(www.vknews.com) : ಆಧುನಿಕ ಜಗತ್ತಿನಲ್ಲಿ ಅವಸರದ ಬದುಕು ಸಾಗಿಸುತ್ತಿದ್ದವರಿಗೆ ಅನಿರೀಕ್ಷಿತ ಸ್ಪೀಡ್ ಬ್ರೇಕರ್ ಒಂದು ಕೊವಿಡ್-19(ಕೊರೊನಾ) ವೈರಸ್ ರೂಪದಲ್ಲಿ ಬಂದೆರಗಿದೆ. ಇಡೀ ವಿಶ್ವವೇ ಈ ವೈರಸ್ಸಿನ ಆಟಾಟೋಪಕ್ಕೆ ತಲೆ ಬಾಗಿದ್ದು, ಈ ರೋಗದಿಂದ ಮುಕ್ತವಾಗುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ಈ ವೈರಸ್ಸಿಗೆ ಇನ್ನೂ ಮದ್ದು ಕಂಡು ಹಿಡಿದಿಲ್ಲದ ಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಣತಿಯಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ದೇಶಗಳನ್ನು “ಲಾಕ್ ಡೌನ್” ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ಶತಾಯಗತಾಯ ಪ್ರಯತ್ನ ಪಡುತ್ತಿವೆ. ಈ ಸಂಬಂಧ ನಮ್ಮ ದೇಶವೂ ಲಾಕ್ ಡೌನ್ ಆಗಿದ್ದು ಅಪಾರ ಕಷ್ಟನಷ್ಟಗಳಿಗೆ ಗುರಿಯಾಗಿದೆ. ಲಾಕ್ ಡೌನ್ ನಿಯಮಾನುಸಾರ ಜನರು ಎಲ್ಲೆಂದರಲ್ಲಿ ತಿರುಗಾಡುವಂತಿಲ್ಲ.
ನಿರ್ಧಿಷ್ಟ ಮಳಿಗೆಗಳಿಗೆ ನಿರ್ಧಿಷ್ಟ ಕಾಲಾವಧಿಯಲ್ಲಿ ಮಾತ್ರ ತೆರೆಯಲು ಅವಕಾಶ. ಜನರಿಗೆ ನಿರ್ಧಿಷ್ಟ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಲು ಅವಕಾಶ. ಆಡಂಬರದ ಶಾಪಿಂಗ್ ಇಲ್ಲ, ದುಂದುವೆಚ್ಚದ ಮದುವೆ ಯಾ ಇತರ ಕಾರ್ಯಕ್ರಮಗಳಿಲ್ಲ. ಮಾಲ್ ಗಳು, ಬಟ್ಟೆ ಮಳಿಗೆ, ಚಿನ್ನದಂಗಡಿ ಉಹೂಂ ಇಂತಹ ಯಾವುದೇ ತೀರಾ ಅಗತ್ಯವಲ್ಲದ ಅಥವಾ ವಿಲಾಸಿ ಉದ್ದೇಶದ ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ. ಮಸೀದಿ,ಮಂದಿರ,ಚರ್ಚ್ ಗೆ ಹೋಗಲು ಅನುಮತಿ ಇಲ್ಲ. ಈ ಲಾಕ್ ಡೌನ್, ಆಧುನಿಕ ಶೈಲಿಯ ಜೀವನಕ್ಕೆ ಒಗ್ಗಿಕೊಂಡಿದ್ದ ಮುಸ್ಲಿಮರ ಮೇಲೆ ಬಹಳ ಪ್ರಭಾವ ಬೀರಿದೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಾಗಲಾರದು. ಇಸ್ಲಾಮಿನ ನೈಜ ಆಶಯಗಳು ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ನಾವೆಲ್ಲರೂ ನಮ್ಮ ಧಾವಂತದ ಜೀವನ ಶೈಲಿಯನ್ನು ಮರು ವಿಮರ್ಶೆಗೆ ಒಳಪಡಿಸುವಂತೆ ಈ “ಲಾಕ್ ಡೌನ್” ಉತ್ತೇಜಿಸುತ್ತಿದೆ. ಹಾಗಾದರೆ ಮುಸ್ಲಿಮರು ಮಾಡುತ್ತಾ ಬಂದ ತಪ್ಪುಗಳೇನು ?, “ಲಾಕ್ ಡೌನ್” ಕಾರಣದಿಂದ ಕಲಿಯಬೇಕಾದ ಪಾಠಗಳೇನು?.
