ದಮ್ಮಾಮ್(ವಿಶ್ವ ಕನ್ನಡಿಗ ನ್ಯೂಸ್): ವ್ಯಕ್ತಿಯೋರ್ವ ಪ್ರವಾದಿ ಮುಹಮ್ಮದ್ (ಸ) ಅವರನ್ನು ಅವಹೇಳನ ಮಾಡಿದ ಬಳಿಕ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು ಮುನ್ನೂರರಷ್ಟು ಮಂದಿಯ ಮೇಲೆ ಯು.ಎ.ಪಿ.ಎ ಹೇರಿರುವುದು ಮತ್ತು ನಂತರದಲ್ಲಿ ಎಸ್.ಡಿ.ಪಿ.ಐ ಪಕ್ಷದ ಕಚೇರಿಯ ಮೇಲೆ ನಡೆದ ಪೊಲೀಸರ ದಾಳಿ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ತಾರತಮ್ಯದ ನಡೆಯಾಗಿದ್ದು, ಇಂಡಿಯನ್ ಸೋಶಿಯಲ್ ಫ಼ೋರಂ ಸೌದಿ ಅರೇಬಿಯಾ ಇದನ್ನು ತೀವ್ರವಾಗಿ ಖಂಡಿಸುತ್ತದೆ.
ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ರವರ ಸೋದರಳಿಯ ನವೀನ್ ಎಂಬಾತ ಪ್ರವಾದಿಯವರನ್ನು ನಿಂದಿಸಿದ ಕಾರಣ ಆಗಸ್ಟ್ 11 ರಂದು ಸಂಜೆ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ಆರಂಭಗೊಂಡಿತ್ತು. ತಡರಾತ್ರಿಯ ತನಕ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ ಕಾರಣ ಈ ಠಾಣೆಗಳ ಆವರಣದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದರು.
ದೇಶದ ವಿರುದ್ಧ ಸಂಘಟಿತವಾಗಿ ಅಪರಾಧ ನಡೆಸುವ ಭಯೋತ್ಪಾದನೆಯಂತಹ ಪ್ರಕರಣಗಳಲ್ಲಷ್ಟೆ ಯು.ಎ.ಪಿ.ಎ ಯನ್ನು ಹೇರಬಹುದಾಗಿದೆ. ಬೆಂಗಳೂರು ಪ್ರಕರಣದಲ್ಲಿ ಪೊಲೀಸರು ಎಫ಼್.ಐ.ಆರ್ ದಾಖಲಿಸಲು ವಿಳಂಬಿಸಿದ್ದಾಕ್ಕಾಗಿ ಆಕ್ರೋಶಿತಗೊಂಡ ಜನರ ಗುಂಪು ಸ್ವಯಂ ಪ್ರೇರಿತರಾಗಿ ಹಿಂಸಾಚಾರಕ್ಕೆ ಇಳಿದಿದ್ದರು. ಇಲ್ಲಿ ಯು.ಎ.ಪಿ.ಎ ದಾಖಲಿಸುವ ಯಾವುದೇ ಅವಕಾಶವೂ ಇರಲಿಲ್ಲ. ಆದರೆ ಅಪರಾಧ ಸಂಖ್ಯೆ 195/2020 ಮತ್ತು ಅಪರಾಧ ಸಂಖ್ಯೆ 229/2020ರಲ್ಲಿ ಪೊಲೀಸರು ಕ್ರಮವಾಗಿ 109 ಮತ್ತು 149 ಮಂದಿಯ ಮೇಲೆ ಯು.ಎ.ಪಿ.ಎ ಕರಾಳ ಕಾಯ್ದೆಯನ್ನು ಹೇರಿರುವುದು ಅತ್ಯಂತ ತಾರತಮ್ಯದ ನಡೆಯಾಗಿದೆ. ಬಿಜೆಪಿ ಆಡಳಿತಕ್ಕೆ ಬಂದ ನಂತರ ದೇಶದಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಸರಕಾರದ ಪೂರ್ವಾಗ್ರಹ ಪೀಡಿತ ಮತ್ತು ತಾರತಮ್ಯದ ಕ್ರಮಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ರಾಜ್ಯದ ಎಲ್ಲಾ ನಾಗರಿಕ ಹಕ್ಕು ಸಂಘಟನೆಗಳು ಇದನ್ನು ವಿರೋಧಿಸಬೇಕಾಗಿದೆ.
ಪ್ರತಿಭಟನೆಗಳು ಆರಂಭವಾದಾಗ ಎಸ್.ಡಿ.ಪಿ.ಐಯ ಸ್ಥಳೀಯ ನಾಯಕ ಮುಝಮ್ಮಿಲ್ ಪಾಶ ಪೊಲೀಸರ ಕೋರಿಕೆಯ ಮೇರೆಗೆ ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದರು. ಎನ್.ಡಿ.ಟಿ.ವಿ ಯಂತಹ ಜನಪರ ಮಾಧ್ಯಮಗಳು ಈ ಕುರಿತು ವೀಡಿಯೊಗಳನ್ನೂ ಪ್ರಕಟಿಸಿದ್ದವು. ಆದರೆ ಇದೀಗ ಮುಝಮ್ಮಿಲ್ ಪಾಶರವರನ್ನು ಬಂಧಿಸುವ ಮೂಲಕ ಸಂಪೂರ್ಣ ಪ್ರಕರಣವನ್ನು ಎಸ್.ಡಿ.ಪಿ.ಐ ತಲೆಗೆ ಕಟ್ಟುವ ಹುನ್ನಾರವನ್ನು ರಾಜ್ಯ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಎಸ್.ಡಿ.ಪಿ.ಐ ಕಚೇರಿಯ ಮೇಲೆ ಪೊಲೀಸ್ ದಾಳಿಗಳನ್ನು ಮಾಡಲಾಗುತ್ತಿದೆ. ರಾಜ್ಯ ಸರಕಾರದ ವೈಫ಼ಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಕೊಂಡೊಯ್ಯುವ ವ್ಯವಸ್ಥಿತ ಪ್ರಯತ್ನ ಇದಾಗಿದ್ದು ರಾಜ್ಯದ ಜನತೆ ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಮುಹಮ್ಮದ್ ಶರೀಫ಼್ ಅಧ್ಯಕ್ಷರು ಇಂಡಿಯನ್ ಸೋಶಿಯಲ್ ಫ಼ೋರಂ ಸೌದಿ ಅರೇಬಿಯಾ ಕರ್ನಾಟಕ
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.