ಮಂಗಳೂರು (www.vknews.com) : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಇಂದು ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಹಾಲ್ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಕ್ಷಕರ ದಿನಾಚರಣೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ನಿವೃತ್ತರಾಗಿ ನಿವೃತ್ತಿಯ ನಂತರವೂ ಸಮಾಜ ಸೇವೆ ಮಾಡುತ್ತಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಈ ವರ್ಷ ಕೆನರಾ ಪ್ರಥಮ ದರ್ಜೆ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಬಾಲ ಸಂರಕ್ಷಣ ಕೇಂದ್ರ, ಅನಾಥಾಶ್ರಮ ಸ್ಥಾಪಕ ಸಂಚಾಲಕ, ಗೋವನಿತಾಶ್ರಯ ಟ್ರಸ್ಟಿನ ಸ್ಥಾಪಕ ಕಾರ್ಯದರ್ಶಿ, ಮೆಘಾಲಯದ ಸರಸ್ವತಿ ಎಜ್ಯುಕೇಶನ್ ಆಂಡ್ ವೆಲ್ಫೇರ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರು ಹಾಗೂ 600ಕ್ಕಿಂತಲೂ ಮಿಕ್ಕಿದ ಲೇಖನಗಳನ್ನು ವಿವಿಧ ಪತ್ರಿಕೆಯಲ್ಲಿ ಪ್ರಕಟಿಸಿರುವ ಡಾ. ಪಿ ಅನಂತಕೃಷ್ಣ ಭಟ್ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರು ಹಿರಿಯ ವಿದ್ಯಾರ್ಥಿಯಾಗಿ ಮತ್ತು ವಿದ್ಯಾರ್ಥಿ ಕಿರಿಯ ಶಿಕ್ಷಕರಾಗಿರುತ್ತಾರೆ. ಒಬ್ಬ ಉತ್ತಮ ಶಿಕ್ಷಕನು ಜೀವನದುದ್ದಕ್ಕೂ ಉತ್ತಮ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕರು ಯಾವಾಗಲೂ ವೃತ್ತಿಯನ್ನು, ಸಂಸ್ಥೆಯನ್ನು, ವಿದ್ಯಾರ್ಥಿಗಳನ್ನು ಪ್ರೀತಿಸಿದಾಗ ಮಾತ್ರ ಅವರಿಗೆ ತನ್ನಿಂದ ತಾನಾಗಿ ಗೌರವ ಸಿಗುತ್ತದೆ. ಪ್ರತಿಯೊಬ್ಬರು ಪರಿಪೂರ್ಣರಲ್ಲ ಒಂದಲ್ಲ ಒಂದು ರೀತಿಯ ತಪ್ಪುಗಳು ನಡೆಯುತ್ತದೆ. ಅಂತಹ ತಪ್ಪುಗಳನ್ನು ತಿದ್ದುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ ಶಿಕ್ಷಣವು ಜ್ಞಾನೋದಯಕ್ಕೆ ಸಂಬಂಧಿಸಿದೆ, ನಿಮ್ಮೊಳಗೆ ಬೆಳಕು ಇದ್ದಾಗ ಕತ್ತಲೆ ಇರುವುದಿಲ್ಲ. ಒಳ್ಳೆಯ ವಿಚಾರವನ್ನು ಮತ್ತು ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಲು ನಮ್ಮ ಮನಸ್ಸಿಗೆ ತರಬೇತಿ ನೀಡಬೇಕೆಂದು ಹೇಳಿದರು. ನಮ್ಮ ಶಿಕ್ಷಕರ ಕೊಡುಗೆಗಳನ್ನು ಗುರುತಿಸಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ರಾಷ್ಟ್ರ ನಿರ್ಮಾಣವು ಸಂಪೂರ್ಣವಾಗಿ ಮಾನವ ಸಂಪನ್ಮೂಲ ನಿರ್ಮಾಣದ ಮೇಲೆ ಅವಲಂಬಿತವಾಗಿದೆ. ರಾಷ್ಟ್ರದ ಬಗ್ಗೆ ಪ್ರೀತಿಯನ್ನು ಬೆಳೆಸಿ ಪರಿಸರದ ಬಗ್ಗೆ ಅರಿವು ಬೆಳೆಸಿಕೊಳ್ಳಿ, ಕರ್ತವ್ಯ ಮನೋಭಾವ ಮತ್ತು ಸಮಯ ಪ್ರಜ್ಞೆಯನ್ನು ಮರೆಯಬಾರದೆಂದು ಕರೆ ನೀಡಿದರು.
ದ್ವಿತೀಯ ಪಿಯುಸಿಯಲ್ಲಿ 600/600 ಅಂಕ ಪಡೆದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಮಾನಸ ಇವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೈಕ್ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಾಪಕರ ಪ್ರಯತ್ನದಿಂದ ಸಂಸ್ಥೆಯು ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನು ಪಡೆಯುವುದಕ್ಕೋಸ್ಕರ ಸಂಸ್ಥೆ ಶ್ರಮ ಪಡುತ್ತದೆ. ಇಲ್ಲಿ ವಿದ್ಯೆ ಕಲಿತ ಪ್ರತಿಯೊಂದು ಮಗು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬೇಕೆಂಬುದು ನಮ್ಮ ಆಶಯವೆಂದು ಹೇಳಿದರು.
ಶಕ್ತಿ ಶಿಕ್ಷಣ ಸಂಸ್ಥೆಯ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳನ್ನು ಆಡಳಿತ ಮಂಡಳಿಯಿಂದ ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ .ರಾಜಾರಾಮ್ ರಾವ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನಿರುದ್, ಸ್ವಾಗತವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ದಿಶಾ, ಶಿಕ್ಷಕರ ಬಗ್ಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಚಿಕೇತ್ ಮಾತನಾಡಿದರು. ಅತಿಥಿಗಳನ್ನು ಉಪನ್ಯಾಸಕರಾದ ಶ್ರೀಮತಿ ರೇಖಾ ಬಿ. ಬೈಕಾಡಿ ಮತ್ತು ಶರಣಪ್ಪ ಪರಿಚಯಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಶ್ರೀ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.