ಮುದ್ದೇಬಿಹಾಳ (www.vknews.com) : ದೇಶದ ಭದ್ರತೆ, ರಕ್ಷಣೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಜೊತೆಗಿದ್ದು ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ರಕ್ಷಣೆಯಂತಹ ಗಂಭೀರ ವಿಷಯದಲ್ಲಿ ಕೇಂದ್ರ ಸರ್ಕಾರ ಆವಾಗಾವಾಗ ಎಡವುತ್ತಿದ್ದು ಸರಿಪಡಿಸಿಕೊಳ್ಳಬೇಕು. ಸೂಕ್ಷ್ಮತೆ ಅರಿತುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಹೇಳಿದ್ದಾರೆ.
ಇಲ್ಲಿನ ಹುಡ್ಕೋ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚೀನಾ ಕ್ಯಾತೆಯಲ್ಲಿ ನಮ್ಮ ಯೋಧರ ಪ್ರಾಣತ್ಯಾಗಕ್ಕೆ ಶ್ರದ್ದಾಂಜಲಿ ಅರ್ಪಿಸಿ ಗೌರವಿಸೋಣ. ಗಡಿಯಲ್ಲಿನ ಯೋಧರ ಜೀವನ ನೀರ ಮೇಲಿನ ಗುಳ್ಳೆ ಇದ್ದಂತೆ. ಅಭದ್ರತೆ ಕಾಡುತ್ತಿದ್ದು ಆಧುನಿಕ ಶಸ್ತ್ರಾಸ್ತ್ರಗಳು ಅವರಿಗೆ ಸಿಗುತ್ತಿಲ್ಲ. ಅಭದ್ರತೆಯ ನಡುವೆಯೂ ಅವರ ಸೇವೆಗೆ ಬೆಲೆ ಕಟ್ಟಲಾಗದ್ದು ಎಂದರು.
ಕಾಂಗ್ರೆಸ್ ಪಕ್ಷ ದೇಶದ ಹಿತ ಕಾಪಾಡುವಲ್ಲಿ ಯಾವತ್ತೂ ಹಿಂದೇಟು ಹಾಕಿಲ್ಲ. ದೇಶದ ಐಕ್ಯತೆ ವಿಷಯ ಬಂದಾಗ ಪಕ್ಷ ಮರೆತು ಬೆಂಬಲ ನೀಡುತ್ತಿದೆ. ಸರ್ವಪಕ್ಷದ ಸಭೆಯಲ್ಲಿ ಎಲ್ಲರೂ ಒಂದೇ ದನಿಯಲ್ಲಿ ನಿಮ್ಮ ಜೊತೆ ಇದ್ದೇವೆ ಎಂದು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ನೈತಿಕ ಬಲ ಕೊಡಲು ನಾವೆಲ್ಲ ಜೊತೆಗಿದ್ದೇವೆ ಎಂದರು.
ದೇಶದ ಮಿಲಿಟರಿ ರಹಸ್ಯ, ರಕ್ಷಣಾ ವಿಷಯದಲ್ಲಿನ ಪ್ಯಾನಲ್ ಡಿಸ್ಕಶ್ಶನ್ ನಿಲ್ಲಿಸಬೇಕು. ನಮ್ಮ ಭಾರತೀಯರಿಗೆ ಭಾರತದ ಬಗ್ಗೆ ಇರುವ ಪ್ರೀತಿ ಇನ್ಯಾವುದೇ ದೇಶದ ಮೇಲೆ ಇಲ್ಲ ಅನ್ನೋದನ್ನು ಬೇರೆಯವರು ಹೇಳಿಕೊಡಬೇಕಿಲ್ಲ. ನಮ್ಮ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಬೇರೆ ತಾಯಿ ಹೆಸರು ಹೇಳುವ ಮೂರ್ಖತನವನ್ನು ಭಾರತೀಯರು ಮಾಡುವುದಿಲ್ಲ ಎಂದರು.
*ಶಾಸಕರ ವಿರುದ್ಧ ಟೀಕೆ:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಕೊರೊನಾ ಸಂಕಷ್ಟ ಸಂದರ್ಭದಲ್ಲಿನ ಕೆಲ ಚಟುವಟಿಕೆಗಳನ್ನು ಟೀಕಿಸಿದ ನಾಡಗೌಡರು, ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಜರ್ ಉಚಿತವಾಗಿ ಸರ್ಕಾರದಿಂದಲೇ ಕೊಡುವುದಾಗಿ ಸಚಿವ ಸುರೇಶಕುಮಾರ ಹೇಳಿದ್ದಾರೆ. ಶಾಸಕರು ಅಗ್ಗದ ಮಾಸ್ಕ್, ಸ್ಯಾನಿಟೈಜರ್ ಪ್ಯಾಕಿಂಗ್ ಮಾಡಿ ತಮ್ಮ ಹೆಸರು, ಬಿಜೆಪಿ ಸಿಂಬಾಲ್ ಹಾಕಿ ಕೊಟ್ಟಿದ್ದಾರೆ. ವಿದ್ಯಾರ್ಥಿ ಮಾಹಿತಿಯನ್ನು ಶಾಸಕರಿಗೆ ಕಳಿಸಬೇಕಂತೆ. ಮಕ್ಕಳನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಅಧಿಕಾರಿಗಳು ಒಂದು ಪಕ್ಷದ ಏಜಂಟರಂತೆ ನಡೆದುಕೊಂಡಿದ್ದಾರೆ. ಸಚಿವರನ್ನು ಬೆಂಗಳೂರಲ್ಲಿ ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸುತ್ತೇನೆ. ಗೋವಾದಲ್ಲಿರುವವರನ್ನು ಆನಲೈನ್ ಅಪ್ರೂವಲ್ ತಗೊಂಡು ಗಡಿದಾಟಿ ಉಚಿತವಾಗಿ ಕರೆತಂದಿದ್ದಾರೆ. ಅಲ್ಲಿ ಹೋಗಿ ಶೋ ಮಾಡೋದಾ. ಬಸ್ನಿಲ್ದಾಣದಲ್ಲಿ ಶಾಮಿಯಾನ ಹಾಕಿ ನಿಲ್ಲೋದಾ. 144 ಸೆಕ್ಷನ್ ಎಲ್ಲರಿಗೂ ಅಪ್ಲೈ ಆಗುತ್ತೆ. ಈ ಬಗ್ಗೆ ಯಡಿಯೂರಪ್ಪನವರನ್ನು ಪ್ರಶ್ನಿಸುತ್ತೇನೆ. ಸಿದ್ರಾಮಯ್ಯ ಸಿಎಂ ಆಗಿದ್ದಾಗ ಪಿಎಂ ಅವರು ಇದು 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಈಗ 20 ಪರ್ಸೆಂಟ್ ನಡೆಯುತ್ತಿದೆ. ಕುದುರೆ ವ್ಯಾಪಾರ ಮಾಡೋರು ವಿಧಾನಸೌಧದಲ್ಲಿ ಕುಳಿತರೆ ಅವರು ಕುದುರೆ ವ್ಯಾಪಾರವನ್ನೇ ಮಾಡೋದು ಎಂದರು. ಕೆಪಿಸಿಸಿ ಮಾಜಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.