ಪ್ರವಾದಿ ಮೊಹಮ್ಮದ್(ಸ.ಅ)ರು ಕಲಿಸಿದ್ದ ಆದರ್ಶ ಜೀವನದ ಶೈಲಿಯನ್ನು ನಾವು ಮರೆಯುತ್ತಾ ಬಂದೆವು. ನಿಧಾನವಾಗಿ ಆಧುನಿಕ ಜೀವನಶೈಲಿಗೆ ನಮ್ಮನ್ನು ನಾವು ಬದಲಾಯಿಸಿ ಕೊಂಡೆವು. ಸರಳ ಜೀವನ ಶೈಲಿಯೇ ನಮಗೆ ಮರೆಯ ತೊಡಗಿತು. ತೋರಿಕೆಯ ದುಂದುವೆಚ್ಚದ ಜೀವನವೇ ಅಗತ್ಯವಾಗ ತೊಡಗಿತು. “ಲಾಕ್ ಡೌನ್” ಸಮಯದ ಈ ಒದ್ದಾಟವನ್ನು ನೋಡುವಾಗ ಅರೆ! ನಾವು ಇರಬೇಕಾಗಿದ್ದು ಹೀಗೆಯೇ ಅಲ್ಲವೇ ಎಂದು ಒಬ್ಬ ಮುಸಲ್ಮಾನನಿಗೆ ಅನಿಸತೊಡಗಿದರೆ ಅದೇ ಅವನ ಜೀವನಕ್ಕೆ ಬಹುದೊಡ್ಡ ಪಾಠ. ಹೌದು, ನಾವು ಪ್ರವಾದಿ ಕಲಿಸಿದ ಸರಳ ಜೀವನಕ್ಕೆ ಒತ್ತು ಕೊಡಬೇಕಾಗಿತ್ತು. ಅತಿಯಾಗಿ ಖರ್ಚು ಮಾಡ ತೊಡಗಿದೆವು. ಆಡಂಬರದ ಕಾರ್ಯಕ್ರಮಗಳನ್ನು ಆಯೋಜಿಸತೊಡಗಿದೆವು. ಐಶಾರಾಮಿ ಮನೆ, ಕಾರುಗಳು,ವಸ್ತುಗಳನ್ನು ಹೊಂದುವುದು ಜೀವನದ ಪರಮೋಚ್ಛ ಗುರಿಯೆಂಬಂತೆ ನಮ್ಮನ್ನು ನಾವು ಬದಲಾಯಿಸಿಕೊಂಡೆವು. ಮತ್ತೊಬ್ಬರ ಮುಂದೆ ಕೀಳಾಗಬಾರದೆಂದು ಹೆಚ್ಚೆಚ್ಚು ಖರ್ಚು ಮಾಡ ತೊಡಗಿದೆವು. ಈಗ ಒಬ್ಬ ಮಧ್ಯಮ ವರ್ಗದ ವ್ಯಕ್ತಿಯೂ ಕೂಡ
ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿದಾಗ ಉಳಿತಾಯವಿಲ್ಲದೇ ಬಡವರ ಆಹಾರ ಕಿಟ್ ಗಾಗಿ ಕೈ ಚಾಚುವ ಪರಿಸ್ಥಿತಿ ಎದುರಾಯ್ತು. ಸಮುದಾಯದಲ್ಲಿ ಶ್ರೀಮಂತರೆನಿಸಿಕೊಂಡವರು ತಮ್ಮ ಕರ್ತವ್ಯಗಳನ್ನು ಮರೆತಿದ್ದಾರೆ. ದಾನ ಧರ್ಮಗಳು ಕೇವಲ ತೋರಿಕೆಗಷ್ಟೇ ಸೀಮಿತವಾಗತೊಡಗಿದೆ. ಶ್ರೀಮಂತರ ಸಂಪತ್ತಿನ ಕ್ರೋಢೀಕರಣದಿಂದ ಬಡವರು ಮತ್ತಷ್ಟು ಬಡತನಕ್ಕೀಡಾದರು. ಅವರನ್ನು ಬಡತನದಿಂದ ಮೇಲಕ್ಕೆತ್ತುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಬದಲಾಗಿ ರಂಝಾನಿನ ಸಮಯದಲ್ಲಿ ಕಿಟ್ ಕೊಟ್ಟು ಫೋಟೋ ಹೊಡೆಸಿಕೊಳ್ಳುವಷ್ಟಕ್ಕೇ ಬಡವರ ಮೇಲಿನ ಕಾಳಜಿ ಸೀಮಿತವಾಗತೊಡಗಿದೆ. ನಮ್ಮವರಿಗೆ ಶಿಕ್ಷಣವಿಲ್ಲದೇ ಇದ್ದಾಗ ಆಗುವ ಅವಾಂತರಗಳನ್ನೂ ಈ ಲಾಕ್ ಡೌನ್ ನಮಗೆ ತೋರಿಸಿಕೊಟ್ಟಿತು. ಒಂದಷ್ಟು ಜನರು ಮಾಡುವ ತಪ್ಪುಗಳಿಗೆ ಇಡೀ ಸಮುದಾಯವನ್ನೇ ಗುರಿಮಾಡುವ ವ್ಯವಸ್ಥೆಯ ಭಾರೀ ದೊಡ್ಡ ಷಡ್ಯಂತ್ರಕ್ಕೆ ನಾವು ಬಲಿಯಾಗಲು ನಮ್ಮ ಅಶಿಕ್ಷಿತ ವರ್ಗವು ಸಹಾಯ ಮಾಡಿ ಬಿಟ್ಟಿತು.
“ಚೀನಾಗೆ ಹೋಗಿಯಾದರೂ ಸರಿ, ಶಿಕ್ಷಣವನ್ನು ಪಡೆಯಿರಿ” ಎಂದಿದ್ದ ಪ್ರವಾದಿಯವರ ಮಾತನ್ನು ನಾವು ಪಾಲಿಸಿ ನಮ್ಮ ಬಡ ಜನರಿಗೆ ಶಿಕ್ಷಣವನ್ನು ನೀಡಲು ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬಹುದಿತ್ತು. ಸಣ್ಣ ಸಣ್ಣ ರೋಗಕ್ಕೂ ಭಾರೀ ದೊಡ್ಡ ಆಸ್ಪತ್ರೆಗಳಿಗೆ ಭೇಟಿಕೊಟ್ಟು ಮನಸ್ಸೋ ಇಚ್ಛೆ ಖರ್ಚು ಮಾಡುತ್ತಿದ್ದ ನಾವು , ಈಗ ಲಾಕ್ ಡೌನ್ ಸಮಯದಲ್ಲಿ ನಿಯಮಗಳ ಕಾರಣದಿಂದಾಗಿ ಅನಗತ್ಯವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿಲ್ಲ ಅಲ್ಲವೇ?, ಹಾಗಾದರೆ ನಾವು ಈ ಸಂಬಂಧ ಅನಗತ್ಯವಾಗಿ ಎಷ್ಟು ಖರ್ಚು ಮಾಡಿರಬಹುದು?. ಯಾಕೆ ಈ ಲಾಕ್ ಡೌನ್ ನ ನಿಯಮವು ಅಲ್ಲಾಹನ ಇಸ್ಲಾಮಿನ ನಿಯಮಕ್ಕಿಂತ ಹೆಚ್ಚು ಪ್ರಾಶಸ್ತ್ಯ ಪಡೆಯಿತು? ಚಿಂತಿಸಬೇಕಾಗಿದೆ. ಈಗ ಪವಿತ್ರ ಕಾಬಾ ದ ಬಾಗಿಲು ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ಮಸೀದಿಗಳ ಬಾಗಿಲನ್ನು ಮುಚ್ಚಲಾಗಿದೆ. ಲಾಕ್ ಡೌನ್ ಸಮಯದಲ್ಲಿ ರಂಝಾನ್ ಜಾರಿಯಲ್ಲಿದೆ. ಎಲ್ಲವೂ ಸರಿಯಾಗಿದ್ದಾಗ ಅಲ್ಲಾಹನ ಭವನವನ್ನು ನಿರ್ಲಕ್ಷಿಸಿದ ನಾವು ಈಗ ಮಸೀದಿಯ ಬಾಗಿಲು ತೆರೆಯುವುದನ್ನೇ ಕಾಯುವಷ್ಟು ಭ್ರಮನಿರಸಕ್ಕೀಡಾಗಿದ್ದೇವೆ. ರಂಝಾನಿನ ಸಮಯದಲ್ಲಿ ಭಾರೀ ಭಕ್ಷ್ಯ ಭೋಜನಗಳನ್ನು ಮಾಡಿ ಅರ್ಧ ತಿಂದು ಉಳಿದರ್ಧವನ್ನು ಎಸೆದು ರಂಝಾನಿನ ಆಶಯವನ್ನೇ ಬುಡಮೇಲು ಮಾಡಿದ್ದ ನಮಗೆ ಇದು ಆತ್ಮವಲೋಕನಕ್ಕೆ ಅತ್ಯುತ್ತಮ ಸಮಯ.
ಇಸ್ಲಾಂ ಸರಳವಾಗಿದೆ. ಈ ಲಾಕ್ ಡೌನ್ ನಮಗೆ ಕಲಿಸುತ್ತಿರುವ ಅಷ್ಟೂ ಪಾಠಗಳನ್ನು ಇಸ್ಲಾಂ ನಮಗೆ ಹಿಂದಿನಿಂದಲೇ ಕಲಿಸುತ್ತಾ ಬಂದಿದೆ. ಯಾಂತ್ರಿಕ ಬದುಕಿನ ಧಾವಂತದಲ್ಲಿ ನಾವೆಲ್ಲವನ್ನೂ ಮರೆತಿದ್ದೆವು ಅಷ್ಟೇ. ಈಗಲಾದರೂ ನಾವು ಬದಲಾಗ ಬೇಕಾಗಿದೆ. ಇಸ್ಲಾಮಿನ ಸರಳ ಜೀವನದ ಆಶಯಗಳನ್ನು ಸಾರ್ವತ್ರಿಕಗೊಳಿಸಲು ಪಣ ತೊಡಬೇಕಾಗಿದೆ. ದುಂದುವೆಚ್ಚಗಳನ್ನು ಮಾಡದೇ, ಪ್ರವಾದಿ ಕಲಿಸಿದ ಶ್ರೇಷ್ಠ ಜೀವನಶೈಲಿಯನ್ನು ಅನುಕರಿಸಿದರೆ ಜೀವನದ ಯಾವ ಘಟ್ಟವೂ ಸವಾಲಾಗಲಾರದು. ಬಡವರ ಬಡತನವನ್ನು ನೀಗಿಸಿ ಅವರನ್ನು ಮೇಲಕ್ಕೆತ್ತುವುದು ಉಳ್ಳವರ ಕರ್ತವ್ಯ. ಅವರ ಶಿಕ್ಷಣ ನಮ್ಮ ಜವಬ್ದಾರಿ. ಝಕಾತ್ , ದಾನ ಧರ್ಮಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸುವುದು ಇಸ್ಲಾಂ ನಮಗೆ ಕಲಿಸಿಕೊಟ್ಟ ಪಾಠ. “ಪವಿತ್ರ ಮಸ್ಜಿದುನ್ನಬವಿಯಲ್ಲಿ ಒಂದು ತಿಂಗಳು ಇಹ್ತಿಕಾಫ್ ಕೂರುವುದಕ್ಕಿಂತಲೂ ಶ್ರೇಷ್ಠವಾಗಿದೆ ಒಬ್ಬನ ಕಷ್ಟದ ಜೊತೆ ನಿಲ್ಲುವುದು” ಎಂದು ನಮ್ಮ ಪ್ರವಾದಿಯೇ ಕಲಿಸಿರುವಾಗ ನಾವು ಆ ಕಾರ್ಯದ ಮಹತ್ವವನ್ನು ಅರಿಯದೇ ಹೋದರೆ ಹೇಗೆ?.
