(www.vknews.in) : ಸುರಗಿ ಗುಡ್ಡ ಚಾಮರಾಜನಗರ ತಾಲ್ಲೂಕಿನಿಂದ ಅನತಿ ದೂರದಲ್ಲಿರುವ ಒಂದು ವಿಹಂಗಮ ನೋಟದ ಪ್ರೇಕ್ಷಣೀಯ ಸ್ಥಳ ಕಪ್ಪುಶಿಲೆಯಿಂದಾವೃತ್ತವಾದ ಈ ಗುಡ್ಡವು ನೋಡಲು ನಯನಮನೋಹರವಾಗಿದೆ. ಕೂಡ್ಲೂರು,ದೊಡ್ಡರಾಯಪೇಟೆ,ಬೂದಿತಿಟ್ಟು ಮತ್ತು ಮೂಡ್ಲುಮೋಳೆಯ ಅಕ್ಕಪಕ್ಕದ ಗ್ರಾಮಗಳ ಸರಹದ್ದಿಗೆ ಒಳಪಡುವ ಒಂದು ಗುಡ್ಡ. ಹಿಂದೆ ದೊಡ್ಡರಾಯಪೇಟೆಯ ಬಳಿಯೋ ಅಥವಾ ಸುರಗಿ ಗುಡ್ಡದ ಬಳಿಯೋ ಸುರಗಿ ಪೇಟೆ ಮಠವಿತ್ತೆಂದು ದೊಡ್ಡರಾಯಪೇಟೆಯ ನಿವಾಸಿಗಳು ಹೇಳುವುದರಿಂದ ಈ ಹಿನ್ನಲೆಯಲ್ಲಿ ಈ ಗುಡ್ಡಕ್ಕೆ ಸುರಗಿ ಗುಡ್ಡ ಎಂಬ ಹೆಸರು ಬಂದಿರಬಹುದು ಎಂದು ಅಂದಾಜಿಸಬಹುದು.
ಸುರಗಿ ಗುಡ್ಡವು ಸಂಪೂರ್ಣ ಕಪ್ಪು ಗುಂಡು ಕಲ್ಲುಗಳಿಂದ ಕೂಡಿರುವ ಪ್ರದೇಶ ಗುಡ್ಡದ ಮೇಲೆ ಸುಮಾರು 300 ವರ್ಷಗಳಿಗೂ ಪುರಾತನ ಕಾಲದ ಚೋಳರ ಕಾಲದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ಶ್ರೀ ವೀರಭದ್ರೇಶ್ವರ ದೇವರ ದೇವಾಲಯವಿದೆ 5 1/2 ಅಡಿ ಎತ್ತರದ ಸ್ಪುರದ್ರೂಪಿ ಏಕಶಿಲೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರ ದೇವರ ಮೂರ್ತಿ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಹರಳು ಕೋಟೆ ಶ್ರೀ ಆಂಜನೇಯ ದೇವಾಲಯ ನಿರ್ಮಾಣ ಕಾಲದಲ್ಲಿಯೇ ರಾಜಮನೆತನದವರೊಬ್ಬರಿಗೆ ಮಕ್ಕಳಾಗದ ಕಾರಣ ಈ ದೇವಾಲಯವನ್ನು ರಾಜಮನೆತನದ ಮಹಾರಾಣಿ ಈ ದೇವಾಲಯವನ್ನು ನಿರ್ಮಿಸಿದರೆಂಬ ವಾಡಿಕೆ ಇದ್ದು ಹುಚ್ಚೇವೀರಭದ್ರಪ್ಪ ಗುರುಗಳು ಹಿಂದೆ ಪೂಜೆ ಸಲ್ಲಿಸುತ್ತಿದ್ದರು ಈಗ ಮಲ್ಲಿಕಾರ್ಜುನ ಎಂಬುವವರು ಪೂಜಾ ಸೇವೆ ಸಲ್ಲಿಸುತ್ತಿದ್ದು ಇವರ ಪೂಜೆ ಸೇವೆ ಸಲ್ಲಿಸಲು ಹಿಂದೆ ಬಳಿ ಚಪ್ಪೋಡು ಎಂಬ ತಾಮ್ರ ಪತ್ರವಿದೆ.
