(www.vknews. in) ; ಕತಾರ್ ದೇಶದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರವು ಭಾರತೀಯ ದೂತಾವಾಸದ ಸಹಯೋಗದೊಂದಿಗೆ ಹಾಗೂ ಕತಾರ್ ವಸ್ತು ಸಂಗ್ರಹಾಲಯ ಮತ್ತು ಇಸ್ಲಾಮಿಕ್ ಕಲೆ ವಸ್ತು ಸಂಗ್ರಹಾಲಯಗಳ ಸಹಕಾರದೊಂದಿಗೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, “ಪ್ಯಾಸೇಜು ಟು ಇಂಡಿಯಾ” (ಭಾರತದ ಪಥ) ೨೦೨೪ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿತು. ಈ ಕಾರ್ಯಕ್ರಮವು ದಿನಾಂಕ ೦೭.೦೩.೨೦೨೪ ರಿಂದ ಮೂರು ದಿನಗಳ ಕಾಲ ನಡೆಯಿತು.
ಉದ್ಘಾಟನಾ ಸಮಾರಂಭಕ್ಕೆ ಹಲವಾರು ಅದ್ಭುತ ಸಾಂಸ್ಕೃತಿಕ ನೃತ್ಯ ಪ್ರದರ್ಶನದಿಂದ ನಾಂದಿ ಹಾಡಲಾಯಿತು. ಮುಖ್ಯ ಆಕರ್ಷಣೆ ಭಾರತದ ಸುಪ್ರಸಿದ್ಧ ಚಿತ್ರ ಕಲಾವಿದರಾದ ಶ್ರೀ ವಿಲಾಸ್ ನಾಯಕ್ ಅವರ ಆಷುಚಿತ್ರಣ. ಐ.ಸಿ.ಸಿ ಈ ಮಹೋನ್ನತ ಕಾರ್ಯಕ್ರಮವನ್ನು ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಅನೇಕತೆಯಲ್ಲಿ ಏಕತೆಯನ್ನು ಆಚರಿಸಲು ಹಮ್ಮಿಕೊಂಡಿತ್ತು.
ಈ ಉತ್ಸವವು ಭಾರತ ಹಾಗೂ ಕತಾರ ದೇಶಗಳ ನಡುವಿನ ೫೦ ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಮಹತ್ವವನ್ನು ಸಾರುತ್ತಿತ್ತು. ಕತಾರಿನ ಮಂತ್ರಿ ಹಾಗೂ ಕತಾರ್ ರಾಷ್ಟ್ರೀಯ ಗ್ರಂಥಾಲಯದ ಅಧ್ಯಕ್ಷರಾದ ಶ್ರೀ ಘನವೆತ್ತ ಡಾ|| ಅಹ್ಮದ್ ಬಿನ್ ಅಬ್ದುಲ್ಲಾ ಅಜೀಜ್ ಅಲ್ ಕುವೇರಿ ಸಂಜೆಯ ಪ್ರಾರಂಭಿಕ ಉತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕತಾರಿಗೆ ಭಾರತೀಯ ರಾಯಭಾರಿಗಳಾದ ಶ್ರೀ ವಿಪುಲ್ ಅವರು, ದೂತಾವಾಸದ ಇತರ ಅಧಿಕಾರಿಗಳು, ಭಾರತ ಮೂಲದ ಇತರ ಸಂಘಗಳ ಆಡಳಿತ ಸಮಿತಿಯ ಸದಸ್ಯರು ಸೇರಿ ಮುಖ್ಯ ಅತಿಥಿಗಳನ್ನು ಹಾಗೂ ಕತರಿನ ಗಣ್ಯರನ್ನು ಸ್ವಾಗತಿಸಿದರು.
