಟ್ ಉದ್ದವಿದ್ದರು. ಬಹಳ ಸುಂದರಿಯೂ ಆಗಿದ್ದರು.
*ಹಝ್ರತ್* ಆದಮ್ (ಅ) ರವರು ನಿದ್ರೆಯಿಂದ ಎಚ್ಚರಗೊಂಡಾಗ ತನ್ನ ತಲೆಯ ಬಳಿ ಬಹಳ ಕೋಮಲೆಯಾದ ಕುಮಾರಿಯೊಬ್ಬಳು ನಿಂತಿದ್ದರು. ಸ್ವಾಭಾವಿಕವಾಗಿ ಅವರಲ್ಲಿ ಪ್ರೀತಿ ಬಂದು ಆದಮರು ಅಲ್ಲಾಹನಲ್ಲಿ ಕೇಳಿದರು. *”ಇವಳು ಯಾರು? ಇವಳನ್ನು ಯಾರಿಗಾಗಿ ಸೃಷ್ಟಿಸಿದ್ದೀರಿ?”* ಆಗ ಅಲ್ಲಾಹನು *”ಇದು ನನ್ನ ದಾಸಿ. ಇವಳನ್ನು ಬಹಳ ಪ್ರಾಣಿಕತೆಯಿಂದ ನೋಡಿ ಸಾಕುವ ನನ್ನಲ್ಲಿ ಭಯಭಕ್ತಿ ಇರುವ ಒಬ್ಬನಿಗೆ ಬೇಕಾಗಿ ಸೃಷ್ಟಿಸಿದ್ದೇನೆ”* ಎಂದು ಉತ್ತರ ಕೊಟ್ಟನು. ಆಗ *”ಪರವಾಗಿಲ್ಲ. ನಾನು ಅದಕ್ಕೆ ಫಿಟ್. ನನಗೆ ಮದುವೆ ಮಾಡಿ ಕೊಡಿ”* ಎಂದು ಆದಮರು ಹೇಳಿದಾಗ ಅಲ್ಲಾಹನು ಸುಂದರಿಯಾದ ಹವ್ವಾರನ್ನು ಸುಂದರನಾದ ಆದಮರಿಗೆ ಮದುವೆ ಮಾಡಿ ಕೊಟ್ಟನು. ಅಲ್ಲಾಹನ ಮಲಕುಗಳು ಈ ನಿಕಾಹಿಗೆ ಸಾಕ್ಷಿಗಳಾದರು. ನವ ದಂಪತಿಗಳಿಗೆ ಮದುವೆ ದಿನ ಸ್ವರ್ಗದಿಂದ ಫುಡ್ (ಆಹಾರ) ಎರೇಂಜ್ಮೆಂಟ್ ಮಾಡಲಾಯಿತು.
*ಬಳಿಕ* ಅಲ್ಲಾಹನು ಆದಮರಲ್ಲಿ *”ನೀನು ನನ್ನ ದಾಸ. ನನ್ನನ್ನು ಅನುಸರಿಸಬೇಕು. ನಾನು ನಿನ್ನನ್ನು ಮಣ್ಣಿನಿಂದ ಮಾಡಿ ಬಳಿಕ ಜೀವಕೊಟ್ಟು ಒಬ್ಬ ಪೂರ್ಣ ಮನುಷ್ಯನಾಗಿ ಮಾಡಿದೆ. ನಂತರ ಮಲಕುಗಳಿಂದ ನಿನಗೆ ಸುಜೂದು ಮಾಡಿಸಿ ನಿನ್ನ ಮಹತ್ವವನ್ನು ಅವರಿಗೆ ತೋರಿಸಿಕೊಟ್ಟೆನು. ಅಲ್ಲದೆ ನಿನಗೆ ಎಲ್ಲಾ ಜ್ಞಾನ ವಿಜ್ಞಾನ ಮತ್ತು ಎಲ್ಲಾ ಭಾಷೆಗಳನ್ನು ಕಲಿಸಿಕೊಟ್ಟೆನು. ಒಟ್ಟಿನಲ್ಲಿ ಇದೆಲ್ಲಾ ಮಾಡಿದ್ದು ನಿನ್ನ ಸ್ಥಾನಮಾನ ಇತರರಿಗೆ ತಿಳಿಯಲಿಕ್ಕಾಗಿದೆ. ಇಲ್ಲಿ ನೋಡು…, ಇದು ಇಬ್ಲೀಸ್ ಅಂತ ನಿನಗೆ ಈಗ ಅರಿವಾಗಿದೆ ಅಲ್ವಾ? ಅವನು ನನ್ನ ಶತ್ರು. ನಿನಗೆ ಸುಜೂದು ಮಾಡದ ಕಾರಣ ಅವನನ್ನು ನಾನು ಈ ದರ್ಬಾರಿನಿಂದ ಹೊರಹಾಕಿದ್ದೇನೆ. ನಿನಗೆ ಸಂಗಾತಿಯಾಗಿ ಸುಂದರಿಯಾದ ಹವ್ವಾರನ್ನು ಕೊಟ್ಟಿದ್ದೇನೆ. ನಿಮ್ಮನ್ನು ಸೃಷ್ಟಿಸುವುದಕ್ಕಿಂತ ಸುಮಾರು ಎರಡು ಸಾವಿರ ವರ್ಷಗಳ ಮೊದಲು ಸೃಷ್ಟಿಸಿದ ಸ್ವರ್ಗವಾಗಿದೆ ನಿಮ್ಮ ಮುಂದಿನ ಭವನ. ಬಹಳ ಸಂತೋಷದಿಂದ ಅಲ್ಲಿ ಇರಿ. ಏನು ಬೇಕಾದರೂ ತಿನ್ನಿರಿ. ಯಾವ ಹಣ್ಣು ಹಂಪಲಾದರೂ ಪರವಾಗಿಲ್ಲ. ಆದರೆ (ಒಂದು ಮರಕ್ಕೆ ಸನ್ನೆ ಮಾಡಿ) ಆ ಒಂದು ಮರದ ಹಣ್ಣನ್ನು ಕಿತ್ತಬಾರದು.”* ಎಂದು ಹೇಳಿದನು.
