(www.vknews.com) : ಗಂಡ ಮತ್ತು ಹೆಂಡತಿ ದೂರದ ಪ್ರಯಾಣಕ್ಕೆ ವಿಮಾನವನ್ನು ಏರುತ್ತಾರೆ. ಆ ವಿಮಾನದಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು. ಆ ವಿಮಾನದ ಪೈಲೆಟ್ ಸ್ವತಃ ಅವರ ಮಗ. ಪೈಲೆಟ್ ಯೂನಿಫಾರ್ಮ್ ಹಾಕಿಕೊಂಡು ನಗುನಗುತ್ತಾ ತಮ್ಮನ್ನು ವಿಮಾನದೊಳಗೆ ಸ್ವಾಗತಿಸಿದ ಮಗನನ್ನು ಕಂಡು ಭಾವುಕರಾಗುತ್ತಾರೆ. ತಾಯಿ ತನ್ನ ಮಗನನ್ನು ಅಪ್ಪಿ ಮುದ್ದಾಡುತ್ತಾಳೆ. ಪೈಲೆಟ್ ಮಗನೊಂದಿಗೆ ಹೆತ್ತವರ ಸಂಗಮದ ಬ್ಯಾರಿ ಭಾಷೆಯಲ್ಲಿ ಸಂಭಾಷಣೆಯಿರುವ ಅಪರೂಪದ ಭಾವನಾತ್ಮಕ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೋಟ್ಯಂತರ ಜನರು ಆ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಂಡಿದ್ದಾರೆ. ನಮಗೂ ಇಂಥದ್ದೇ ಒಂದು ಸೌಭಾಗ್ಯ ಸಿಕ್ಕಿದ್ದರೆ ಎಂದು ಆಶಿಸಿದ್ದಾರೆ. ಬ್ಯಾರಿ ಭಾಷೆ ಅರ್ಥ ಆಗದವರು ಇದು ಯಾವ ಭಾಷೆ ಅಂತ ತಲೆ ಕೆರೆದುಕೊಂಡವರೂ ಇದ್ದಾರೆ.
ಆ ಪೈಲೆಟ್ ರವರನ್ನು ಭೇಟಿಯಾಗಿ ಮಾತನಾಡುವ ಅಪೂರ್ವ ಅವಕಾಶ ಮಿತ್ರ ಹನೀಫ್ ಪುತ್ತೂರು ಮೂಲಕ ನನಗೂ ಸಿಕ್ಕಿತು. ಅವರೇ ಕ್ಯಾಪ್ಟನ್ ಫವಾಝ್ ಖಾದರ್ ಅರ್ಕುಳ. ಅಬ್ದುಲ್ ಖಾದರ್ ಅರ್ಕುಳ (ಓಕ್ಟ್ರಾಯಿ) ಮತ್ತು ಖೈರುನ್ನಿಸಾ ದಂಪತಿಗಳ ಸುಪುತ್ರ. ಬ್ಯಾರಿ ಸಮುದಾಯದ ಬೆರಳೆಣಿಕೆಯ ಪೈಲಟ್ ಗಳಲ್ಲಿ ಓರ್ವರಾಗಿ ನಾಡಿಗೆ ಕೀರ್ತಿ ತಂದ ಅಪ್ಪಟ ಬ್ಯಾರಿ.
ತಂದೆಯ ವ್ಯವಹಾರ ಮುಂಬೈಯಲ್ಲೇ ಇದ್ದ ಕಾರಣ ಅವರ ಶಿಕ್ಷಣವೆಲ್ಲ ಮುಂಬೈಯಲ್ಲಿ ನಡೆಯಿತು. ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಹೆತ್ತವರ ಕನಸಿಗೆ ವ್ಯತಿರಿಕ್ತವಾಗಿ ಸಿಎ ಆಗಬೇಕೆಂಬ ಕನಸು ಫವಾಝ್ ರದ್ದಾಗಿತ್ತು. ಹೆತ್ತವರ ಆಸೆಯಂತೆ ಪಿಯುಸಿ ಸೈನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಾಲ್ಯದಲ್ಲಿ ಇಂಜಿನು ಕಾರು ಬೈಕ್ ಇದರಲ್ಲಿ ಎಲ್ಲಿಲ್ಲದ ಆಸಕ್ತಿ. ಪಿಯುಸಿ ಮುಗಿಸಿದ ತಕ್ಷಣ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶವನ್ನು ಪಡೆಯಲಿಲ್ಲ. ಸಿಎ ಆಗಬೇಕೆಂಬ ಕನಸು ಕೂಡ ಮಾಸುತ್ತಾ ಹೋಯಿತು. ಪೈಲಟ್ ಆಗಬೇಕೆಂಬ ತುಡಿತ ಪ್ರಾರಂಭವಾಯಿತು.
