ಆಪತ್ತು ಕಾಲದಲ್ಲಿ ಸಹಾಯ ಹಸ್ತ ಚಾಚುವ ಶ್ರೀಮಂತ ಮನಸ್ಸುಗಳಿಗೆ ಸಲಾಂ
ಭಾರತದಲ್ಲಿ ಲಕ್ಷಾಂತರ ಜನರು ಕೊರೋನಾ ಮಹಾಮಾರಿಯಿಂದ ತತ್ತರಿಸಿಹೋಗಿದ್ದಾರೆ. ಜನರ ಮಾನಸಿಕ ಪರಿಸ್ಥಿತಿ ಬಹಳ ತೀವ್ರವಾಗಿ ಹದಗೆಟ್ಟಿದೆ. ಕೆಲವು ಜನರು ಕರೋನ ಬಗ್ಗೆ ಇನ್ನೂ ಉಡಾಫೆಯಾಗಿ ಮಾತನಾಡುತ್ತಿರುವುದುಂಟು. ಆದರೆ ಕರೋನ ಭಾರತದ ಪರಿಸ್ಥಿತಿಯನ್ನು ಬದಲಾಯಿಸಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.
ನಾವು ಕಷ್ಟದಲ್ಲಿದ್ದಾಗ ಬೇರೆಯವರ ಸಹಾಯಕ್ಕಾಗಿ ಪರದಾಡುತ್ತೇವೆ. ಸರಿಯಾದ ಸಮಯಕ್ಕೆ ಸಹಾಯ ಸಿಗದಿದ್ದಾಗ ಬೇರೆಯವರ ಮೇಲೆ ಕೋಪ ಆಕ್ರೋಶವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ದೃಷ್ಟಿಯಲ್ಲಿ ಎಲ್ಲರೂ ಸ್ವಾರ್ಥಿಗಳಾಗಿ ಕಾಣತೊಡಗುತ್ತಾರೆ. ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಸಹಾಯಕ್ಕೆ ಬರುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸುತ್ತೇವೆ. ಆ ಸಮಯದಲ್ಲಿ ಅದು ಸಹಜವೂ ಹೌದು. ನಮ್ಮಲ್ಲಿ ನಾವು ಒಂದು ಪ್ರಶ್ನೆ ಹಾಕಿಕೊಳ್ಳೋಣ. ನಾವು ಬೇರೆಯವರ ಕಷ್ಟಕಾಲದಲ್ಲಿ ಸಹಾಯ ಮಾಡಿರುವುದುಂಟೆ? ನಾವು ನಮ್ಮ ಜೀವನದಲ್ಲಿ ವ್ಯಸ್ತವಾಗಿ ಇರುತ್ತೇವೆ, ಬೇರೆಯವರ ಸಹಾಯ ಮಾಡಲು ನಮ್ಮ ಬಳಿ ಸಮಯ ಉಂಟೆ? ಉತ್ತರ ಹುಡುಕುವುದು ಅಷ್ಟೊಂದು ಕಷ್ಟವೇನಿಲ್ಲ. ಸ್ವಲ್ಪ ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಹಿರಿಯರು ಹೇಳುತ್ತಾರೆ – ಜೀವನ ಒಂದು ಚಕ್ರವ್ಯೂಹ. ನಾವು ಏನು ಮಾಡುತ್ತೇವೋ ಅದು ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಮುಟ್ಟುತ್ತದೆ. ಎಲ್ಲರೂ ಸ್ವಾರ್ಥಿಗಳೇ ಅಲ್ಲ. ಹಾಗಿದ್ದಿದ್ದರೆ ಈ ಪ್ರಪಂಚ ಮುಂದೆ ಸಾಗುತ್ತಿರಲಿಲ್ಲ. ನಿಸ್ವಾರ್ಥ ಸೇವೆ ಮಾಡುವವರು ನಮ್ಮ ಸುತ್ತಮುತ್ತ ಇದ್ದೇ ಇದ್ದಾರೆ.