*ಬಳಿಕ* ಆದಮರನ್ನು ಕುದುರೆಯ ಮೇಲೆ ಮತ್ತು ಹವ್ವಾರನ್ನು ಒಂಟೆಯ ಮೇಲೆ ಕುಳ್ಳಿರಿಸಿ ಸಾವಿರಾರು ಮಲಕುಗಳ ಹಾಜರಾತಿಯಲ್ಲಿ ಮೆರವಣಿಗೆಯಲ್ಲಿ ಸ್ವರ್ಗಕ್ಕೆ ಕೊಂಡೊಯ್ಯಲಾಯಿತು. ಆರಂಭದಲ್ಲಿ ಸ್ವರ್ಗವನ್ನು ಸಂಪೂರ್ಣವಾಗಿ ಸುತ್ತಿ ಬಳಿಕ ಸ್ವರ್ಗದ ಹಣ್ಣು ಹಂಪಲುಗಳನ್ನು ತಿನ್ನಲು ಕೊಡಲಾಯಿತು. ಬಳಿಕ ಸಂತೋಷದ ದಿನಗಳು ಮಾತ್ರ. ಕಾಲಚಕ್ರ ಉರುಳಿತು. ಇಬ್ಬರೂ ಐನೂರು ವರ್ಷಗಳ ಕಾಲ ಯಾವುದೇ ತಲೆಬಿಸಿ ಟೆನ್ಶನ್ ಇಲ್ಲದೆ ಬಹಳ ಸಂತೋಷದಿಂದ ಬಾಳಿದರು.
ಇತ್ತ* ಇಬ್ಲೀಸನಿಗೆ “ಆದಮರಿಗೆ ಮತ್ತು ಅವರ ಪತ್ನಿಗೆ ಸ್ವರ್ಗದಲ್ಲಿ ಒಂದು ಮರದ ಹಣ್ಣನ್ನು ನಿಷೇಧಿಸಿದೆ”* ಎಂದು ತಿಳಿದಾಗ ಬಹಳ ಸಂತೋಷವಾಯಿತು. “ಇನ್ನು ತೊಂದರೆಯಿಲ್ಲ. ಅವರನ್ನು ಹೇಗಾದರೂ ಮಾಡಿ ಸ್ವರ್ಗದಿಂದ ಹೊರ ಹಾಕುವ ಕೆಲಸ ನನಗೆ ಬಿಟ್ಟದ್ದು”* ಎಂದು ಮನದಲ್ಲೇ ಹೇಳತೊಡಗಿದ.
ಒಂದು ದಿನ ಸ್ವರ್ಗದ ಬಾಗಿಲ ಬಳಿ ಯಾರಾದರೂ ಬರುತ್ತಾರಾ ಎಂದು ಕಾದು ನಿಂತ. ಅಷ್ಟರಲ್ಲಿ ಬೃಹದಾಕಾರದ ಒಂದು ನವಿಲು ಸ್ವರ್ಗದಿಂದ ಹೊರಬರುವುದು ಕಂಡುಬಂತು. ಇಬ್ಲೀಸನು ಅದನ್ನು ಕಂಡಾಗ ಕೇಳಿದನು. “ಓ ಬಹಳ ಸುಂದರವಾದ ಪಕ್ಷಿ. ನೀನು ಸ್ವರ್ಗದ ಪಕ್ಷಿ ಅಲ್ವಾ?” ಆಗ ಪಕ್ಷಿ ಹೇಳಿತು. “ಹೌದು ಅದು ಸರಿ. ಆದರೆ ನೀನ್ನನ್ನು ನೋಡುವಾಗ ಯಾರನ್ನೊ ಹೆದರಿ ಬಂದವರಂತೆ ಕಾಣುತ್ತದೆ. ಏನು ವಿಷಯ?”* ಆಗ ಇಬ್ಲೀಸನು “ಹಾಗೇನಿಲ್ಲ. ನಾನು ಅಲ್ಲಾಹನ ಇಷ್ಟದಾಸರಾದ ಮಲಕುಗಳ ನೇತಾರ. ನನಗೆ ಸ್ವರ್ಗದ ಒಳಗಡೆ ನೋಡಬೇಕೆಂಬ ಆಶೆಯಾಗಿದೆ. ಏನಾದರೂ ಚಾನ್ಸ್ ಉಂಟಾ? ನನಗೆ ಆ ಒಂದು ಹೆಲ್ಪ್ ಮಾಡಿದರೆ ನಾನು ನಿನಗೆ ಮೂರು ಪದಗಳನ್ನು ಕಲಿಸಿ ಕೊಡುತ್ತೇನೆ. ಆ ಪದಗಳನ್ನು ಒಬ್ಬನು ಉಚ್ಚರಿಸಿದರೆ ಅವನು ಮತ್ತೆಂದಿಗೂ ಮುದುಕನಾಗನು, ರೋಗಿಯಾಗನು ಮತ್ತು ಮರಣ ಹೊಂದಲಾರನು.” ಎಂಬ ನಾಜೂಕಿನ ಉತ್ತರ ಕೊಟ್ಟನು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ಶಿಹಾಬ್ ಬಿನ್ ಅಹ್ಮದ್ ರವರ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.