ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :-ಗೌರಿ ಗಣೇಶ ಹಬ್ಬದ ಪ್ರಯುಕ್ತ ಪರಿಸರಕ್ಕೆ ಹಾನಿ ಆಗದಂತೆ ಕೆರೆಗಳು , ಜಲಾಶಯಗಳು , ನದಿಗಳು ಹಾಗೂ ಇನ್ನಿತರೆ ಜಲಮೂಲಗಳು ಕಲುಷಿತವಾಗದಂತೆ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬದ ಆಚರಣೆಗೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈ ಬಾರಿ ಗೌರಿ ಗಣೇಶ ಹಬ್ಬದಲ್ಲಿ ರಾಸಾಯನಿಕಗಳನ್ನು ಬಳಸಿ ಮಾಡುವ ಗಣೇಶ ಪ್ರತಿಮೆಗಳನ್ನು ಬಳಸುವುದರ ಬದಲು ಮನೆಯಲ್ಲಿ ತಯಾರಿಸುವ ರಾಸಾಯನಿಕ ಇಲ್ಲದ ಮಣ್ಣಿನಿಂದ ಮಾಡಿದ ಅಥವಾ ಗೋದಿ , ರಾಗಿ ಹಿಟ್ಟಿಗೆ , ಅರಿಶಿನ ಸೇರಿಸಿ ಸಣ್ಣ ಸಣ್ಣ ಗಣೇಶ ಪ್ರತಿಮೆಗಳನ್ನು ಬಳಸಿ ಪರಿಸರವನ್ನು ರಕ್ಷಿಸಬೇಕು ಎಂದು ಅವರು ಹೇಳಿದರು.
ಸರ್ಕಾರದ ಆದೇಶದಂತೆ ಕೋವಿಡ್ -19 ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವವರು ನಗರ ಸಭೆ ಅಥವಾ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶೋತ್ಸವ ಆಚರಿಸಬೇಕು. ಗಣೇಶ ಆಚರಣೆಯನ್ನು ಗರಿಷ್ಠ 5 ದಿನಗಳಿಂಗಿಂತ ಹೆಚ್ಚಿನ ದಿನ ಆಚರಿಸುವಂತಿಲ್ಲ. ಗಣೇಶ ಆಚರಣೆಯ ಆಯೋಜಕರು ಕೋವಿಡ್ -19 ರ ನೆಗೆಟಿವ್ ವರದಿ ಮತ್ತು ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು . ಸ್ಥಳೀಯ ಮಟ್ಟದಲ್ಲಿ ಆಯೋಜಕರು ಕರೋನಾ ಲಸಿಕೆ ಕಾರ್ಯಕ್ರಮವನ್ನು ಆಯೋಜಿಸಬೇಕು . ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಸ್ಥಳದಲ್ಲಿ ಯಾವುದೇ ರೀತಿಯ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು.
ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆ ಮಾಡುವಾಗ ಮೆರವಣಿಗೆಗಳನ್ನು ಮಾಡಬಾರದು ಎಂದು ಅವರು ತಿಳಿಸಿದರು . ಜಿಲ್ಲಾ ಪರಿಸರ ಅಧಿಕಾರಿಗಳಾದ ಎಸ್.ರಾಜಶೇಖರ್ ಅವರು ಮಾತನಾಡಿ ಈ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ 10 ಲಕ್ಷ ಅರಿಶಿನ ಗಣೇಶ ತಯಾರಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕೋವಿಡ್ ಸೋಂಕು ಹರಡುತ್ತಿರುವ ಈ ದಿನಗಳಲ್ಲಿ ಅರಿಶಿನ ಗಣೇಶ ಮನೆಯಲ್ಲಿ ತಯಾರಿಸಿ , ಮನೆಯಲ್ಲಿ ಪೂಜಿಸಿ ಮನೆಯ ಅಂಗಳದಲ್ಲಿ ವಿಸರ್ಜಿಸುವುದರಿಂದ ಮನೆಮಂದಿಗೆಲ್ಲಾ ರೋಗ ನಿರೋಧಕ ಶಕ್ತಿ ವೃದ್ಧಿಸಿ ಕೋವಿಡ್ ಸೋಂಕನ್ನು ಸಮರ್ಪಕವಾಗಿ ನಿಯಂತ್ರಿಸಲು ಸಹಕಾರಿಯಾಗುತ್ತದೆ ಹಾಗೂ ಪರಿಸರ ಕಲುಷಿತವಾಗದಂತೆ ಕಾಪಾಡಬಹುದು ಎಂದು ಅವರು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.