(www.vknews. in) ; ಪ್ರವಾದಿಗಳ ಆಗಮನ ಪೂರ್ವದಲ್ಲಿ ಔಸ್- ಖಸ್ರಜ್ ಎಂಬೀ ಪ್ರಮುಖ ಗೋತ್ರಗಳು ಹಾಗೂ ಇತರ ಸಣ್ಣ ಪುಟ್ಟ ಗುಂಪುಗಳು ಕ್ಷುಲ್ಲಕ ನೆಪವೊಡ್ಡಿ ನೂರಾರು ವರ್ಷಗಳ ಕಾಲ ಪರಸ್ಪರ ಯುದ್ದನಿರತರಾಗಿ ಕೋಟ್ಯಾಂತರ ಜನರ ಸಾವು ನೋವಿಗೆ ಕಾರಣ ಕರ್ತರಾಗ ಬೇಕಿದ್ದರೆ ಅಂತಹ ಅನಾಗರಿಕ ಜನ ಸಮೂಹವನ್ನು ಇಸ್ಲಾಮಿನ ತರಬೇತಿ ಮೂಲಕ ಸಂಸ್ಕರಿಸಿ ಇಡೀ ಜಗತ್ತಿಗೇ ಸಮಾನತೆ ಮತ್ತು ಭಾತೃತ್ವದ ಸಂದೇಶ ಸಾರುವ ಬ್ರಾಂಡ್ ಅಂಬಾಸಿಡರ್ ಗಳಾಗಿ ಪರಿವರ್ತಿಸಿ ಅವರ ಮೂಲಕ ಇಡೀ ಜಗತ್ತಿಗೇ ಇಸ್ಲಾಮಿನ ಕಂಪು ಹರಡಲು ನಿಮಿತ್ತವಾದದ್ದು ಅದೊಂದು ಅಪರೂಪದ ಅಚ್ಚರಿದಾಯ ಬೆಳವಣಿಗೆಯೇ ಸರಿ.
ದೇವನಿಗೆ ತಲುಪಲು ಪ್ರಮುಖ ಮಾದ್ಯಮ ಇದ್ದರೆ ಅದು ಮಾನವನೇ ಹೊರತು ಕೇವಲ ಯಾಂತ್ರಿಕ ಜಪ ತಪಗಳು ಮಾತ್ರವಲ್ಲ ಎಂಬುದನ್ನು ಜಗತ್ತಿಗೆ ಸಾರಿದ ಧರ್ಮ ಅದು ಇಸ್ಲಾಂ ಆಗಿದೆ. ವರ್ಣರಂಜಿತ ವಸ್ತ್ರ ಧರಿಸಿ ಸದಾ ಸುಗಂಧ ಸೂಸುವ ಸುಂದರ ಮೈಕಟ್ಟಿನ ಬಿಳಿ ವರ್ಣದ ಬಿಲಿಯಾಧಿಪತಿಯ ಜೊತೆ ತಂಡಾಸು, ಗಲೀಜು ಕ್ಲೀನ್ ಮಾಡುವ ಕಪ್ಪು ಬಣ್ಣದ ಬಡ ಪೌರಕಾರ್ಮಿಕನೂ ಬುಜಕ್ಕೆ ಬುಜ ತಾಗಿಸಿ ನಮಾಜಿನ ಸಾಲಲ್ಲಿ ನಿಲ್ಲ ಬೇಕು.
