ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ಮತಕ್ಕಾಗಿ ಭದ್ರಕೋಟೆ ಮಾಡಿಕೊಂಡಿದ್ದಾರೆ ವಿನಃ ಅಭಿವೃದ್ದಿಯ ವಿಷಯದಲ್ಲಿ ಯಾವುದೇ ಗುರುತರವಾದ ಕೆಲಸವನ್ನು ಎರಡು ಪಕ್ಷಗಳು ಮಾಡಿಲ್ಲ ಹೀಗಾಗಿ ಕ್ಷೇತ್ರದ ಜನರ ಆಶೀರ್ವಾದದಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಕಮಲದ ಭದ್ರಕೋಟೆಯಾಗಿ ಪರಿವರ್ತಿಸುವುದಾಗಿ ಬಿಜೆಪಿಯ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹೇಳಿದರು.
ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಬಿಜೆಪಿ ಪಕ್ಷದಲ್ಲಿ ಸೇರ್ಪಡೆ ಮಾಡಿಕೊಂಡು ನಂತರ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ದೂರದೃಷ್ಟಿ ಮತ್ತು ಅಭಿವೃದ್ದಿ ವಿಚಾರದಲ್ಲಿ ಅವರ ಇಚ್ಚಾಶಕ್ತಿಯನ್ನು ನೋಡಿ ಬಿಜೆಪಿ ಪಕ್ಷದಲ್ಲಿ ಸೇರ್ಪಡೆಯಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಶೈಕ್ಷಣಿಕ,ಸಾಮಾಜಿಕ,ಆರೋಗ್ಯ ಮತ್ತು ಆರ್ಥಿಕವಾಗಿ ಅಭಿವೃಧ್ಧಿ ಹೊಂದಲು ಸಂಕಲ್ಪ ಮಾಡಿದ್ದೇನೆ ಒಂದು ಅವಕಾಶ ಕೊಡಿ ಕೆಲಸ ಮಾಡಿಲ್ಲ ಅಂದರೇ ಮುಂದೆ ರಾಜಕಾರಣವನ್ನು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ಕೊಡುವುದು ನನಗೆ ಬರುವುದಿಲ್ಲ ನನ್ನ ವೃತ್ತಿ ಜೀವನ ಮತ್ತು ಬದುಕಿದ್ದಕ್ಕೂ ಕೆಲಸದ ಮೇಲೆ ನಂಬಿಕೆ ಇಟ್ಟವನು. ಜನ ನನಗೆ ಆಶೀರ್ವದಿಸಿದ ಮೇಲೆ 50 ವರ್ಷಗಳ ಅಭಿವೃದ್ಧಿಯನ್ನು ಐದು ವರ್ಷಗಳಲ್ಲಿ ಮಾಡಿ ತೋರಿಸುತ್ತೇನೆ ಇಲ್ಲದಿದ್ದರೆ ಮುಂದಿನ ಬಾರಿಗೆ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಇದು ನನ್ನ ಘೋಷ ವಾಕ್ಯ ಎಂದು ಹೇಳಿದರು.
