(www.vknews.in) : ರಾಜನ ಸನ್ನಿಧಿಯಲ್ಲಿ ಹಾಜರುಪಡಿಸಿದ ಹಝ್ರತ್ ನೂಹ್ರವರಲ್ಲಿ ರಾಜನು ಕೇಳಿದನು. “ನೀನು ಯಾರು? ನೀನು ನಮ್ಮ ಇಲಾಹುಗಳನ್ನು (God) ಟೀಕೆ ಮಾಡಿದ್ದಿಯಾ?” ಆಗ ನೂಹ್ರವರು ಹೇಳಿದರು. “ನಾನು ಲಮಕ್ರವರ ಮಗ ನೂಹ್. ನನ್ನನ್ನು ಅಲ್ಲಾಹನು ನಿಮಗೆ ಪ್ರವಾದಿಯನ್ನಾಗಿ ಮಾಡಿ ಕಳುಹಿಸಿದ್ದಾನೆ. ಆದ್ದರಿಂದ ನೀವು ಸತ್ಯ ಮಾರ್ಗದತ್ತ ಬರಬೇಕು. ಅಷ್ಟು ಮಾತ್ರ ನನಗೆ ಹೇಳಲಿಕ್ಕಿರುವುದು”
ಇದನ್ನು ಕೇಳಿದಾಕ್ಷಣ ಆತನ ಕೋಪ ನೆತ್ತಿಗೇರಿತು. ಅರಸ ಹೇಳಿದ. “ನಿನಗೆ ತಲೆಗೆ ಪೆಟ್ಟಾಗಿ ಹುಚ್ವು ಆಗಿದ್ದರೆ ಚಿಕಿತ್ಸೆ ಮಾಡುವ. ಇನ್ನು ಬದುಕಲು ಹಣದ ತೊಂದರೆ ಇದ್ದರೆ ಅದಕ್ಕೂ ಪರಿಹಾರ ಮಾಡುವ.” ಅಗ ಹಝ್ರತ್ ನೂಹ್ರವರು ಹೇಳಿದರು. “ನನಗೆ ಯಾವ ಹುಚ್ಚೂ ಇಲ್ಲ. ಹಣದ ತೊಂದರೆಯೂ ಇಲ್ಲ. ನನಗೆ ಬೇಕಾದದ್ದು ನೀವು ಸನ್ಮಾರ್ಗಕ್ಕೆ ಬರುವುದು ಮಾತ್ರ” ಆಗ ಆತ ಹೇಳಿದ. “ಈಗ ನಿನ್ನನ್ನು ಸುಮ್ಮನೆ ಬಿಡುತ್ತೇನೆ. ನಮ್ಮ ಮುಂದಿನ ಹಬ್ಬಕ್ಕೆ ನೀನು ನಮ್ಮೊಂದಿಗೆ ಹಾಜರಾಗಿ ನಾವು ಮಾಡುವಂತೆ ಮಾಡದಿದ್ದರೆ ನಿನ್ನ ಕತೆ ಮುಗಿಸುತ್ತೇನೆ” ಎಂದು.
ಹಝ್ರತ್ ನೂಹ್ರವರು ತನ್ನ ಹೊಣೆ ಮತ್ತು ಜವಾಬ್ದಾರಿಯನ್ನು ಸರಿಯಾಗಿ ಮಾಡತೊಡಗಿದರು. ಪ್ರಪ್ರಥಮವಾಗಿ ಆ ಸಮುದಾಯದಿಂದ ಒಬ್ಬರು ಮಹಿಳೆ ಇಸ್ಲಾಮಿಗೆ ಬಂದರು. ಅವರ ಹೆಸರು ಅಮ್ರಃ ಎಂದಾಗಿತ್ತು. ಬಳಿಕ ಅವರನ್ನೇ ಹಝ್ರತ್ ನೂಹ್ರವರು ವಿವಾಹವಾದರು. ಅದರಲ್ಲಿ ಮೂರು ಗಂಡು ಮತ್ತು ಮೂರು ಹೆಣ್ಣ ಮಕ್ಕಳು ಹುಟ್ಟಿದರು. ಬಳಿಕ ವಾಲಿಅ ಎಂಬ ಒಬ್ಬಳು ಇಸ್ಲಾಂ ಸ್ವೀಕಾರ ಮಾಡಿದಳು. ಅವಳನ್ನೂ ಹಝ್ರತ್ ನೂಹ್ (ಅ) ರವರು ಮದುವೆಯಾದರು. ಅದರಲ್ಲಿ ಕನ್ಆನ್ ಎಂಬ ಒಂದು ಗಂಡು ಮಗು ಹುಟ್ಟಿತು. ಆದರೆ ಈ ವಾಲಿಅ ಮುನಾಫಿಖ್ ಆಗಿದ್ದಳು. ಕೆಲವೇ ಸಮಯದಲ್ಲಿ ಅವರನ್ನು (ನೂಹ್) ಬಿಟ್ಟು ತನ್ನ ಹಳೆಯ ವಿಶ್ವಾಸಕ್ಕೆ ಹೋದಳು.