ಅಲ್ಲಿ ಎಡೆ ಬಿಟ್ಟು ನಿಂತರೆ ಶೈತಾನನ ಪ್ರವೇಶ ಆಗುತ್ತದೆ ಎಂಬ ಜಗತ್ತಲ್ಲೇ ಅಪರೂಪದ ತತ್ವವನ್ನು ಸಾರುವ ಮೂಲಕ ಉಚ್ಚನೀಚತ್ವದ ಅಡಿ ಬೇರನ್ನೇ ಅಲುಗಾಡಿಸಿದ ಇಸ್ಲಾಮಿನ ಸಮಾನತೆಯ ಸಂದೇಶವು ಜಾತಿ ,ದೇಶ, ಭಾಷೆ,ವರ್ಗ,ವರ್ಣದ ಎಲ್ಲೆ ಮೀರಿ ಜಾಗತಿಕ ನೆಲೆಯಲ್ಲಿ ಪ್ರದರ್ಶಿಸುವ ಅವಕಾಶವನ್ನು ಹಜ್ ಎಂಬ ಅಂತರ್ರಾಷ್ಟ್ರೀಯ ಸಮ್ಮೇಳನದ ಮೂಲಕ ಪ್ರಾಯೋಗಿಕವಾಗಿ ಸ್ಥಾಪಿಸಲಾಯಿತು. ಬಡಬಗ್ಗರ ಕಣ್ಣೀರು ಒರೆಸುವ ವಿಧಾನವನ್ನು ಝಕಾತ್ ಮತ್ತು ದಾನ ಧರ್ಮಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಆರ್ಥಿಕ ಸಮತೋಲನವನ್ನು ಕಾಯ್ದು ಕೊಳ್ಳುವ ಸಾಮಾಜಿಕ ಕಳಕಳಿ ಜನರಲ್ಲಿ ಉಂಟಾಗುವಂತೆ ನೋಡಿ ಕೊಳ್ಳಲಾಯಿತು.
ಪರಲೋಕದದಲ್ಲಿ ಖುದ್ದು ಅಲ್ಲಾಹನೇ ಮಾನವನನ್ನು ಕರೆದು ನಾನು ರೋಗಿಯಾದಾಗ ಯಾಕೆ ನೀನು ನನ್ನನ್ನ ಸಂದರ್ಶಿಸಿಲ್ಲ ಎಂದು ಪ್ರಶ್ನೆ ಮಾಡ ಬೇಕಾದರೆ ದೇವನು ರೋಗಿಯಾಗುವುದಂಟೇ? ಎಂದು ಮನುಷ್ಯ ಮರುಪ್ರಶ್ನೆ ಮಾಡುತ್ತಾನೆ. ಇಂತಿಂತ ವ್ಯಕ್ತಿ ರೋಗಿಯಾದಾಗ ಅವನನ್ನು ನೀನ್ಯಾಕೆ ಶುಶ್ರೂಷೆ ಮಾಡಲಿಲ್ಲ? ಹಾಗೆ ಮಾಡಿದ್ದರೆ ಅಲ್ಲಿ ನಾನಿರುತ್ತಿದ್ದೆ ಎಂದು ದೇವನು ಉತ್ತರಿಸುತ್ತಾನೆಂದಾದರೆ ಇಸ್ಲಾಮಿನ ದೈವ ಸಂಕಲ್ಪವೇ ಕಾರುಣ್ಯ ದಯಾಪರ ಕೆಲಸ ಕಾರ್ಯಗಳಲ್ಲಿ ಮನುಷ್ಯನು ಸದಾ ತನ್ನನ್ನು ತೊಡಗಿಸಿ ಕೊಳ್ಳುವಂತೆ ಪ್ರೇರೇಪಿಸುತ್ತದೆ.
