(www.vknews.in) : ನನ್ನ ಫ್ರೆಂಡತಿ ರಮಾಶಾಕ್ಯ ಜೊತೆಯಲ್ಲಿ “ಕಾಟೇರ” ಸಿನಿಮಾ ನೋಡಿ ಬಂದೆ. ತಾಯಿ ತನ್ನ ಮಗುವಿಗೆ ತೆರೆದ ಎದೆಯಿಂದ ಹಾಲೂಡುವುದನ್ನು ಯಾರೊಬ್ಬರೂ ಅಪವಿತ್ರ ಭಾವನೆಯಿಂದ ನೋಡದಿರುವ ಮೌಲ್ಯಪ್ರಜ್ಞೆಯೊಂದು ಬದುಕಿನ ವಾಸ್ತವ ನಡೆಯಾಗಿದ್ದ ಕಾಲಘಟ್ಟದ ಸಿನಿಮಾ “ಕಾಟೇರ”. ಜನಪದರ ಇಂತಹ ಮೌಲ್ಯಪ್ರಜ್ಞೆಯು ನಾಶವಾದ ವ್ಯಕ್ತಿ ಮಾರನು, ಕಥಾನಾಯಕನ ಅಕ್ಕನ ಎದೆಯ ಹಾಲು ಮತ್ತು ಹಾಲೂಡುವ ಎದೆಯನ್ನು ನೋಡಬೇಕೆಂದು ಕಣ್ಣು ಮಡಗಿದ ಕಾರಣದಿಂದ ಮಾರನ ಕಣ್ಣುಗುಡ್ಡೆಯನ್ನು ಬೆರಳಿನಿಂದ ಕಿತ್ತು ಬಿಸಾಕಿಬಿಡುತ್ತಾನೆ ಕಾಟೇರ. ಪವಿತ್ರವಾದ ಮೌಲ್ಯಪ್ರಜ್ಞೆಯನ್ನು ಕಳೆದುಕೊಂಡವನ ವಿರುದ್ಧ ನಾಯಕನು ವಿಧಿಸುವ ಶಿಕ್ಷೆ ಇದು.
ಶ್ರೀ ಡಿ.ದೇವರಾಜ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ”ಉಳುವವನೇ ಹೊಲದೊಡೆಯ” ಎಂಬ ಭೂಸುಧಾರಣಾ ಕಾನೂನು, ಜಮೀನ್ದಾರಿ ಪದ್ಧತಿಯ ವಿರುದ್ಧ ಗೇಣಿದಾರರು, ಭೂಮಿಯ ಹಕ್ಕಿಗಾಗಿ ಒತ್ತಾಯಿಸಿ ನಡೆಸುವ ಹೋರಾಟಕ್ಕೆ ದಾರಿ ಮಾಡಿಕೊಟ್ಟು ಭೂಮಾಲೀಕರ ಅಹಂಕಾರವನ್ನು ಭಂಜಿಸುತ್ತದೆ. ಕಥಾನಾಯಕ ಪ್ರೀತಿಸಿದ ಜಮೀನ್ದಾರರ ಮಗಳೇ ಗೇಣಿದಾರರಾಗಿದ್ದ ರೈತಾಪಿಗಳ ಹೋರಾಟಕ್ಕೆ ಬೆಳಕಿನ ದೊಂದಿಯಾಗುತ್ತಾಳೆ. ಶತಮಾನಗಳ ಕಾಲ ಬಡವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಣೆ ಮಾಡಿದ ಮೇಲ್ಜಾತಿಯ ಶೋಷಕರು ಪ್ರಾಯಶ್ಚಿತ್ತ ಮತ್ತು ಆತ್ಮಪಾವಿತ್ರೀಕರಣ ಮಾಡಿಕೊಳ್ಳಲು ಪ್ರೀತಿಯೊಂದೇ ಆಸರೆ ಎಂಬುದನ್ನು ಕಥಾನಾಯಕಿಯ ಪಾತ್ರ ಸಂಕೇತಿಸುತ್ತದೆ. ಅವಳ ಪ್ರೀತಿಯ ಕಾರಣವಾಗಿಯೇ ಕಥಾನಾಯಕ ಭೂಸುಧಾರಣಾ ಚಳುವಳಿಯ ಹಸಿರು ಒಲ್ಲಿಯ ನಾಯಕನಾಗುತ್ತಾನೆ. ಹಸಿರು ಒಲ್ಲಿಯ ಘನತೆಯನ್ನು ಎತ್ತಿ ಹಿಡಿಯುತ್ತದೆ “ಕಾಟೇರ”.
ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಕಲೆ ಮನರಂಜನೆಯ ಸಾಂಸ್ಕೃತಿಕ ಆಸರೆ ಮಾತ್ರವಲ್ಲದೆ ಜೀವನ ಪ್ರೀತಿಯನ್ನು ಮೂಡಿಸುವ ಜೀವಸೆಲೆ. ಚೊಂಗಲ ಎಂಬ ಮಾತು ಬಾರದ ಮೂಗನು, ರಂಗಮಂಚದ ಮೇಲೆ ಹಿರಣ್ಯ ಕಶ್ಯಪನ ಪಾತ್ರವನ್ನು ಅಭಿನಯಿಸಿದ ಪ್ರಸಂಗ ಗ್ರಾಮೀಣ ರಂಗಕಲೆಯನ್ನು ಸಶಕ್ತವಾಗಿ ತೋರಿಸಿಕೊಟ್ಟಿದೆ.
ಭೀಮನಹಳ್ಳಿ ಎಂಬ ಗ್ರಾಮದ ಕುಲುಮೆ ಕಮ್ಮಾರನಾಗಿ ಕೃಷಿಕರಿಗೆ ಅಗತ್ಯವಾದ ವ್ಯವಸಾಯದ ಪರಿಕರಗಳು ಮತ್ತು ಆಯುಧಗಳನ್ನು ತಯಾರಿಸಿ ಕೊಡುವ ಕಾಟೇರ, ಜಮೀನ್ದಾರಿಗಳ ಕ್ರೌರ್ಯ ಮತ್ತು ಜಾತಿಯ ಆಚರಣೆಯ ವಿರುದ್ಧ ನಿಂತು, ತನ್ನೂರಿನ ಎಲ್ಲರ ತಲೆಕಾಯುವ ಆಯುಧವೇ ಆಗುತ್ತಾನೆ. ಇವಿಷ್ಟು ಮಾತ್ರ ಸದ್ಯಕ್ಕೆ ನಾನು ಗುರುತಿಸುವ ಧನಾತ್ಮಕ ಅಂಶಗಳು. —————
ಉಳುವವನೇ ಭೂಮಿಯ ಒಡೆಯನೆಂದು ಭೂಸುಧಾರಣಾ ಕಾನೂನನ್ನು ಜಾರಿಗೆ ತಂದ ಸನ್ಮಾನ್ಯ ಶ್ರೀ ಡಿ.ದೇವರಾಜ ಅರಸ್ ಮತ್ತು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಫೋಟೋ ಅಥವಾ ಪ್ರತಿಮೆ ಎಲ್ಲಿಯೂ ತೋರಿಸುವುದಿಲ್ಲ.
“ಭೂಮಿಯ ರಾಷ್ಟ್ರೀಕರಣದ ಪ್ರಶ್ನೆ ಮತ್ತು ಅಸ್ಪೃಶ್ಯತೆಯ ನಿವಾರಣೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಜಮೀನ್ದಾರಿ ಜಾತಿಗಳು ಮತ್ತು ಅಸ್ಪೃಶ್ಯತೆ ವಿರುದ್ಧ ಬಹುದೊಡ್ಡ ಚಳವಳಿ ಹೂಡಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್. ಅಂಬೇಡ್ಕರ್ ಅವರ ಚಳವಳಿಯ ಸ್ಮರಣೆಯ ಯಾವುದೇ ಒಂದು ಮಾತು “ಕಾಟೇರ” ಸಿನಿಮಾದಲ್ಲಿ ಸುಳಿಯುವುದಿಲ್ಲ.
