(www.vknews.com) : ಕರುಣಾಮಹಿಯಾದ ಅಲ್ಲಾಹನ ನಾಮದಿಂದ. ಸಕಲ ಸ್ತುತಿಗಳು ಅವನಿಗೆ ಮೀಸಲು. ಅಲ್ಲಾಹನ ರಕ್ಷೆ ಹಾಗೂ ಕರುಣೆ ನಮ್ಮೆಲ್ಲರ ಮೇಲೆ ಸದಾ ವರ್ಷಿಸುತ್ತಿರಲಿ.
ಇಸ್ಲಾಂ ಸೃಷ್ಟಿಕರ್ತನ ಧರ್ಮ. ಆದ್ದರಿಂದಲೇ ಅದರ ಎಲ್ಲಾ ನಿಯಮಗಳು ಪರಿಪೂರ್ಣವಾಗಿದೆ. ಇಸ್ಲಾಂ ಧರ್ಮದ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡಾಗ ಈ ಸತ್ಯವನ್ನು ಅರಿತುಕೊಳ್ಳಲು ಸಾಧ್ಯ. ಇಂತಹ ಕಾಲಿಕ ವಿಷಯಗಳು ಇಸ್ಲಾಂ ಧರ್ಮದ ವಿಶಾಲತೆ ಹಾಗೂ ನೈಜತೆಯನ್ನು ಮನವರಿಕೆ ಮಾಡಿಕೊಳ್ಳಲು ಬಹಳ ಪ್ರಯೋಜನಕಾರಿಯಾಗಿದೆ. ನೂರುಲ್ ಹುದಾ ಯು.ಎ.ಇ ಸಮಿತಿ ಪ್ರಬಂಧ ಸ್ಪರ್ಧೆಗೆ ಆಯ್ಕೆಮಾಡಿಕೊಂಡ ಎರಡು ವಿಷಯಗಳು ಕೂಡ ಕಾಲಿಕ ಹಾಗೂ ಚಿಂತನಾರ್ಹವಾಗಿದೆ. ಮೊದಲಾಗಿ ಸಮಿತಿಯ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅತ್ಯಲ್ಪ ಕಾಲದಲ್ಲಿ ನೂರುಲ್ ಹುದಾ ಮಹತ್ತರ ಯಶಸ್ಸು ಕಂಡಿದೆ. ಇದರ ಹಿಂದೆ ನಿಮ್ಮಂತಹ ಹಲವಾರು ಜನರ ನಿಸ್ವಾರ್ಥ ಸೇವೆಯಿದೆ. ಅಲ್ಲಾಹನು ಎಲ್ಲರನ್ನೂ ಅನುಗ್ರಹಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್.
ಆರೋಗ್ಯ ಸಂರಕ್ಷಣೆಗೆ ಇಸ್ಲಾಂ ನೀಡಿರುವಷ್ಟು ಮಹತ್ವ ಜಗತ್ತಿನ ಬೇರೊಂದು ಧರ್ಮ ನೀಡಿಲ್ಲ. ರೋಗ ದೈವ ಶಾಪ ಅದಕ್ಕೆ ಮದ್ದು ಮಾಡುವುದು ದೇವಾಪರಾಧವೆಂದು ಮನಗಂಡಿದ್ದ ಕಾಲದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ರೋಗದ ಚಿಕಿತ್ಸೆಯ ಬಗ್ಗೆ ನೀಡಿದ ವಚನಗಳು ಇಂದಿಗೂ ಪ್ರಚಲಿತವಾಗಿದೆ. ವೈದ್ಯರ ಮಹತ್ವ ಹಾಗೂ ಅಗತ್ಯದ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು 1490 ವರ್ಷಗಳ ಹಿಂದೆಯೇ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಇಸ್ಲಾಂ ಧರ್ಮವನ್ನು ಕೇವಲವಾಗಿ ಕಾಣುವ ಜನರಿಗೆ ಆರೋಗ್ಯದ ಬಗೆಗಿನ ಇಸ್ಲಾಮಿನ ನಿರ್ದೇಶನಗಳು ಅಚ್ಚರಿಯುಂಟು ಮಾಡದಿರದು.
