ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ):ಪ್ರಧಾನ ಮಂತ್ರಿಗಳ ಕಿರು ಅಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯು ಬುಧವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.ಕೃಷಿ ಇಲಾಖೆಯ (ಆಹಾರ, ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ) ವಿಶೇಷ ಕಾರ್ಯದರ್ಶಿ ಡಾ. ಆರ್. ಮನೋಜ್ ಮಾತನಾಡಿ, ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದರಲ್ಲಿ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ದಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಉದ್ಯಮಿಗಳು, ವೈಯಕ್ತಿಕ ಉದ್ದಿಮೆಗಳಿಗೆ, ಮಾಲಿಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳಿಗೆ ಸಾಲ ಸಂಪರ್ಕಿತ ಶೇ.35 ರಷ್ಟು ಕೇಂದ್ರ ಸರ್ಕಾರದ ಸಹಾಯಧನ ಜೊತೆಗೆ ರಾಜ್ಯಸರ್ಕಾರದಿಂದ ಹೆಚ್ಚುವರಿ ಶೇ. 15 ಸಹಾಯ ಧನ, ಗರಿಷ್ಟ ರೂ. 15 ಲಕ್ಷಗಳು ಅಥವಾ ಶೇ 50% (ಯಾವುದು ಕಡಿಮೆಯೋ ಅದನ್ನು) ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.ಪ್ರಸ್ತುತ ಯೋಜನೆಯ ಮಾರ್ಗಸೂಚಿಯನ್ನು ಸರಳೀಕರಣ ಮಾಡಲಾಗಿದ್ದು, ಎಲ್ಲಾ ಉತ್ಪನ್ನಗಳಲ್ಲಿಯೂ ಹೊಸ ಮತ್ತು ಹಳೆ ಘಟಕಗಳ ಉನ್ನತೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ.ಜಿಲ್ಲೆಯಲ್ಲಿ ಯೋಜನೆಗೆ ಸಾಕಷ್ಟು ಅವಕಾಶಗಳಿದ್ದು, ತೆಂಗಿನ ಎಣ್ಣೆ ತಯಾರಿಕೆ, ಒಣಮೀನು ತಯಾರಿಕೆ, ಬೇಕರಿ ಉತ್ಪನ್ನಗಳು, ಹಪ್ಪಳ ತಯಾರಿಕೆ, ಸಾಗರೋತ್ಪನ್ನ ಉತ್ಪನ್ನಗಳು, ಮಸಾಲ ಪದಾರ್ಥಗಳು, ಹಾಲಿನ ಉತ್ಪನ್ನಗಳು, ತೆಂಗಿನ ಸಂಸ್ಕರಣಾ ಘಟಕ ಬೇಕರಿ ಉತ್ಪನ್ನಗಳಿಗೆ ವಿಫುಲವಾದ ಅವಕಾಶವಿದ್ದು, ರೈತರು ಮತ್ತು ಉದ್ದಿಮೆದಾರರು ಈ ಯೋಜನೆಯ ನೆರವನ್ನು ಪಡೆದು ಸ್ವ-ಉದ್ಯಮವನ್ನು ಸ್ಥಾಪಿಸಬಹುದಾಗಿದೆ ಎಂದರು.ಈ ಯೋಜನೆಯಡಿ ಪ್ರಸಕ್ತ ಸಾಲಿಗೆ ಜಿಲ್ಲೆಗೆ 225 ಘಟಕಗಳ ಸ್ಥಾಪನೆಗೆ ಗುರಿ ನೀಡಲಾಗಿದ್ದು, ಆಸಕ್ತ ಉದ್ದಿಮೆದಾರರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟಿ ಮೊ: 9019075051 ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.ಸಭೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ. ಹೆಚ್ ಬಂಥನಾಳ, ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ.ಸಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಸಭೆಯ ನಂತರ ಅಧಿಕಾರಿಗಳು ಯೋಜನೆಯಡಿ ಸ್ಥಾಪಿಸಲಾದ ವಿವಿಧ ಘಟಕಗಳಿಗೆ ಭೇಟಿ ನೀಡಿದರು. -ಉಡುಪಿ ವಾರ್ತಾಭವನ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.