ಧಾರವಾಡ(ವಿಶ್ವಕನ್ನಡಿಗ ನ್ಯೂಸ್) : ಕೋವಿಡ್-೧೯ದಂತಹ ಮಹಾಮಾರಿ ವೈರಸ್ದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಶಾಲೆಗಳು ಮುಚ್ಚಿರುವಾಗಲೂ ಸಹ ಶಾಲಾ ಮಕ್ಕಳ ಕಲಿಕಾ ಹಿನ್ನೆಡೆ ತಡೆಗಟ್ಟಲು ವಿದ್ಯಾಗಮ ಪೂರಕ ಯೋಜನೆಯಾಗಿದೆ ಎಂದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕಿ ಮಮತಾ ನಾಯಕ ಹೇಳಿದರು.
ಅವರು ಮಂಗಳವಾರ ನಗರದ ಡಯಟ್ನ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಜಿಲ್ಲಾ ಮಟ್ಟದ ವಿದ್ಯಾಗಮ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಕಲಿಕಾ ಆಸಕ್ತಿಯನ್ನು ಕಳೆದುಕೊಳ್ಳದಂತೆ ಅಲ್ಲಿ ವ್ಯಾಸಂಗದ ಹಸಿರನ್ನು ಉಳಿಸಲು ವಿದ್ಯಾಗಮ ಒಂದು ಉಪಯುಕ್ತ ಯೋಜನೆಯಾಗಿದೆ. ವಿದ್ಯಾಗಮವು ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿದ್ದರೂ ಸಹಿತ ಶಿಕ್ಷಕರ ಹಾಗೂ ಅಧಿಕಾರಿಗಳ ನಿರಂತರ ಮಾರ್ಗದರ್ಶನ ಅತೀ ಅಗತ್ಯವಾಗಿದೆ ಎಂದರು. ವಿದ್ಯಾಗಮದ ಮೂಲಕ ಶಿಕ್ಷಕ-ಶಿಕ್ಷಕಿಯರು ಪ್ರತೀ ಓಣಿ, ಬಡಾವಣೆಗಳಲ್ಲಿ ಸಂಚರಿಸಿ ವಿದ್ಯಾರ್ಥಿಗಳಿಗೆ ಪಾಠಗಳ ಮಾರ್ಗದರ್ಶನ ಮಾಡಲು ಮನೆಬಾಗಿಲಿಗೆ ಬರುತ್ತಿರುವುದು ಪಾಲಕ-ಪೋಷಕರಿಗೆ ಖುಷಿ ತಂದಿದೆ. ಶಾಲೆಗಳು ಆರಂಭವಾಗುವರೆಗೂ ವಿದ್ಯಾಗಮವನ್ನು ಬಹಳ ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವುದು ಶಿಕ್ಷಣ ಇಲಾಖೆಯ ಎಲ್ಲ ಭಾಗೀದಾರರ ಕರ್ತವ್ಯವಾಗಿದೆ.
ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಶಿಕ್ಷಕರು ವಿದ್ಯಾರ್ಥಗಳನ್ನು ಸಂಪರ್ಕಿಸಿ ಮಾರ್ಗದರ್ಶನ ನೀಡಬೇಕು. ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯು ಬೇರೆ ರಾಜ್ಯಗಳಲ್ಲಿಯೂ ಇದೀಗ ಅನುಷ್ಠಾನವಾಗುತ್ತಿರುವುದು ಬಹಳ ಹೆಮ್ಮೆಯ ವಿಷಯ. ಪ್ರತೀ ವಾರ ಏನೇನು ಚಟುವಟಿಕೆಗಳನ್ನು ನಡೆಸಬೇಕೆನ್ನುವ ಕುರಿತು ಶಿಕ್ಷಕರು ತಮ್ಮದೇ ಆದ ವೇಳಾಪಟ್ಟಿಯನ್ನು ಹೊಂದುವ ಅಗತ್ಯವಿದೆ ಎಂದೂ ಅವರು ಹೇಳಿದರು.
ಚಂದನ ವಾಹಿನಿ ಪಾಠ : ದೂರದರ್ಶನದ ಚಂದನ ವಾಹಿನಿಯ ಮೂಲಕ ಪ್ರಸಾರ ಮಾಡಲಾಗುತ್ತಿರುವ ಪಾಠಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ವೀಕ್ಷಣೆ ಮಾಡಿ ಅಲ್ಲಿಯ ಕಲಿಕಾ ಸಂಗತಿಗಳನ್ನು ದಾಖಲಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಡಿ.ಎಸ್.ಇ.ಆರ್.ಟಿ.ಯ ಸ್ಟುಡಿಯೋದಲ್ಲಿ ವಿಷಯವಾರು ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪಾಠಗಳನ್ನು ಸಿದ್ಧಗೊಳಿಸಿ ದೂರದರ್ಶನದ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂದೂ ಮಮತಾ ನಾಯಕ ತಿಳಿಸಿದರು.