ಆರೋಗ್ಯಕ್ಕೆ ಇಸ್ಲಾಂ ನೀಡಿದ ಪ್ರಾಧಾನ್ಯತೆ :-
ಬೆಳ್ಳಂಬೆಳಿಗ್ಗಿನ ಪ್ರಾರ್ಥನೆಯಲ್ಲಿ ಸನ್ಮಾರ್ಗವನ್ನು ಬೇಡಿದ ನಂತರ ಅಲ್ಲಾಹನು ಪ್ರಾರ್ಥಿಸಲು ಹೇಳಿದ್ದು ಆರೋಗ್ಯಕ್ಕಾಗಿ ಆಗಿದೆ. ಇಸ್ಲಾಮಿನ ಪ್ರತಿಯೊಂದು ಆರಾಧನಾ ರೀತಿ, ಜೀವನ ಶೈಲಿ ಎಲ್ಲವೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಂರಕ್ಷಣೆಗೆ ಪೂರಕವಾಗಿದೆ. ಪ್ರತಿನಿತ್ಯ ನಿರ್ವಹಿಸಲ್ಪಡುವ ನಮಾಝ್, ವೃತಾನುಷ್ಟಾನ ಹೀಗೆ ಇಸ್ಲಾಮಿನ ಪ್ರತಿಯೊಂದು ವಿಚಾರಗಳನ್ನು ತೆಗೆದುಕೊಂಡರೆ ಈ ಸತ್ಯವನ್ನು ಅರಿತುಕೊಳ್ಳಬಹುದು.
ರೋಗಿಗೆ ಆಶ್ವಾಸನೆಯಾಗಿ ಇಸ್ಲಾಂ:-
ರೋಗವು ಶಿಕ್ಷೆಯಲ್ಲ ಪರೋಕ್ಷವಾಗಿ ಅನುಗ್ರಹವಾಗಿದೆ ಎನ್ನುತ್ತದೆ ಇಸ್ಲಾಂ. ರೋಗವು ಮನುಷ್ಯನ ತಪ್ಪುಗಳನ್ನು ಮನ್ನಿಸಿ ಶುದ್ದೀಕರಿಸುತ್ತದೆ. ರೋಗಿಯು ತಾಳ್ಮೆ ಕಳೆದುಕೊಂಡರೆ ರೋಗ ದೇಹಕ್ಕೆ ಮಾತ್ರವಲ್ಲ ಅವನ ಮನಸ್ಸಿಗೂ ಬಾಧಿಸುತ್ತದೆ. ಇದರಿಂದ ಅವನು ಮತ್ತಷ್ಟು ರೋಗಿಯಾಗುತ್ತಾನೆ. ಮಾನಸಿಕ ಕಾಯಿಲೆಗೆ ಒಳಗಾಗುತ್ತಾನೆ. ರೋಗಿಗಳಿಗೆ ಆಶ್ವಾಸನೆ ನೀಡುವ ಹಲವು ವಚನಗಳನ್ನು ಇಸ್ಲಾಮಿನಲ್ಲಿ ಕಾಣಬಹುದು. ರೋಗಿಗಳ ಪ್ರಾರ್ಥನೆ ಮಲಕ್ ಗಳ ಪ್ರಾರ್ಥನೆಗೆ ಸಮವಾಗಿದೆ. (ಹದೀಸ್) ರೋಗಗಳ ಕಾರಣದಿಂದ ನನ್ನ ಇಂತಿಂತಹ ದಾಸನಿಗೆ ಸರಿಯಾಗಿ ಸತ್ಕರ್ಮಗಳನ್ನು ಮಾಡಲು ಸಾಧ್ಯವಾಗಿಲ್ಲ ಆದ್ದರಿಂದ ಆತನಿಗೆ ಪರಿಪೂರ್ಣ ಪ್ರತಿಫಲವನ್ನು ದಾಖಲಿಸಲು ಅಲ್ಲಾಹನು ಮಲಕ್ ಗಳಲ್ಲಿ ನಿರ್ದೇಶಿಸಿರುವನು (ಹದೀಸ್) ರೋಗಿಗಳ ಸಂದರ್ಶನವನ್ನು ಅಲ್ಲಾಹನು ತನ್ನ ಸಂದರ್ಶನ ಮಾಡಿದಂತೆ ಎಂದು ಹೇಳಿರುವನು (ಹದೀಸ್) ಇದೆಲ್ಲವೂ ರೋಗಿಯ ಮಹತ್ವವನ್ನು ತಿಳಿಸಿಕೊಡುತ್ತದೆ. ರೋಗಿಗಳನ್ನು ಯಾವುದೇ ಮಾತುಗಳಿಂದ ನೋವಿಸಬಾರದು ಸಾಂತ್ವನಪಡಿಸಬೇಕು. ಆತನ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕೆಂದು ಇಸ್ಲಾಂ ಹೇಳಿದೆ. ಇದು ಆತನಲ್ಲಿ ಧೈರ್ಯ ತುಂಬಿ ರೋಗ ಬೇಗನೆ ಗುಣಮುಖವಾಗಲು ಸಹಕಾರಿಯಾಗುತ್ತದೆ.