ಅಂಬೇಡ್ಕರೋತ್ತರ ಕರ್ನಾಟಕದಲ್ಲಿ ರೈತ ಚಳವಳಿಯನ್ನು ರೂಪಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನಿಜಾರ್ಥದಲ್ಲಿ ಹಸಿರು ಒಲ್ಲಿಗಳ ಪಾಲಿನ ಮಹಾಗುರು. ಅವರನ್ನು ನೆಪ ಮಾತ್ರಕ್ಕೂ ನೆನಪು ಮಾಡಿಕೊಂಡಿಲ್ಲ. ಜಮೀನ್ದಾರಿಗಳ ಅಟ್ಟಹಾಸ ಮತ್ತು ಜಾತಿ ಶೋಷಣೆಯ ವಿರುದ್ಧ ಬಹುದೊಡ್ಡ ಹೋರಾಟ ನಡೆಸಿದ್ದು ಪ್ರೊ.ಬಿ.ಕೃಷ್ಣಪ್ಪನವರ ನಾಯಕತ್ವದಲ್ಲಿ ಮೂಡಿಬಂದ ಡಿಎಸ್ಎಸ್ ಎಂಬುದನ್ನು ಯಾರೂ ಮರೆಯುವಂತಿಲ್ಲ. ದಲಿತ ಚಳವಳಿಯ ನೆನಪಿನ ಯಾವುದೇ ಒಂದು ಸಣ್ಣ ಬಿಂಬವೂ “ಕಾಟೇರ” ಸಿನಿಮಾದಲ್ಲಿ ಕಾಣಿಸುವುದಿಲ್ಲ.
ಇಂತಹ ಮಹಾಮಹಿಮರ ಲೇಶಮಾತ್ರ ನೆನಪುಗಳಿಲ್ಲದ ಈ ಸಿನಿಮಾ, ಇದೇ ಸಿನಿಮಾದಲ್ಲಿ ಚಿತ್ರಿಸಿರುವ ಅಸ್ಥಿಪಂಜರಗಳಂತೆ ನಿರ್ಜೀವವಾದ ಮತ್ತು ಕೇವಲ ತೋರಿಕೆಯ ಸಾಮಾಜಿಕ ಕಾಳಜಿಯ ಹಾಗೂ ಪ್ರೇಕ್ಷಕರ ಹಣ ದೋಚಲೆಂದೇ ಸೂತ್ರ ಹೆಣೆದು ನಿರ್ಮಿಸಿರುವ ಚಲನಚಿತ್ರವೇ ಹೊರತು ಬೇರಲ್ಲ. ಹಾಗಾಗಿಯೇ ಜನಪ್ರಿಯ ನಾಯಕನಟ ದರ್ಶನ್ ಗೆ ಕಮ್ಮಾರನ ಪಾತ್ರ ಕೊಟ್ಟು, ಕೈಗೆ ಮಚ್ಚು ಕೊಟ್ಟು ರಕ್ತದ ಕೋಡಿ ಹರಿಸಲಾಗಿದೆ. ಜಮೀನ್ದಾರಿ ಪದ್ಧತಿ ಮತ್ತು ಜಾತಿ ಪದ್ದತಿಯ ವಿರುದ್ಧ ಹೋರಾಟ ನಡೆಸಿದ ನಾಯಕರನ್ನು ಮರೆತು ಚಿತ್ರಿಸಿರುವ ಈ ಸಿನಿಮಾ, ಸಾಮಾಜಿಕ ಪರಿಣಾಮ ಬೀರುವ ದೃಷ್ಟಿಯಿಂದ ಹೇಳುವುದಾದರೆ ಹುಲಿ ಅಥವಾ ಸಿಂಹದ ನಕಲಿ ಚರ್ಮಕ್ಕೆ ಹೊಟ್ಟು ತುಂಬಿ ನಿಲ್ಲಿಸಿದ ಗೊಂಬೆಯಂತೆ ಕಾಣಿಸುತ್ತದೆ. ~~~~~~
“ಹೊಲೆಮಾರಿ” ಹಾಗೆಂದರೇನು ? ——————————————
