(www.vknews.in) ಚಾಮರಾಜನಗರವು ಭೂಲೋಕದ ಸ್ವರ್ಗ ಮುಕ್ಕಾಲು ಭಾಗ ಅರಣ್ಯ ಇನ್ನುಳಿದದ್ದು ಊರು ಬೆಟ್ಟ ಗುಡ್ಡ ನದ-ನದಿ ಪ್ರಕೃತಿದತ್ತವಾಗಿ ನಿರ್ಮಿತವಾದ ಸ್ವರ್ಗದ ಸೂರು ಎಂದೆ ಹೇಳಬಹುದು. ಇಲ್ಲಿನ ಪ್ರಾಕೃತಿಕ ಸಂಪತ್ತಿನೊಂದಿಗೆ ಇಲ್ಲಿನ ಭಾಷಾ ಸಂಪತ್ತು ಈ ಜಿಲ್ಲೆಯ ಸೌಂದರ್ಯ ಕಿರೀಟದ ಮುಕುಟಮಣಿ ಎಂದೆ ಹೇಳಬಹುದು. ಇಲ್ಲಿನ ಹವಮಾನವನ್ನ ಯಾರೂ ಕೂಡ ಅಂದಾಜಿಸಲು ಸಾಧ್ಯವಿಲ್ಲ ಕಾರಣ ನಮ್ಮದು ಗಡಿ ಜಿಲ್ಲೆ. ಮೇಲಾಗಿ ಬುಡಕಟ್ಟು ಸಮುದಾಯದ ಪ್ರತಿನಿಧಿಸುವ ಸೋಲಿಗರ ಬಾವ, ರಂಗ ಬಾವನ ನೆಲೆ, ಶ್ರೀ ಮಲೆ ಮಹದೇಶ್ವರ ಪಾದ ಧೂಳಿನ ಸ್ಪರ್ಶ ಕಂಡ ಪುಣ್ಯ ಭೂಮಿ, ಶ್ರೀ ಸಿದ್ದಾಪಾಜಿ , ಮಲೆ ಮಹದೇಶ್ವರ ಪವಾಡ ಸದೃಶ್ಯಗಳನ್ನ ಕಂಡ ಜಾನಪದದ ಬೀಡು. ನೀಲಗಾರರು, ಗೊಂದಲಿಗರು, ಈ ಜಿಲ್ಲೆಯ ಜಾನಪದ ಸೊಗಡನ್ನು ಹೆಚ್ಚಿಸಿದ್ದಾರೆ. ಹೆಚ್ಚಾಗಿ ಮಲೆಗಳಲ್ಲಿ (ಬೆಟ್ಟಗಳಲ್ಲಿ) ಪವಾಡ ಪುರುಷರು ನೆಲೆಸಿರುವುದು. ಈ ಭೂಮಿಯ ಧಾರ್ಮಿಕ ಆಯಸ್ಕಾಂತೀಯ ಅಂಶವನ್ನ ಎತ್ತಿ ತೋರಿಸುತ್ತದೆ. ಅತಿ ಹೆಚ್ಚಿನ ವನ್ಯ ಮೃಗಗಳನ್ನ ಹೊಂದಿರುವ ಅವಿಸ್ಮರಣೀಯ ತಾಣ ದೇಶದ ಯಾವುದೇ ಘಟನೆಗಳಿಗೆ ಪ್ರತಿಕ್ರಿಯಿಸುವ ಸ್ಪಂದನಾಶೀಲ ಶಕ್ತಿಯನ್ನ ಹೊಂದಿದೆ. ಅಲ್ಲದೆ ಭಾರ್ಗವ ಎಂಬ ಗಂಡು ನದಿಯನ್ನ ಹೊಂದಿರುವ ಕರ್ನಾಟಕದ ಏಕೈಕ ಜಿಲ್ಲೆಯಾಗಿದೆ. ಹೊನ್ನಮೇಟಿ, ಬೂದಿಪಡಗ, ಬಿಳಿಗಿರಿ ರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಹೊಗೇನಕಲ್ ಜಲಪಾತ, ಬಂಡೀಪುರ ಅಭಯಾರಣ್ಯ, ಪಾರ್ವತಿ ಬೆಟ್ಟ, ವಿಶೇಷವಾಗಿ ಸದಾ ಕಾಲವು ಹಿಮ ಬೀಳುವ ತಿರುಪತಿಯ ಮೂಲ ಕೊಳಗಳನ್ನ ಒಳಗೊಂಡಿರುವ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಿಸ್ಮಯ ತಾಣ ಎಂದೆ ಕರೆಯಬಹುದು.
