ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ): ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಡಿಸ್ಚಾರ್ಜ್ ಪ್ರಮಾಣ ಹೆಚ್ಚಿದ್ದು, ಮುಂದಿನ 10 ದಿನದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪಾಸಿಟಿವ್ ಪ್ರಕರಣಗಳು ಡಿಸ್ಚಾರ್ಜ್ ಆಗುವ ಸಾದ್ಯತೆಗಳಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಂದ ಯಾವುದೇ ಸಂದರ್ಭದಲ್ಲೂ ಸಾವು ಸಂಭವಿಸದ೦ತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಿಲ್ಲೆಯನ್ನು ನಾನ್ ಕೋವಿಡ್ ಜಿಲ್ಲೆಯನ್ನಾಗಿ ರೂಪಿಸುವಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರನಿಧಿಗಳು ಸಹಕಾರದಿಂದ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ,ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಇದುವರೆಗೆ 12540 ಮಂದಿಯನ್ನು ಕೋವಿಡ್-19 ಪರೀಕ್ಷೆ ಮಾಡಿದ್ದು, ಅದರಲ್ಲಿ 11566 ವರದಿ ನೆಗೆಟಿವ್ ಬಂದಿದ್ದು, 946 ಪಾಸಿಟಿವ್ ಪ್ರಕರಣಗಳು ಕಂಡುಬ೦ದಿವೆ, ಇದರಲ್ಲಿ ಶೇ. 98 ಮಹಾರಾಷ್ಟçದಿಂದ ಬಂದವರಲ್ಲಿ ಕಂಡುಬ೦ದಿದು, ಇಂದಿನವರೆಗೆ 274 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ, ರಾಜ್ಯದಲ್ಲೇ ಅತೀ ಹೆಚ್ಚು ಕ್ವಾರಂಟೈನ್ ಕೇಂದ್ರದಲ್ಲಿನ ಟೆಸ್ಟ್ ಉಡುಪಿ ಜಿಲ್ಲೆಯಲ್ಲಿ ನಡೆದಿದೆ , ಸೋಂಕು ಕಂಡುಬ೦ದ 929 ಮಂದಿಯಲ್ಲಿ ರೋಗ ಲಕ್ಷಣಗಳು ಕಂಡುಬ೦ದಿಲ್ಲ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.ಪ್ರಸ್ತುತ ಜಿಲ್ಲೆಗೆ ಮಹಾರಾಷ್ಟçದಿಂದ ಬಂದವರನ್ನು ಅವರ ಗ್ರಾಮದಲ್ಲೇ ಕ್ವಾರಂಟೈನ್ ಮಾಡುತ್ತಿದ್ದು, ಇವರ ಉಸ್ತುವಾರಿಗೆ ಗ್ರಾಮೀಣ ಕಾರ್ಯಪಡೆ ರಚಿಸಿದ್ದು, ನಿಗಾವಹಿಸಲಗಿದೆ, ಹಿರಿಯ ಅಧಿಕಾರಿಗಳು ಈ ಕೇಂದ್ರಗಳಿಗೆ ಅನಿರೀಕ್ಷಿತ ಬೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 4500 ಟ್ರಿಬಲ್ ಲೇಯರ್ ಮಸ್ಕ್, 10740 ಎನ್-95 ಮಾಸ್ಕ್ , 2745 ಪಿಪಿಇ ಕಿಟ್ ಸಂಗ್ರಹವಿದ್ದು, ಕೋವಿಡ್ ಚಿಕಿತ್ಸೆ ಅಗತ್ಯವಿರುವ ಉಪಕರಣಗಳ ಯಾವುದೇ ಕೊರತೆಯಿಲ್ಲ ಎಂದು ಸಚಿವರು ಹೇಳಿದರು.ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಕಂಡ ಬಂದ ವ್ಯಕ್ತಿಯ ಮನೆಯನ್ನು ಮಾತ್ರ ಸೀಲ್ಡೌನ್ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಚರ್ಚಿಸಿ ಸ್ಪಷ್ಟ ನಿರ್ದೇಶನ ನೀಡಲಾಗುವುದು, ಉಡುಪಿಯಲ್ಲಿ ಸರ್ಕಾರಿ ಕೋವಿಡ್ ಲ್ಯಾಬ್ 10 -12 ದಿನದಲ್ಲಿ ಕಾರ್ಯಾರಂಭ ಮಾಡಲಿದೆ, ಈ ಬಗ್ಗೆ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಸಹ ನೀಡಲಾಗಿದೆ, ಕುಂದಾಪುರ ಮತ್ತು ಕಾರ್ಕಳದಲ್ಲಿನ ಆಸ್ಪತ್ರೆಗೆ , ಉಡುಪಿ ಜಿಲ್ಲಾಸ್ಪತ್ರೆಯ ಪ್ರಮಾಣದಲ್ಲಿಯೇ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಕುರಿತಂತೆ ಪ್ರಯತ್ನ ಮಾಡಲಾಗುವುದು, ಕೋವಿಡ್ ವಿರುದ್ದದ ಹೋರಾಟದಲ್ಲಿ ಅಗತ್ಯವಿರುವ ಆಶಾ, ಆರೋಗ್ಯ ಕಾರ್ಯಕರ್ತರು, ಎಎನ್ಎಂ ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳುವ ಕುರಿತಂತೆ ಆದೇಶ ನೀಡಲಾಗುವುದು ಎಂದು ಸಚಿವ ಬೊಮ್ಮಾಯಿ ತಿಳಿಸಿದರು.ಜಿಲ್ಲೆಯಲ್ಲಿ ಎನ್.ಆರ್.ಇ.ಜಿ ಕಾರ್ಯಕ್ರಮದಲ್ಲಿ ಪ್ರಗತಿಯಗಿದ್ದು, ಕೆಳದ ವರ್ಷ 77190 ,ಮಾನವ ದಿನ ಸೃಷ್ಠಿಯಾಗಿದ್ದರೆ ಈ ವರ್ಷ ಇದುವರೆಗೆ 210000 ಮಾನವ ದಿನಗಳ ಸೃಷ್ಠಿ ಆಗಿದೆ, ವಸತಿ ಯೋಜನೆಯಲ್ಲಿ ಬ್ಲಾಕ್ ಆಗಿದ್ದ 1640 ಮನೆಗಳ ಬ್ಲಾಕ್ ತೆರವುಗೊಳಿಸಲಾಗಿದೆ ಎಂದರು.ಕೋವಿಡ್-19 ಸಮಸ್ಯೆಯನ್ನು ಜಿಲ್ಲಾಡಳಿತ ಅತ್ಯಂತ ಸಮರ್ಥವಾಗಿ ಎದುರಿಸಿದೆ, ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಅತ್ಯಂತ ಸವಾಲಿನದಾಗಿದ್ದು, ಇದನ್ನು ಅತ್ಯಂತ ದಕ್ಷವಾಗಿ ನಿಭಾಯಿಸಿದ್ದು, ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕ್ಷಮತೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಉಸ್ತುವಾರಿ ಸಚಿವರು ಜಿಲ್ಲಾಡಳಿತ ಕಾರ್ಯವನ್ನು ಅಭಿನಂದಿಸಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಮೆಂಡನ್,ಬೈ೦ದೂರು ಶಾಸಕ ಸುಕುಮಾರ ಶೆಟ್ಟಿ, ಕರಾವಳಿ ಅಬಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.