ಮುಂಜಾಗ್ರತಾ ಕ್ರಮಗಳು:-
ಸಮಸ್ಯೆ ಬಂದ ಬಳಿಕ ತಲೆಕೆಡಿಸಿಕೊಳ್ಳುವ ಬದಲು ಸಮಸ್ಯೆ ಬಾರದಂತೆ ಎಚ್ಚರ ವಹಿಸುವುದು ಮುಖ್ಯ ಎಂಬ ಮಾತಿದೆ. ಅಂತೆಯೇ ಆರೋಗ್ಯ ಸಮಸ್ಯೆಗಳು ಬರುವ ಮುನ್ನವೇ ಬಾರದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ. ಇಸ್ಲಾಂ ಈ ನಿಟ್ಟಿನಲ್ಲಿ ಒಂದಲ್ಲ ನೂರು ಹೆಜ್ಜೆ ಮುಂದಿಟ್ಟಿದೆ. ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವ ಮೊದಲು ನಿನ್ನ ಕೈ ಹಾಗೂ ಬಾಯಿಯನ್ನು ಶುಚಿಗೊಳಿಸು (ಹದೀಸ್) ಆಹಾರ ಪದಾರ್ಥಗಳಿಗೆ ಶ್ವಾಸ ಬಿಡುವುದು, ಊದುವುದು ಮಾಡಬಾರದು. ಹಲವಾರು ರೋಗಾಣುಗಳಿಂದ ರಕ್ಷಣೆಯಾದ ಅಂಗಶುದ್ಧಿಯನ್ನು ಕಡ್ಡಾಯ, ಸುನ್ನತ್ ಗೊಳಿಸಿದೆ. ಶುಚಿತ್ವ ಸತ್ಯವಿಶ್ವಾಸದ ಪ್ರಧಾನ ಭಾಗವಾಗಿದೆ.(ಹದೀಸ್) ಶಿರವಸ್ತ್ರವನ್ನು ಸುನ್ನತ್ ಗೊಳಿಸಿದೆ. ಇದರಿಂದ ಸೂರ್ಯನ ರಶ್ಮಿ ಹಾಗೂ ವಾತಾವರಣದಲ್ಲಿನ ರೋಗಾಣುಗಳು ತಲೆಯ ಮೂಲಕ ಪ್ರವೇಶಿಸುವುದು ತಪ್ಪುತ್ತದೆ. ಕಡ್ಡಾಯ ಸ್ನಾನ ಮತ್ತು ಸುನ್ನತ್ ಸ್ನಾನವನ್ನು ಇಸ್ಲಾಂ ಜಾರಿಗೊಳಿಸಿದೆ. ದಂತ ಶುದ್ದೀಕರಣಕ್ಕೆ ಮಹತ್ತರ ಸ್ಥಾನ ನೀಡಿದೆ. ಶೌಚಾಲಯಕ್ಕೆ ಪ್ರವೇಶಿಸುವಾಗ ಶಿರವಸ್ತ್ರ, ಚಪ್ಪಲಿ ಹಾಕಿಕೊಳ್ಳಬೇಕು ಎಂದು ಹೇಳಿದೆ. ಇದೆಲ್ಲವೂ ಆರೋಗ್ಯದ ದೃಷ್ಟಿಯಿಂದ ಮಹತ್ತರವಾಗಿದೆ.
