(www.vknews.in) : ರಂಝಾನ್ ತಿಂಗಳು ಪ್ರಾರಂಭವಾದೊಡನೆ ಜಿಲ್ಲೆಯ ಅದರಲ್ಲೂ ಮುಖ್ಯವಾಗಿ ಮಂಗಳೂರಿನ ಶ್ರೀಮಂತ ಮುಸ್ಲಿಂ ಕುಳಗಳು ” ಉಮ್ರಾಯಾತ್ರೆ” ಕೈಗೊಳ್ಳುವುದನ್ನು ಕಾಣಬಹುದು. ಕೆಲವರು ಎರಡು ವರುಷ, ಮೂರು ವರುಷಕ್ಕೊಮ್ಮೆ ಹೋಗುತ್ತಾರೆ. ಈ ಮಂದಿ ಉಮ್ರಾಕ್ಕೆ ಹೋಗುವ ಉದ್ದೇಶ ಸರ್ವಶಕ್ತನಾದ ಅಲ್ಲಾಹುವಿನ ಸಂತೃಪ್ತಿ ಗಳಿಸುವುದಕ್ಕಾಗಿ ಅಲ್ಲವೆಂದೇ ಹೇಳಬಹುದು. ರಂಝಾನ್ ನಲ್ಲಿ ತೀರಾ ಬಡ ಮುಸ್ಲಿಮರು ಶ್ರೀಮಂತರ ಮನೆ, ಅಂಗಡಿ ಕಚೇರಿ ಬಾಗಿಲುಗಳಲ್ಲಿ ಝಕಾತ್ ಗಾಗಿ ಕೈ ಚಾಚಿ ಯಾಚಿಸುವುದನ್ನು ಕಾಣಬಹುದು. ಎಳೆಯ ಮಕ್ಕಳು, ಷೋಷ ಸ್ತ್ರೀಯರು, ನಡೆಯಲಾಗದ ಪ್ರಾಯಸ್ತರು ಸಹ ಝಕಾತ್ ಯಾಚನೆಗಾಗಿ ಅಲೆದಾಡುವುದನ್ನು ಕಾಣುತ್ತಿದ್ದೇವೆ. ಸರಿಯಾಗಿ ಉಣ್ಣಲು ಅನ್ನವಿಲ್ಲದೆ ಧರಿಸಲು ಬಟ್ಟೆ ಬರೆಯಿಲ್ಲದೆ ಅನ್ನಕ್ಕಾಗಿ, ಬಟ್ಟೆಗಾಗಿ, ಔಷಧಿಗಾಗಿ ಮಕ್ಕಳ ಮದುವೆಗಾಗಿ ಹೀಗೆ ವಿವಿಧ ಸಮಸ್ಯೆಗಳನ್ನು ಹೊತ್ತು ಕೊಂಡು ರಂಝಾನ್ ನ ಮೂವತ್ತು ದಿನಗಳಲ್ಲೂ ಬಡಪಾಯಿ ಮುಸ್ಲಿಮರು ದಾರೆ ದಾರೆಯಾಗಿ ಬೀದಿ ಬೀದಿಗಳಲ್ಲಿ ಸಂಚರಿಸುವ ಹೃದಯ ದ್ರಾವಕ ಸನ್ನಿವೇಶವನ್ನು ಕಂಡು ಒಂದಿಷ್ಟು ಕನಿಕರ ಪಡದ ಶ್ರೀಮಂತ ಮುಸ್ಲಿಮರು ಕಡ್ಡಾಯ ಝಕಾತನ್ನು ಬಚ್ಚಿಟ್ಟುಕೊಂಡು ಈ ಬಡವರ ಒಣಗಿದ ಮುಖಗಳನ್ನು ನೋಡುವುದೇ ಬೇಡವೆಂದು “ಉಮ್ರಾಯಾತ್ರೆ” ಕೈಗೊಳ್ಳುತ್ತಾರೆ. ಬಡವರು ಬಂದರೆ ಹಿಂದೆ ಕಳುಹಿಸಲು ಹೆಚ್ಚಿನ ಎಲ್ಲಾ ಶ್ರೀಮಂತರ ಗೇಟುಗಳಲ್ಲೂ ” ಗೂರ್ಖಗಳನ್ನು” ನಿಯೋಜಿಸಿದ್ದಾರೆ.