ಊರಮಾರಮ್ಮನ ಪರಿಶೆಯಲ್ಲಿ ಮಾರಿ ದೇವತೆಗೆ ತಳಾರನು ಪಟ್ಟದ ಕೋಣವನ್ನು ಬಲಿ ಹೊಡೆದ ಬಳಿಕ, ನೆತ್ತರು ಸೋರುವ ಕಟುಗತ್ತಿಯನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿ ಹಿಡಿದುಕೊಂಡು, ‘ಕೋ ಬಲಿ’ ‘ಕೋ ರಣಬಲಿ’ ಎಂದು ಕೂಗುತ್ತಾ, ಊರಿನ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಓಟ ಓಡಿಹೋಗುತ್ತಾನೆ. ಕೋಣದ ನೆತ್ತರು, ಜಠರದ ಕಲೀಜ ಕರ್ಸದಲ್ಲಿ ಮತ್ತು ಮೊಸರಿನಲ್ಲಿ ದೇವರ ಎಡೆಯನ್ನವನ್ನು ಮಡಕೆಯಲ್ಲಿ ಕಲೆಸಿಕೊಂಡು ಕೋರುಮಗನು (ತೋಟಿ) ಊರಿನ “ಹೊಲಮೇರೆ” ಸುತ್ತಲೂ ಮೂರು ಸುತ್ತು ಚರಗ ಚೆಲ್ಲಬೇಕು. ಆಗ ಕೋರುಮಗನ ಮೈಮೇಲೆ ಸೊಂಟದ ಉಡುದಾರಕ್ಕೆ ಸಿಕ್ಕಿಸಿದ ಲಂಗೋಟಿ ಹೊರತಾಗಿ ಯಾವುದೇ ವಸ್ತ್ರ ಇರುವುದಿಲ್ಲ. ಊರಿನ ಸುತ್ತಲ ಹೊರ ಅಂಚನ್ನು “ಹೊಲಮೇರೆ” (ಊರಿನ ಸರಹದ್ದು) ಎಂದು ಕರೆಯುತ್ತಾರೆ.
ಕಟುಗತ್ತಿ ಹಿಡಿದ ತಳಾರ ಮತ್ತು ಚರಗ ಚೆಲ್ಲುವ ಕೋರುಮಗನ (ತೋಟಿ) ಹಿಂದೆ ಗ್ರಾಮದ ಕಡ್ಟಾಳು ಗಂಡಸರು, ‘ಕೋ ಬಲಿ’ ‘ಕೋ ರಣಬಲಿ’ ಎಂದು ಕೇಕೆ ಹಾಕುತ್ತಾ ಓಡುತ್ತಾರೆ. ತಮಟೆ ನಗಾರಿ ಭೇರಿ ಮುಂತಾದ ವಾದ್ಯಗಳನ್ನು ನುಡಿಸುತ್ತಾ ಕ್ಯಾಕಾಕುತ್ತಾ ಜನ ಹಿಂಬಾಲಿಸುತ್ತಾರೆ. ಊರಿನ ಸುತ್ತಲೂ ಮರಳೆರಚಿದಂತೆ ಇಟ್ಟಾಡಿಕೊಂಡು ಚರಗದ ಅನ್ನವನ್ನು ಎರಚಬೇಕು. ಹಾವು ಹಲ್ಲಿ ಕೂಡಾ ಊರಿನೊಳಕ್ಕೆ ನುಸುಳದಂತೆ, ಊರಂಚಿನ ಮನೆಗಳ ಗೋಡೆಗಳಿಗೆ ಹೊಂದಿಕೊಂಡ boundary line-ನ ಭೂಮಿಯ ಇಂಚಿಂಚೂ ನೆಲದ ಮೇಲೆ ಚರಗದ ಅನ್ನದ ಅಗುಳುಗಳು ಚೆಲ್ಲಾಡಿರಬೇಕು. ಹೊಲಮೇರೆಯ ಅಂಚಿನಲ್ಲಿರುವ ಮನೆಗಳ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಬಸುರಿ ಬಾಣ್ತಿ ಮಕ್ಕಳು ಮುಪ್ಪಾದವರು ಮತ್ತು ಕೈಲಾಗದವರು ಮನೆಯೊಳಗಿರಬೇಕೇ ಹೊರತು ನರಪಿಳ್ಳೆ ಮನೆಯಾಚೆಗೆ ಬರುವಂತಿಲ್ಲ. ಇನ್ನುಳಿದ ಜನ ಮಾರಿಗುಡಿಯ ಮುಂದ್ಲಾರದಲ್ಲಿ ಇರಬೇಕೇ ಹೊರತು ಎತ್ತಲೂ ಸುತ್ತಮುತ್ತಲು ಸುಳಿಯಕೂಡದು. ಇದು ನಿಯಮ.
ಹೀಗೆ ಊರಿನ ಹೊಲಮೇರೆ ಸುತ್ತಲೂ ಮೂರು ಸುತ್ತು ಚರಗ ಚೆಲ್ಲಿದ ನಂತರ, ಮಾರಿದೇವತೆಗೆ ಬಲಿಯಾದ ಪಟ್ಟದ ಕೋಣದ ನೆತ್ತರು, ಎಡೆಯನ್ನ, ಅಕ್ಕಸಾಲಿಗ ತಿದ್ದಿಕೊಟ್ಟ ಕೋಣಸಹಿತವಾದ ಮಾರಿಯ ಗೊಂಬೆಯನ್ನು (ಪ್ರತಿಕೃತಿ) ಹೊಸಮೊರ ಅಥವಾ ಹೊಸ ಹೆಡಿಗೆಯಲ್ಲಿರಿಸಿ ಊರಾಚೆಯ ಗಡಿಬಾಂದಿನ ಬೇಲಿಯ ಅಥವಾ ಪೊದೆಯ ಮರೆಯಲ್ಲಿರಿಸಬೇಕು. ಇದನ್ನು ಹೊಲಮೇರೆಯಾಚೆಗೆ ಮಾರಿಯನ್ನು ಸಾಗ್ಹಾಕುವುದು (ಕಳಿಸಿಕೊಡುವುದು) ಎನ್ನುತ್ತಾರೆ.
ಹೀಗೆ ಸಾಗಹಾಕಿದ ಮಾರಿಯ ಸಂಕೇತಗಳನ್ನು ಬೇರೆ ಊರಿನ ಯಾರಾದರೂ ಮೀಸೆಮಿಂಡಾಳುಗಳು ಬಂದು ತಮ್ಮ ಊರಿಗೆ ಹೊತ್ತೊಯ್ದರೆ, ಹಾಗೆ ಹೊತ್ತೊಯ್ದ ಊರಿಗೆ ಸಿರಿ ಬರುತ್ತದೆಂದೂ ಮಾರಿಜಾತ್ರೆ ನಡೆಸಿದ ಊರಿನವರಿಗೆ ಕೇಡು ಸಂಭವಿಸುವುದೆಂದೂ ಗ್ರಾಮೀಣ ಜನರಲ್ಲಿ ನಂಬಿಕೆ ಇದೆ. ಆದುದರಿಂದಲೇ ಜಾತ್ರೆ ನಡೆಸಿದ ಊರಿನವರು, ಪರ ಊರಿನ ಯಾರೊಬ್ಬರೂ ಮಾರಿದೇವತೆಯ ಸಂಕೇತಗಳನ್ನು ಹೊತ್ತೊಯ್ಯದಂತೆ ರಕ್ಷಿಸಲು ಹೊಲಮೇರೆಯಾಚೆ ಆಯುಧಗಳನ್ನು