ಐಸಿಸಿ ಅಧ್ಯಕ್ಷರಾದ ಶ್ರೀ ಎ.ಪಿ. ಮಣಿಕಂಠನ್ ಅವರು ಸಭಿಕರನ್ನು ಸ್ವಾಗತಿಸುತ್ತಾ, ಕಾರ್ಯಕ್ರಮದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ, ಕಲೆಯನ್ನು ಆನಂದಿಸಿ, ಆವರಣದಲ್ಲಿನ ವಿವಿಧ ಮಳಿಗೆಗಳ ಊಟೋಪಚಾರವನ್ನು ಸ್ವಾದಿಸಿ, ಭಾರತೀಯ ಕರಕುಶಲ ಮತ್ತು ಇತರ ಕಲೆಗಳನ್ನು ಮೂರು ದಿನಗಳ ಕಾಲ ಪ್ರೋತ್ಸಾಹಿಸಿ ಎಂದು ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಭಾರತೀಯರು, ಹಲವಾರು ಕತಾರಿನ ನಾಗರೀಕರು ಮತ್ತು ಇತರ ದೇಶಗಳ ಅನಿವಾಸಿ ನಾಗರೀಕರು ಆಗಮಿಸಿದ್ದರು. ಕರ್ನಾಟಕದ ಬೈಂದೂರು ಮೂಲದವರಾದ ಐ.ಸಿ.ಸಿ ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಐ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ್ ಕುಮಾರ್ ಹಾಗೂ ಐ.ಸಿ.ಸಿ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
೮ನೇ ತಾರೀಕು ಶುಕ್ರವಾರದ ಕಾರ್ಯಕ್ರಮದಲ್ಲಿ ಭಾರತೀಯ ದೂತಾವಾಸದ ಉಪಮುಖ್ಯಸ್ಥರಾದ ಶ್ರೀ ಸಂದೀಪ್ ಕುಮಾರ್ ಅವರು ತಮ್ಮ ಭಾಷಣದಲ್ಲಿ ’ಪ್ಯಾಸೇಜ್ ಟು ಇಂಡಿಯಾ’, ಇಂತಹ ಬೃಹತ್ ಗಾತ್ರದ ಭಾರತೀಯ ಸಂಭ್ರಮಾಚರಣೆಯ ಮಹತ್ವವನ್ನು ವಿಶ್ಲೇಷಿಸಿ ಆಗಮಿಸಿದ್ದ ಕತಾರಿನ ವಿವಿಧ ಮಂತ್ರಾಲಯಗಳ ಗಣ್ಯರನ್ನು ಸನ್ಮಾನಿಸಿದರು. ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿಗಳಾದ ಶ್ರೀ ಸಚಿನ್ ದಿನಕರ್ ಶಂಕಪಾಲ ಹಾಗೂ ಡಾ|| ವೈಭವ್ ತಾಂಡಾಳೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎರಡನೇ ದಿನದ ಪ್ರಮುಖ ಆಕರ್ಷಣೆಗಳೆಂದರೆ ಶ್ರೀ ವಿಲಾಸ್ ನಾಯಕ್ ಅವರ ಅದ್ಭುತ ಆಶು ಚಿತ್ರ ಕಲೆ, ಬೃಹತ್ ತಂಡದಿಂದ ಗರ್ಭ ನೃತ್ಯ, ಕತರಿನ ಆಂತರಿಕ ಮಂತ್ರಾಲಯದ ವತಿಯಿಂದ ಶ್ವಾನ ಪ್ರದರ್ಶನ ಮತ್ತು ಭಾರತದಿಂದ ಆಗಮಿಸಿದ್ದ ಕಲಾವಿದರಿಂದ ಕವ್ವಾಲಿ ಹಾಡುಗಾರಿಕೆ. ಸಂಜೆಯ ಕಾರ್ಯಕ್ರಮವು ಐ.ಸಿ.ಸಿ ಕಾರ್ಯದರ್ಶಿ ಶ್ರೀ ಅಬ್ರಹಾಂ ಜೋಸೆಫ್ ಅವರ ವಂದನಾರ್ಪಣೆಯೊಂದಿಗೆ ಸಂಪನ್ನವಾಯಿತು.
ದಿನಾಂಕ ೧೦.೦೩.೨೦೨೪, ಶನಿವಾರದ ಕಾರ್ಯಕ್ರಮದಲ್ಲಿ ಭಾರತದ ಸುಪ್ರಸಿದ್ಧ ಚಿತ್ರಕಾರ ಶ್ರೀ ವಿಲಾಸ್ ನಾಯಕ ಅವರ ಮೂರನೇ ಆವೃತ್ತಿಯ ಚಿತ್ರಣದೊಂದಿಗೆ ಪ್ರಾರಂಭಿಸಿ, ಭಾರತದಿಂದ ಆಗಮಿಸಿದ್ದ ತಂಡದಿಂದ ತಿರುವಿತರ ನೃತ್ಯ ಪ್ರದರ್ಶನ, ಮಹಾರಾಷ್ಟ್ರ ಮೂಲದ ನೃತ್ಯ ಪ್ರದರ್ಶನ, ಕವಾಲಿ ಗಾಯನ ಮತ್ತು ಇತರ ನೃತ್ಯ ಪ್ರದರ್ಶನ ಸಭಿಕರ ಮನರಂಜಿಸಿತು. ಅಂತಿಮ ದಿನದ ಕಾರ್ಯಕ್ರಮಕ್ಕೆ ಐ.ಸಿ.ಸಿ ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ವಂದನಾರ್ಪಣೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.