2007 ರ ಹೊತ್ತಿಗೆ ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲ. ವೇಗದ ಕಮ್ಯುನಿಕೇಶನ್ ಇಲ್ಲ. ಏನಿದ್ದರೂ ಸೈಬರ್ ಗೆ ಹೋಗಿ ಇ ಮೇಲ್ ಮೂಲಕ ಸಂಪರ್ಕ ಮಾಡಬೇಕಾದ ಸಮಯ. ಅಂತಹ ಆ ಕಾಲದಲ್ಲೂ ಪೈಲೆಟ್ ಬಗ್ಗೆ ಲಭ್ಯ ಮೂಲಗಳಿಂದ ಬೇಕಾದ ಮಾಹಿತಿಯನ್ನು ಪಡೆದುಕೊಂಡು ಪೈಲಟ್ ತರಬೇತಿಗಾಗಿ ದೂರದ ಆಸ್ಟ್ರೇಲಿಯಾ ಕ್ಕೆ ಹೋಗ್ತಾರೆ. ಸಿಡ್ನಿ ಫ್ಲೈಯಿಂಗ್ ಟ್ರೈನಿಂಗ್ ಸೆಂಟರ್ ನಲ್ಲಿ 2 ವರ್ಷಗಳ ಕಾಲ ಸುಮಾರು ಇನ್ನೂರ ಐವತ್ತು ಗಂಟೆಗಳ ಅವಧಿಯ ವಿಮಾನ ಹಾರಾಟ ತರಬೇತಿಯನ್ನು ಪಡೆದು 2008 ರಲ್ಲಿ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ ಅನ್ನು ತನ್ನದಾಗಿಸುತ್ತಾರೆ. ನೇರ ಭಾರತಕ್ಕೆ ಬಂದು 2009 ರಲ್ಲಿ ಡಿಜಿಸಿಎ ಮೂಲಕ ಪೈಲಟ್ ಲೈಸನ್ಸ್ ಅನ್ನು ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ವೈಮಾನಿಕ ಸಂಸ್ಥೆಗಳಲ್ಲಿ ಉದ್ಯೋಗ ಸಿಗದ ಕಾರಣ ಸ್ವಂತ ಬಿಸಿನೆಸ್ ಪ್ರಾರಂಭಿಸುತ್ತಾರೆ. ಚರ್ಮದ ಚಪ್ಪಲಿ ತಯಾರಿ ಮತ್ತು ಮಾರಾಟ ಉದ್ಯಮದಲ್ಲಿ ಯಶಸ್ವಿಯಾಗುತ್ತಾರೆ. ವಿಮಾನ ಹಾರಾಟದಲ್ಲಿ ಹೆಚ್ಚಿನ ತರಬೇತಿಗಾಗಿ 2013 ರಲ್ಲಿ ಅಮೇರಿಕಾ ಮತ್ತು 2015 ರಲ್ಲಿ ಸ್ಪೇನ್ ಗೆ ಹೋಗಿ ಆಧುನಿಕ ತಂತ್ರಜ್ಞಾನಗಳನ್ನು ಅರಗಿಸಿಕೊಳ್ಳುತ್ತಾರೆ. ಹಿಂದುರಿಗಿ ಭಾರತಕ್ಕೆ ಬಂದಾಗ ಪ್ರತಿಷ್ಠಿತ ಮೂರು ವೈಮಾನಿಕ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳು ತೆರೆದುಕೊಳ್ಳುತ್ತವೆ. 2016 ರಲ್ಲಿ ಇಂಡಿಯನ್ ಏರ್ ಲೈನ್ಸ್ ನಲ್ಲಿ ಕೋ ಪೈಲಟ್ ಆಗಿ ತನ್ನ ವೃತ್ತಿ ಜೀವನಕ್ಕೆ ಪ್ರವೇಶಿಸಿದ ಕ್ಯಾಪ್ಟನ್ ಫವಾಝ್ 2019 ರಿಂದ ಸೀನಿಯರ್ ಫಸ್ಟ್ ಆಫೀಸರ್ ಆಗಿ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಎಲ್ಲಾ ಗಲ್ಫ್ ರಾಷ್ಟ್ರಗಳ ಸಹಿತ ಜಗತ್ತಿನ ನಾನಾ ದೇಶಗಳಿಗೆ ವಿಮಾನ ಹಾರಾಟವನ್ನು ಮಾಡಿದ ಅಪಾರ ಅನುಭವ ಅವರಿಗಿದೆ.