ರೋಗಕ್ಕೆ ಕಾರಣ :-
ಇಸ್ಲಾಂ ಪ್ರತಿಪಾದಿಸಿದ ಆರೋಗ್ಯದ ನಿಯಮಗಳನ್ನು ಪಾಲಿಸದೆ ಇರುವುದೇ ರೋಗಕ್ಕೆ ಮುಖ್ಯ ಕಾರಣ. ರೋಗಗಳ ಉಗಮ ಉದರವೆಂದೂ ಆರೋಗ್ಯ ಸಂರಕ್ಷಣೆಗೆ ಆಹಾರವನ್ನು ನಿಯಂತ್ರಿಸುವುದು ಅಗತ್ಯ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಬೋಧಿಸಿದರು. ಹೊಟ್ಟೆಯ ಮೂರನೇ ಒಂದು ಭಾಗವನ್ನು ಆಹಾರಕ್ಕೆ ಇನ್ನು ಒಂದು ಭಾಗ ನೀರಿಗೆ, ಮತ್ತೊಂದು ಭಾಗ ಉಸಿರಾಟದ ಸುಗಮಕ್ಕೆ ಮೀಸಲಿಡಬೇಕೆಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನಿರ್ದೇಶಿಸಿರುವರು. ಪಾತ್ರೆಗಳ ಪೈಕಿ ಅತ್ಯಂತ ನಿಕೃಷ್ಟವಾದ ಪಾತ್ರೆ ಹೊಟ್ಟೆಯೆಂಬ ಪ್ರವಾದಿ ವಚನ ಇಲ್ಲಿ ಗಮನಾರ್ಹ. ಈ ಸಮತೋಲನ ವ್ಯವಸ್ಥೆಗೆ ವಿರುದ್ಧವಾಗಿ ಬೇಕಾಬಿಟ್ಟಿ ತಿನ್ನಲು ತೊಡಗಿದಾಗ ನಮ್ಮ ಹೊಟ್ಟೆಗೆ ನಾವೇ ಚೂರಿ ಹಾಕಿಕೊಂಡೆವು. ಅತೀ ಹೆಚ್ಚಿನ ರೋಗಗಳು ಮುಸ್ಲಿಮರಾದ ನಮಗೆ ಎನ್ನುವುದು ವಿಷಾದನೀಯ.
ಈಜಿಪ್ಟಿನ ಹಿರ್ ಕಲ್ ಚಕ್ರವರ್ತಿ ಪ್ರವಾದಿವರ್ಯರಿಗೆ ಕಳುಹಿಸಿದ ಉಡುಗೊರೆಯ ಪೈಕಿ ಒಬ್ಬ ವೈದ್ಯನನ್ನು ಕಳುಹಿಸಿಕೊಟ್ಟಿದ್ದರು. ಮದೀನದಲ್ಲಿ ಹಲವು ದಿನಗಳ ಕಾಲ ನೆಲೆಸಿದ್ದ ಈ ವೈದ್ಯನ ಬಳಿ ರೋಗಿಗಳು ಬಾರದೆ ಇದ್ದಾಗ ಅಚ್ವರಿಗೊಂಡು ಈ ಬಗ್ಗೆ ಅರಿತಾಗ ಆತನಿಯ ದೊರೆತ ಉತ್ತರ “ನಾವು ಹಸಿವಾದಾಗ ಮಾತ್ರ ತಿನ್ನತ್ತೇವೆ. ಹಸಿವು ನೀಗಿದ ಕೂಡಲೇ ಬೋಜನ ನಿಲ್ಲಿಸುತ್ತೇವೆ. ಈ ಕಾರಣದಿಂದ ನಾವು ಆರೋಗ್ಯವಾಗಿದ್ದೇವೆ. ಮತ್ತು ರೋಗದಿಂದ ಮುಕ್ತರಾಗಿದ್ದೇವೆ. ಎಂದಾಗಿದೆ.” ಇಸ್ಲಾಮಿನ ಪ್ರತಿಯೊಂದು ಆಜ್ಞೆ, ತತ್ತ್ವಗಳ ಹಿಂದೆ ಆರೋಗ್ಯದ ರಹಸ್ಯ ಅಡಗಿದೆ. ಇಸ್ಲಾಂ ಕೇವಲ ಆಧ್ಯಾತ್ಮಿಕ ಧರ್ಮವಲ್ಲ. ಅದು ಎಲ್ಲದರ ಪರಿಪೂರ್ಣತೆಯಾಗಿದೆ.
