ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು “ಲಾಕ್ಡೌನ್ ಫ್ಯಾಶಿಸಂ: ಗುಪ್ತ ಅಜೆಂಡಾವನ್ನು ಕಳಚಿ” ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಆನ್ಲೈನ್ ಕಾನ್ಫರೆನ್ಸ್ನ ನೇರ ಪ್ರಸಾರವನ್ನು ಹತ್ತಾರು ಸಾವಿರ ಅಂತರ್ಜಾಲ ಬಳಕೆದಾರರು ವೀಕ್ಷಿಸಿದರು. ಈ ಸಮ್ಮೇಳನವನ್ನು ಕೇಂದ್ರ ಸರಕಾರವು ನಡೆಸುತ್ತಿರುವ ಕೊರೋನ ಲಾಕ್ಡೌನ್ ದುರ್ಬಳಕೆಯನ್ನು ಬಹಿರಂಗಪಡಿಸಲು ಆಯೋಜಿಸಲಾಗಿತ್ತು.
ಅದೇ ರೀತಿ ಇದು ಸರಕಾರವು ತನ್ನ ಆಡಳಿತಾತ್ಮಕ ಕ್ರಮಗಳನ್ನು ತೀವ್ರಗೊಳಿಸಲು ಮತ್ತು ಲಾಕ್ಡೌನ್ನಿಂದಾಗಿ ದೇಶಾದ್ಯಂತ ಸಿಲುಕಿರುವ ಲಕ್ಷಾಂತರ ಬಡ ಜನರ ದುಸ್ಥಿತಿಯ ಕುರಿತು ಅಧಿಕಾರಿಗಳ ಗಂಭೀರ ಉಪೇಕ್ಷೆಯತ್ತ ನಾಗರಿಕರ ಗಮನ ಆಕರ್ಷಿಸುವ ಉದ್ದೇಶವನ್ನೂ ಹೊಂದಿತ್ತು.
ಅಧ್ಯಕ್ಷೀಯ ಭಾಷಣಗೈದ ಸಂಘಟನೆಯ ಚೆಯರ್ಮೆನ್ ಓ.ಎಂ.ಎ. ಸಲಾಂ, ಲಾಕ್ಡೌನ್ ಸಂದರ್ಭದಲ್ಲಿ ಇಡೀ ಜಗತ್ತು ವೈರಸ್ನೊಂದಿಗೆ ಹೋರಾಟ ನಡೆಸುತ್ತಿದ್ದರೆ, ಭಾರತವು ಕೊರೋನ ವೈರಸ್ ಮತ್ತು ಕೋಮು ವೈರಸ್ನೊಂದಿಗೆ ಹೋರಾಟ ನಡೆಸುತ್ತಿದೆ. ಖಂಡಿತವಾಗಿಯೂ ಕೋಮು ವೈರಸ್ ದೇಶಕ್ಕೆ ಅತ್ಯಂತ ಮಾರಕವಾಗಿದೆ. ಪ್ರಸಕ್ತವಿರುವಂತಹ ಜನವಿರೋಧಿ ಸರಕಾರವನ್ನು ನಾವು ಯಾವತ್ತೂ ಕಂಡಿಲ್ಲ. ಬಡ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳು ಸಂಕಷ್ಟ ಅನುಭವಿಸುತ್ತಿರುವಾಗ, ಸರಕಾರವು ಕಾರ್ಪೊರೇಟ್ ಲೂಟಿಕೋರರು ದೊಡ್ಡ ಮಟ್ಟದ ಸಾಲವನ್ನು ಮನ್ನಾ ಮಾಡುತ್ತಿದೆ. ಮುಸ್ಲಿಮ್ ಸಮುದಾಯವನ್ನು ರೋಗ ಹರಡುವವರು ಎಂದು ಚಿತ್ರೀಕರಿಸುವ ಮಾಧ್ಯಮವು, ಜನರ ನಡುವೆ ಅಸ್ಪೃಶ್ಯರ ಒಂದು ಹೊಸ ವರ್ಗವನ್ನು ಸೃಷ್ಟಿಸುತ್ತಿದೆ.