ಹಿಡಿದು ಬೆಳಕಾಗುವವರೆಗೂ ಕಣ್ಗಾವಲಿದ್ದು ಕಾಯುತ್ತಾರೆ. ಬೇರೆ ಊರಿನ ಗುಂಡಿಗೆ ಇರುವ ಗಂಡಸರು ಬಂದು ಹೊತ್ತೊಯ್ಯಲೂಬಹುದು. ಕೋಣದ ಬಲಿಯ ಪದ್ದತಿಯನ್ನು ಅನುಸರಿಸುವ ಯಾವುದೇ ಶಕ್ತಿದೇವತೆಯ ಜಾತ್ರೆಯಲ್ಲಿ “ಹೊಲಮೇರೆ” ಚರಗ ಚೆಲ್ಲುವ ಅಥವಾ ಸರಗು ಹಾಕುವ ಸಂಪ್ರದಾಯ ನಮ್ಮ ಕೊರಟಗೆರೆ- ಮಧುಗಿರಿ ಸೀಮೆಯಲ್ಲಿ ಆಚರಣೆಯಲ್ಲಿತ್ತು.
ಚರಗ ಚೆಲ್ಲುವ (ಸರಗು ಹಾಕುವ) ಮತ್ತು ಮಾರಿದೇವತೆಯ ಪ್ರತಿಕೃತಿಯನ್ನು ಊರಾಚೆಗೆ ಸಾಗುಹಾಕುವ ಈ ಆಚರಣೆಯನ್ನು “ಕಾಟೇರ” ಸಿನಿಮಾದಲ್ಲಿ “ಹೊಲೆಮಾರಿ” ಎಂದು ಹೇಳಲಾಗಿದೆ. ವಾಸ್ತವವಾಗಿ ದಲಿತನೊಬ್ಬ ತನ್ನ ಜಾತಿಯನ್ನು ಬಚ್ಚಿಟ್ಟುಕೊಂಡು, ಬ್ರಾಹ್ಮಣರ ಶ್ರೀ ಬಾಲಗೌರಿ ಎಂಬ ಹುಡುಗಿಯನ್ನು ಮದುವೆಯಾಗುತ್ತಾನೆ. ಅವರಿಗೆ ಐದು ಜನ ಗಂಡುಮಕ್ಕಳಾಗುತ್ತಾರೆ. ಗಂಡನ ತಾಯಿಯಿಂದ ಜಾತಿಯ ಗುರುತು ಬಹಿರಂಗವಾಗುತ್ತದೆ. ಶ್ರೀ ಬಾಲಗೌರಿಯು ಮಾರಿಯಾಗಿ ಗಂಡ ಮತ್ತು ತನ್ನ ನಾಲ್ವರು ಮಕ್ಕಳನ್ನು ಕೋಣಗಳ ರೂಪದಲ್ಲಿ ಬಲಿ ತೆಗೆದುಕೊಳ್ಳುತ್ತಾಳೆ. ಕೊನೆಯ ಕಿರಿಯ ಮಗನೇ ಕೋರುಮಗ. ಅವನು ಈ ಕಥೆಯ ವಾರಸುದಾರನಾಗಿ ಬ್ರಾಹ್ಮಣರ ಹುಡುಗಿಯನ್ನು ದಲಿತರೇನಾದರೂ ಮದುವೆಯಾದರೆ ಹೀಗೆ ಕೋಣಗಳಾಗಿ ಬಲಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ದಲಿತರಿಗೆ ರವಾನಿಸುತ್ತಾನೆ. ಇದು ಹೊಲಮೇರೆ ಚರಗದ ಮೂಲ ಐತಿಹ್ಯ.
— ಡಾ.ವಡ್ಡಗೆರೆ ನಾಗರಾಜಯ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.