ಚಿಕಿತ್ಸೆಗೆ ಪ್ರೋತ್ಸಾಹ :-
ಜಾಹಿಲಿಯ್ಯ ಕಾಲದಲ್ಲಿ ರೋಗ ದೈವ ಶಿಕ್ಷೆ ಅದಕ್ಕೆ ಔಷಧ ಮಾಡುವುದು ದೇವಾಪರಾಧ ಎಂದು ಮನಗಂಡಿದ್ದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇದನ್ನು ಸಂಪೂರ್ಣವಾಗಿ ವಿರೋಧಿಸಿದರು. ಚಿಕಿತ್ಸೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಚಿಕಿತ್ಸೆ ಸಂಬಂಧವಾಗಿ ಹೇಳುವಾಗ ಚಿಕಿತ್ಸೆ ವಿಧಾನ ಇಸ್ಲಾಮಿನಲ್ಲಿ ಮುಖ್ಯವಾಗಿ ಎರಡು ವಿಧಗಳಾಗಿವೆ. ಒಂದು ಆಧ್ಯಾತ್ಮಿಕ ಚಿಕಿತ್ಸೆ. ಇನ್ನೊಂದು ಭೌತಿಕ ಚಿಕಿತ್ಸೆ. ಹಿಂದಿನ ಕಾಲದಲ್ಲಿ ಆಧ್ಯಾತ್ಮಿಕ ಚಿಕಿತ್ಸೆ ವ್ಯಾಪಕವಾಗಿತ್ತು ಬರಬರುತ್ತಾ ವಿಶ್ವಾಸದಲ್ಲಿನ ಕೊರತೆ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ವ್ಯಪಾರೀಕರಣವಾದಾಗ ಇದರ ಪ್ರಯೋಜನದಿಂದ ಜನರು ವಂಚಿತರಾದರು. ನಿಮಗೆ ಕುರ್ಆನ್ ಹಾಗೂ ಜೇನುತುಪ್ಪದಲ್ಲಿ ನಾವು ಔಷಧ (ಶಿಫಾ) ವನ್ನು ಕರುಣಿಸಿರುವೆವು ಎಂದು ಅಲ್ಲಾಹನು ಹೇಳಿರುವನು. ಇಲ್ಲಿ ಕುರ್ಆನ್ ಆಧ್ಯಾತ್ಮಿಕ ಚಿಕಿತ್ಸೆಯಾದರೆ ಜೇನುತುಪ್ಪ ಭೌತಿಕ ಚಿಕಿತ್ಸೆಯಾಗಿದೆ. ಅಂದರೆ ಇಸ್ಲಾಂ ಎರಡೂ ರೀತಿಯ ಚಿಕಿತ್ಸೆಗೆ ಮಹತ್ವವನ್ನು ಕಲ್ಪಿಸಿದೆ. ಕಿಸ್ರಾ ಚಕ್ರವರ್ತಿಯ ತೀವ್ರ ತಲೆ ನೋವಿಗೆ ಖಲೀಫಾ ಉಮರ್ ರಳಿಯಲ್ಲಾಹು ಅನ್ಹು ಅಲ್ಲಾಹನ ನಾಮವನ್ನು ಬರೆದ ಟೋಪಿಯೊಂದನ್ನು ನೀಡಿದರು. ಅದನ್ನು ಹಾಕಿಕೊಂಡಾಗ ಚಕ್ರವರ್ತಿಯ ಹಲವು ವರ್ಷಗಳ ತಲೆನೋವು ಮಾಯವಾಯಿತು.
ಭೌತಿಕ ಚಿಕಿತ್ಸೆಗೆ ಪ್ರೋತ್ಸಾಹವಾಗಿ ಇಸ್ಲಾಂ :-
ಭೌತಿಕ ಚಿಕಿತ್ಸೆಯನ್ನು ಇಸ್ಲಾಂ ಬಹಳವಾಗಿ ಪ್ರೋತ್ಸಾಹಿಸಿದೆ. ಅಲ್ಲಾಹನು ರೋಗವನ್ನು ಮತ್ತು ಅದರ ಔಷಧವನ್ನು ನೀಡಿರುವನು (ಹದೀಸ್) ಭೌತಿಕ ವಿಧಾನಗಳ ಮೂಲಕ ರೋಗಕ್ಕೆ ಮದ್ದು ಮಾಡಬಹುದೇ? ಎಂದು ಕೇಳಿದಾಗ ಅಲ್ಲಾಹನ ರಸೂಲರು “ವೃದ್ಧಾಪ್ಯ ಅಲ್ಲದ ಎಲ್ಲಾ ರೋಗಕ್ಕೂ ಔಷಧವಿದೆ. ಮಾಡಬಹುದು ಎಂದರು.”