ಸರಕಾರವು ಎನ್ಆರ್ಸಿ-ಎನ್ಪಿಆರ್-ಸಿಎಎ ಪ್ರತಿಭಟನಕಾರರನ್ನು ಯುಎಪಿಎ ನಿಬಂಧನೆಗಳ ಅಡಿಯಲ್ಲಿ ಬಂಧಿಸುವ ಮೂಲಕ ತನ್ನ ಗುಪ್ತ ಕಾರ್ಯಸೂಚಿಗಾಗಿ ಲಾಕ್ಡೌನ್ ಅನ್ನು ಬಳಸುತ್ತಿದೆ. ಅದೇ ವೇಳೆ ದಿಲ್ಲಿಯಲ್ಲಿ ಮುಸ್ಲಿಮ್ ಹತ್ಯಾಕಾಂಡವನ್ನು ರೂಪಿಸಿದ ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ದೇಶದ ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ರಕ್ಷಿಸಲು ತಮ್ಮ ಧ್ವನಿ ಎತ್ತಲು ಒಗ್ಗೂಡಬೇಕೆಂದು ಪಕ್ಷಗಳು, ನಾಗರಿಕ ಹಕ್ಕುಗಳ ಸಂಘಟನೆಗಳನ್ನು ಅವರು ಆಗ್ರಹಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಮುಖ್ಯ ವಿಷಯವನ್ನು ಮಂಡಿಸಿದರು. ಲಾಕ್ಡೌನ್ ಮೂಲಕ ಇಡೀ ದೇಶವನ್ನು ತಡೆಹಿಡಿಯಲಾಗಿದ್ದರೆ, ಫ್ಯಾಶಿಸಂ ಯಾವುದೇ ನಿರ್ಬಂಧವಿಲ್ಲದೆ ಕಾರ್ಯಾಚರಿಸುತ್ತಿದೆ. ಈ ನಿಟ್ಟಿನಲ್ಲಿ ಸಂಘಟನೆಯು ಈ ಸಮಾವೇಶವನ್ನು ಆಯೋಜಿಸಿದೆ. ಜನರ ಧ್ವನಿಗಳನ್ನು ಹಿಸುಕಲಾಗಿದೆ; ನಾಝಿ ಜರ್ಮನಿಯಂತೆ ಸರಕಾರದ ನಿರೂಪಣೆಯನ್ನು ಮಾತ್ರ ಕೇಳಲು ಅನುಮತಿಸಲಾಗಿದೆ.
ಮನೆಗಳಿಗೆ ಹಿಂದಿರುಗಲು ಅನುಮತಿಸುವಂತೆ ತಮ್ಮ ಮೂಲಭೂತ ಹಕ್ಕುಗಳನ್ನು ಕೇಳುತ್ತಿರುವ ಕಾರ್ಮಿಕರನ್ನು ದೇಶದ ಶತ್ರುಗಳಂತೆ ಪ್ರಸ್ತುತಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಆದಾಗ್ಯೂ ಫ್ಯಾಶಿಸಂ ಎಷ್ಟೇ ಶಕ್ತಿಶಾಲಿಯಾಗಿ ಕಂಡು ಬಂದರೂ, ಅವರು ಅಜೇಯರಲ್ಲ ಎಂಬುದನ್ನು ಅನೀಸ್ ಅಹ್ಮದ್ ನೆನಪಿಸಿದರು. ಅದೇ ರೀತಿ ದೇಶದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಜೊತೆಯಾಗಿ ಮುಂದೆ ಬಂದು ಸಂಘಟಿತ ಹೋರಾಟ ನಡೆಸಿದರೆ ಮಾತ್ರವೇ ನಾವು ಈ ನೆಲದಿಂದ ಫ್ಯಾಶಿಸಂ ಅನ್ನು ನಿರ್ನಾಮಗೊಳಿಸಬಹುದೆಂದು ಅವರು ಹೇಳಿದರು.