(www.vknews.in) ನಾವು ಮೇ 6, 2022ರಂದು , ಉಮ್ ಅಲ್ ಕುವೈನ್ ಎಮಿರೇಟ್ಸ್ ನಲ್ಲಿರುವ ಅಲ್ ರಮ್ಲಾ ಅಪಾರ್ಟ್ಮೆಂಟ್ಗೆ ಬಂದು ಕೆಲ ದಿನಗಳಾಗಿತ್ತು. ನನ್ನ ಹೆಂಡತಿ ಐಶ್ವರ್ಯಳ ಯುಎಇ 3 ತಿಂಗಳ ವಿಸಿಟ್ ವೀಸಾ ಕಾಲಾವಧಿ ಕೊನೆಗೊಳ್ಳುವ ಸಮಯ ಹತ್ತಿರದಲ್ಲಿತ್ತು, ನಮ್ಮ ಅಪಾರ್ಟ್ಮೆಂಟ್ ಕೆಳ ಮಹಡಿಯಲ್ಲಿ ಇರುವ ಟೈಪಿಂಗ್ ಸೆಂಟರಗೆ ಭೇಟಿ ಕೊಟ್ಟು ಯುಎಇ ರೆಸಿಡೆನ್ಸಿ ವೀಸಾಗೆ(2 ವರ್ಷದ ಅನುಮತಿ)ಪರಿವರ್ತಿಸುವ ಬಗ್ಗೆ ಮಾಹಿತಿ ತಿಳಿಯಬೇಕೆಂಬ ಯೋಚನೆಯಲ್ಲಿ ಇದ್ದೆ. ಯುಎಇದಲ್ಲಿ ಟೈಪಿಂಗ್ ಸೆಂಟರ್ ಅಂದರೆ ವೀಸಾ/ಪಾಸ್ಪೋರ್ಟ್ ಸಂಬಂಧಿತ ಕೆಲಸ ಮಾಡಿಕೊಡುವ ಖಾಸಗಿ ಕಚೇರಿ.
ಆ ದಿನ ಸಂಜೆ ಎಂದಿನಂತೆ ನನ್ನ ಕೆಲಸ ಮುಗಿಸಿ ಮನೆಗೆ ಹೋಗುವಾಗ ಟೈಪಿಂಗ್ ಸೆಂಟರನ ಗಾಜಿನ ಬಾಗಿಲು ತೆರೆದು ಒಳಗಡೆ ಹೆಜ್ಜೆ ಹಾಕಿ ಟೈಪಿಂಗ್ ಸೆಂಟರನ ಮಾಲೀಕರಾದ ಅಬ್ದುಲ ಅವರನ್ನು ಬೇಟಿ ಅದೆ. ರೆಸಿಡೆನ್ಸಿ ವೀಸಾಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ವಿನಮ್ರವಾಗಿ ಹಿಂದಿಯಲ್ಲಿ ಮಾಹಿತಿ ನೀಡಿದರು. ಅಬ್ದುಲ ಮೂಲತಃ ಗಡಿನಾಡು ಕೇರಳದ ಕಾಸರಗೋಡಿನವರು. ಅವರಿಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಮೊದಲ ನಾನು ಭಾವಿಸಿರಲಿಲ್ಲ, ಅವರು ನಮ್ಮ ಊರಿನ ಬಗ್ಗೆ ಪ್ರಶ್ನಿಸಿದಾಗ ನಾನು ಬಾಗಲಕೋಟೆ ಹತ್ತಿರ ಹುನಗುಂದ ತಾಲೂಕಿನ ಹತ್ತಿರ ಇರುವ ಅಮರಾವತಿ ಗ್ರಾಮದವನು ಎಂದು ಹೇಳಿದೆ. ಆಮೇಲೆ ಶುರು ಆಯ್ತು ನೋಡಿ ನಮ್ಮ ಕನ್ನಡದಲ್ಲಿ ಮಾತುಕತೆ 😍 ,ಅಬ್ದುಲ್ ಅವರು ತುಂಬಾ ಸರಳ ವ್ಯಕ್ತಿ ಹಾಗೂ ಸ್ವಚ್ಚ ಮನಸ್ಸಿನವರು,ಅವರ ವಯಸ್ಸು ಸುಮಾರು 40ರ ಆಸುಪಾಸು. ಅವರ ಕುಟುಂಬ ಹಾಗೂ ಅವರ 3 ಮುದ್ದು ಮಕ್ಕಳು ಕೇರಳದಲ್ಲಿ ಇದ್ದಾರೆ.