ಶಿಡ್ಲಘಟ್ಟ ಜನರ ಕಷ್ಟಗಳನ್ನು ನೋಡಿದ್ದೇನೆ ಚುನಾವಣೆ ಮುಗಿದ ಒಂದು ತಿಂಗಳಲ್ಲಿ ನನ್ನ ಸ್ವಂತ ಹಣದಲ್ಲಿ ನಗರದ ಹೃದಯ ಭಾಗದಲ್ಲಿ ತುರ್ತು ಸೌಲಭ್ಯಕ್ಕೆ ಚಿಕಿತ್ಸೆ ದೊರೆಯುವ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತೇನೆ. ಇಲ್ಲಿ ಸರ್ಕಾರಿ ಆಸ್ಪತ್ರೆಗೆ ಸಮನಾದ ದರದಲ್ಲಿ ಉತ್ಕೃಷ್ಟ ಚಿಕಿತ್ಸೆಯನ್ನು ನೀಡಲು ಪಣತೊಟ್ಟಿದ್ದೇನೆ. ಹಾಗೆಯೇ ಈಗಾಗಲೇ ಶಿಡ್ಲಘಟ್ಟದಲ್ಲಿ ವಿಶ್ವದರ್ಜೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಬಜೆಟ್ನಲ್ಲಿ 75 ಕೋಟಿ ಅನುದಾನ ಘೋಷಣೆ ಮಾಡಿದೆ. ಅಲ್ಲದೆ ಗ್ರಾಮೀಣರಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಡಳಿತ ಕಚೇರಿಯನ್ನು ಶಿಡ್ಲಘಟ್ಟದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯು ಭಾರತ ಆರ್ಥಿಕತೆಯಲ್ಲಿ ಸದೃಢತೆ ಕಾಪಾಡಿಕೊಂಡಿರುವುದಕ್ಕೆ ಪ್ರದಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವ ಕೊಂಡಾಡುತ್ತಿದೆ. ಇಂತಹ ಮಹಾನ್ ವ್ಯಕ್ತಿಯ ಕೈ ಬಲಪಡಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕಾಗಿದೆ ಆದ್ದರಿಂದ ಶಿಡ್ಲಘಟ್ಟದಲ್ಲಿ ರಾಮಚಂದ್ರಗೌಡ ರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಅಧ್ಯಕ್ಷ ಅಂಜಿನೇಯಗೌಡ, ಜಿಲ್ಲಾ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಕೆ.ಎಸ್. ಕನಕಪ್ರಸಾದ್, ಕೊತ್ತನೂರು ರವಿ, ಸುಬ್ಬಣ್ಣ, ಸಿ.ಎಸ್.ರಾಜಗೋಪಾಲ್, ಅಶ್ವತ, ರಾಮಮೂರ್ತಿ, ಚಿಕನ್ ವಿಜಿ, ಕೊತ್ತನೂರು ಪ್ರಭಾಕರ್, ನಗರ ಯುವ ಮೋರ್ಚಾ ಅಧ್ಯಕ್ಷ ಭರತ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್: ಗ್ರಾಮದ ಮುಖಂಡ ದೇವರಾಜು ನೇತೃತ್ವದಲ್ಲಿ ಶ್ರೀನಿವಾಸ್. ರಾಧಾಕೃಷ್ಣ, ಗಂಗಪ್ಪ, ಬಿ.ಟಿ.ದ್ಯಾವಪ್ಪ, ವೆಂಕಟೇಶ್, ವೆಂಕಟರಾಜು, ಗ್ರಾಮ ಪಂಚಾಯತಿ ಮಾಜಿ ಸದಸ್ಯ ತಿಮ್ಮಣ್ಣ, ದೇವರಾಜು, ಸತೀಶ್, ರಾಜ್ ಕುಮಾರ್, ಗೋವಿಂದಪ್ಪ, ಅಶ್ವತಪ್ಪ, ಬಿ.ಎಂ.ರಾಜಗೋಪಾಲ್, ಬಿ.ಎಂ.ನಾರಾಯಣಸ್ವಾಮಿ, ತಿಮ್ಮಯ್ಯ, ವೆಂಕಟರಮಣಪ್ಪ, ಬಿ.ಎಂ.ಲಕ್ಷ್ಮಣ್, ರಾಮಚಂದ್ರಪ್ಪ, ಬಿ.ಎಂ.ರವಿ, ಬಿ.ಎಂ.ಶ್ರೀನಿವಾಸ್, ಸಿ.ಎಸ್.ಗೋಪಾಲ್, ಬಿ.ಎಂ.ನರಸಿಂಹ, ಮುನಿರಾಜು, ಗಂಗಪ್ಪ, ಚಂದ್ರಶೇಖರ್, ಮುರಳಿ, ನಾರಾಯಣಸ್ವಾಮಿ, ಮಧುಸೂಧನ್, ಪ್ರವೀಣ್, ಬೊಮ್ಮನಹಳ್ಳಿ ಗ್ರಾಮದ ದೇವರಾಜು ಸೇರಿದಂತೆ ಇನ್ನೂ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ವರದಿ: ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.