ನನಗೆ ಗೊತ್ತಿರುವ ಕೊರೋನಾ ರೋಗಿಗೆ ಶ್ವಾಸಕೋಶಗಳು 25ಕ್ಕೆ 25 ಭಾಗ ರೋಗಗ್ರಸ್ತವಾಗಿದ್ದವು. ಪ್ಲಾಸ್ಮಾ ಬೇಕಾಗಿತ್ತು. ಜಾಲತಾಣಗಳಲ್ಲಿ ಮೆಸೇಜು ಹರಿದಾಡಿಸಲಾಯಿತು. ಎಲ್ಲೂ ಸಹಾಯ ಸಿಗಲಿಲ್ಲ. ಸ್ನೇಹಿತರ ವಾಟ್ಸ್ ಆಪ್ ಗ್ರೋಪುಗಳಲ್ಲೂ ಸಹ ಪ್ಲಾಸ್ಮಾಗಾಗಿ ಕೋರಿಕೆಗಳು ಪ್ರಾರಂಭವಾದವು. ರೋಗಿಯ ಜಾತಿ ಧರ್ಮ ನೋಡದೆ ಕೇಳದೆ ಪ್ಲಾಸ್ಮಾ ಕೊಡಲು ಒಬ್ಬರು ಮುಂದೆ ಬಂದರು. ಈ ಮನುಷ್ಯತ್ವವೇ ನಮ್ಮ ದೇಶದ ಶಕ್ತಿ. ರೋಗಗಳು, ಕಷ್ಟಗಳು ಜಾತಿ ನೋಡಿ ಬರುವುದಿಲ್ಲ. ಆಪತ್ತು ಕಾಲದಲ್ಲಿ ಸಹಾಯ ಹಸ್ತ ಚಾಚುವ ಶ್ರೀಮಂತ ಮನಸ್ಸುಗಳಿಗೆ ಸಲಾಂ. ಸಮಯ ಬಂದಾಗ ಮಾನವೀಯತೆ ನಮ್ಮ ಮನಸ್ಸುಗಳ ಸಿಂಹಾಸನವೇರಿ ರಾರಾಜಿಸಲಿ.
ಸುಮಾರು ಎರಡು ತಿಂಗಳುಗಳಿಂದ ನನ್ನ ಸ್ನೇಹಿತನ ಕಲರ್ ಫೌಂಡೇಶನ್ ಬಡಬಗ್ಗರಿಗೆ ಅವರ ಏರಿಯಾದಲ್ಲಿ ಎಣ್ಣೆ, ಅಕ್ಕಿ, ಬೇಳೆಗಳನ್ನು ಒದಗಿಸುತ್ತಿದೆ. ಇದುವರೆಗೆ ಸುಮಾರು ಎರಡು ಸಾವಿರ ಮನೆಗಳಿಗೆ ಸಹಾಯ ಒದಗಿಸಿಲಾಗಿದೆ. ಸಂತೋಷದ ವಿಷಯವೆಂದರೆ ಜಾತಿಧರ್ಮದ ಚೌಕಟ್ಟಿಲ್ಲದೆ ಎಲ್ಲ ಜಾತಿಯವರಿಗೂ ಆದಷ್ಟು ಸಹಾಯ ಕಲ್ಪಿಸುತ್ತಿದ್ದಾರೆ. ಅವರಿಗೆ ಮತ್ತು ಅವರ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು.
ಈ ಲಾಕ್ಡೌನ್ನಲ್ಲಿ ಎಷ್ಟೋ ಹುಡುಗರ ಕೆಲಸ ಏನಾಗಿತ್ತು ಗೊತ್ತಾ …! ಆಕ್ಸಿಜನ್ ಸಿಲಿಂಡರಿಗಾಗಿ ಬೆಳಿಗ್ಗೆ ಐದು ಗಂಟೆಗೆ ಎದ್ದು ಹೋಗಿ, ಸಾಲಿನಲ್ಲಿ ನಿಂತು, ಸಿಲಿಂಡರನ್ನು ತಂದು ರೋಗಿಗಳ ಮನೆಗಳಿಗೆ ತಲುಪಿಸುವುದು. ಸೇವೆ ಸಣ್ಣದಾಗಿದ್ದರೂ ಕಷ್ಟಕಾಲದಲ್ಲಿ ಅದು ಬೆಟ್ಟಕ್ಕಿಂತ ದೊಡ್ಡದು.
ಕರೋನ ರೋಗಿಗಳ ಅಂತ್ಯಕ್ರಿಯೆ ಜಾತಿಯ ಹಂಗಿಲ್ಲದೆ ನಿಷ್ಕಲ್ಮಶ ಮನಸ್ಸುಗಳಿಂದ ನೆರವೇರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸಹಾಯಮಾಡಲು ಶುದ್ಧ ಮನಸ್ಸುಗಳು ಬೇಕು. ಆ ಮನಸ್ಸುಗಳಲ್ಲಿ ನಮ್ಮದು ಒಂದು ಮನಸ್ಸು ಸೇರಿಕೊಳ್ಳಲಿ.
-ಜಬಿವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.