ಯುಎಇದಲ್ಲಿ ಕನ್ನಡ ಮಾತನಾಡುವರು ಭೇಟಿ ಆದರೆ ಅದೇನೋ ಒಂದು ರೀತಿಯ ವಿಶೇಷವಾದ ಅನುಭವ, ಸಂಬ್ರಮ, ನಮ್ಮ ಸ್ವಂತ ಊರಿನವರು/ಸಂಬಂಧಿಕರು ಸಿಕ್ಕಾಗ ಆಗುವ ಖುಷಿಗೆ ಸಮ. ದೂರದ ಅರಬ ನಾಡಿನಲ್ಲಿ ಕನ್ನಡ ಮಾತನಾಡಲು ಸಿಕ್ಕರೆ ಅದೊಂದು ತರಹ ಮರಭೂಮಿಯಲ್ಲಿ ಕುಡಿಯಲು ಓಯಸಿಸ್ ಸಿಕ್ಕ ಅನುಭವ. ಸಾಮಾನ್ಯವಾಗಿ ದುಬೈ/ಶಾರ್ಜಾ/ಅಭುದಾಬಿ ಎಮಿರೇಟ್ಸಗಳಲ್ಲಿ (ರಾಜ್ಯಗಳು) ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಇನ್ನು ಉಳಿದ 4 ಎಮಿರೇಟ್ಸಗಳಲ್ಲಿ ಕನ್ನಡಿಗರ ಸಂಖ್ಯೆ ತುಂಬಾ ವಿರಳ.
ಅಬ್ದುಲ್ ಅವರ ಸಹಾಯವನ್ನು ನಾನು ಸ್ಮರಿಸಲೇಬೇಕು. ಆಗ ನನ್ನ ಯುಎಇ ಡ್ರೈವಿಂಗ್ ಲೈಸೆನ್ಸ್ ಇನ್ನೂ ಪ್ರಗತಿಯಲ್ಲಿ ಇತ್ತು ಹಾಗಾಗಿ ನಾನು ಕಾರ್ ಡ್ರೈವ್ ಮಾಡಲು ಸಾಧ್ಯವಿರಿಲ್ಲ. ನನ್ನ ಹೆಂಡತಿಯ ರೆಸಿಡೆನ್ಸಿ ವೀಸಾ ಪರಿವರ್ತಿಸುವಾಗ ಅಬ್ದುಲ ಅವರು ಅತೀ ಮುತುವರ್ಜಿ ವಹಿಸಿ ,ಯಾವುದೇ ಹೆಚ್ಚುವರಿ ಶುಲ್ಕ ತಗೆದುಕೊಳ್ಳದೆ ,ಅವರ ಬಿಡುವಿಲ್ಲದ ಕೆಲಸದ ಮದ್ಯೆ ವೀಸಾಗೆ ಅವಶ್ಯಕವಾದ ಮೆಡಿಕಲ್ ಟೆಸ್ಟ್ ,ಕೋವಿಡ ಟೆಸ್ಟ ಹಾಗೂ ಎಮಿರೇಟ್ಸ ಐಡಿ ಪಡೆಯಲು ಸ್ವತಃ ಅವರೇ ತಮ್ಮ ಕಾರಿನಲ್ಲಿ ಸಂಚರಿಸಲು ಹಲವು ಬಾರಿ ನಮಗೆ ಸಹಾಯ ಮಾಡಿದರು ,ಅಲ್ಲಿನ ಅಧಿಕಾರಗಳು ಅವರಿಗೆ ತುಂಬಾ ಪರಿಚಿತರಿದ್ದ ಕಾರಣ ನಮಗೆ ವೀಸಾ ಬಹು ಬೇಗನೇ ನಿಗದಿತ ಸಮಯಕ್ಕಿಂತ ಮುಂಚೆ ನಮಗೆ ದೊರೆಯಿತು ಹಾಗೂ ಹಲವು ಬಾರಿ ನನ್ನ ಮಡದಿ ಆಫೀಸಿಗೆ ಹೋಗಲು ಕಾರಿನ ಸಹಾಯ ಮಾಡಿದ್ದರು. ಇಲ್ಲಿ ನಮಗೆ ಟ್ಯಾಕ್ಸಿಯ ದುಡ್ಡಿನ ಉಳಿತಾಯ ಆಯಿತೆಂದು ಅಲ್ಲ, ಅಬ್ದುಲ ಅವರ ಆ ನಿಷ್ಕಲ್ಮಶ ಸಹಾಯವಾಗಿದ್ದು ಕನ್ನಡತನದ ಕಂಪಿನಿಂದ, ಅವರಿಗೆ ಇರುವ ಹೃದಯ ವೈಶಲ್ಯತೆಯಿಂದ.