ಚಾಮರಾಜನಗರದಿಂದ ಅನತಿ ದೂರದಲ್ಲಿರುವ ಬೆಲವತ್ತ ಜಲಾಶಯಕ್ಕೆ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿಗೆ ಹೊಂದಿಕೊಂಡಿರುವ ಮುಂಟಿಪಾಳ್ಯ ಎಂದು ಕರೆಯಲ್ಪಡುವ ಮುರಟಿಪಾಳ್ಯ ಹಾಗೂ ಮೇಲ್ಮಾಳದ ಹತ್ತಿರವಿರವ ಕೊಟ್ಟದ ಮಾಸ್ತಿಗುಡಿ ಹೊನ್ನೆಮರದ ಬೇರಿನಿಂದ ಶುಧ್ಧ ನೀರು ಹರಿಯುವ ಒಂದು ವಿಸ್ಮಯ ತಾಣವಿದೆ. ಇದು ಯಾವ ತಂತ್ರಜ್ಞಾನದಿಂದಲೂ ನಿರ್ಮಾಣವಾಗಿದ್ದಲ್ಲ. ಬದಲಾಗಿ ನಿಸರ್ಗ ದೇವಿಯ ಒಡಲಿನಿಂದ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯ ಪಾದದಿಂದ ಬರುವ ಶುದ್ಧ ಜಲವೆಂದೆ (ತೀರ್ಥ) ಹೇಳಬಹುದು. ಇದಕ್ಕೆ ಬಲವಾದ ಕಾರಣವೂ ಇದೆ. ಕೊಟ್ಟದ ಮಾಸ್ತಿ ಹೊನ್ನೆಮರದ ಕಡೆ ದಟ್ಟ ಕಾನನದ ನಡುವೆ ಚಾರಣದ ಹಾದಿಯನ್ನ ತುಳಿದು ನಡೆದು ಬರುವಾಗ ಬಲ ಬದಿಯಲ್ಲಿ ಒಂದು ನೆಡುಗಲ್ಲು ಕಾಣ ಸಿಗುತ್ತದೆ. ಆ ನೀಡುವಲ್ಲಿ ಮೇಲೆ ಶಂಖ ಚಕ್ರ ಮತ್ತು ರಂಗ ಬಾವನ ಹಣೆಯ ಮೇಲಿರುವ ನಾಮವನ್ನೆ ಹೋಲುವ ಚಿತ್ರಣಗಳನ್ನ ಕಾಣಬಹುದು. ಸೋಲಿಗರ ಕುಸುಮಾಲೆಯನ್ನ ಬಿಳಿಗಿರಿ ರಂಗನಾಥ ವರೆಸಿಕೊಂಡಿದುದ್ದನ್ನು ಪುರಾಣ ಪುಣ್ಯ ಕಥೆಗಳಲ್ಲಿ ನಾವು ಕೇಳಿಯೆತಿರುತ್ತೇವೆ.ಆ ಕಾರಣಕ್ಕಾಗಿ ಸೋಲಿಗರು ಬಿಳಿಗಿರಿ ರಂಗನಾಥ ಸ್ವಾಮಿಯನ್ನ ರಂಗ ಬಾವ ಎಂದು ಕರೆಯುತ್ತಿರುವುದರಿಂದ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯವರು ಈ ಹೊನ್ನೆಮರದ ಬಳಿ ಬಂದಿರಬಹುದು ಎಂದು ಅಂದಾಜಿಸಬಹುದು. ಆ ಮರದ ಬೇರಿನಿಂದ ಬರುವ ನೀರು ಅದೆಷ್ಟೊ ವರ್ಷಗಳಿಂದ ಸುರಿಯುತ್ತಿರುವುದೊ ಗೊತ್ತಿಲ್ಲ ಆದರೆ ಇದೊಂದು ದೈವಾಂಶ ಉಳ್ಳ ನಿಸರ್ಗದ ವಿಸ್ಮಯ ಆ ಮರದ ಮುಂದೆ ಹರಿಯುವ ಝರಿ, ಹಿಂದಣ ಮರದ ಬೊಡ್ಡೆಯಲ್ಲಿರುವ ಕೊಟ್ಟದ ಮಾಸ್ತಮ್ಮ ಮೂಡಣದ ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಕಾನನದ ನಿಶಬ್ದ , ನಿರ್ಜನ ಪ್ರದೇಶದಲ್ಲಿ ಧರೆಯ ಮೇಲೆ ಹರಿಯುವ ಝರಿಯ ಸದ್ದು ಮರದ ಬೇರಿನಿಂದ ಝರಿಯ ಸೇರುವ ಹೊನ್ನೆಮರದ ಬೇರಿನ ನೀರು. ಕಾನನದ ಕೋಗಿಲೆಯ ಕುಹು ಕುಹು ನಾದದೊಂದಿಗೆ ಗುಬ್ಬಿಗಳ ಚಿಲಿಪಿಲಿ ನಾದ ಈ ಎಲ್ಲ ಕಾರಣಗಳಿಂದಾಗಿ ಜಗದ ಜಂಜಡಗಳನ್ನೇ ಮರೆಸಿ ನೆಮ್ಮದಿಯ ಧಾನ್ಯ ಲೋಕಕ್ಕೆ ನಮ್ಮನ್ನ ಕರೆದೊಯ್ಯುವಲ್ಲಿ ಯಾವುದೇ ನಿಸಂಶಯ. ಇನ್ನೊಂದು ಮಾಹಿತಿಯ ಪ್ರಕಾರ ಈ ಹೊನ್ನೆಮರದ ಬೇರಿನ ನೀರಿನ ಜಾಗಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಬೇಟಿ ನೀಡುತ್ತಾರೋ ಅಷ್ಟೇ ಪ್ರಮಾಣದ ನೀರು ಉದ್ಭವಿಸುವ ಪ್ರತೀತಿ ಇದೆ.
ಇದು ಜಾಗ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಚಾರಣ ಕೈಗೊಳ್ಳಲು ಸೂಕ್ತವಾದ ತಾಣ. ಈ ತಾಣಕ್ಕೆ ನಮ್ಮ ಗೆಳೆಯರೆಲ್ಲರು ಸೇರಿ ಧೀಡಿರನೆ ಕಿರು ಚಾರಣದ ಪ್ರವಾಸ ಕೈಗೊಂಡೆವು ಅದೊಂದು ಅದ್ಭುತ ಪ್ರವಾಸವೆಂದೆ ನಮ್ಮ ಜೀವನದ ಸ್ಮೃತಿ ಪಟಲದ ಪುಟಗಳಲ್ಲಿ ದಾಖಲಿಸಿಕೊಳ್ಳಬಹುದಾದ ಚಾರಣ. ………………………… ~ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.