ಹಝ್ರತ್ ನೂಹ್ರವರು ಯಾವಾಗಲೂ ಈ ವಿವರವಿಲ್ಲದ ನಾಗರಿಕರು ಸಂಜೆ ವೇಳೆಯಲ್ಲಿ ಜಮಾಯಿಸುತ್ತಿದ್ದ ಅವರ ಕ್ಲಬ್ ಗಳಿಗೆ ಹೋಗಿ ಅಲ್ಲಿ ದಅವತ್ ಮಾಡುತ್ತಿದ್ದರು. ಆದರೆ ಅವರಿಗೆ ಅದು ಒಂದು ವಿಷಯವೇ ಆಗಿರಲಿಲ್ಲ. ಅವರು ದೊಣ್ಣೆ, ಸಲಾಕೆಗಳಿಂದ ಅವರಿಗೆ ಮೂರ್ಛೆ ಹೋಗುವ ತನಕ ಹೊಡೆದು ಕೊನೆಗೆ ಕಾಲುಗಳನ್ನು ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಕಸದ ತೊಟ್ಟಿಗೆ ಹಾಕುತ್ತಿದ್ದರು. ಹಝ್ರತ್ ನೂಹ್ರವರು ತನಗೆ ಎಚ್ಚರ ಬಂದ ಕೂಡಲೇ ಪುನಃ ಹೀಗೆಯೇ ಕಿಂಚಿತ್ತೂ ಭಯಪಡದೆ ಅವರತ್ತ ಹೋಗಿ ಬೋಧನೆ ಮಾಡುತ್ತಿದ್ದರು. ಶತ್ರುಗಳು ಅವರ ಕೆಲಸವನ್ನು ಮಾಡುತ್ತಿದ್ದರು. ಸುಮಾರು ಮುನ್ನೂರು ವರ್ಷಗಳ ಕಾಲ ಹೀಗೆಯೇ ಮುಂದುವರಿಯಿತು. ಈ ವೇಳೆಯಲ್ಲಿ ಆ ಕೆಟ್ಟ ಅರಸ ದರ್ಮಶೀಲ್ ಕೂಡ ಸತ್ತನು. ಬಳಿಕ ಅವನಿಗಿಂತಲೂ ನೀಚನಾದ ಅವನ ಮಗ ಅಧಿಕಾರಕ್ಕೆ ಬಂದನು. ಅವನಿಂದಲೂ ಹಝ್ರತ್ ನೂಹ್ರವರಿಗೆ ಸಹಿಸಲಾರದ ತೊಂದರೆ ಉಂಟಾಯಿತು. ಹಝ್ರತ್ ನೂಹ್ರವರು ಭೋದನೆ ಮಾಡುವಾಗ ಈ ನೂತನ ಅರಸನ ನಿರ್ದೇಶದಂತೆ ಜನರು ಅವರ ಕಿವಿಗಳಿಗೆ ಕೈ ಇಟ್ಟು ಕೇಳದಂತೆ ಅಭಿನಯ ಮಾಡಲು ಶುರುಮಾಡಿದರು. ವರ್ಷ ನಾಲ್ಕು ನೂರು ಕಳೆಯಿತು. ಅವರಿಗೆ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ ನೂಹ್ರವರು ಹಾಗೆಯೇ ಮುಂದುವರಿದರು. ಅವರು ನೂಹ್ರವರಿಗೆ ಕೊಡುವ ಶಿಕ್ಷೆ ದಿನದಂದ ದಿನಕ್ಕೆ ಹೆಚ್ಚುತ್ತಾ ಹೋಯಿತು.