ಒಂದು ವೇಳೆ ಅಬ್ದುಲ ಅವರು ಕನ್ನಡ ಹೊರತುಪಡಿಸಿ ನಮ್ಮ ಜೊತೆ ಹಿಂದಿ/ಇಂಗ್ಲಿಷ್ನ್ನಲ್ಲಿ ಸಂವಹನ ಮಾಡಿದ್ದರೆ ಅವರ ಮೇಲೆ ನಮಗೆ ಇರುವ ಗಾಢವಾದ ನಂಬಿಕೆ ,ಬಾಂಧವ್ಯ ಬೆಳೆಯಿತ್ತಿರಲಿಲ್ಲವೇನೋ? ಅಬ್ದುಲ ಅವರು ಮುಸ್ಲಿಂ ಹಾಗೂ ನಾವು ಹಿಂದೂ ,ನಮ್ಮ – ಅವರ ಆಚಾರ,ವಿಚಾರ,ಅವರು ಮಾತೃ ಭಾಷೆ ಮಲಯಾಳಂ,ಸೇವಿಸುವ ಆಹಾರ ಬೇರೆ ಆದರೆ ಅವರು ಗಡಿನಾಡು ಕಾಸರಗೋಡಿನವರಾದ ಕಾರಣ ಅವರು ಕನ್ನಡ ಮಾತನಾಡುತ್ತಿದ್ದಕ್ಕಾಗಿ ಅವರೊಡನೆ ಸಹೋದರತ್ವತೆ ಆರಂಭವಾಯಿತು.
ಅಬ್ದುಲ ಅವರ ಮನೆ ಅಪಾರ್ಟ್ಮೆಂಟ್ನ 1ನೇ ಮಹಡಿಯಲ್ಲಿ ಹಾಗೂ ನಮ್ಮ ಮನೆ ಆರನೇ ಮಹಡಿಯಲ್ಲಿ ಇದೆ. ಆಗಾಗ ವಾರಾಂತ್ಯಗಳಲ್ಲಿ ನಾವು ಅವರನ್ನು ನಾವು ಪ್ರೀತಿಯಿಂದ ಕಾಫಿ/ಟೀ/ತಿಂಡಿಗೆ ನಮ್ಮ ಮನೆಗೆ ಆಹ್ವಾನಿಸುತ್ತೇವೆ ,ಅವರು ಪ್ರೀತಿಯಿಂದ ಬರುತ್ತಾರೆ, ಆಗೆ ಬರುವಾಗ ಖಾಲಿ ಕೈಯಲ್ಲಿ ಬರುವ ಜಯಮಾನದವರಲ್ಲ ಅವರು, ಹಣ್ಣು ಹಂಪಲು ತಂದಿರುತ್ತಾರೆ. ನಾವು ಅದಕ್ಕೆ ಗದರುತ್ತೇವೆ. ನಮ್ಮ ಮನೆಗೆ ನೀವು ಬರುವುದಾದರೆ ಖಾಲಿ ಕೈಲಿ ಬರಬೇಕು ಎಂದು ಎಚ್ಚರಿಸಿದ್ದೇವೆ. ನಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು;ಚಹಾ ಹೀರುತ್ತಾ ಭಾರತ ದೇಶದ ,ನಮ್ಮ ರಾಜ್ಯಗಳ, ಕ್ರಿಕೆಟ್ನ ಹಲವು ಸುದ್ದಿ ಮಾತಾನುಡುತ್ತಿರುತ್ತೇವೆ.
ನನ್ನ ಜನ್ಮ ದಿನ 15/10/2022ರ ಮಧ್ಯರಾತ್ರಿ 12ಕ್ಕೆ ಕೇಕ್ ತಿನ್ನಲು ಆಹ್ವಾನಿಸಿದೇವು ,ಅವರು ಬರುವಾಗ ಪರಿಮಳಯುಕ್ತ ಸುಗಂಧ ದ್ರವ್ಯವನ್ಯು ತಂದು ಉಡುಗೊರೆಯಾಗಿ ಕೊಟ್ಟರು , ಮರುದಿನ ಮಧ್ಯಾಹ್ನದ ಬೋಜನ ಕೂಟಕ್ಕೆ ನಾವು ಅವರನ್ನು ಅಜ್ಮಾನ್ ಎಮಿರೇಟ್ಸ್ನ ಪ್ರತಿಷ್ಠಿತ ಮಲಬಾರ ತಟ್ಟುಕಡ ರೆಸ್ಟೋರೆಂಟಿಗೆ ಆಹ್ವಾನಿಸಿದೇವು, ಅಬ್ದುಲ್ ,ನಾನು ಹಾಗೂ ನನ್ನ ಹೆಂಡತಿ ಐಶ್ವರ್ಯ ಬೊಂಬಾಟ್ ಭೋಜನ ಸವಿದೇವು.
