ಚಿಕ್ಕಬಳ್ಳಾಪುರ (www.vknews.com) : ಚಿಕ್ಕಬಳ್ಳಾಪುರ ನಗರದಲ್ಲಿ ಕೋರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೋರೋನಾ ಸೋಂಕು ಹರಡದಂತೆ ಹಾಗೂ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲೀಸ್ ಸಿಬ್ಬಂದಿಯ ಕಾರ್ಯಾಚರಣೆಯನ್ನು ವೀಕ್ಷಿಸಲು ಇಂದು ಚಿಕ್ಕಬಳ್ಳಾಪುರ ನಗರಕ್ಕೆ ಎಡಿಜಿಪಿ ಸಂದು ಹಾಗೂ ಐಜಿಪಿ ಶರತ್ ಚಂದ್ರ ಭೇಟಿ ನೀಡಿದರು.
ನಗರದ 17ನೇ ವಾರ್ಡಿಗೆ ಎಡಿಜಿಪಿ ಹಾಗೂ ಐಜಿಪಿ ಭೇಟಿ ನೀಡಿ, ಪೋಲೀಸರು ಕೋರೋನಾ ಹರಡದಂತೆ ತೆಗೆದುಕೊಂಡಿರುವ ಕ್ರಮಗಳನ್ನು ವೀಕ್ಷಿಸಿದರು. ನಂತರ 17ನೇ ವಾರ್ಡಿನ ನಿವಾಸಿಗಳನ್ನು ಮಾತನಾಡಿಸಿ, ಸುಮಾರು 1350 ಮನೆಗಳಿಗೆ ಉಚಿತವಾಗಿ ಹಾಲನ್ನು ವಿತರಿಸಿದರು.
ಪೋಲೀಸ್ ಅತಿಥಿ ಗೃಹಕ್ಕೆ ಭೇಟಿ ನೀಡಿ, ಪೋಲೀಸ್ ಕ್ವಾರ್ಟರ್ಸ್ ನಲ್ಲಿರುವ ಪೋಲೀಸ್ ಕುಟುಂಬಗಳಿಗೆ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಜರ್ ಗಳನ್ನು ವಿತರಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಎಡಿಜಿಪಿ ಮಾತನಾಡುತ್ತಾ, ಪೋಲಿಸ್ ನವರು ಕೋರೋನಾ ಸೋಂಕಿನಿಂದ ಹೇಗೆ ಜಾಗೃತರಾಗಿರಬೇಕು ಎಂದು ತಿಳಿಸುತ್ತಾ, ಪ್ರತಿ 30 ಸೆಕೆಂಡಿಗೆ ಕೈಯನ್ನು ಸೋಪು ಅಥವಾ ಹ್ಯಾಂಡ್ ವಾಶ್ ನಿಂದ ತೊಳೆದುಕೊಳ್ಳಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮನೆಗೆ ಹಿಂದಿರುಗಿದ ತಕ್ಷಣ ಬಟ್ಟೆಯನ್ನು ಬಿಸಿ ನೀರಲ್ಲಿ ನೆನೆಸಿ, ಸ್ನಾನ ಮಾಡಿ ನಂತರ ಮನೆಯವರನ್ನು ಮಾತನಾಡಿಸಬೇಕು ಎಂದು ತಿಳಿಸಿದರು.
ಐಜಿಪಿ ಶರತ್ ಚಂದ್ರ ರವರು ಮಾತನಾಡುತ್ತಾ, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ, ಆದರೆ ಕಂಟೈನ್ಮೆಂಟ್ ಝೋನ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಆಗಿರುತ್ತದೆ. ಸಂಜೆ 7.00 ಘಂಟೆ ಯಿಂದ ಬೆಳಿಗ್ಗೆ 7.00 ಘಂಟೆ ವರೆಗೆ ಲಾಕ್ ಡೌನ್ ಆಗಿರುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೊರೋನಾದಿಂದ ಜಾಗೃತರಾಗಿರಲು ಜನರು ಸ್ವಯಂ ಪ್ರೇರಿತವಾಗಿ ಮಧ್ಯಾಹ್ನ 2.00ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುತ್ತಿರುವುದು ಸಂತಸದ ವಿಚಾರವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್, ವೃತ್ತ ನಿರೀಕ್ಷಕ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
– ವಿ. ಅರ್ಪಿತ್ ಕುಮಾರ್ (ವರದಿಗಾರರು, ಚಿಕ್ಕಬಳ್ಳಾಪುರ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.