ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ): ಉಡುಪಿ ಜಿಲ್ಲಾ ಪಂಚಾಯತ್ನ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ, ಸಂಜೀವಿನಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.ಅವರು ಇಂದು ಮಣಿಪಾಲದ ಗೋಲ್ಡನ್ ಜುಬಿಲ್ ಹಾಲ್ನಲ್ಲಿ, ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಲಜೀವನ್ ಮಿಷನ್ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಣಿಪಾಲ ಇವರ ಸಹಯೋಗದಲ್ಲಿ ನಡೆದ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಹಾಗೂ ಉಪಸಮಿತಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಉಡುಪಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಸಂಜೀವಿನಿ ಯೋಜನೆಯಡಿ, ಮಹಿಳೆಯರು ಆರಂಭಿಸಿರುವ ಚಿಕ್ಕಿ ತಯಾರಿಕಾ ಘಟಕದ ಮೂಲಕ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಚಿಕ್ಕಿ ಪೂರೈಕೆ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸಂಜೀವಿನಿ ಉತ್ಪನ್ನಗಳ ಮಾರಾಟ ಮಳಿಗೆ, ಮೊಬೈಲ್ ಕ್ಯಾಂಟೀನ್, ಹೆಚ್.ಐ.ವಿ ಸೋಂಕಿತರು ಮತ್ತು ತೃತೀಯ ಲಿಂಗಿಗಳಿಗೆ ವಿವಿಧ ಯೋಜನೆಯಲ್ಲಿ ತೊಡಗಿಕೊಳ್ಳಲು ಅವಕಾಶ, ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಉತ್ಸವಗಳಲ್ಲಿ ಸಂಜೀವಿನಿ ತಂಡದ ಮಹಿಳೆಯರು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶಗಳನ್ನು ನೀಡುತ್ತಿದ್ದು, ಇದರಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಹ ಉತ್ತಮವಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿದ್ದು, ಈ ಮಹಿಳೆಯರ ಸಾಮರ್ಥ್ಯವನ್ನು ಅಗತ್ಯ ತರಬೇತಿಗಳ ಮೂಲಕ ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಉಚಿತ ಕಾನೂನು ನೆರವು ಪಡೆಯಬಹುದು. ಲೋಕ್ ಅದಾಲತ್ ಮತ್ತು ರಾಜೀ ಸಂಧಾನದ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಮಹಿಳೆಯರು ಸಂವಿಧಾನ ನೀಡಿರುವ ಹಕ್ಕುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಜನರಲ್ ಮೆನೇಜರ್ ರಾಮ ನಾಯ್ಕ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳು ಸಾಲವನ್ನು ಉತ್ತಮವಾಗಿ ಮರುಪಾವತಿಸುತ್ತಿದ್ದು, ಈ ವೃತ್ತದ 5 ಜಿಲ್ಲೆಗಳಲ್ಲಿ 4070 ಗುಂಪುಗಳ 61000 ಸದಸ್ಯರಿಗೆ ಒಟ್ಟು 139 ಕೋಟಿ ರೂ. ಸಾಲ ವಿತರಿಸಿದ್ದು, ಗುಂಪುಗಳ ಕಡಿಮೆ ಸಾಲದ ಬದಲು 10 ರಿಂದ 20 ಲಕ್ಷ ರೂ. ಗಳ ಸಾಲ ಪಡೆದು ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕೆನರಾ ಬ್ಯಾಂಕ್ನಿAದ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಮಾತನಾಡಿ, ಹಿಂದೆ ಮಹಿಳೆಯರು ಸ್ವ-ಸಹಾಯ ಸಂಘಧ ಮೂಲಕ ಸಣ್ಣಪುಟ್ಟ ಉದ್ಯೋಗಗಳನ್ನು ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಗೆ ರಾಷ್ಟç ಮಟ್ಟದ ಪ್ರಾಮುಖ್ಯತೆ ದೊರೆತ ಕಾರಣ, ಉದ್ಯೋಗಿಗಳಲ್ಲ ಉದ್ಯಮಿಗಳಾಗಿ ಎಂಬ೦ತೆ ಮಹಿಳೆಯರು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದು, ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಸಂಜೀವಿನಿ ಸಂತೆಗಳನ್ನು ಆಯೋಜಿಸಲಾಗಿದೆ. 60 ಮಂದಿ ಚಾಲನಾ ಲೈಸೆನ್ಸ್ ಪಡೆದು ಸ್ವ-ಉದ್ಯೋಗಿಗಳಾಗಿದ್ದಾರೆ. ಸಂಚಾರಿ ಕ್ಯಾಂಟೀನ್ ಆರಂಭ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ಯಾಂಟೀನ್ ನಿರ್ವಹಣೆ, ಬ್ಯಾಂಕಿ೦ಗ್ ನೆರವು ನೀಡುವ ಸಖಿಯರಾಗಿ 110 ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಣೆ, ಹಡಿಲು ಭೂಮಿ ಕೃಷಿ ಕಾರ್ಯ, ಹೈನುಗಾರಿಕೆ, ಕೃಷಿ ಯಂತ್ರೋಪಕರಣ ಕೇಂದ್ರದ ನಿರ್ವಹಣೆ, ಉದ್ಯೋಗ ಮೇಳದ ಮೂಲಕ 600 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿದೆ. ಪ್ರತೀ ತಾಲೂಕಿನಲ್ಲಿ ತಲಾ 2 ಸಂಜೀವಿನಿ ನರ್ಸರಿ, ಸಂಜೀವಿನಿ ಕಲಾತಂಡ ರಚನೆ, ಬ್ಯೂಟಿ ಪಾರ್ಲರ್, ಸೂಪರ್ ಮಾರ್ಕೆಟ್ ಆರಂಭಿಸುವ ಜೊತೆಗೆ ಆಹಾರ ಉತ್ಪನ್ನಗಳ ಸರಬರಾಜು ಮಾಡುವ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯ ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಹೆಚ್ಚಿನ ಸಬಲೀಕರಣ ಮಾಡಲಾಗುವುದು ಎಂದರು.ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ತಾಲೂಕು ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನವಶಕ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ, ಬಡಾ ನಿಡಿಯೂರು ಇವರಿಗೆ ಪ್ರಶಸ್ತಿ ವಿತರಿಸಲಾಯಿತು.ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.ಜಲ ಜೀವನ್ ಮಿಷನ್ ಯೋಜನೆಯ ಮುಖ್ಯಸ್ಥ ಗಿರೀಶ್, ವಕೀಲ ಪ್ರದೀಪ್ ಹಾಜರಿದ್ದರು.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಸ್ವಾಗತಿಸಿದರು, ಜಿ.ಪಂ.ನ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿ ಸಿಲ್ವಾ ವಂದಿಸಿದರು. ಅಶ್ವಿನಿ ಬಾರಕೂರು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.