(www.vknews.in) ಮಂಗಳೂರು: ಜಾತಿ-ಮತ ಭೇದವಿಲ್ಲದೆ ಸರ್ವರಿಗೂ ತಲೆನೋವಾಗಿ ಪರಿಣಮಿಸಿರುವ ಮಾದಕದ್ರವ್ಯ ಸೇವನೆಯು, ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿದೆ. ಪ್ರಾಥಮಿಕ ಶಾಲೆಯಿಂದ ಆರಂಭಗೊಂಡು ಡಿಗ್ರಿ ಸ್ನಾತಕೋತ್ತರ ಪದವಿ ಪಡೆದವರೂ ಸಹ ಇದಕ್ಕೆ ಬಲಿಯಾಗಿರುವುದು ಖೇದಕರ. ಇದರ ನಿರ್ಮೂಲನೆಗೆ ಸರ್ವರೂ ಶ್ರಮಿಸಬೇಕೆಂದು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (SJM) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ ಕಾಮಿಲ್ ಸಖಾಫಿ ಕೃಷ್ಣಾಪುರ ಕರೆ ನೀಡಿದರು.
ಅವರು ಮಂಗಳೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ, ಇತ್ತೀಚೆಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಲಿಯುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರನ್ನೊಳಗೊಂಡ ಒಂದು ಮಹಾ ತಂಡವು ಮಾದಕದ್ರವ್ಯ ಮಾರಾಟದಲ್ಲಿ ತೊಡಗಿದ್ದಾರೆ ಎಂಬುದು ಬುದ್ದಿವಂತರ ಜಿಲ್ಲೆಯ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದೆ. ಜೊತೆಗೆ ರಾಜ್ಯದ ರಾಜಧಾನಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಶಾಲಾ ಚೀಲಗಳಲ್ಲಿ ದೊರೆತ ಲಹರಿ ಪದಾರ್ಥಗಳು ರಾಜ್ಯದ ಜನತೆಯನ್ನು ತಲ್ಲಣಗೊಳಿಸಿದೆ. ವಿವಿಧ ತಿಂಡಿ ತಿನಿಸುಗಳ ರೀತಿಯ ಪೊಟ್ಟಣಗಳಲ್ಲಿ ಮಾದಕದ್ರವ್ಯ ಪದಾರ್ಥಗಳನ್ನು ಮಾರಾಟ ಮಾಡುವ ದಂಧೆಯು ವ್ಯಾಪಕವಾಗಿದೆ. ಅಚ್ಚರಿಯೆಂದರೆ ಉತ್ತಮವಾಗಿ ಕಲಿತು ದೇಶದ ಸತ್ಪ್ರಜೆಯಾಗಿ ಬೆಳೆದು ಸುಂದರ ಬದುಕು ಕಟ್ಟಬೇಕಾದ ವಿದ್ಯಾರ್ಥಿ ಯುವ ಸಮೂಹವಿಂದು ಲಹರಿಗೆ ಬಲಿಯಾಗಿ, ತಮ್ಮ ಅಮೂಲ್ಯ ಬುದ್ಧಿ ಸಾಮರ್ಥ್ಯಗಳನ್ನು ಹಾಗೂ ಆರೋಗ್ಯ ಸಂಪತ್ತನ್ನು ನಾಶಮಾಡಿ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದಾರೆ. ವ್ಯಾಪಕವಾದ ಲಹರಿ ಮದ್ಯಪಾನ ವ್ಯಸನಿಗಳಿಂದ ಅತ್ಯಾಚಾರ, ಕೊಲೆ, ಸುಲಿಗೆ, ವಿದ್ವಂಸಕ ಚಟುವಟಿಕೆಗಳು, ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಕಲಹಗಳು ಹೆಚ್ಚಾಗತೊಡಗಿದೆ. ಜಾತಿ -ಮತ ಭೇದವಿಲ್ಲದೆ ಒಗ್ಗಟ್ಟಿನ ಹೋರಾಟದಿಂದ ಹಾಗೂ ಸರ್ಕಾರಗಳು, ಕಾನೂನು ಪಾಲಕರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ ಮಾತ್ರ ಇದನ್ನು ನಿರ್ಮೂಲನೆ ಮಾಡಲು ಸಾಧ್ಯ. ಮಾದಕ ವ್ಯಸನಿಗಳ ಅಡ್ಡೆಗಳ ಮೇಲೆ ಪೋಲಿಸರ ಗಸ್ತುಗಳನ್ನು ಇನ್ನಷ್ಟು ಚುರುಕುಗೊಳಿಸುವುದು ಮತ್ತು ಶಾಲಾ ಕಾಲೇಜುಗಳಲ್ಲಿ ನೈತಿಕತೆಯ ಬೋಧನೆಯೊಂದಿಗೆ, ಪ್ರತೀ ತಿಂಗಳು ಮಾದಕದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮಾಹಿತಿ ಶಿಬಿರ ನಡೆಸುವುದರಿಂದಲೂ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿಯು, *”ಲಹರಿಯ ಆವೇಶ ಸಮಾಜದ ವಿನಾಶ”* ಎಂಬ ಘೋಷಣೆಯೊಂದಿಗೆ, ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ರಾಜ್ಯದ ಸಾವಿರಕ್ಕೂ ಅಧಿಕ ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಲಕ್ಷಕ್ಕೂ ಮಿಕ್ಕ ವಿದ್ಯಾರ್ಥಿಗಳಲ್ಲಿ, ಎರಡು ಸಾವಿರದಷ್ಟು ಸಂಖ್ಯೆಯ ಮದ್ರಸಾ ಅಧ್ಯಾಪಕರ ನೇತೃತ್ವದಲ್ಲಿ ಹಾಗೂ ಮದ್ರಸ ಆಡಳಿತ ಸಮಿತಿ, ಸ್ಥಳೀಯ ಸುನ್ನೀ ಸಂಘ ಕುಟುಂಬಗಳ ಸಹಕಾರದೊಂದಿಗೆ, ರೇಂಜ್ ಕೇಂದ್ರಗಳಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಬಾಲ ಮಸೀರ (ವಿದ್ಯಾರ್ಥಿ ರ್ಯಾಲಿ) ಹಾಗೂ ಸಂದೇಶ ಭಾಷಣ ಹಮ್ಮಿಕೊಳ್ಳಲಾಗಿದೆ.. ನಾಡಿನ ಶಾಂತಿ ಪ್ರಿಯರೆಲ್ಲರೂ ಈ ಅಭಿಯಾನದಲ್ಲಿ ಕೈ ಜೋಡಿಸಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಮುಫತ್ತಿಶ್ ಜೆಪ್ಪು ಅಬ್ದುರ್ರಹ್ಮಾನ್ ಮದನಿ , ಉಪಾಧ್ಯಕ್ಷರಾದ ಓ.ಕೆ ಸಈದ್ ಮುಸ್ಲಿಯಾರ್ ಜೋಗಿಬೆಟ್ಟು, ಮಿಶನರಿ ವಿಭಾಗ ಉಪಾಧ್ಯಕ್ಷರಾದ ಮುತ್ತಲಿಬ್ ಸಖಾಫಿ ಬೆಳ್ಮ, ಮಿಶನರಿ ಕಾರ್ಯದರ್ಶಿ ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.