ಕೊರೋನಾ ವಾರಿಯರ್ಸ್ ಆಗಿ ಅಪೂರ್ವ ಸೇವೆ
ಇಡೀ ಜಗತ್ತಿಗೆ ಮಹಾಮಾರಿ ಎನಿಸಿದ ಕೊರೋನದ ಸಂಕಷ್ಟದ ಸಮಯದಲ್ಲೂ ಯೋಧರಂತೆ ಸೇವೆಯನ್ನು ಸಲ್ಲಿಸಿದವರು ಕ್ಯಾಪ್ಟನ್ ಫವಾಝ್. ಭಾರತ ಸರ್ಕಾರದ ವಂದೇಮಾತರಂ ಮಿಷನ್ ನಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಯೂನಿಫಾರ್ಮ್ ಧರಿಸಿ ಕಾಕ್ ಪಿಟ್ ನಲ್ಲಿ ಕುಳಿತು ವಿಮಾನ ಹಾರಿಸುವುದೇ ಒಂದು ರೋಮಾಂಚನ ಅನುಭವ. ಅದರಲ್ಲಿ ಸಿಗುವ ತೃಪ್ತಿ ಮತ್ತು ಸಂತೋಷವೇ ಬೇರೆ. ಅದನ್ನು ಯಾವ ಸಂಪತ್ತಿನ ಜೊತೆಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸಿಗುವ ಗೌರವ ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದಾಗ ಆಗುವ ಆತ್ಮತೃಪ್ತಿ ಅದನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ. ಕೆಲವೊಂದು ತೀರ್ಮಾನಗಳು ಒಂದು ಬಿಡಿ ಸೆಕೆಂಡಿನ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಅತ್ಯಂತ ಜವಾಬ್ದಾರಿಯುತ ಕೆಲಸ ಇದಾಗಿದೆ ಎಂಬ ಅತ್ಯಂತ ವಿನಯದ ಅವರ ಮಾತುಗಳನ್ನು ಕೇಳುವಾಗ ಅವರ ಬಗ್ಗೆ ಇದ್ದ ಗೌರವ ಮತ್ತು ಅಭಿಮಾನ ಇಮ್ಮಡಿಯಾಯಿತು. ಒಬ್ಬ ಪೈಲಟ್ ಹೇಗಿರಬಹುದು ಎಂದು ನಾನು ಗ್ರಹಿಸಿಕೊಂಡ ರೀತಿ ಸಂಪೂರ್ಣ ಉಲ್ಟಾ ಪಲ್ಟಿಯಾಯಿತು.
ನಾವು ರಸ್ತೆ ಮತ್ತು ರಸ್ತೆ ಬದಿ ಯಿಂದ ಹೊರಬರುವುದು ಯಾವಾಗ?
ಇತ್ತೀಚೆಗೆ ನಾನು ಕೆಲವಡೆ ಹೋದಾಗ ನಮ್ಮ ಯುವಕರಲ್ಲಿ ಕೇಳಿದೆ. ನಿಮಗೆ ಕಮಾಂಡರ್ ಸರ್ಫರಾಝ್ ಝಾಕಿರ್ ಗೊತ್ತಾ? ವಿಶ್ವದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ವಿಟ್ಲದ ಡಾ. ಅಬ್ದುರ್ರಹ್ಮಾನ್ ಗೊತ್ತಾ?
ಬಹುತೇಕ ಮಂದಿಗೆ ಅವರ ಪರಿಚಯವೂ ಇರಲಿಲ್ಲ. ಅವರ ಹೆಸರು ಕೇಳಿದ್ದೂ ಇಲ್ಲ. ಯಾಕೆಂದರೆ ಅವರ ಬಗ್ಗೆ ನಮ್ಮ ಮನೆಯಲ್ಲಿ, ಅಂಗಡಿ ಬಾಗಿಲಲ್ಲಿ , ಊರಿನ ಹರಟೆ ಹೊಡೆಯುವ ಕಟ್ಟೆಗಳಲ್ಲಿ, ವಾಟ್ಸಪ್, ಫೇಸ್ ಬುಕ್ಕುಗಳಲ್ಲಿ ಚರ್ಚೆಯೇ ಆಗಲಿಲ್ಲ. ಅವರ ಸಾಧನೆ ನಾವು ಗಮನಿಸಲೇ ಇಲ್ಲ. ಅವರಿಗೆ ಅಭಿಮಾನಿ ಬಳಗವೇ ಹುಟ್ಟಿಕೊಳ್ಳಲಿಲ್ಲ. ನಾವಿನ್ನೂ ರಸ್ತೆ ಮತ್ತು ರಸ್ತೆ ಬದಿಯಿಂದ ಹೊರಬಂದಿಲ್ಲ. ಶರವೇಗದ ಸರದಾರರ ಚಾಲನೆಯ ವೇಗದ ಬಗ್ಗೆ ಮಾತನಾಡುತ್ತಾ ಸಂಭ್ರಮಿಸುತ್ತಿದ್ದೇವೆ. ಆದರೆ ಆಕಾಶದಲ್ಲಿ ಹಾರುವ ಕನಸು ಇನ್ನೂ ಹುಟ್ಟಿಲ್ಲ. ವಿಮಾನ ಹಾರಾಟದ ಯೋಚನೆ ಬಂದಿಲ್ಲ. ನಾಸಾ, ಇಸ್ರೋ, ಐಐಎಸ್ಸಿ ಅಂದರೆ ಏನೂಂತಲೇ ಗೊತ್ತಿಲ್ಲ. ಮಂಗಳ ಗ್ರಹದ ಬಗ್ಗೆ ಕಲ್ಪನೆಯೇ ಇಲ್ಲ. ಐಐಟಿ, ಐಐಎಂ ಹೆಸರೇ ಕೇಳಿಲ್ಲ. ಇಂಡಿಯನ್ ಏರ್ ಫೋರ್ಸ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪರಿಚಯವೇ ಇಲ್ಲ. ನಾವಿನ್ನೂ ಅಕ್ವೇರಿಯಂನ ಒಳಗಿರುವ ಮೀನಿನಂತಿದ್ದೇವೆ. ಸಣ್ಣ ಜಾಗದಲ್ಲಿ ಈಜಾಡಿಕೊಂಡು.