ಜಿಲ್ಲೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಮಾತನಾಡಿ, ಹೊಸ ರಾಷ್ಟಿçÃಯ ಶಿಕ್ಷಣ ನೀತಿಯ ಅನುಷ್ಠಾನದ ಹಿನ್ನೆಲೆಯಲ್ಲಿ ಪ್ರಸ್ತುತ ನಿರಂತರವಾಗಿ ವೆಬಿನಾರ್ಗಳು ನಡೆಯುತ್ತಿದ್ದು, ಇವುಗಳನ್ನು ವೀಕ್ಷಣೆ ಮಾಡಬೇಕು. ಪೂರ್ವ ಬಾಲ್ಯಾವಸ್ಥೆಯ ಶಿಕ್ಷಣ, ಶಿಕ್ಷಕರ ಶಿಕ್ಷಣ, ವಯಸ್ಕರ ಶಿಕ್ಷಣ, ಕಲಿಕಾ ಸಾಮಗ್ರಿಗಳು, ಅಂತರ್ಜಾಲದ ಡಿಸಿಟಲ್ ಶಿಕ್ಷಣ ವ್ಯವಸ್ಥೆ ಕುರಿತು ಎಲ್ಲ ಭಾಷೆಗಳಲ್ಲಿ ಈಗ ಚರ್ಚೆಗಳು ನಡೆದಿವೆ.
ಇವುಗಳನ್ನು ನಿರಂತರ ಆಲಿಸಲು ರೂಢಿಸಿಕೊಳ್ಳಬೇಕು ಎಂದರು. ಡಿಡಿಪಿಐ ಮೋಹನಕುಮಾರ ಹಂಚಾಟೆ ಮಾತನಾಡಿ, ಮಕ್ಕಳ ಸಾಮರ್ಥ್ಯಾಧಾರಿತ ಕಲಿಕಾ ಚಟುವಟಿಕೆಗಳನ್ನು ವಿದ್ಯಾಗಮದಲ್ಲಿ ಅಳವಡಿಸಿ ಕೇವಲ ಸರಕಾರಿ ಎನ್ನದೇ ಎಲ್ಲ ಶಾಲಾ ಮಕ್ಕಳ ಕಲಿಕಾ ಕಂದಕಗಳನ್ನು ನಿವಾರಣೆ ಮಾಡಲು ವಿದ್ಯಾಗಮದ ಮೂಲಕ ಪ್ರಯತ್ನಗಳು ನಡೆಯಬೇಕು. ವಿದ್ಯಾಗಮದಿಂದಾಗಿ ಮುಂದಿನ ವರುಷಗಳಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಳ್ಳಲಿದೆ. ಶಾಲಾ ಆವರಣದಲ್ಲಿ ವಿದ್ಯಾಗಮ ಚಟುವಟಿಕೆಗಳನ್ನು ನಡೆಸದೇ ದೇವಾಲಯ, ಸಮುದಾಯಭವನ, ಚಾವಡಿ ಮುಂತಾದ ಸ್ಥಳಗಳಲ್ಲಿ ಮಕ್ಕಳ ಪಾಠಗಳಿಗೆ ಮಾರ್ಗಧರ್ಶನ ಮಾಡಬೇಕು ಎಂದರು.
ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ಅಶೋಕಕುಮಾರ ಸಿಂದಗಿ, ಉಮೇಶ ಬಮ್ಮಕ್ಕನವರ, ಎ.ಎ. ಖಾಜಿ, ಜಿ.ಎನ್. ಮಠಪತಿ, ಗಿರೀಶ ಪದಕಿ, ಉಮಾದೇವಿ ಬಸಾಪೂರ ಅವರು ತಮ್ಮ ತಾಲೂಕುಗಳ ವಿದ್ಯಾಗಮ ಪ್ರಗತಿ ವಿವರಿಸಿದರು. ಡಯಟ್ ಹಿರಿಯ ಉಪನ್ಯಾಸಕರುಗಳಾದ ಉಮಾ ಬರಗೇರ, ವೈ.ಬಿ. ಬಾದವಾಡಗಿ, ಪಾರ್ವತಿ ವಸ್ತçದ, ಶಿವಾನಂದ ಮಲ್ಲಾಡದ, ಜೆ.ಜಿ. ಸೈಯ್ಯದ, ಜಿಲ್ಲೆಯ ಬಿ.ಆರ್.ಸಿ. ಸಮನ್ವಯಾಧಿಕಾರಿಗಳು, ವಿಷಯ ಪರಿವೀಕ್ಷಕರು, ಡಯಟ್ ಉಪನ್ಯಾಸಕರು, ಬಿ.ಆರ್.ಪಿ., ಸಿ.ಆರ್.ಪಿ. ಇದ್ದರು.
ಆರಂಭದಲ್ಲಿ ಡಯಟ್ ಉಪನ್ಯಾಸಕಿ ವಿಜಯಲಕ್ಷಿö್ಮ ಹಂಚಿನಾಳ ಅವರು ಜಿಲ್ಲೆಯ ವಿದ್ಯಾಗಮ ಪ್ರಗತಿಯ ಪಿಪಿಟಿ ನಿರೂಪಿಸಿ ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿ ಉಪನಿರ್ದೇಶಕ ಅಬ್ದುಲ್ ವಾಜೀದ್ ಖಾಜಿ ಸ್ವಾಗತಿಸಿದರು. ಡಿಡಿಪಿಐ ಮೋಹನಕುಮಾರ ಹಂಚಾಟೆ ವಂದಿಸಿದರು. ರಾಜ್ಯ ಮಟ್ಟದಲ್ಲಿ ಸಾ.ಶಿ. ಇಲಾಖೆಯ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿರುವ ಮಮತಾ ನಾಯಕ ಅವರನ್ನು ಡಯಟ್ ಉಪನ್ಯಾಸಕಿಯರ ಪರವಾಗಿ ಗೌರವಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.