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ವೌಲಾನಾ ಖಲೀಲುರ್ರಹ್ಮಾನ್ ಸಜ್ಜಾದ್ ನೋಮಾನಿ, ಕೆಡುಕಿನಿಂದ ಕೆಡುಕನ್ನು ಕಿತ್ತೊಗೆಯಲು ನಮಗೆ ಸಾಧ್ಯವಿಲ್ಲ. ಒಂದು ಒಳಿತಿನ ಕಾರ್ಯಕ್ಕಾಗಿ ಒಂದು ಕೆಡುಕಿನ ಕಾರ್ಯವನ್ನು ಎದುರಿಸಬೇಕಾಗುತ್ತದೆ. ಭಾರತೀಯ ಮುಸ್ಲಿಮರು ತಮ್ಮ ಕೆಲಸಗಳ ಮೂಲಕ ಖಂಡಿತವಾಗಿಯೂ ಈ ಉದಾಹರಣೆಯನ್ನು ಪ್ರದರ್ಶಿಸಿದ್ದಾರೆ. ಮುಸ್ಲಿಮರು ದೇಶದಲ್ಲಿ ದೊಡ್ಡ ಮಟ್ಟದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದನ್ನು ನಾನು ದೃಢವಾಗಿ ಹೇಳಬಲ್ಲೆ. ಆದರೂ ಅಧಿಕಾರಿಗಳು ಅವರೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಈ ಹೋರಾಟವು ಯಾವುದೇ ಒಂದು ನಿರ್ದಿಷ್ಟ ಧರ್ಮದ ವಿರುದ್ಧವಲ್ಲ. ಬದಲಾಗಿ, ಯಾವುದೇ ರೀತಿಯ ದಬ್ಬಾಳಿಕೆಯ ವಿರುದ್ಧವಾಗಿದೆ. ಖಂಡಿತವಾಗಿಯೂ, ಭಾರತವು ಸುಧಾರಣೆಗಾಗಿ ಬದಲಾವಣೆ ಕಾಣಲಿದೆ. ಇದಕ್ಕಾಗಿ ನಾವು ನಮ್ಮ ಎಲ್ಲಾ ಭಿನ್ನತೆಗಳನ್ನು ಬದಿಗಿಟ್ಟು ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಈ ಆನ್ಲೈನ್ ಸಮ್ಮೇಳನದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರಾಜ್ ರತನ್ ಅಂಬೇಡ್ಕರ್ ಕೂಡ ಮಾತನಾಡಿದರು. ದೇಶದಲ್ಲಿ ನಡೆಯುತ್ತಿರುವ ಹೋರಾಟವು ಸಂಸತ್ತು ಮತ್ತು ವಿರೋಧ ಪಕ್ಷದ ನಡುವಿನದ್ದಲ್ಲ. ಬದಲಿಗೆ, ಸಂಸತ್ತು ಮತ್ತು ಉಳಿದ ಭಾರತದ ನಡುವಿನದ್ದಾಗಿದೆ ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಅವರು ಟೀಕಿಸಿದರು. ನಾವು ನಮ್ಮ ಹೋರಾಟವನ್ನು ಬೀದಿಗಿಳಿಸಬೇಕಾಗಿದೆ. “ಒಂದು ವೇಳೆ ಸುಳ್ಳು ಉದ್ದೇಶಕ್ಕಾಗಿ ಅನ್ನಾ ಹಝಾರೆಗೆ ರಾಮ್ಲೀಲಾ ಮೈದಾನದಲ್ಲಿ ಹತ್ತಾರು ಸಾವಿರ ಮಂದಿಯನ್ನು ಜೊತೆಗೂಡಿಸಲು ಸಾಧ್ಯವಾಗುವುದಾದರೆ, ನಮ್ಮ ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಅದೇ ರೀತಿ ಮಾಡಲು ನಮಗೇಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.
