ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ): ಓಟಿಗಾಗಿ ನೋಟು ನೀಡುವ ಸಂಸ್ಕೃತಿ ವಿರುದ್ಧ ಮಹಿಳೆಯರು ಸಿಡಿದು ಧ್ವನಿಯೆತ್ತಿದರೆ ಮಾತ್ರ ಸಮಾಜ ಹಾಗೂ ದೇಶ ಉಳಿಯಲು ಸಾಧ್ಯ ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು .
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ೨೯ ಮಹಿಳಾ ಹಾಗೂ ಒಂದು ಪುರುಷ ಸ್ವಸಹಾಯ ಸಂಘಗಳಿಗೆ ೧.೫೦ ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು .
ಮತವನ್ನು ಮಾರಿಕೊಳ್ಳುವ ಅನಿಷ್ಠ ಪದ್ಧತಿ ಕೊನೆಗೊಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ ಎಂದ ಅವರು , ಇದರ ವಿರುದ್ದ ಪ್ರತಿಯೊಬ್ಬರೂ ಧ್ವನಿಯೆತ್ತಿದಾಗ ಉತ್ತಮ ಜನನಾಯಕರು , ಸದೃಢ ಜನಪರ ಸರ್ಕಾರ ಉದಯಿಸಲು ಸಾಧ್ಯ ಎಂದು ತಿಳಿಸಿ , ಮತದಾನದ ಹಕ್ಕನ್ನು ಯಾರಿಗೂ ಅಡವಿಡದಿರಿ ಎಂದರು .
ಡಿಸಿಸಿ ಬ್ಯಾಂಕ್ ಮೂಲಕ ಪ್ರತಿ ಮಹಿಳೆಗೂ ತಲಾ ೨ ಲಕ್ಷ ಸಾಲ ನೀಡುವ ಅಧಿಕಾರ ನಬಾರ್ಡ್ ನೀಡಿದೆ , ಒಂದು ಸಂಘಕ್ಕೆ ೨೦ ಲಕ್ಷ ಸಾಲ ನೀಡಲು ನಾವು ಸಿದ್ಧರಿದ್ದೇವೆ ಎಂದ ಅವರು , ಸಾಲ ಮರುಪಾವತಿಯಲ್ಲಿ ಉತ್ತಮ ಮೇಲಂಕಿ ಹಾಕಿಕೊಂಡಿರುವ ಮಹಿಳಾ ಸಂಘಗಳಿಗೆ ಈ ಸೌಲಭ್ಯ ನೀಡುತ್ತೇವೆ ಎಂದರು .
ಅವಿಭಜಿತ ಜಿಲ್ಲೆಯ ಹೆಣ್ಣು ಮಕ್ಕಳ ಕಷ್ಟಕ್ಕೆ ಡಿಸಿಸಿ ಬ್ಯಾಂಕ್ ಸ್ಪಂದಿಸಿದೆ , ಯಾವುದೇ ಮಧ್ಯವರ್ತಿಗಳ ಹಾವಳಿ , ಭ್ರಷ್ಟತೆಗೆ ಅವಕಾಶವಿಲ್ಲದಂತೆ ಸಾಲ ವಿತರಿಸುವ ಆತ್ಮತೃಪ್ತಿ ತಮಗಿದೆ ಎಂದ ಅವರು , ಮಹಿಳೆಯರು ಉಳಿತಾಯದ ಹಣವನ್ನು ನಿಮ್ಮ ನೆರವಿಗೆ ನಿಂತಿರುವ ಡಿಸಿಸಿ ಬ್ಯಾಂಕಿನಲ್ಲೇ ಇಡಿ , ಇತರೆಲ್ಲಾ ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿಯೂ ನೀಡುತ್ತೇವೆ ಎಂದು ತಿಳಿಸಿದರು .
ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ , ಕಳೆದ ೮ ವರ್ಷಗಳ ಹಿಂದೆ ಬ್ಯಾಂಕ್ ದಿವಾಳಿಯಾಗಿತ್ತು . ಆದರೆ ಇಂದು ಎರಡೂ ಜಿಲ್ಲೆಗಳ ೭ ಲಕ್ಷ ಮಹಿಳೆಯರಿಗೆ ೮೦೦ ಕೋಟಿಗೂ ಅಧಿಕ ಸಾಲ ನೀಡುವ ಮೂಲಕ ಇಡೀ ದೇಶದಲ್ಲೇ ಅತಿ ಹೆಚ್ಚು ತಾಯಂದಿರಿಗೆ ಸಾಲ ನೀಡಿದ ಹೆಗ್ಗಳಿಕೆ ಡಿಸಿಸಿ ಬ್ಯಾಂಕ್ ಹೊಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು .
ಬ್ಯಾಂಕ್ ಉಳಿಸಿರೋದು ಇಂದು ಮಹಿಳೆಯರೇ ಎಂದ ಅವರು , ನೀವು ಉಳಿತಾಯ ಮಾಡಿರುವ ೩೦೦ ಕೋಟಿ ಹಣ ಬ್ಯಾಂಕಿನಲ್ಲಿ ಠೇವಣಿ ಇದೆ , ಇದು ನಿಮ್ಮದೇ ಬ್ಯಾಂಕ್ ಆಗಿದ್ದು , ಪ್ರತಿ ಕುಟುಂಬಕ್ಕೂ ಸಾಲ ತಲುಪಿಸುವ ಸಂಕಲ್ಪ ನಮ್ಮದಾಗಿದೆ ಎಂದರು .
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೆಗೌಡ ಮಾತನಾಡಿ , ಮಹಿಳೆಯರು ಯಾರ ಬಳಿಯೂ ಹಣಕ್ಕಾಗಿ ಕೈಚಾಚಬಾರದು . ನಿಮ್ಮ ಸ್ವಾವಲಂಬಿ ಬದುಕಿಗೆ ಬ್ಯಾಂಕ್ ನೀಡುವ ಸಾಲವನ್ನು ಆಧಾರವಾಗಿಸಿಕೊಳ್ಳಿ , ಸ್ವಯಂ ಉದ್ಯೋಗ ಪ್ರಾರಂಭಿಸಿ , ನಿಮ್ಮ ಕುಟುಂಬಗಳ ಪೋಷಣೆ ಜತೆಗೆ ಸಮಾಜಕ್ಕೂ ಮಾದರಿಯಾಗಿ , ಅಗತ್ಯಕ್ಕೆ ತಕ್ಕಂತೆ ಸಾಲದ ಹಣ ಬಳಸಿಕೊಳ್ಳಿ , ಎಟಿಎಂ ಮೂಲಕವೇ ಡ್ರಾ ಮಾಡಿಕೊಳ್ಳಿ , ದುರುಪಯೋಗ ಬೇಡ , ನೀವು ಮತ್ತಷ್ಟು ಮಹಿಳಾ ಸಂಘಗಳಿಗೆ ಪ್ರೇರಣೆಯಾಗಿ ಎಂದರು .
ಕೋಲಾರ , ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಡಿಸಿಸಿ ಬ್ಯಾಂಕ್ ನೀಡುವ ಸಾಲಕ್ಕೆ ಮಹತ್ವವಿದೆ , ಭದ್ರತೆ , ಶಿಫಾರಸ್ಸುಗಳು ಇಲ್ಲದೇ ಯಾವುದೇ ವಾಣಿಜ್ಯ ಬ್ಯಾಂಕ್ ನಿಮಗೆ ಸಾಲ ನೀಡುವುದಿಲ್ಲ , ಡಿಸಿಸಿ ಬ್ಯಾಂಕ್ ನಿಮ್ಮನ್ನು ಕೂರಿಸಿ ತಾಂಬೂಲದೊಂದಿಗೆ ಗೌರವದಿಂದ ಸಾಲ ನೀಡುತ್ತಿದೆ , ಈ ಸಾಲ ನಿಮ್ಮ ಕುಟುಂಬಗಳಿಗೆ ಬೆಳಕಾಗಲಿ , ನಿಮ್ಮ ಬದುಕು ಹಸನು ಮಾಡಿಕೊಳ್ಳಬೇಕು . ಎಂಬುದೇ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರ ಸಂಕಲ್ಪವೂ ಆಗಿದೆ ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಬ್ಯಾಂಕ್ ಕೋಲಾರ ಶಾಖೆಯ ಅಮೀನಾ , ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದು , ತಾಲ್ಲೂಕಿನ ೩೦ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಲಾಯಿತು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.