ಬಂಟ್ವಾಳ, ಸೆ. 22, 2020 (ವಿಶ್ವಕನ್ನಡಿಗ ನ್ಯೂಸ್) : ಬಡವರ, ಕೂಲಿ ಕಾರ್ಮಿಕರ, ರೈತರ, ಕೃಷಿಕರ, ನೆರೆಪೀಡಿತರ ಹಾಗೂ ಜನಸಾಮಾನ್ಯರ ಪರ ಯಾವುದೇ ಯೋಜನೆಗಳನ್ನು ಪ್ರಕಟಿಸದ ರಾಜ್ಯ ಸರಕಾರದ ವಿರುದ್ದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಮಂಗಳವಾರ ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಯೂ ಬಿಜೆಪಿಯದ್ದೇ ನೇತೃತ್ವದ ಸರಕಾರವಿದ್ದರೂ ಯಾವುದೇ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗದಿದ್ದರೆ ಇನ್ಯಾವಾಗ ಈ ಬಿಜೆಪಿಗರು ಜನ ಸಾಮಾನ್ಯರ ಪರವಾಗಿ ಕೆಲಸ ಮಾಡುವುದು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಕೇವಲ ಜಾಹೀರಾತು, ಪ್ರಚಾರ, ಅಪಪ್ರಚಾರಗಳಿಂದಲೇ ಬಿಜೆಪಿಗರು ಸರಕಾರ ನಡೆಸುತ್ತಿದ್ದಾರೆ ಹೊರತು ಜನ ಸಾಮಾನ್ಯರ ಮೇಲೆ ಕಿಂಚಿತ್ತೂ ಕರುಣೆ ತೋರುತ್ತಿಲ್ಲ ಎಂದು ಆಪಾದಿಸಿದರು. ಜಿಲ್ಲೆಯ ಸಂಸದರು ಒಮ್ಮೆ 2 ಸಾವಿರ ರೂಪಾಯಿಗೆ ಮನೆ ಬಾಗಿಲಿಗೆ ಲೋಡ್ ಮರಳು ತಲುಪಿಸುತ್ತೇನೆ ಎನ್ನುತ್ತಾರೆ. ಬಳಿಕ ಜನರಿಂದ ಟ್ರೋಲ್ ಆದ ಬಳಿ ವರಸೆ ಬದಲಿಸಿ ಹೇಳಿಕೆ ನೀಡುತ್ತಾರೆ ಎಂದು ಝಾಡಿಸಿದ ರೈ ಕೇವಲ ಘೋಷಣೆಗಳಿಂದಲೇ ಬಿಜೆಪಿ ಸರಕಾರ ದಿನದೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ, ಪ್ರಮುಖರಾದ ಕೆ ಮಾಯಿಲಪ್ಪ ಸಾಲಿಯಾನ್, ವಿನಯ್ ಕುಮಾರ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಮುಹಮ್ಮದ್ ನಂದರಬೆಟ್ಟು, ಲುಕ್ಮಾನ್ ಬಿ ಸಿ ರೋಡು, ಶರೀಫ್ ಶಾಂತಿಅಂಗಡಿ, ಸುದರ್ಶನ್ ಜೈನ್, ಮುಹಮ್ಮದ್ ನಂದಾವರ, ಜಿ ಎಂ ಇಬ್ರಾಹಿಂ ಮಂಚಿ, ವೆಂಕಪ್ಪ ಪೂಜಾರಿ, ಜಗದೀಶ್ ಕುಂದರ್, ಜೆಸಿಂತಾ ಡಿ’ಸೋಜ, ಐಡಾ ಸುರೇಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.