ಪಾಟ್ನಾ (ವಿಶ್ವ ಕನ್ನಡಿಗ ನ್ಯೂಸ್) : ಮಿಲಿಟರಿ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಬಿಹಾರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರಾಖಂಡ್ ರಾಜ್ಯಗಳು ಪ್ರತಿಭಟನೆಗಳು ನಡೆಯುತ್ತಿರುವ ರಾಜ್ಯಗಳಲ್ಲಿ ಸೇರಿವೆ.
ಬಿಹಾರದ ಭಬುವಾದಲ್ಲಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದಾರೆ. ಪ್ರಯಾಣಿಕರನ್ನು ಇಳಿಸಿದ ನಂತರ ಪ್ರಯಾಣಿಕ ರೈಲಿಗೆ ಬೆಂಕಿ ಹಚ್ಚಲಾಯಿತು. ಸೇನಾ ಆಕಾಂಕ್ಷಿಗಳು ಬಿಹಾರದ ವಿವಿಧ ಜಿಲ್ಲೆಗಳಲ್ಲಿ ರೈಲು ಮತ್ತು ರಸ್ತೆ ಸಾರಿಗೆಯನ್ನು ಅಸ್ತವ್ಯಸ್ತಗೊಳಿಸಿದರು. ಹಲವಾರು ಸ್ಥಳಗಳಲ್ಲಿ, ರೈಲ್ವೆ ಹಳಿಗಳಿಗೆ ಬೆಂಕಿ ಹಚ್ಚಲಾಯಿತು.
ಜೆಹಾನಾಬಾದ್, ಬಕ್ಸಾರ್ ಮತ್ತು ನವಾಡಾದಲ್ಲಿ ರೈಲುಗಳನ್ನು ನಿಲ್ಲಿಸಲಾಯಿತು. ಆರಾದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಸಿಡಿಸಿದರು. ಪಾಟ್ನಾದಲ್ಲಿ 10 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಮುಂಗೇರ್ ನ ಸಫಿಯಾಬಾದ್ನಲ್ಲಿ ಪ್ರತಿಭಟನಾಕಾರರು ಪಾಟ್ನಾ-ಭಾಗಲ್ಪುರ್ ಮುಖ್ಯ ರಸ್ತೆಯನ್ನು ತಡೆದರು. ನವಾಡಾದ ಪ್ರಜಾತಂತ್ರ ಚೌಕ್ ನಲ್ಲಿ ನೂರಾರು ಯುವಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜೆಹಾನಾಬಾದ್ನಲ್ಲಿ, ವಿದ್ಯಾರ್ಥಿಗಳು ಗಯಾ-ಪಾಟ್ನಾ ರೈಲ್ವೆ ಹಳಿಯನ್ನು ತಡೆದರು ಮತ್ತು ರಸ್ತೆಯಲ್ಲಿ ಟೈರ್ ಗಳನ್ನು ಸುಡುವ ಮೂಲಕ ಪ್ರತಿಭಟಿಸಿದರು. ಪ್ರತಿಭಟನಾಕಾರರು ಇಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.
ಪೊಲೀಸರು ಮತ್ತು ಪ್ರತಿಭಟನಾಕಾರರ ಮದ್ಯೆ ಯುಪಿಯ ಹಲವಾರು ಸ್ಥಳಗಳಲ್ಲಿ ಘರ್ಷಣೆ ನಡೆದವು. ಇಲ್ಲಿನ ಹಲವಾರು ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ಅಜ್ಮೀರ್-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲೂ ದಿಗ್ಬಂಧನವಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಈ ಯೋಜನೆಯ ವಿರುದ್ಧ ವ್ಯಾಪಕ ಅಭಿಯಾನ ನಡೆಯುತ್ತಿದೆ.
ಅಗ್ನಿಪಥ್ ಎಂಬುದು ಕೇಂದ್ರವು ರೂಪಿಸಿರುವ ಅಲ್ಪಾವಧಿಯ ಮಿಲಿಟರಿ ನೇಮಕಾತಿ ಯೋಜನೆಯಾಗಿದೆ. ಮಿಲಿಟರಿ ಸೇವೆಯ ಅವಧಿಯನ್ನು ಕಡಿತಗೊಳಿಸಿರುವುದು ಮತ್ತು ಪಿಂಚಣಿ ಸೇರಿದಂತೆ ಸವಲತ್ತುಗಳ ರದ್ದತಿಯು ಅಭ್ಯರ್ಥಿಗಳನ್ನು ಕೆರಳಿಸಿದೆ. ಈ ಯೋಜನೆಯಲ್ಲಿ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 21ಕ್ಕೆ ನಿಗದಿಪಡಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.