ಇಸ್ಲಾಮಿನ ಆಶಯಗಳ ಪಾಲನೆಯ ಜೊತೆಜೊತೆಗೆ ಪ್ರತಿ ಮುಸ್ಲಿಮನೂ ಶಿಕ್ಷಿತನಾಗ ತೊಡಗಿದರೆ ಒಂದು ಅತ್ಯುತ್ತಮ ಅನುಕರಣೀಯ ಸಮುದಾಯವಾಗಿ ನಮ್ಮ ಮುಸ್ಲಿಂ ಸಮುದಾಯ ತಲೆಯೆತ್ತಿ ನಿಲ್ಲಬಹುದು. ಇಲ್ಲದಿದ್ದರೆ ಇಸ್ಲಾಮಿನ ವಿರುದ್ಧದ ಷಡ್ಯಂತ್ರಗಳಿಗೆ ನಾವು ಸುಲಭವಾಗಿ ಬಲಿಯಾಗಬೇಕಾದೀತು. ಯಾರೂ ಇಲ್ಲಿ ಶಾಶ್ವತರಲ್ಲ. ನಮ್ಮ ಕ್ರೋಢೀಕರಿಸಿ ಇಡುವ ಯಾವ ಸಂಪತ್ತೂ ಕೊನೆಗಾಲದಲ್ಲಿ ನಮ್ಮ ಜೊತೆ ಬರಲಾರದು. ಎಲ್ಲಾ ರೀತಿಯ ಸಮಾನತೆಗಾಗಿ ನಾವು ಪರಸ್ಪರರ ಜೊತೆ ನಿಲ್ಲೋಣ. ದೀನಿ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣ ನೀಡುವ, ಯತೀಂ ಮಕ್ಕಳಿಗೆ ಸಹಾಯ ಮಾಡುವ ,ಬಡ ಜನರ ನಿರ್ಗತಿಕರ ಸೇವೆ ಮಾಡುವ ನೂರಾರು ಇಸ್ಲಾಮಿಕ್ ಸಂಸ್ಥೆಗಳಿವೆ. ಅವರ ಕೈಗಳನ್ನು ಬಲಪಡಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಈ ಲಾಕ್ ಡೌನ್ ಸಮಯ ಮುಗಿಯುವವರೆಗೆ, ಈ ಸಾಂಕ್ರಾಮಿಕ ರೋಗ ಸಂಪೂರ್ಣ ಇಲ್ಲವಾಗುವವರೆಗೆ ನಾವು ಅಗತ್ಯ ನಿಯಮಗಳನ್ನು ಪಾಲಿಸಿ ನಮಗೂ ಉಳಿದವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸೋಣ. ಸಾಧ್ಯವಾದಷ್ಟೂ ಮನೆಯಲ್ಲೇ ಇದ್ದು ಸಹಕರಿಸೋಣ. ಅಲ್ಲಾಹನ ಈ ಪರೀಕ್ಷೆ ನಮಗೊಂದು ಬದಲಾವಣೆಯ ದಾರಿಯಾಗಲಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.