ವಿರಳ ಜನ ಸರಳ ಮದುವೆ
ಮದುವೆಗಳ ವಹಿವಾಟು ಭಾರತದಲ್ಲಿ ಸುಮಾರು 50 ಬಿಲಿಯನ್ ಡಾಲರ್ ಗಳಿಗೆ ಮೀರುತ್ತಿದೆ. ಇದೆಲ್ಲ ಅಸಂಘಟಿತ ಜನರು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು. ಮದುವೆ ವಹಿವಾಟುಗಳಿಗೆ ಸಂಘಟಿತ ರೂಪವನ್ನು ಕೊಡಲು ಕಾರ್ಪೊರೇಟ್ ಕಂಪನಿಗಳು ಸಜ್ಜಾಗಿ ನಿಂತಿವೆ. ಸಾಮಾನ್ಯ ಜನರು ಮದುವೆಗೆ ೫ ಲಕ್ಷ ಖರ್ಚು ಮಾಡಿದರೆ ಶ್ರೀಮಂತರು ೫ ಕೋಟಿ ಖರ್ಚು ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳ ಬಗ್ಗೆ ಹೇಳುವುದಾದರೆ ಅವರಿಗೆ ಮದುವೆ ಸಮಾರಂಭ ಎನ್ನುವುದು ಕೀರ್ತಿಯ ಚಿಹ್ನೆಯಾಗಿ ಬಿಟ್ಟಿದೆ. ಅದ್ದೂರಿಯಾಗಿ, ವಿಭಿನ್ನವಾಗಿ ಮದುವೆ ಕಾರ್ಯಕ್ರಮ ನೆರವೇರಿಸುವುದು ಅವರ ಕನಸು. ಭಾರತದ ಸೆಲೆಬ್ರಿಟಿಗಳು ಪರದೇಶಗಳಲ್ಲಿ ಮದುವೆ ಸಮಾರಂಭಗಳಿಗೆ ಮಾಡುತ್ತಿರುವ ಖರ್ಚು ಅಥವಾ ವಹಿವಾಟು ಸುಮಾರು 45 ಸಾವಿರ ಕೋಟಿಗೆ ಮೀರಿದೆ. ಮದುವೆ ನಡೆಯುವ ಜಾಗ ಹೇಗಿರಬೇಕು, ಮದುವೆ ಸೆಟ್ ಹೇಗಿರಬೇಕು, ಎಷ್ಟು ರೀತಿಯ ಡಿಶ್ ಗಳಿರಬೇಕು, ಬಟ್ಟೆಗಳು ಹೇಗಿರಬೇಕು, ಆಭರಣಗಳು ಹೇಗಿರಬೇಕು, ಅತಿಥಿಗಳ ಸತ್ಕಾರ ಹೇಗಿರಬೇಕು ಇತ್ಯಾದಿ ಎಲ್ಲವೂ ಸಂಘಟಿತ ರೀತಿಯಲ್ಲಿ ಒಂದು ಅದ್ದೂರಿ ಸಿನಿಮಾ ರೀತಿಯಲ್ಲಿ ಪ್ಲಾನ್ ಮಾಡಿ ನೆರವೇರಿಸಲಾಗುತ್ತದೆ.
ಭಾರತದಲ್ಲಿ ಪ್ರತಿ ಗಂಟೆಗೆ ಎಷ್ಟು ಮದುವೆಗಳು ನಡೆಯುತ್ತಿವೆಯೋ ಲೆಕ್ಕಾಚಾರ ಮಾಡುವುದು ಕಷ್ಟ. ಆದರೆ ಎಷ್ಟು ಡೌರಿ ಕೇಸುಗಳು, ಸಾವಿನ ಪ್ರಕರಣಗಳು ನಡೆಯುತ್ತಿವೆ ಎಂಬುದನ್ನು ಇಂಡಿಯನ್ ನ್ಯಾಷನಲ್ ರೆಕಾರ್ಡ್ ಬ್ಯೂರೋ ಅಂಕಿ-ಅಂಶಗಳಿಂದ ತಿಳಿದುಕೊಳ್ಳಬಹುದು. ಎಷ್ಟೋ ಸಾವುಗಳು ನಿಗೂಢವಾಗಿಯೇ ಉಳಿದು ಬಿಡುತ್ತವೆ.