50-100 ರೂ. ಸಿಗಬಹುದೆಂಬ ಆಸೆಯಲ್ಲಿ ಬಡಪಾಯಿ ಮುಸ್ಲಿಮರು ಗೇಟುಗಳ ಸಂದುಗಳೆಡೆಯಲ್ಲಿ ಇಣುಕಿ “ಹಾಜರ್ ಉಂಡಾ” ಎಂದು ಧೈನ್ಯವಾಗಿ ಕೇಳುವಾಗ “ಇಲ್ಲೆ ಇಲ್ಲೆ ಆಯಾಲ್ ಮಕ್ಕತ್ತ್ ಪೋಯಿರ್ ಇಪ್ಪೊ ಎಂದೂ ಇಲ್ಲೆ ಊಡೆ ಎಂದು ಗೂಖಾ೯ನು ಗೇಟಿನ ಹೊರಗಿನಿಂದಲೇ ಬೆನ್ನಟ್ಟುತ್ತಾನೆ. ಬಹುಶಃ ಈ ಬಡವರನ್ನು ಬೆನ್ನಟ್ಚಲೆಂದೇ ಶ್ರೀಮಂತರು ಗೂಖಾ೯ಗಳನ್ನು ಇಟ್ಟಿರಬೇಕು. ಮನೆಯ ಒಳಗಿನಿಂದ ಗಾಳಿಯಲ್ಲಿ ತೇಲಿ ಬರುವ ಭಕ್ಷ್ಯ ಭೋಜನಗಳ ಪರಿಮಳವನ್ನು ಗೇಟಿನ ಹೊರಗಿನಿಂದಲೇ ಸವಿದು ನಿರಾಶೆಯಿಂದ ಹೆಜ್ಜೆ ಹಾಕುತ್ತಿರುವ ಕರುಣಾಜನಿಕ ದೃಶ್ಯ ಎಂತಹ ಕಲ್ಲು ಹೃದಯ ಗಳನ್ನು ಕರಗಿಸುವಂತಹದು. ಉಮ್ರಾಕ್ಕೆ ಹೋಗದ ಕೆಲ ಶ್ರೀಮಂತ ಮುಸ್ಲಿಮರು ತಮ್ಮ ಕಚೇರಿ, ಬಾಗಿಲಲ್ಲಿ ಬಡಜನರನ್ನು ಗಂಟೆಗಟ್ಟಲೆ ಕಾಯಿಸಿ ಚಿಕ್ಕಾಸು ಕೊಟ್ಟು ಕಳಿಸುವ ದೃಶ್ಯಗಳು ಅಲ್ಲಲ್ಲಿ ಗೋಚರಿಸುತ್ತಿವೆ ಝಕಾತ್ ಗಾಗಿ ಕೈ ಚಾಚಿ ನಿಂತ ಬಡವರ ಸಾಲು ಕಂಡು ಆ ಹಜಾರು ಬಾರೀ ಝಕಾತ್ ಕೊಟ್ಟಿದ್ದಾರೆ ಎಂದು ಊರವರಿಂದ ಹೊಗಳಿಸಿ ಕೊಳ್ಳುವುದಕ್ಕಾಗಿ ಈ ರೀತಿ ಗಂಟೆಗಟ್ಟಲೆ ಕಾಯಿಸಿ ಮೂರು ಕಾಸು ಕೊಟ್ಟು ಕಳಿಸುವ ಶ್ರೀಮಂತರ ವರ್ಗ ನಮ್ಮಲ್ಲಿದೆ. ಆದರೆ ಅಲ್ಲಾಹನ ಭಯವಿರುವ ಕೆಲ ಶ್ರೀಮಂತರು ತಮ್ಮ ಝಕಾತಗಳನ್ನು ಒಟ್ಟು ಗೂಡಿಸಿ ಅರ್ಹ ಬಡವರಿಗೆ ವಿತರಣೆ ಮಾಡುವಂತಹ ಯೋಜನೆಯು ಮಂಗಳೂರಿನ ಲ್ಲಿ ಕಾಯಾ೯ಚರಿಸುತ್ತಿರುವುದು ಶ್ಲಾಘನೀಯ. ಝಕಾತ್ ಬಡವರ ಹಕ್ಕಾಗಿದೆ.
ಶ್ರೀಮಂತ ರ ಸ್ವಂತದ ನಿಧಿಯಲ್ಲ. ಬಡವರಿಗೆ ಕ್ರಮಬದ್ಧವಾಗಿ ಹಂಚಲಿಕ್ಕೆಂದೇ ಅಲ್ಲಾಹು ನೀಡಿ ದ ಸಂಪತ್ತಾಗಿದೆ. ಆ ಹಣವನ್ನು ಬಚ್ಚಿಟ್ಚು ಬಡವರಿಗೂ ಅಲ್ಲಾಹನಿಗೂ ಮೋಸ ಮಾಡುತ್ತಿರುವ ಶ್ರೀಮಂತರ ಕೈಯಿಂದ ತಮ್ಮ ಹಕ್ಕಿನ ಝಕಾತ್ ನ ಹಣವನ್ನು ಎಳೆದು ತೆಗೆಯಲು ಎಲ್ಲಿ ವರೆಗೆ ಬಡವರು ಸಿದ್ಧರಾಗುವುದಿಲ್ಲವೋ ಅಲ್ಲಿ ವರೆಗೂ ಈ ಶ್ರೀಮಂತರು ಝಕಾತ್ ನ ಹಣವನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಪ್ರವಾದಿ(ಸ.