2022,ಅಕ್ಟೋಬರ್ 24ರಂದು ನಮ್ಮ ಮನೆಯಲ್ಲಿ ದೀಪಾವಳಿಯ ಸಡಗರ ಸಂಭ್ರಮ ಹಾಗೂ ಅಬ್ದುಲ್ ಅವರನ್ನು ರಾತ್ರಿಯ ಊಟಕ್ಕೆ ಆಹ್ವಾನಿಸಿ ,ಅವರಿಗೆ ಸತ್ಕರಿಸಿ ಖುಷಿಪಟ್ಟೆವು.
ಆಕಸ್ಮಿಕವಾಗಿ ಆರಂಭವಾದ ನಮ್ಮ ಅಬ್ದುಲ ಅವರ ಭೇಟಿ 6 ತಿಂಗಳಲ್ಲಿ ಅವರೊಡನೆ ಗಾಡವಾದ ಸ್ನೇಹವನ್ನು ಹಾಗೂ ಸಹೋದರತ್ವಕ್ಕೆ ನಮ್ಮ ಕನ್ನಡ ಬುನಾದಿಯಾಯಿತು. ಕೇರಳದಲ್ಲಿ ಇರುವ ಅವರ ತಾಯಿ ಮಾಡಿದ ಉಪ್ಪಿನಕಾಯಿ,ಅವರ ಗೆಳೆಯ ಕೊಟ್ಟ ಶ್ರೀಗಂಧ ಮರದ ತುಂಡು ,ಶ್ರೀಗಂಧದ ಅಗರಬತ್ತಿ ನನ್ನ ಹೆಂಡತಿ ಮಾಡಿದ ಅಡುಗೆ, ಸಿಹಿ ಹಾಗೂ ಖಾರದ ತಿನಿಸುಗಳು ಹೀಗೆ ಹತ್ತು ಹಲವು ವಸ್ತುಗಳು ನಮ್ಮ ನಡುವೆ ನಿರಂತರವಾಗಿ ವಿನಿಮಯವಾಗುತ್ತಿವೆ ,ದುಬೈ/ಶಾರ್ಜಾ ವಾರಾಂತ್ಯದಲ್ಲಿ ಭೇಟಿ ಕೊಡುತ್ತಿರುತ್ತೇವೆ.
ಇಲ್ಲಿ ನಾವು ವಿನಿಮಯ ಮಾಡುವುದು ವಸ್ತುಗಳಿಗೆ ಬೆಲೆ ಕಟ್ಟಲು ಸಾಧ್ಯವಿರಬಹುದು ಆದರೆ ವಸ್ತುವಿನ ಹಿಂದೆ ಇರುವ ಪ್ರೀತಿಗೆ, ಭಾಂದವ್ಯ, ಸಹೋದರತ್ವಕ್ಕೆ ಬೆಲೆ ಕಟ್ಟಲು ಅಸಾಧ್ಯ ಅಲ್ಲವೇ?
ಮೇಲಿನ ಎಲ್ಲಾ ಹಾಗೂ ಮುಂದೆ ಆಗುವ ನಮ್ಮ ಅನುಭವಗಳಿಗೆ ನೇರವಾದ ಕಾರಣ ನಮ್ಮ ಹೆಮ್ಮೆಯ ಕನ್ನಡ ಹಾಗೂ ನಮ್ಮ ಭಾರತೀಯ ಸಂಸ್ಕೃತಿ. ಜಾತಿ, ಧರ್ಮ, ಜನಾಂಗ, ಭಾಷೆ, ಆಚಾರ ವಿಚಾರ, ಸಂಸ್ಕೃತಿ ಇತ್ಯಾದಿಗಳ ವೈವಿದ್ಯಗಳು ಇದ್ದರು, ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಂತಹ ಜಗತ್ತಿನ ಏಕೈಕ ದೇಶ ಭಾರತ , ಈ ದೇಶದ ಪ್ರಜೆಗಳಾದ ನಮಗೆ ಹೆಮ್ಮೆ ಇದೆ.
ಮೇಲಿನ ತರಹ ಹಲವರಿಗೆ ಯುಎಇದಲ್ಲಿ ಈ ತರಹದ ಅನುಭವಗಳು ದಿನನಿತ್ಯ ಆಗುವುದುಂಟು. ನನ್ನದೊಂದು ಚಿಕ್ಕ ಉದಾಹರಣೆ ಅಷ್ಟೆ. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕೋಟಿ-ಕೋಟಿ ಕನ್ನಡಿಗರಿಗೆ 66ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಸಂಗಮೇಶ ದುಬೈ ಕನ್ನಡಿಗ ( ದುಬೈ ಕನ್ನಡ ಸಾಹಿತ್ಯ ಸಂಘದ ಸದಸ್ಯೆ )
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.