ಏಳುನೂರು ವರ್ಷಗಳಾಯಿತು. ಎರಡನೆಯ ಅರಸನೂ ಸತ್ತನು. ಬಳಿಕ ತಂದೆಗಿಂತಲೂ ಕೆಟ್ಟ ಆತನ ಒಬ್ಬ ಮಗ ಅಧಿಕಾರಕ್ಕೆ ಬಂದ. ಆತನಾದರೆ ಹಝ್ರತ್ ನೂಹ್ರವರಿಗೆ ಕೊಡುವ ಶಿಕ್ಷೆಯನ್ನು ಮತ್ತೂ ಜಾಸ್ತಿ ಮಾಡಿದ. ರಸ್ತೆಯಲ್ಲಿ ಮಲಗಿಸಿ ಅವರ ಹೊಟ್ಟೆಯ ಮೇಲೆ ನಿಲ್ಲುವುದು, ತುಳಿಯುವುದು ಇತ್ಯಾದಿಯಾಗಿತ್ತು ಆತನ ಶಿಕ್ಷೆ. ಕೊನೆಗೆ ಅವರ ಬಾಯಿ, ಮೂಗು ಮತ್ತು ಕಿವಿಗಳಲ್ಲಿ ರಕ್ತ ಸ್ರಾವ ಆಗಲು ತೊಡಗಿತು. ಆದರೆ ಶಿಕ್ಷೆ ಮಾತ್ರ ಹಾಗೆಯೇ ಮುಂದುವರಿದಿತ್ತು.
ಒಬ್ಬ ಸಾಯುವ ಸ್ಥಿತಿಯಲ್ಲಿದ್ದರೆ ತಮ್ಮ ಮಕ್ಕಳನ್ನು ಪ್ರವಾದಿ ನೂಹ್ ರವರ ಹತ್ತಿರ ಕರಕೊಂಡು ಬಂದು ಹೇಳುತ್ತಿದ್ದರು. “ಮಕ್ಕಳೇ ನೋಡಿ.., ನಾನಿನ್ನು ಹೆಚ್ಚು ಸಮಯ ಬದುಕುವುದು ಕಷ್ಟ. ನಿಮಗೆ ನಿಮ್ಮ ಹಿರಿಯರು ಕಲಿಸಿದ ದೀನ್ ಬೇಕಾ ಅಥವಾ ಈ ಹುಚ್ವ ನೂಹ್ ಕಲಿಸಿಕೊಡುವ ದೀನ್ ಬೇಕಾ? ಯಾವತ್ತೂ ನೀವು ಈ ಜಾದೂಗಾರನ ಬಲೆಯಲ್ಲಿ ಬೀಳಬೇಡಿ. ಜಾಗ್ರತೆ ಮಾಡಿಕೊಳ್ಳಿ” ಎಂದು.
ಆದರೆ ಪ್ರವಾದಿ ನೂಹ್ರವರು ಮಾತ್ರ ಅದ್ಯಾವುದನ್ನೂ ಕಿವಿಗೊಡದೆ ತನ್ನ ಹಾದಿಯಲ್ಲೇ ಮುನ್ನಡೆಯುತ್ತಿದ್ದರು. ಕೊನೆಗೆ ನೂಹ್ರವರ ಕಷ್ಟ ಕಂಡು ಭೂಮಿ ಭೂಮಿಯಲ್ಲಿರುವ ಈ ನೀಚ ಸಮುದಾಯವಲ್ಲದ ಎಲ್ಲವೂ ಕೂಡ ಕಣ್ಣೀರು ಸುರಿಸಿ ಅಲ್ಲಾಹನಲ್ಲಿ ಹೇಳಿತು. “ಅಲ್ಲಾಹ್.. ನಿನಗೆ ಗೊತ್ತಿರುವ ರಹಸ್ಯ ನಮಗೆ ತಿಳಿಯದು. ಆದರೆ ಈ ನೂಹ್ರವರನ್ನು ನೀನು ಯಾಕೆ ಈ ರೀತಿ ಮಾಡಿಸುತ್ತಿ ಎಂದು ತಿಳಿಯದು. ಅವರ ಅವಸ್ಥೆ ನೋಡುವಾಗ ಬೇರವಾಗುತ್ತದೆ”