ಮಕ್ಕಳ ಮದುವೆ ನೆರವೇರಿಸುವುದು ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಅಷ್ಟೊಂದು ಸುಲಭದ ಮಾತಲ್ಲ. ಸಾಲದ ಹೊರೆ ಹೊರಲೇ ಬೇಕಾಗುತ್ತದೆ. ಮದುವೆ ನೆರವೇರಿಸಿದ ಮೇಲೂ ಹೆತ್ತವರಿಗೆ ಶಾಂತಿ ಸಿಗುವುದಿಲ್ಲ. ಏನಾದರೂ ಒಂದು ಸಂಕಟ ಕಾದು ಕುಳಿತಿರುತ್ತದೆ.
ಟಿವಿ ಸೀರಿಯಲ್ಲುಗಳಲ್ಲಿ, ಸಿನಿಮಾಗಳಲ್ಲಿ ಅದ್ದೂರಿ ಮದುವೆಗಳನ್ನು ನೋಡಿ ಕನಸುಗಳನ್ನು ಹಿಂಬಾಲಿಸುತ್ತಾ ಹೋಗುತ್ತೇವೆ. ಆದರೆ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ, ದುರಂತಗಳ ಬಗ್ಗೆ ಗಮನ ಹರಿಸುವುದಿಲ್ಲ. ಶ್ರೀಮಂತರೇನೋ ಅವರ ಮನಸ್ಸಿಗೆ ಬಂದ ಹಾಗೆ ಮದುವೆಗಳನ್ನು ಮಾಡುತ್ತಾರೆ. ಬಡವರ ಗತಿ ಏನು? ಒಳ್ಳೆಯ ಸಂಬಂಧ ಚಿಗುರ ಬೇಕಾದರೆ ಹಣ ಬೇಕು! ಅದೆಷ್ಟೋ ಹೆಣ್ಣು ಮಕ್ಕಳ ಕಂಕಣ ಭಾಗ್ಯ ಕೂಡಿ ಬರಲ್ಲ. ಏಕೆ? ಹಣದ ಕೊರತೆ. ವಯಸ್ಸಿಗೆ ಬಂದ ಮಕ್ಕಳು ಅಡ್ಡ ದಾರಿಗಳಿಗೆ ಜಾರಿಕೊಳ್ಳುವ ಭಯ ಸದಾ ಹೆತ್ತವರಿಗೆ ಕಾಡುತ್ತಿರುತ್ತದೆ. ಮದುವೆ ದುಬಾರಿಯಾಗಿದೆ. ಅಡ್ಡದಾರಿಗಳು ಸುಲಭವಾಗಿವೆ. ಇದಕ್ಕೆ ಯಾರು ಹೊಣೆ? ಸಮಾಜ. ಅಂದರೆ ನಾವುಗಳೇ. ಕರೋನಾ ಕಾಲದಲ್ಲಿ ಮದುವೆಗಳು ನಡೆಯಲಿಲ್ಲವೇ? ಛತ್ರ ಇಲ್ಲ, ಓಲಗ ಇಲ್ಲ, ಮದುವೆ ಮೆರವಣಿಗೆ ಇಲ್ಲ, ಊರಿಗೆಲ್ಲ ಮದುವೆ ಊಟ ಇಲ್ಲ, ಹೆಚ್ಚಿನ ಜನಸಂದಣಿ ಇಲ್ಲ, ಅತಿ ಸರಳವಾದ ರೀತಿಯಲ್ಲಿ ಮದುವೆಗಳು ನಡೆದವು. ಖರ್ಚು ಉಳಿಯಿತಲ್ಲವೇ! ಕರೋನ ಕಾಲ ಅದೆಷ್ಟೋ ಪಾಠಗಳನ್ನು ಹೇಳಿಕೊಟ್ಟಿದೆ. ಆದರೆ ನಾವು ಅದನ್ನು ಸ್ವೀಕರಿಸಲು ತಯಾರಿಲ್ಲ. ಎಲ್ಲಿಯವರೆಗೆ ನಮ್ಮ ಮನಸ್ಥಿತಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ “ಮದುವೆ” ಬಡವರಿಗೆ ಬೆಟ್ಟದಂತೆಯೇ…!!!
Zabiulla Khan
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.