ಸುರಗಿ ಗುಡ್ಡ ಬಲು ಆಕರ್ಷಣೀಯವಾದ ಸ್ಥಳ ಮೇಲೇರಿ ನೋಡಿದರೆ ಶ್ರೀ ಕರಿವರದರಾಯ ವೃಕ್ಷವನ ಬೆಟ್ಟ & ಶ್ರೀ ಬಿಳಿಗಿರಂಗನಾಥಸ್ವಾಮಿಯ ಬೆಟ್ಟವು ಕಾಣಸಿಗುತ್ತದೆ ಸುವರ್ಣಾವತಿ & ಚಿಕ್ಕಹೊಳೆ ಜಲಾಶಯಗಳಿರುವುದರಿಂದ ಅಡಿಕೆ,ತೆಂಗು, ಬಾಳೆ ತೋಟಗಳಿಂದ ಕಂಗೊಳಿಸುವ ಪರಿಸರ ಹಸಿರುಮಯವಾಗಿದೆ. ಆ ಬೆಟ್ಟದ ಮೇಲೆರಗಿ ಹಸಿರ ಸೊಬಗ ಸವಿಯೋದೆ ಮನಸ್ಸಿಗೆ ಒಂಥರಾ ಪ್ರಪುಲ್ಲತೆಯ ಭಾವ ಚಾಮರಾಜನಗರ ಪಟ್ಟಣವೂ ಕೂಡ ಸಮೀಪವಿದ್ದು ಕಟ್ಟಡಗಳು, ದೇವಾಲಯಗಳು, ಜಿಲ್ಲಾಡಳಿತ ಭವನ ಇಡೀ ನಗರದ ರಚನೆ ಕಣ್ಣಿಗೆ ಕಾಣುತ್ತದೆ.
ಒಂದು ದಿನ ಆಕಸ್ಮಿಕವಾಗಿ ಈ ಸುರಗಿ ಗುಡ್ಡಕ್ಕೆ ಭೇಟಿ ನೀಡಿದಾಗ ಈ ಗುಡ್ಡದ ಬಗ್ಗೆ ತಿಳಿದುಕೊಳ್ಳುವ ಮನಸ್ಸಾಯಿತು. ಚಾಮರಾಜನಗರವೇ ಹಾಗೆ ಒಂದಿಲ್ಲೊಂದು ವಿಶೇಷ ಸಂಗತಿಗಳಿಂದ, ಘಟನೆಗಳಿಂದ ಸುದ್ದಿಯಲ್ಲಿರುವಂತದ್ದು. ಈ ಸುರಗಿ ಗುಡ್ಡದ ಮತ್ತೊಂದು ವೈಶಿಷ್ಟ್ಯವೇನೆಂದರೆ ಅನಾವೃಷ್ಟಿಯ ಕಾಲದಲ್ಲಿ ಸುತ್ತ ಮುತ್ತಲ ಗ್ರಾಮದ ಊರ ಮುಖಂಡರು,ಪಟೇಲರು,ಗೌಡಿಕೆಯವರು,ಪ್ರಧಾನರು ಎಲ್ಲಾ ಕೋಮಿನ ಮುಂದಾಳುಗಳು ಕೂಡಿ ಚಂದಾ ಎತ್ತಿ ಅನಾವೃಷ್ಠೋತ್ಸವ ವೆಂಬ ವಿಶಿಷ್ಟ ಉತ್ಸವವನ್ನು ಆಚರಿಸುವ ಪದ್ಧತಿ ಈ ಹಿಂದೆ ಇತ್ತು.
ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಮಾಡಿಸಿ 101 ಬಿಂದಿಗೆ ನೀರನ್ನು ಮಕ್ಕಳಿಂದ ಎರೆಸಿ 101 ಪೂಜೆ ಪೂಜೆ ಸಲ್ಲಿಸಿ ಇಡೀ ರಾತ್ರಿ ಪೂಜೆ ಪುನಸ್ಕಾರಗಳ ಮಾಡಿ ವೀಳ್ಯದೆಲೆಯ ಮೇಲೆ ಕರ್ಪೂರ ಹೊತ್ತಿಸಿ ಮಹಾಮಂಗಳಾರತಿ ಬೆಳಗಿ ನೀರಲ್ಲಿ ಆ ವೀಳ್ಯದೆಲೆಯ ಕರ್ಪೂರದಾರತಿಯನ್ನು ತೇಲಿ ಬಿಟ್ಟರೆ ಸೀದಾ ಸ್ವಾಮಿಗಳ ಬಳಿ ತೆರಳಿ ಪ್ರಸಾದ ಸೇವಿಸಿ ಗುಡ್ಡದಿಂದಿಳಿಯೋ ಹೊತ್ತಿಗೆ ಮಳೆ ಸುರಿದು ಬಿಡುತ್ತಿತ್ತು ಗುಡ್ಡ ಇಳಿಯೋ ಪ್ರತಿಯೊಬ್ಬರು ಮಳೆಯ ನೀರಲ್ಲಿ ನೆನೆದು ಸ್ವಾಮಿಯ ಕೃಪೆಗೆ ಪಾತ್ರರಾಗಿ ಅನಾವೃಷ್ಠೋತ್ಸವವನ್ನು ನಡೆಸುತ್ತಿದ್ದ ಪದ್ದತಿ ಕಳೆ 10-15 ವರ್ಷಗಳಿಂದ ದೂರವಾಗಿದೆ ಏನೇ ಏಳಿ ಮಳೆ ಬರಲಿಲ್ಲದ ಕಾಲದಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಕಪ್ಪೆಗೆ ಮದುವೆ ಮಾಡಿಸುವುದು, ಹೋಳಿಗೆ ಅಮ್ಮನ ಮಾಡುವುದನ್ನು ಕೇಳಿದ ನನಗೆ ಈ ಅನಾವೃಷ್ಠೋತ್ಸವ ಬಲು ವಿಶೇಷವೆನಿಸಿತು.
ಸುರಗಿ ಗುಡ್ಡದ ಶ್ರೀ ವೀರಭದ್ರೇಶ್ವರ ಗುಂಡ್ಲುಪೇಟೆ,ಮೈಸೂರು,ಚಾಮರಾಜನಗರ ಸುತ್ತಮುತ್ತಲ ಕೆಲ ಕುಟುಂಬಗಳು ಮನೆ ದೇವರನ್ನಾಗಿ ಆರಾಧಿಸುತ್ತಾರೆ ಕೂಡ್ಲೂರು,ದೊಡ್ಡರಾಯಪೇಟೆ,ಬೂದಿತಿಟ್ಟು & ಮೂಡ್ಲುಮೋಳೆಯ ಆರಾಧ್ಯ ದೈವವೂ ಹೌದು ದೇವಾಲಯದ ಅರ್ಚಕರು ಹೇಳುವಂತೆ ಶ್ರೀ ವೀರಭದ್ರೇಶ್ವರ ದೇವರ ಸುರಗಿ ಗುಡ್ಡದಲ್ಲಿ ಒಂದು ಕಾಳಸರ್ಪವು ದೇವಾಲಯದ ಕಾವಲಿದ್ದು ಆಗಾಗ ಗೋಚರವಾಗುತ್ತದೆಂದು ಅಭಿಪ್ರಾಯಪಡುತ್ತಾರೆ ಈ ತರಹದ ವಿಶಿಷ್ಟ ಸಂಪ್ರದಾಯ,ಆಚರಣೆ ಪದ್ದತಿಗಳ ಮೂಲಕವೇ ಭಾರತ ವಿಶ್ವದ ಗಮನ ಸೆಳೆದು ವಿಶ್ವ ಗುರುವಾಗಿದೆ ಎನ್ನಬಹುದು.
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.