ನೆರೆಕರೆಯವನ ನಾಯಿಗೆ ಕಲ್ಲೆಸದರೂ ಅದು ಅವನಿಗೆ ನೀನು ತೊಂದರೆ ನೀಡಿದಂತೆ. ನೆರೆಕೆರೆಯಾತ ಯಾವ ಧರ್ಮೀಯನೇ ಆಗಿರಲಿ.ಆತ ಹಸಿದಿರುವಾಗ ಆತನಿಗೆ ಅನ್ನ ನೀಡದೇ ಹೊಟ್ಟೆ ತುಂಬಿಸಿಕೊಂಡವ ಇಸ್ಲಾಂ ಧರ್ಮಕ್ಕೇ ಸೇರುವುದಿಲ್ಲ ಎಂಬ ಇಸ್ಲಾಮಿನ ಪ್ರಸಿದ್ದ ತತ್ವವು ಧರ್ಮ ಸಂಕಲ್ಪಕ್ಕೆ ಹೊಸ ಭಾಷ್ಯವೊಂದನ್ನು ಬರೆಯುತ್ತದೆ. ಹೀಗೇ ಇಸ್ಲಾಮಿನ ಪ್ರತೀಯೊಂದು ಆಚಾರ ವಿಚಾರಗಳು ಮಾನವನನ್ನೇ ಮೂಲಾಧಾರವಾಗಿಟ್ಟು ಕೊಂಡದ್ದಾಗಿದ್ದು ಜಗತ್ತಲ್ಲಿ ಶಾಂತಿ,ಪ್ರೀತಿ,ಭಾತೃತ್ವ ಸ್ಥಾಪಿಸಿ ನ್ಯಾಯ,ನೀತಿಯ ವಾತಾವರಣ ಸೃಷ್ಟಿ ಮಾಡಿ ಆಮೂಲಕ ಅಭಿವೃದ್ದಿಯತ್ತ ಮಾನವನನ್ನು ಕೊಂಡೊಯ್ಯುವುದೇ ಆಗಿದೆ ಇಸ್ಲಾಮಿನ ಗುರಿ. ಆದರೆ ಸ್ಥಳೀಯವಾಗಿ ನೋಡುವುದಾದರೆ ದೌರ್ಭಾಗ್ಯವಶಾತ್ ಮುಸ್ಲಿಮರೇ ಪರಸ್ಪರ ಕ್ಷುಲ್ಲಕ ಕಾರಣಕ್ಕಾಗಿ ವಿಭಿನ್ನ ಪಕ್ಷ ಪಂಗಡ ಕಟ್ಟಿಕೊಂಡು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ದ್ಚೇಷಾಸೂಯೆ ಬಿತ್ತುತ್ತಾ ಕಾಲ ಕಳೆಯುವುದರ ಜೊತೆಗೆ ತಮ್ಮ ಸ್ವಾರ್ಥಕ್ಕಾಗಿ ಮಸೀದಿಗಳನ್ನೇ ಬಳಸಿ ಕೊಳ್ಳುವ ದುಸ್ಥಿತಿ ಉಂಟಾಗಿದೆ.
ಇತರ ಸಮುದಾಯವನ್ನು ದೂಷಿಸಿ ಕಾಲ ಕಳೆಯುವ ಬದಲು ಸ್ವ ಸಮುದಾಯದ ಹೀನ ಕೃತ್ಯಗಳ ಬಗ್ಗೆ ಆತ್ಮಾವಲೋಕನ ನಡೆಸಿ ನಾವು ಸ್ವಯಂ ಬದಲಾಗಬೇಕಾದ ಕಾಲ ಬಂದೊದಗಿದೆ. ಅದೇ ರೀತಿ ಅಂತರ್ರಾಷ್ಟ್ರೀಯ ವಾಗಿ ನೋಡುವುದಾದರೆ ಐಸಿಸ್ ನಂತಹ ಜೂದ ಪ್ರೇರಿತ ಭಯೋತ್ಪಾದನಾ ಸಂಘಟನೆಗಳು ಶಿಯಾ ಸುನ್ನಿ ಹೆಸರಲ್ಲಿ ಮಸೀದಿಗೇ ಬಾಂಬ್ ಹಾಕಿ ಮುಸ್ಲಿಮರನ್ನೇ ಕೊಂದು ಹಾಕುವ ದುಸ್ಥಿತಿ ಇದ್ದು ಒಟ್ಟಿನಲ್ಲಿ ಇಸ್ಲಾಮಿನ ಸುಂದರ ತತ್ವಾದರ್ಶಗಳು ಕೇವಲ ಇತರ ಧರ್ಮೀಯರಿಗೆ ತಿಳಿ ಹೇಳುವ ಪ್ರವಚನಕ್ಕೆ ಸೀಮಿತಗೊಳ್ಳದೇ ಮುಸ್ಲಿಮರಿಗೇ ನೆನಪಿಸ ಬೇಕಾದ ಅನಿವಾರ್ಯತೆ ಎದುರಾಗಿದೆ. ಪವಿತ್ರ ಈದ್ ಆಚರಣೆ ಆತ್ಮಾವಲೋಕನಕ್ಕೆ ಪ್ರೇರಣೆಯಾಗಲಿ ಎಂದು ಆಶಿಸೋಣ.
— ಎಸ್ ಬಿ ದಾರಿಮಿ.ಉಪ್ಪಿನಂಗಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.