ಇಸ್ಲಾಂ ತಿಳಿಸಿದ ಔಷಧಗಳು :-
ಹಲವಾರು ರೋಗಗಳಿಗೆ ಇಸ್ಲಾಂ ಔಷಧವನ್ನು ಹೇಳಿದೆ. ವೈದ್ಯಲೋಕ ಇದನ್ನು ಅಂಗೀಕರಿಸಿದೆ. ಆಧುನಿಕ ಲೋಕದಲ್ಲಿ ಹೆಚ್ಚು ಪ್ರಚಲಿತವಾಗಿರುವ ಹಿಜಾಮ ಚಿಕಿತ್ಸೆ ಪ್ರವಾದಿ ಕಾಲದಲ್ಲಿಯೇ ಜಾರಿಯಲ್ಲಿತ್ತು. ಸ್ವತಃ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಈ ವಿಧಾನದ ಮೂಲಕ ಕೆಟ್ಟ ರಕ್ತವನ್ನು ಹೊರ ತೆಗೆದಿದ್ದರು. ಆದರೆ ಹಿಂದಿನ ಕಾಲದಲ್ಲಿ ಇದು ಹಿಜಾಮ ಎಂಬ ಹೆಸರಿನಿಂದ ಪ್ರಖ್ಯಾತವಾಗಿರಲಿಲ್ಲ. ಜೇನುತುಪ್ಪ, ಖರ್ಜೂರ, ಸುಣ್ಣಮಕ್ಕಿ, ಮೆಂತೆ, ಮುಳ್ಳುಸೌತೆ, ಹತ್ತಿಹಣ್ಣು, ಝೈತೂನ್ ಎಣ್ಣೆ, ಕೊಳಂಜಿ, ದಾಳಿಂಬೆ, ಕುಂಬಳಕಾಯಿ ಹೀಗೆ ಔಷಧಾಂಶ ಇರುವ ಹಲವಾರು ಹಣ್ಣು, ತರಕಾರಿ, ಸೊಪ್ಪು, ಕಾಳುಗಳ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉಲ್ಲೇಖಗಳನ್ನು ಕಾಣಬಹುದು. ಇಸ್ಲಾಂ ಹೇಳಿದ ಪ್ರತಿಯೊಂದು ಔಷಧ ಗುಣವಿರುವ ವಸ್ತುಗಳು ಇಂದು ಕೂಡ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಇಸ್ಲಾಮಿನ ನಿಯಮ, ಮಾರ್ಗಸೂಚಿಗಳನ್ನು ಅಧ್ಯಯನ ಮಾಡಿ ಅವುಗಳನ್ನು ಅಳವಡಿಸುವುದಾದರೆ ಇದು ರೋಗಗಳ ನಿವಾರಣೆ ಮತ್ತು ರೋಗ ಬಾರದಂತೆ ಪಡೆಯುವಿಕೆಗೆ ಸಹಕಾರಿಯಾಗಲಿದೆ ಖಂಡಿತ.
ಸಾಂಕ್ರಾಮಿಕ ರೋಗ ಮತ್ತು ಪರಿಹಾರವಾಗಿ ಇಸ್ಲಾಂ:-
ಸಾಂಕ್ರಾಮಿಕ ರೋಗಗಳ ಬಗ್ಗೆ ಇಸ್ಲಾಮಿನ ವೀಕ್ಷಣೆ ಅಧ್ಬುತವಾಗಿದೆ. ಸಾವಿರದ ನಾಲ್ಕುನೂರ ತೊಂಬತ್ತು ವರ್ಷಗಳ ಹಿಂದೆಯೇ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಈ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ. ಇಂತಹ ರೋಗಗಳ ಸಮಯದಲ್ಲಿ ಯಾರೂ ರೋಗ ಇರುವ ಪ್ರದೇಶಕ್ಕೆ ಭೇಟಿ ನೀಡಬಾರದು. ಅಲ್ಲದೆ ರೋಗ ಇರುವ ಸ್ಥಳದಿಂದ ಯಾರೂ ಇತರೆ ಸ್ಥಳಗಳಿಗೆ ಪ್ರಯಾಣಿಸದಂತೆ ತಾಕೀತು ಮಾಡಿದೆ. ಜನರಿಂದ ಅಂತರ ಪಾಲಿಸಬೇಕೆಂದು ಸೂಚಿಸಿದೆ. ಒಮ್ಮೆ ಖಲೀಫಾ ಉಮರ್ ರಳಿಯಲ್ಲಾಹು ಅನ್ಹು ತನ್ನ ಅನುಯಾಯಿಗಳೊಂದಿಗೆ ಶಾಮ್ ಗೆ ಯಾತ್ರೆ ಕೈಗೊಂಡಿದ್ದರು. ಯಾತ್ರೆ ಮಧ್ಯೆ ಶಾಂ ಪ್ರದೇಶದಲ್ಲಿ ಕಾಲಾರ ರೋಗ ವ್ಯಾಪಕ ಹರಡಿರುವ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣ ಖಲೀಫಾ ಉಮರ್ ರಳಿಯಲ್ಲಾಹು ಅನ್ಹು ತನ್ನ ಯಾತ್ರೆಯನ್ನು ಮೊಟಕುಗೊಳಿಸಿ ಹಿಂತಿರುಗಿದರು. ಇಸ್ಲಾಂ ಪ್ರತಿಯೊಂದು ವಿಷಯಗಳ ಮೇಲೆ ಬೆಳಕು ಚೆಲ್ಲಿದ ಧರ್ಮ.
ಮಾನಸಿಕ ರೋಗಗಳಿಗೆ ಪರಿಹಾರವಾಗಿ ಇಸ್ಲಾಂ :-
ಮಾನಸಿಕವಾಗಿ ಮನುಷ್ಯನನ್ನು ಕಾಡುವ ಹಲವು ರೋಗಗಳಿಗೆ ಇಸ್ಲಾಂ ಪರಿಹಾರವಾಗಿದೆ. ಮನುಷ್ಯನು ಸ್ವಭಾವತಃ ದುರ್ಬಲನಾಗಿದ್ದಾನೆ. ಪ್ರಯಾಸಗಳನ್ನು ಸಹಿಸಲು ಸಾಧ್ಯವಾಗದೆ ಮರುಗಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಹಾಗೂ ಮಾನಸಿಕ ಅಸ್ವಸ್ಥರಾಗುವ ಜನರನ್ನು ಧಾರಾಳವಾಗಿ ಕಾಣಬಹುದು. ಯಾವುದೇ ಸಂಕಷ್ಟದ ಸಮಯದಲ್ಲಿ ತಾಳ್ಮೆ ವಹಿಸಲು ಇಸ್ಲಾಂ ತಿಳಿಸುತ್ತದೆ. ಅಲ್ಲದೆ ತಾಳ್ಮೆಗೆ ಅತೀ ಹೆಚ್ಚಿನ ಪ್ರತಿಫಲವನ್ನು ಸಾರಿ ಹೇಳಿದೆ. ಮನಸ್ಸಿನ ಅತಿಯಾದ ಆಗ್ರಹ ಮತ್ತು ಅದನ್ನು ಸಾಧಿಸುವಲ್ಲಿನ ತೊಡಕುಗಳು ಮನುಷ್ಯನನ್ನು ಖಿನ್ನತೆಗೆ ಒಳಪಡಿಸಿ ಅನಾಹುತಗಳಿಗೆ ಅದು ಕಾರಣವಾಗುತ್ತದೆ. ಇಸ್ಲಾಂ ತನಗಿಂತ ಕೆಳಗಿನ ಜನರ ಕಡೆ ನೋಡುವಂತೆ ಮತ್ತು ಇದ್ದುದರಲ್ಲಿ ತೃಪ್ತಿಪಡಲು ಕಲಿಸಿಕೊಡುತ್ತದೆ.
ದೈಹಿಕ ರೋಗಗಳ ನಿವಾರಣೆ ಮತ್ತು ಇಸ್ಲಾಂ :-
ಇಸ್ಲಾಮಿನ ಪ್ರತಿಯೊಂದು ಆರಾಧನಾ ರೀತಿ, ಜೀವನ ಶೈಲಿ ಎಲ್ಲವೂ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಂರಕ್ಷಣೆಗೆ ಪೂರಕವಾಗಿದೆ. ಪ್ರತಿನಿತ್ಯ ನಿರ್ವಹಿಸಲ್ಪಡುವ ನಮಾಝ್, ವೃತಾನುಷ್ಟಾನ ಹೀಗೆ ಇಸ್ಲಾಮಿನ ಪ್ರತಿಯೊಂದು ವಿಚಾರಗಳನ್ನು ತೆಗೆದುಕೊಂಡರೆ ಈ ಸತ್ಯವನ್ನು ಅರಿತುಕೊಳ್ಳಬಹುದು. ಉಪವಾಸವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುವುದು ಎಂದು ವೈಜ್ಞಾನಿಕವಾಗಿಯೂ ಪ್ರಮಾಣೀಕರಿಸಲಾಗಿದೆ. ನಮ್ಮ ಜೀವನ ಶೈಲಿಯಲ್ಲಿ ದಿನದಿಂದ ದಿನಕ್ಕೆ ಆರೋಗ್ಯ ಸುಧಾರಿಸಲು ಉಪವಾಸ ಅತ್ಯಗತ್ಯವಾಗಿದೆ. ದೇಹದ ಜೀರ್ಣಕ್ರಿಯೆಯನ್ನು ಸರಿಪಡಿಸಲು ಉಪವಾಸ ಮುಖ್ಯ ಪಾತ್ರ ವಹಿಸುತ್ತದೆ. ಹಾಳಾದ ಜೀರ್ಣಕ್ರಿಯೆಯನ್ನು ಸರಿ ಪಡಿಸಲು ವಾರಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆಯಾದರೂ ಉಪವಾಸವಿರಬೇಕು ಎಂದು ಹೇಳುವವರನ್ನು ಕೇಳಿದ್ದೇವೆ. ಉಪವಾಸದಿಂದ ದೇಹದ ತೂಕ ಸಮ ಪ್ರಮಾಣದಲ್ಲಿ ಇಡಲು ಸಾಧ್ಯವಾಗುತ್ತದೆ. ಅಲ್ಲದೇ, ಮಾನಸಿಕ ಆರೋಗ್ಯಕ್ಕೂ ಉಪವಾಸ ತುಂಬಾ ಉತ್ತಮವಾದದ್ದು. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೇ, ಚಯಾಪಚಯವನ್ನು ವೇಗಗೊಳಿಸುತ್ತದೆ. ಉಪವಾಸವು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ. ದೀರ್ಘಾಯುಷ್ಯಕ್ಕೂ ಉಪವಾಸ ಒಳ್ಳೆಯದು. “ನೀವು ಕಡಿಮೆ ತಿನ್ನುವುದರಿಂದ ಹೆಚ್ಚು ಕಾಲ ಬದುಕುತ್ತೀರಿ. ಕೆಲವು ಅಧ್ಯಯನಗಳು ಈಗಾಗಲೇ ಇದನ್ನು ಸಾಬೀತು ಪಡಿಸಿವೆ. ‘ಲಂಘನಂ ಪರಮೌಷಧಂ’ ಅಂದರೆ ಉಪವಾಸವು ಪರಮ ಔಷಧ ಎಂಬ ಮಾತಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ಮಾಹಿತಿಯೊಂದಿಗೆ ಉಪವಾಸವನ್ನು ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಸಂರಕ್ಷಣೆ ಪಡೆಯಲು ಸಾಧ್ಯ.” ಎಂದು ಡಾ| ಸುಬೋಧ್ ಭಂಡಾರಿ, ವೈದ್ಯರು ಹೇಳುತ್ತಾರೆ.
ನೀವು ಹಲಾಲಾದ ಉತ್ತಮ ಅನ್ನ ಪಾನೀಯಗಳನ್ನು ಮಾತ್ರ ಸೇವಿಸಿರಿ. (ಪವಿತ್ರ ಖುರ್ಆನ್) ಇಸ್ಲಾಂ ಯಾವ ಆಹಾರವನ್ನು ಸೇವಿಸಬೇಕು. ಮತ್ತು ಯಾವೆಲ್ಲಾ ಆಹಾರವನ್ನು ತಿನ್ನಬಾರದೆಂದು ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ. ಸೃಷ್ಟಿಕರ್ತನಿಗೆ ತನ್ನ ಸೃಷ್ಟಿಗಳಿಗೆ ಯಾವುದು ಉತ್ತಮವೆಂದು ಚೆನ್ನಾಗಿ ಗೊತ್ತಿದೆ. ಸೃಷ್ಟಿಗಳಾದ ನಾವು ಅದನ್ನು ಪಾಲಿಸಿ ಮುನ್ನಡೆದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಇಸ್ಲಾಮಿನ ಬಗ್ಗೆ ನಾವು ಅರಿಯುವುದು ಬಹಳಷ್ಟಿದೆ. ಇಂತಹ ಕಾಲಿಕ ವಿಷಯಗಳು ಎಲ್ಲರ ಆಯ್ಕೆಯಾಗಲಿ.
– ಮುಹಮ್ಮದ್ ಇಸ್ಹಾಕ್ ಕೌಸರಿ ಪರ್ಲೋಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.