ಮಾಜಿ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಹೋರಾಟಗಾರ ಸಸಿಕಾಂಥ್ ಸೆಂಥಿಲ್ ಮಾತನಾಡಿ, ಹೋರಾಟಗಾರರು ಮತ್ತು ಬುದ್ಧಿಜೀವಿಗಳಿಂದ ಕೇಳಿ ಬರುವ ಯಾವುದೇ ವಿರೋಧದ ಧ್ವನಿಯನ್ನು ಬಂಧಿಸುವ ಕಾರ್ಯನೀತಿಯೊಂದಿಗೆ ಸರಕಾರವು ಮುಂದೆ ಸಾಗುತ್ತಿದೆ. ಇದೀಗ ಅವರು ಯುವಜನರನ್ನು, ವಿದ್ಯಾರ್ಥಿಗಳನ್ನು ಬಂಧಿಸಿ ಅವರ ಮೇಲೆ ಯುಎಪಿಎಯಡಿ ಪ್ರಕರಣ ದಾಖಲಿಸಲು ಪ್ರಾರಂಭಿಸಿದ್ದಾರೆ. ಅವರೆಲ್ಲರೊಂದಿಗೂ ನಾನು ಐಕಮತ್ಯ ಪ್ರದರ್ಶಿಸಲು ಬಯಸುತ್ತೇನೆ ಮತ್ತು ಅವರು ಏಕಾಂಗಿಯಲ್ಲ ಎಂದು ಹೇಳಲು ಇಚ್ಛಿಸುತ್ತೇನೆ. ಜರ್ಮನಿ ಅಥವಾ ಇಟೆಲಿಗೆ ಹೊರತಾಗಿ, ಭಾರತವು ಒಂದೇ ಸಿದ್ಧಾಂತದಿಂದ ನಿಯಂತ್ರಿಸಲಾಗದಷ್ಟು ದೊಡ್ಡದಾಗಿದೆ ಮತ್ತು ವಿವಿಧತೆಯಿಂದ ಕೂಡಿದೆ ಎಂಬ ವಿಚಾರದಲ್ಲೂ ನಾನು ಆಶಾವಾದಿಯಾಗಿದ್ದೇನೆ ಎಂದು ಸೆಂಥಿಲ್ ಹೇಳಿದರು.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಡಾ. ತಸ್ಲೀಮ್ ರಹ್ಮಾನಿ ಈ ಪ್ರಾತ್ಯಕ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಜನರ ದೈನಂದಿನ ಜೀವನದ ಚಲನೆಯ ಮೇಲೆ ನಿಯಂತ್ರಣವಿದೆ. ಆದರೆ ಈ ಅವಕಾಶವನ್ನು ಬಳಸಿಕೊಂಡು ಸರಕಾರವು ಜನರ ಅಸಹಮತಿಯ ಧ್ವನಿಗಳ ಮೇಲೆ ಲಾಕ್ಡೌನ್ ಹೇರುತ್ತಿದೆ. ಈ ಸಮ್ಮೇಳನದ ಮೂಲಕ ಪಾಪ್ಯುಲರ್ ಫ್ರಂಟ್ ತನ್ನ ಧ್ವನಿ ಎತ್ತಿ ಆ ಲಾಕ್ಡೌನ್ ಅನ್ನು ಅಂತ್ಯಗೊಳಿಸಿದೆ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಧನ್ಯವಾದ ಸಲ್ಲಿಸಿದರು. ಲಾಕ್ ಡೌನ್ ನಮ್ಮ ಕಾರ್ಯಚಟುವಟಿಕೆಗಳಿಂದ ನಮ್ಮನ್ನು ತಡೆಯುವ ನಿಮಿತ್ತವಾಗಲಾರದು. ಲಾಕ್ಡೌನ್ ಸಂದರ್ಭದಲ್ಲಿಯೂ ಈ ಆಂದೋಲನವು ಸಾಮಾಜಿಕ ಅಂತರದ ಮಾರ್ಗದರ್ಶನಗಳನ್ನು ಪಾಲಿಸುತ್ತಾ ನಿರಂತರವಾಗಿ ಕಾರ್ಯಾಚರಿಸಿದೆ. ಫ್ಯಾಶಿಸ್ಟರ ಹಸ್ತಕ್ಷೇಪದ ಪ್ರಯತ್ನಗಳ ಹೊರತಾಗಿಯೂ, ಸಮ್ಮೇಳನದಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಲಾಕ್ಕೌಡ್ ಫ್ಯಾಶಿಸಂ ಅನ್ನು ಕಿತ್ತೊಗೆಯಲು ಕರೆ ನೀಡಿದ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಅಭಿಯಾನವು ಉತ್ತೇಜನಕಾರಿಯಾದುದು ಎಂದು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.