ದೋಹಾ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಸಂಘ ಕತಾರ್ (ದೋಹಾ ಕತಾರ್ನ ಭಾರತೀಯ ರಾಯಭಾರ ಕಚೇರಿಯ ಅಧೀನದಲ್ಲಿರುವ ಭಾರತೀಯ ಸಂಸ್ಕೃತಿಕ ಕೇಂದ್ರದ ಸಹಯೋಗಿ ಸಂಸ್ಥೆ) ತನ್ನ “ಆಜಾದಿ ಕಿ ಅಮೃತ್ ಮಹೋತ್ಸವ” ಆಚರಣೆಯ ಭಾಗವಾಗಿ ೨೦೨೨ ರ ವಾರ್ಷಿಕ ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿತು.
ಒಟ್ಟು ಒಂಬತ್ತು ಸ್ಪರ್ಧೆಗಳಿಗೆ ೨೫೦ ಪ್ರವೇಶ ನೋಂದಣಿಗಳಿದ್ದಿದ್ದು ಈ ಬಾರಿಯ ವಿಶೇಷ, ಸ್ಪರ್ಧೆಗಳ ಪ್ರಮುಖ ಅಂಗವಾಗಿ ಆಯೋಜಿಸಿದ್ದ ತಾಯಿ ಮತ್ತು ಮಗ/ಮಗಳಿಗಾಗಿ “ಅರಸಿ ಮತ್ತು ರಾಜಕುಮಾರ/ರಾಜಕುಮಾರಿ” ಎಂಬ ಡ್ಯುಯೆಟ್ ಫ್ಯಾಶನ್ ಶೋ ಸ್ಪರ್ಧೆಯು ಸಭಾಂಗಣದ ಪ್ರೇಕ್ಷಕರಿಂದ ಹೆಚ್ಚಿನ ಚಪ್ಪಾಳೆ ಗಿಟ್ಟಿಸಿತು, ಈ ಕಾರ್ಯಕ್ರಮದ ತೀರ್ಪುಗಾರರಾಗಿ ಮಿಸ್ ಆರತಿ ಗೌತಮ್ (ಮೊದಲ ರನ್ನರ್ ಅಪ್ ಏಷ್ಯಾ ಪೆಸಿಫಿಕ್) ಮತ್ತು ಶ್ವೇತಾ ಭಾರದ್ವಾಜ್, ಪ್ರಸಿದ್ಧ ನೃತ್ಯ ಸಂಯೋಜಕರು ಮತ್ತು ವ್ಯಕ್ತಿತ್ವ ತರಬೇತುದಾರರು ಭಾಗವಹಿಸಿದ್ದರು.
“ಅರಸಿ ಮತ್ತು ರಾಜಕುಮಾರ – ೨೦೨೨”ರ ವಿಜೇತರಾಗಿ ಡಾ. ರಮ್ಯಾ ತಿಮ್ಮೇಗೌಡ ಮತ್ತು ಮಾಸ್ಟರ್ ಕೃಷ್ಣ ಗೌಡ ಹೊರ ಹೊಮ್ಮಿದ್ದಾರೆ.
ಸಮಾರಂಭದಲ್ಲಿ ಕತಾರ್ನ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರ ಮತ್ತು ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಹಿರಿಯ ಗಣ್ಯರು, ಕರ್ನಾಟಕ ಮೂಲದ ಸಂಘಗಳ ಅಧ್ಯಕ್ಷರು ಮತ್ತು ಕರ್ನಾಟಕ ಸಂಘ ಕತಾರ್ನ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ.ಪಿ.ಎನ್.ಬಾಬುರಾಜನ್ ಅವರ ಮೂರು ದಶಕಳಿಗೂ ಹೆಚ್ಚು ಕಾಲ ಭಾರತೀಯ ಸಮುದಾಯಗಳಿಗೆ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಘ ಕತಾರ್ ವತಿಯಿಂದ ಕರ್ನಾಟಕದ ಸಾಂಪ್ರದಾಯಿಕ ಮೈಸೂರು ಶೈಲಿಯಲ್ಲಿ ಸನ್ಮಾನಿಸಲಾಯಿತು.
ತಮ್ಮ ಭಾಷಣದಲ್ಲಿ ಶ್ರೀ ಪಿ ಎನ್ ಬಾಬುರಾಜನ್ ಅವರು ತಾಯಿ ಮತ್ತು ಮಗುವಿಗೆ ಇಂತಹ ಅದ್ಭುತವಾದ ವೇದಿಕೆ ಕಲ್ಪಿಸಿದ ಕರ್ನಾಟಕ ಸಂಘ ಕತಾರ್ ನ ಸಮಿತಿಗೆ ಹಾಗೂ ಸಂಘವು ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ಕನ್ನಡಿಗ ಸಮುದಾಯವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಕತಾರ್ ನ ಸಾಂಸ್ಕೃತಿಕ ಸಚಿವಾಲಯದ ಕಲಾ ಮತ್ತು ಸಂಸ್ಕೃತಿ ಇಲಾಖೆಯ ಸಲಹೆಗಾರರಾದ ಶ್ರೀ ಜಮಾಲ್ ಫಯೆಜ್ ಅವರು ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ್ದು ಮಾತ್ರವಲ್ಲದೆ, ಸಭೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮತ್ತೊಬ್ಬ ಗೌರವಾನ್ವಿತ ಅತಿಥಿಗಳಾದ ಶ್ರೀ ಹಾಸನ ಚೌಗುಲೆ, ಪ್ರವಾಸಿ ಭಾರತಿ ಸನ್ಮಾನ ಪುರಸ್ಕೃತರು ಮತ್ತು DPS ಸಮೂಹ ಸಂಸ್ಥೆಗಳ ಅಧ್ಯಕ್ಷರು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಇತಿಹಾಸದ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು ಮತ್ತು ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿರುವುದಾಗಿ ಪುನರುಚ್ಚರಿಸಿದರು. ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಂನ ಅಧ್ಯಕ್ಷರಾದ ವಿನೋದ್ ನಾಯರ್, ICBF ಗೆ ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಕರ್ನಾಟಕ ಸಂಘ ಕತಾರ್ಗೆ ಧನ್ಯವಾದ ಅರ್ಪಿಸಿದರು.
ಕತಾರ್ ಮೂಲದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳ ಮತ್ತು ಕರ್ನಾಟಕ ಸಂಘ ಕತಾರ್ ಸದಸ್ಯರ ಅನೇಕ ವಿಶಿಷ್ಟ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು. ಸ್ವಾಗತ ಭಾಷಣದಲ್ಲಿ ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಶ್ರೀ ಮಹೇಶ್ ಗೌಡ ಅವರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದರು, ಅದರಲ್ಲೂ ವಿಶೇಷವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಕುಟುಂಬವನ್ನು ಪ್ರೋತ್ಸಾಹಿಸಿ ನೆರವಾದ ತಂದೆಯರು, ಪತಿಯರಿಗೆ ವಂದನೆಗಳನ್ನು ತಿಳಿಸಿದರು. ಸಮುದಾಯದ ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಭವಿಷ್ಯದಲ್ಲಿ ಇನ್ನೂ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.