ಒಂದು ದಿನ ಊರಿನ ಪ್ರತಿಭಾವಂತ ವ್ಯಕ್ತಿಯೊಬ್ಬನು ಅವನ ಪ್ರಾಯ ಪೂರ್ತಿಯಾಗದ ಒಬ್ಬ ಮಗನೊಂದಿಗೆ ಹಝ್ರತ್ ನೂಹ್ ರವರ ಹತ್ತಿರ ಬಂದನು. ಎಲ್ಲರೂ ನೋಡುತ್ತಿರುವಂತೆಯೇ ಆ ಬಾಲಕ ತನ್ನ ಕೈಯನ್ನು ಕೆಸರಿನಲ್ಲಿ ಮುಳುಗಿಸಿ ಹಝ್ರತ್ ನೂಹ್ರವರ ಕೆನ್ನೆಗೆ ಎರಡು ಪೆಟ್ಟು ಕೊಟ್ಟನು. ಆ ಘಟನೆ ಪ್ರವಾದಿ ನೂಹ್ ರವರ ಮೇಲೆ ದೊಡ್ಡ ಅಘಾತ ಬೀರಿತು. ಸುಮಾರು ಎಂಟುನೂರು ವರ್ಷಗಳ ತನಕ ಅವರಿಗೆ ವಿರುದ್ದವಾಗಿ ದುಆ ಮಾಡದ ಹಝ್ರತ್ ನೂಹ್ರವರು ಆಕಾಶದತ್ತ ಕೈಯೆತ್ತಿ ಪ್ರಾರ್ಥಿಸಿದರು. “ನನ್ನ ಪ್ರಭೂ, ಈ ಭೂಮುಖದಲ್ಲಿ ಸತ್ಯ ನಿಷೇಧಿಯಾದ ಒಬ್ಬನೇ ಒಬ್ಬನನ್ನು ಉಳಿಸಬಾರದು. ಅವರನ್ನು ನೀನು ಉಳಿಸುವುದಾದರೆ ಅವರು ಖಂಡಿತವಾಗಿಯೂ ನಿನ್ನಲ್ಲಿ ನಂಬಿಕೆ ಇಟ್ಟ ದಾಸರನ್ನು ದಾರಿ ತಪ್ಪಿಸುತ್ತಾರೆ. ಅದಲ್ಲದೆ ಅವರಿಗೆ ಹುಟ್ಟುವವರು ಕೂಡ ಸತ್ಯ ನಿಷೇಧಿಗಳಾಗುತ್ತಾರೆ” ಎಂದು.
ಹಝ್ರತ್ ನೂಹ್ರವರ ದುಆಕ್ಕೆ ಮಲಕುಗಳು ಆಮೀನ್ ಹೇಳಿದರು. ಅಲ್ಲಾಹನು ಉತ್ತರ ಕೊಟ್ಟನು. ದಿನಗಳು ಕಳೆದಂತೆ ಮಳೆ ನಿಂತು ಹೋಯಿತು. ತರಕಾರಿ, ಹಣ್ಣು ಹಂಪಲ ಬೆಳೆಗಳು ಕಡಿಮೆಯಾಗ ತೊಡಗಿತು. ಎಲ್ಲೂ ದಾರಿದ್ರ್ಯ ಮತ್ತು ಬಡತನದ ಅಲೆ ಬೀಸಿತು. ಆಗ ಹಝ್ರತ್ ನೂಹ್ರವರಿಗೆ ತಿಳಿಯಿತು. ಈ ಜನರಿಗೆ ಏನೋ ಮಹಾ ಅನಾಹುತ ಬರಲಿರುವುದು ಎಂದು. ತಡವಾಗದೆ ಜಗತ್ತು ಕಂಡ ಅತೀ ದೊಡ್ಡ ಹಡಗು ನಿರ್ಮಾಣ ಮಾಡಲು” ಅಲ್ಲಾಹನಿಂದ ಸಂದೇಶ ಬಂತು.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಹಡಗಿನ ರಹಸ್ಯ ಮುಂದಿನ ಭಾಗದಲ್ಲಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.