ಜಗತ್ತು ಬಹಳ ವಿಶಾಲವಾಗಿದೆ. ಅದನ್ನು ಕಣ್ತುಂಬ ನೋಡಬೇಕು. ಜಗತ್ತಿನಲ್ಲಿ ಬಹಳಷ್ಟು ಸಂಶೋಧನೆ, ಅನ್ವೇಷಣೆ, ಬದಲಾವಣೆ ಆಗುತ್ತಿದೆ. ನಾವು ಅದರ ಭಾಗವಾಗಬೇಕು. ಇತರ ಸಮುದಾಯಗಳು ಸಾಧನೆಯ ಹಾದಿಯಲ್ಲಿ ಶರ ವೇಗದಲ್ಲಿ ಓಡುತ್ತಿವೆ. ನಾವು ಅವರ ಜತೆ ಜತೆಯಲ್ಲಿ ಓಡಬೇಕು. ಕ್ಯಾಪ್ಟನ್ ಸರ್ಫರಾಝ್, ಕ್ಯಾಪ್ಟನ್ ಫವಾಝ್ , ಕ್ಯಾಪ್ಟನ್ ಸಾರಾ ಹಮೀದ್, ಕ್ಯಾಪ್ಟನ್ ಸಲ್ವಾ ಫಾತಿಮಾ ರಂತೆ ನಮ್ಮ ಮಕ್ಕಳು ಆಕಾಶದಲ್ಲಿ ಹಾರಬೇಕು. ಇಸ್ರೋ ನಾಸಾ ಐಐಎಸ್ಸಿಯಲ್ಲಿ ನಮ್ಮ ಮಕ್ಕಳು ವಿಜ್ಞಾನಿಗಳಾಗಬೇಕು. ಐಐಟಿ ಐಐಎಂ, ಏಮ್ಸ್ ನಲ್ಲಿ ಕಲಿಯುವ ಮೇಧಾವಿಗಳಾಗಬೇಕು. ಅದಕ್ಕಾಗಿ ನಮ್ಮ ಮಕ್ಕಳಲ್ಲಿ ಕನಸುಗಳನ್ನು ಬಿತ್ತಬೇಕು. ಸ್ಫೂರ್ತಿಯನ್ನು ತುಂಬಬೇಕು. ಸಾಧಕರನ್ನು ಪರಿಚಯಿಸಬೇಕು.
ಚಾಲಕನಾಗಬೇಕು, ಗಲ್ಫಿಗೆ ಹೋಗಬೇಕು, ಸಣ್ಣಪುಟ್ಟ ವ್ಯಾಪಾರ ಮಾಡಬೇಕು ಹೀಗೆಲ್ಲಾ ಕನಸು ಕಾಣುತ್ತಿದ್ದ ನಮ್ಮ ಮಕ್ಕಳ ಮಧ್ಯೆ ವಿಮಾನ ಹಾರಾಟದ ಕನಸನ್ನು ಕಂಡು ಬಾನೆತ್ತರದಲ್ಲಿ ಹಾರಾಡುವ ಕ್ಯಾಪ್ಟನ್ ಫವಾಝ್ ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಲಿ. ಅವರ ಕನಸಿಗೆ ನೀರೆರೆದು ಪೋಷಿಸಿದ ಅವರ ಹೆತ್ತವರು ನಮಗೆಲ್ಲರಿಗೂ ಪ್ರೇರಣೆಯಾಗಲಿ. ಸರ್ವಶಕ್ತನು ಕ್ಯಾಪ್ಟನ್ ಫವಾಝ್ ರವರಿಗೆ ಇನ್ನಷ್ಟು ಉಜ್ವಲ ಭವಿಷ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ .
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.