(www.vknews.com) : ಸಿ ಎಂ ಐ ಇ ವರದಿ ಪ್ರಕಾರ ದೇಶದಲ್ಲಿ ಶೇ ೨೭.೧೧ ಜನರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಕೆಲಸವಿಲ್ಲ. ಸಂಘಟಿತ ಮತ್ತು ಅಸಂಘಟಿತ ವರ್ಗಗಳಲ್ಲಿ ಇನ್ನೂ ಹೆಚ್ಚಾಗಿ ಕೆಲಸಗಳನ್ನು ಕಳೆದುಕೊಳ್ಳುವ ಸಂಭವ ಇದೆ. ೧೨ ಕೋಟಿ ಜನರು ಈಗಾಗಲೇ ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಕಾರ್ಮಿಕ ವಲಯಗಳಲ್ಲಿ ಯಾವುದೇ ಜಾಬ್ ಸೆಕ್ಯೂರಿಟಿ ಇಲ್ಲ. ಮಧ್ಯಮವರ್ಗದವರು ಬಡತನ ರೇಖೆಗಿಂತ ಕೆಳಗೆ ಜಾರುವ ಸಾಧ್ಯತೆಗಳೇ ಹೆಚ್ಚಾಗಿವೆ. ಎಲ್ಲರು ಬಯಸುವುದು ಸೆಕ್ಯೂರ್ ಜಾಬ್ ಆದರೆ ಮುಂಬರುವ ದಿನಗಳಲ್ಲಿ ಅದರ ಕನಸು ಸಹ ಕಾಣುವ ಹಾಗಿಲ್ಲ ಎನ್ನಿಸುತ್ತಿದೆ. ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಜನರ ಬಳಿ ಹಣ ಚಲಾವಣೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರಗಳು ಅತಿ ಹೆಚ್ಚು ಮಾಡಲಾಗಿದೆ. ಅದರ ಪರಿಣಾಮ ಮಧ್ಯಮವರ್ಗದವರ ಮೇಲೆ ಹೆಚ್ಚಾಗಿ ಬೀಳಲಿದೆ. ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಮಾಡಿರುವ ಈ ಉಪಾಯ ಜನರ ಜೀವನವನ್ನು ಇನ್ನೂ ದುಸ್ಥಿತಿಗೆ ತಳ್ಳಲಿದೆ.
ಭೂಮಿ ಉಳ್ಳವರು ನೌಕರಿ ಚಾಕರಿಗಳನ್ನು ಬಿಟ್ಟು ತಮ್ಮ ಹಳ್ಳಿಗಳಿಗೆ ತೆರಳಿ ವ್ಯವಸಾಯ ಮಾಡೋಣವೆಂದರೆ ನೀರಿನ ಸಮಸ್ಯೆ, ವಿದ್ಯುತ್ಚ್ಛಕ್ತಿಯ ಅಭಾವ, ಬಂಡವಾಳದ ಸಮಸ್ಯೆ ಇತ್ಯಾದಿ. ಹಳ್ಳಿಗಳಿಂದ ಪಟ್ಟಣಗಳಿಗೆ ಬಂದು ನೌಕರಿಗಳನ್ನು ಮಾಡೋಣವೆಂದರೆ ಟೆಕ್ನಿಕಲ್ ಸ್ಕಿಲ್ ಸಮಸ್ಯೆ, ಭಾಷೆಯ ಸಮಸ್ಯೆ, ಉದ್ಯೋಗ ಖಾತರಿ ಸಮಸ್ಯೆ. ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ದೊಡ್ಡ ದೊಡ್ಡ ಮಳಿಗೆಗಳಲ್ಲಿ ವಸ್ತುಗಳ ಮಾರಾಟದ ಸಮಸ್ಯೆ. ಸದ್ಯಕ್ಕೆ ಜನರ ಬಳಿ ಅಷ್ಟೊಂದು ದುಡ್ಡು ಇಲ್ಲ ಅಂದ ಮೇಲೆ ಖರೀದಿ ಎಲ್ಲಿಂದ ಮಾಡುತ್ತಾರೆ. ಬೇಡಿಕೆ ಇದ್ದರೆ ಮಾತ್ರ ಉತ್ಪಾದನೆ ಹೆಚ್ಚಾಗುವುದು. ಅಲ್ಲವೇ. ಎಷ್ಟೋ ಜನ ಸಾಲ ಮಾಡಿ ಈ ಲಾಕ್ ಡೌನ್ ಕಳೆದಿದ್ದಾರೆ, ಕಳೆಯುತ್ತಿದ್ದಾರೆ. ಈ ಕಡೆ ಶಾಲಾ ಫೀಸ್ ಗಳ ಚಿಂತೆ, ಆರೋಗ್ಯದ ಚಿಂತೆ, ಆಸ್ಪತ್ರೆಗಳ ಖರ್ಚುಗಳು, ಸಂಸಾರದ ಜವಾಬ್ದಾರಿ , ಮಕ್ಕಳ ಭವಿಷ್ಯದ ಚಿಂತೆ, ಬೆಳೆದು ನಿಂತಿರುವ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಚಿಂತೆ, ಪೊಲೀಸರಿಗೆ ರವಿ ಪೂಜಾರಿ ಚಿಂತೆ, ಜೋಶಿಜೀಗೆ ಮುಖ್ಯಮಂತ್ರಿ ಆಗುವ ಚಿಂತೆ, ಮಂತ್ರಿಜೀಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ, ಆಫೀಸುಗಳಲ್ಲಿ ನಡೆಯುವ ಮೆಂಟಲ್ ಟಾರ್ಚರ್, ರಾಜಕೀಯ, ದುರಾಡಳಿತ , ದಬ್ಬಾಳಿಕೆ, ಕೋಮುವಾದ, ಸಾವು ನೋವು, ಗುಂಡಾಗಿರಿ – ಒಟ್ಟಾರೆ ಹೇಳುವುದಾರೆ ಎಲ್ಲರು ತಮ್ಮದೇ ಆದ ಗೊಂದಲಗಳಲ್ಲಿ ನರಳುತ್ತಿದ್ದಾರೆ. ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕತೆಯ ನಂಟು ಲಗತ್ತಾಗಿದೆ. ನಮ್ಮ ದೇಶ ದೊಡ್ಡದು. ಆದರೂ ಪ್ರಾಮಾಣಿಕವಾಗಿ ಸರ್ಕಾರ ಮನಸ್ಸು ಮಾಡಿದರೆ ದೇಶ ಆರ್ಥಿಕವಾಗಿ ಮುಂದುವರೆಯಬಹುದಾಗಿದೆ. ಸದ್ಯಕ್ಕೆ ದೇಶ ಡಿಪ್ರೆಶನ್ ಮೂಡ್ ನಲ್ಲಿದೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.