ಅ)ರವರ ಮರಣಾ ನಂತರ ಝಕಾತನ್ನು ಬಚ್ಚಿಡಲು ಯತ್ನಿಸಿದ ಶ್ರೀಮಂತರ ವಿರುದ್ಧ ಯುದ್ಧ ಘೋಷಿಸುವುದಾಗಿ ಖಲೀಫ ಹಜ್ರತ್ ಅಬೂಬಕ್ಕರ್ ಸಿದ್ಧೀಕ್ (ರ.ಅ) ರವರು ಕರೆ ಕೊಟ್ಚಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ. ಝಕಾತ್ ನ ಬಗ್ಗೆ ಅಷ್ಟು ಮಹತ್ವವಿದೆ ಎಂಬುದಕ್ಕೆ ಇದೊಂದು ಉದಾಹರಣೆ ಯಾಗಿದೆ. ಝಕಾತ್ ಬಚ್ಚಿಟ್ಟು ಉಮ್ರಾ ಯಾತ್ರೆ ಹೋಗುವ ಶ್ರೀಮಂತರು ಇನ್ನಾದರೂ ಚಿಂತಿಸಬೇಕು. ನಮಾಜ್ ನ ನಂತರ ಅತೀ ಪ್ರಬಲವಾದ ಕಡ್ಡಾಯ ಇಬಾದತ್ ಆಗಿದೆ ಝಕಾತ್. ಈ ಝಕಾತನ್ನೇ ಬಚ್ಚಿಟ್ಟು ಉಮ್ರಾ ಹೋಗುವುದರಿಂದ ಪರಿಪೂರ್ಣ ಮುಸ್ಲಿಮನಾಗಲು ಸಾಧ್ಯವಿಲ್ಲ ವೆಂಬ ಯಾತಾರ್ಥವನ್ನು ಶ್ರೀಮಂತ ಮುಸ್ಲಿಮರು ಮನಗಾಣಬೇಕು.
ಕೆಲ ಶ್ರೀಮಂತರು ಹಸಿವಿಲ್ಲದ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಕರೆದು ಇಫ್ತಾರ್ ಕೂಟ ಏರ್ಪಡಿಸಿ ಅಲ್ಲಿ “ರಂಝಾನ್” ವೃತವೂ ಹಸಿವಿನ ಅರಿವನ್ನು ಉಂಟು ಮಾಡುತ್ತಿದೆ ಎಂದು ಭಾಷಣ ಮಾಡಿ ಮೂಗಿನ ತನಕ ತಿಂದು ಕಾರುತ್ತಾರೆ. ಬಡವರ ಹಸಿವನ್ನು ನೀಗಿಸಲು ಸಿದ್ಧರಿಲ್ಲದ ಕೇವಲ ಶ್ರೀಮಂತರೇ ಹೊಟ್ಟೆ ಬಿರಿಯುವ ತನಕ ತಂದು ತೇಗುವ ಭೋಜನ ಕೂಟಗಳ ಮೇಲೆ ಅಲ್ಲಾಹುವಿನ ಶಾಪವಿದೆ ಎಂಬುದನ್ನು ಇಫ್ತಾರ್ ಕೂಟ ಏರ್ಪಡಿಸುವ ಶ್ರೀಮಂತರು ನೆನಪಿಸಿಕೊಳ್ಳಲಿ. ವಿಭಿನ್ನ ರೋಗಗಳಿಂದ ಕೈಕಾಲು ಕರಗಿ ಹಸಿವಿನ ಹೊಟ್ಟೆಯಲ್ಲಿ ನಿಶ್ಯಕ್ತಿಯಿಂದ ಅಂಗಲಾಚಿ ಬೇಡುತ್ತಿರುವ ನಿರ್ಗತಿಕ ಮಂದಿ ಎಲ್ಲಾ ಮಸೀದಿಗಳ ಬಾಗಿಲುಗಳಲ್ಲಿ ಅರೆ ಬೇವಾಸ್ಥೆಯಲ್ಲಿ ಬಿದ್ದಿರುವುದನ್ನು ಕಂಡು ಹತ್ತು ನಯಾ ಪೈಸೆ ಕೂಡ ಕೊಡುವ ಹೃದಯವಿಲ್ಲದೆ ಹೊಟ್ಟೆ ಬೆಳೆಸಿಕೊಂಡು ತಲೆ ಅಡಿಗೆ ಹಾಕಿ ಮಸೀದಿಯಿಂದ ಹೊರ ಹೋಗುತ್ತಿರುವಂತಹ ಶ್ರೀಮಂತ ರೇ ನಿಮ್ಮ ಅಂತಸ್ತು, ನಿಮ್ಮ ಸಂಪತ್ತು ನೀವು ಅಹಂಕಾರ ದಲ್ಲಿ ಹೆಜ್ಜೆ ಇಡುತ್ತಿರುವ ಈ ಭೂಮಿ ನಿಮಗೆ ಎದುರಾಗಿ ಸಾಕ್ಷ್ಯ ಹೇಳುವ ದಿನವೊಂದು ಸಮೀಪಿಸುತ್ತಿದೆ ಎಂಬುದನ್ನು ಜ್ಞಾಪಿಸಿಕೊಳ್ಳಿ.
— ಆಯಿಷಾ ನಾಟೆಕಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.